MUDA Scam: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕರ ಪಟ್ಟು ಬಿಗಿ
ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ವಿಧಾನಸೌಧದ ಪಶ್ಚಿಮದ್ವಾರಕ್ಕೆ ಬೀಗ ಹಾಕಲು ಯತ್ನಿಸಿದ ನಾಯಕರು
Team Udayavani, Sep 27, 2024, 7:25 AM IST
ಬೆಂಗಳೂರು: ಮುಡಾ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು 1 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಶಾಸಕರಾದ ಅರವಿಂದ ಬೆಲ್ಲದ್ ವಿಧಾನಸೌಧದ ಪಶ್ಚಿಮದ್ವಾರಕ್ಕೆ ಬೀಗ ಹಾಕಲು ಯತ್ನಿಸಿದಾಗ ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅನಂತರ ಕಾಲ್ನಡಿಗೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಯಿತು.
ಆರ್.ಅಶೋಕ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯನವರ ಮುಂದೆ ಈಗ ಬೇರೆ ಆಯ್ಕೆಗಳೇ ಇಲ್ಲ. ಹೈಕೋರ್ಟ್ ಆದೇಶ ಬಂದಿದೆ. ಯಾವ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಬೇಕು ಎಂದೂ ನ್ಯಾಯಾಲಯ ಹೇಳಿದೆ. ಸೆಕ್ಷನ್ 420 ಅನ್ವಯ ಪ್ರಕರಣ ಹಾಕುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಸದ್ಯದಲ್ಲೇ ಎಫ್ಐಆರ್ ದಾಖಲಾಗಲಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಆಗೊಂದು – ಈಗೊಂದು
ಹಿಂದೆ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖೆ ಆಗುವಾಗ ನೀವು ಏನ್ ಹೇಳಿಕೆ ಕೊಟ್ಟಿದ್ದೀರಿ? ಆದರೆ ಈಗ ಯಡಿಯೂರಪ್ಪ ಪ್ರಕರಣ ಬೇರೆ, ನಮ್ಮ ಪ್ರಕರಣ ಬೇರೆ ಅನ್ನುತ್ತಿದ್ದೀರಿ. ಈಶ್ವರಪ್ಪ ಪ್ರಕರಣದಲ್ಲಿ ಏನು ಹೇಳಿದ್ದೀರಿ? ಆಗ ತನಿಖೆ ಆಗಿತ್ತಾ? ಆದರೆ ನೀವು ಈಶ್ವರಪ್ಪ ರಾಜೀನಾಮೆಗೆ ಕುಸ್ತಿ ಮಾಡಿದ್ದೀರಿ. ಈಗ ಯಾಕೆ ರಾಜೀನಾಮೆ ನೀಡುತ್ತಿಲ್ಲ? ನಿಮಗೆ ಸೈಟ್ ತೆಗೆದುಕೊಳ್ಳುವಂತೆ ಮೋದಿಯವರು ಹೇಳಿದ್ದರಾ? ಎಂದು ಅಶೋಕ್ ಪ್ರಶ್ನಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಹಗರಣವಾಗಿದೆ ಎಂದು ನೀವೇ ಹೇಳಿದ್ದೀರಿ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಹಿರಿಯ ವಕೀಲರಾದ ಬಿ.ವಿ. ಆಚಾರ್ಯರು ಹೇಳಿದ್ದಾರೆ. ಅವರದ್ದೇ ಪಕ್ಷದ ನಾಯಕರಾದ ಕೋಳಿವಾಡ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಟವೆಲ್ ಹಾಕಿಕೊಂಡ್ 7 ಜನ ಕಾಯುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಈಗ ಆರಂಭವಾಗಿದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಸಿದ್ದರಾಮಯ್ಯನವರೇ ನೀವು ರಾಜೀನಾಮೆ ನೀಡಿ. ಇಲ್ಲವೆಂದರೆ ಗೋಸುಂಬೆಯಂತೆ ಬಣ್ಣ ಬದಲಿಸುತ್ತೇನೆ ಎಂದು ಒಪ್ಪಿಕೊಳ್ಳಿ. ನೀವು ಪರಿಶುದ್ಧರಲ್ಲ. ನಿಮ್ಮ ಆಡಳಿತ ಪರಿಶುದ್ಧ ಇಲ್ಲ ಎಂದರ್ಥ ಎಂದು ಟೀಕಿಸಿದರು. ನಿಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದಾಗ ನಿಮ್ಮವರು ರಾಜ್ಯಪಾಲರ ಫೋಟೋಕ್ಕೆ ಚಪ್ಪಲಿ ಹಾಕಿದ್ದೀರಿ.
