![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Oct 2, 2024, 6:00 AM IST
ರಾಜ್ಯದ ರಾಜಧಾನಿ ಬೆಂಗಳೂರು ಹೊರವಲಯವಾದ ಆನೇಕಲ್ನಲ್ಲಿ ಪಾಕಿಸ್ಥಾನ ಮೂಲದ ಕುಟುಂಬವೊಂದು ಅಕ್ರಮವಾಗಿ ವಾಸವಿದ್ದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ಸದ್ಯ ಈ ನಾಲ್ವರನ್ನೂ ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಮಾತ್ರವಲ್ಲದೆ ರಾಜ್ಯದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಹಿಂದೂಗಳ ಹೆಸರಿನಲ್ಲಿ ಠಿಕಾಣಿ ಹೂಡುವುದರ ಜತೆಯಲ್ಲಿ ಭಾರತೀಯ ನಾಗರಿಕರಿಗೆ ನೀಡಲಾಗುವ ವಿವಿಧ ಸವಲತ್ತು ಮತ್ತು ಪ್ರಮಾಣಪತ್ರಗಳನ್ನು ಈ ಕುಟುಂಬ ಹೊಂದಿದ್ದುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕಳೆದೊಂದು ದಶಕದಿಂದೀಚೆಗೆ ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿರುವುದನ್ನು ಸರಕಾರದ ವಿವಿಧ ಇಲಾಖೆಗಳ ಅಂಕಿಅಂಶಗಳೇ ದೃಢೀಕರಿಸಿವೆ. ಅದರಲ್ಲೂ ಮುಖ್ಯವಾಗಿ ನೆರೆಯ ಬಾಂಗ್ಲಾದೇಶದಿಂದ ನೂರಾರು ಸಂಖ್ಯೆಯಲ್ಲಿ ವಲಸಿಗರು ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಮಲೆನಾಡು ಜಿಲ್ಲೆಗಳಲ್ಲೂ ವಾಸ್ತವ್ಯ ಹೂಡಿದ್ದಾರೆ. ಈ ಪೈಕಿ ಬಹುತೇಕರು ಪಶ್ಚಿಮ ಬಂಗಾಲ ಅಥವಾ ಈಶಾನ್ಯ ರಾಜ್ಯಗಳ ನಿವಾಸಿಗಳೆಂದು ಹೇಳಿಕೊಳ್ಳುತ್ತಿರುವರಾದರೂ ಇದು ವಾಸ್ತವಕ್ಕೆ ದೂರವಾದ ವಿಷಯ ಎಂಬುದು ಸ್ಥಳೀಯರಿಗೆ ತಿಳಿದಿದೆ. ಆದರೆ ಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ ಅನ್ಯ ಮಾರ್ಗವಿಲ್ಲದೆ ಸ್ಥಳೀಯ ಬಿಲ್ಡರ್ಗಳು ಹಾಗೂ ತೋಟ ಮತ್ತು ಎಸ್ಟೇಟ್ಗಳ ಮಾಲಕರು ಈ ಅಕ್ರಮ ವಲಸಿಗರನ್ನೇ ಅವಲಂಬಿಸಿದ್ದಾರೆ.
ಅಕ್ರಮವಾಗಿ ರಾಜ್ಯಕ್ಕೆ ಬಂದು ಜೀವನೋಪಾಯ ಕಂಡುಕೊಳ್ಳುವುದರ ಜತೆಯಲ್ಲಿ ಭಾರತೀಯ ನಾಗರಿಕರಿಗೆ ನೀಡಲಾಗುತ್ತಿರುವ ಆಧಾರ್, ಪಾನ್, ವಾಹನ ಚಾಲನಾ ಪರವಾನಿಗೆ ಪತ್ರ, ರೇಶನ್ ಕಾರ್ಡ್, ಪಾಸ್ಪೋರ್ಟ್ ಆದಿಯಾಗಿ ಎಲ್ಲ ತೆರನಾದ ದಾಖಲೆಪತ್ರಗಳನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಂದು ಚುನಾವಣೆ ಎದುರಾದಾಗಲೂ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿರುವ ವಿಚಾರ ಮುನ್ನೆಲೆಗೆ ಬರುತ್ತದೆಯಾದರೂ ಇವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳು ಆಸಕ್ತಿ ತೋರದಿರುವುದು ವಿಪರ್ಯಾಸವೇ ಸರಿ.
ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ರಾಜ್ಯದ ವಿವಿಧೆಡೆ ನಡೆದ ಹಿಂಸಾಚಾರಗಳು, ದುಷ್ಕೃತ್ಯಗಳಲ್ಲಿ ಅಕ್ರಮ ವಲಸಿಗರ ಕೈವಾಡವಿರುವುದು ಮತ್ತು ಈ ಪ್ರಕರಣಗಳ ಆರೋಪಿಗಳು ನಿಷೇಧಿತ ಉಗ್ರಗಾಮಿ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ. ಇಷ್ಟೆಲ್ಲ ಆಗಿಯೂ ಪಾಕಿಸ್ಥಾನಿ ಮೂಲದ ಕುಟುಂಬವೊಂದು ಆರು ವರ್ಷಗಳಿಂದ ರಾಜ್ಯದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದುದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದೇ ವೇಳೆ ಪಾಕ್ ಪ್ರಜೆಗಳು ಹಿಂದೂಗಳ ಹೆಸರಿನಲ್ಲಿ ರಹಸ್ಯವಾಗಿ ನೆಲೆಸಿದುದು ಕೂಡ ಶಾಂತಿ-ಸೌಹಾರ್ದತೆಗೆ ಭಂಗ ತರುವ ವಿಷಯವೇ.
ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು, ಪ್ರಕರಣವನ್ನು ಆಮೂಲಾಗ್ರ ತನಿಖೆ ನಡೆಸಬೇಕು. ಈ ಕುಟುಂಬದ ಸಂಪೂರ್ಣ ಹಿನ್ನೆಲೆಯನ್ನು ಕೆದಕುವುದರ ಜತೆಯಲ್ಲಿ ಇದರ ಹಿಂದೆ ಯಾರ್ಯಾರ ಕೈವಾಡವಿದೆ, ಈ ಕುಟುಂಬ ಸಂಪರ್ಕದಲ್ಲಿರುವ ಜನರು, ಸಂಘಟನೆಗಳು ಇವೆಲ್ಲದರ ಬಗೆಗೆ ಕೂಲಂಕಷ ತನಿಖೆ ನಡೆಸಬೇಕು. ಆಡಳಿತ ವ್ಯವಸ್ಥೆಯಿಂದ ಇಂತಹ ಬಲುದೊಡ್ಡ ಪ್ರಮಾದ ಹೇಗಾಯಿತು ಎಂಬ ಬಗ್ಗೆಯೂ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ಇದೇ ವೇಳೆ ರಾಜ್ಯದಲ್ಲಿ ನೆಲೆಸಿರುವ ಎಲ್ಲ ಅಕ್ರಮ ವಲಸಿಗರ ಬಗೆಗೆ ಸಮಗ್ರ ಮಾಹಿತಿಯನ್ನು ಕಲೆಹಾಕಿ ಅವರನ್ನು ಗಡೀಪಾರು ಮಾಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಇಂತಹ ಪ್ರಕರಣಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕದಿದ್ದಲ್ಲಿ ಭವಿಷ್ಯದಲ್ಲಿ ಇದು ರಾಜ್ಯದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಬಲುದೊಡ್ಡ ಅಪಾಯವಾಗಿ ಮಾರ್ಪಡಲಿದೆ ಎಂಬುದನ್ನು ರಾಜ್ಯ ಸರಕಾರ ಮರೆಯಬಾರದು.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.