ಬಾಂಗ್ಲಾ ಮಾದರಿಯಲ್ಲಿ ದಂಗೆ ನಡೆಯುತ್ತದೆ ಎಂದಿದ್ದೀರಿ. ನಿಮಗೆ ಸಂವಿಧಾನದಲ್ಲಿ ನಂಬಿಕೆ ಇದ್ದರೆ ರಾಜೀನಾಮೆ ನೀಡಿ. ಸಚಿವರಾದ ಜಮೀರ್ ರೀತಿ ಹೊಗಳು ಭಟರ ಮಾತು ಕೇಳಬೇಡಿ. ನೀವು ಕೆಳಗೆ ಬಿದ್ದಾಗ ಮೊದಲು ತುಳಿಯೋದೇ ಅವರು. ಅವರ ಲಾಭ ಮಾಡಿಕೊಳ್ಳುವುದಕ್ಕೆ ಹೊಗಳುತ್ತಾರೆ. ಆದರೆ ರಾಜ್ಯದ ಮರ್ಯಾದೆ ಕಾಪಾಡೋಕೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ನಮ್ಮ ಪಕ್ಷದವರ್ಯಾರೂ ಮುಖ್ಯಮಂತ್ರಿ ಕುರ್ಚಿ ಮೇಲೆ ಕರ್ಚಿಫ್ ಹಾಕಿಲ್ಲ. ನಿಮ್ಮ ಪಕ್ಷದವರೇ, ನೀವು ಹೇಳಿದವರೇ ಮುಖ್ಯಮಂತ್ರಿಯಾಗುವುದು. ಕ್ಲೀನ್ ಚಿಟ್ ಸಿಕ್ಕ ಮೇಲೆ ನೀವೇ ಮತ್ತೆ ಮುಖ್ಯಮಂತ್ರಿಯಾಗಿ ಎಂದು ಕಿವಿಮಾತು ಹೇಳಿದರು.
ಸಿದ್ದರಾಮಯ್ಯ ಬಟ್ಟೆ ತುಂಬಾ ಕಪ್ಪು ಇಂಕ್: ಜಗ್ಗೇಶ್ ವ್ಯಂಗ್ಯ
ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಮುಡಾ ಹಗರಣದ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಘನವಾದ ಹೆಸರು ತಂದುಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರಿಗೆ ತಾವು ಹಿಡಿದಿದ್ದ ಸಂವಿಧಾನಕ್ಕೆ ಎಷ್ಟು ಪುಟ ಇದೆಯೆಂದು ಹೇಳಲು ಸಾಧ್ಯವಾಗಲಿಲ್ಲ. ಅವರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಹೊರಟಿದೆ. ಅಂಥ ನಾಯಕರ ಕೆಳಗೆ ಇರುವ ಸಿದ್ದರಾಮಯ್ಯ ಘನವಾದ ಕೆಲಸ ಮಾಡಿದ್ದಾರೆ.
ಸಿದ್ದರಾಮಯ್ಯ ಕ್ಲೀನ್ ನಾಯಕ ಎಂದು ಅಂದುಕೊಂಡಿದ್ದೆ. ಆದರೆ ನ್ಯಾಯಾಲಯಗಳೇ ಅವರ ಪಾತ್ರದ ಬಗ್ಗೆ ಹೇಳಿವೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಈಗ ಇಡೀ ಬಟ್ಟೆ ಕಪ್ಪು ಇಂಕ್ನಲ್ಲಿ ತುಂಬಿ ಹೋಗಿದೆ. ರಾಜ್ಯದ ಮಾನ ಮರ್ಯಾದೆ ಈಗಾಗಲೇ ಹರಾಜಾಗಿದೆ. ದೊಡ್ಡ ಮನಸು ಮಾಡಿ ರಾಜಾರೋಷವಾಗಿ ರಾಜೀನಾಮೆ ಕೊಡಿ ಎಂದು ಜಗ್ಗೇಶ್ ವ್ಯಂಗ್ಯವಾಡಿದರು.
ಪ್ರತಿಭಟನೆಗೆ ವಿಜಯೇಂದ್ರ ಗೈರು
ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೈರು ಹಾಜರಾಗಿದ್ದರು. ಜ್ವರದ ಹಿನ್ನೆಲೆಯಲ್ಲಿ ಅವರು ತೀವ್ರ ಬಳಲಿಕೆಗೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಬಂದಿರಲಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಸಿದ್ದರಾಮಯ್ಯ ನವರೇ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ನಿಮ್ಮ ಕಾಲ ಹತ್ತಿರ ಬಂದಿದೆ. ನೀವು ಜೈಲಿಗೆ ಹೋಗಲೇಬೇಕು. ಆವತ್ತು ರೆಡ್ಡಿಗೆ, ಯಡಿಯೂರಪ್ಪಗೆ ಒಂದು ನ್ಯಾಯ, ಇಂದು ನಿಮಗೆ ಒಂದು ನ್ಯಾಯವಾ?
– ಜನಾರ್ದನ ರೆಡ್ಡಿ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ಸಾಧ್ಯತೆ
MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್ ನುಡಿ
MUDA Scam: ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ; ಕಾಂಗ್ರೆಸ್ ನಾಯಕರ ಭಿನ್ನರಾಗ
Cabinet Decision: ನಿರೀಕ್ಷೆಯಂತೆ ಕಸ್ತೂರಿ ರಂಗನ್ ವರದಿ ತಿರಸ್ಕಾರ
Incentive money: ಪ್ರತೀ ಲೀಟರ್ ಹಾಲಿಗೆ 10 ರೂ. ಪ್ರೋತ್ಸಾಹ ಧನ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.