ಅನುದಾನಕ್ಕೆ ಕತ್ತರಿ! : 5,495 ಕೋ.ರೂ. ವಿಶೇಷ ಅನುದಾನಕ್ಕೆ ಲಭಿಸದ ಸಮ್ಮತಿ
Team Udayavani, Feb 5, 2020, 7:15 AM IST
ಬೆಂಗಳೂರು: ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 5,495 ಕೋ.ರೂ. ವಿಶೇಷ ಅನುದಾನ ನೀಡಬಹುದು ಎಂಬ 15ನೇ ಹಣಕಾಸು ಆಯೋಗದ ಶಿಫಾರಸನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರ ರಾಜ್ಯಕ್ಕೆ ಆಘಾತ ನೀಡಿದೆ.
ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ ಸಿಗುವ ಪಾಲಿನ ಪ್ರಮಾಣದಲ್ಲಿ 5,495 ಕೋಟಿ ರೂ. ಖೋತಾ ಆಗಲಿದೆ. ಈ ಕೊರತೆಯನ್ನು ವಿಶೇಷ ಅನುದಾನದ ರೂಪದಲ್ಲಿ ಭರಿಸಬೇಕು ಎಂಬ ಆಯೋಗದ ಶಿಫಾರಸನ್ನು ಒಪ್ಪದ ಕೇಂದ್ರ, ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಆಯೋಗಕ್ಕೆ ಸೂಚಿಸಿದೆ. ಆ ಹಿನ್ನೆಲೆ ಯಲ್ಲಿ ರಾಜ್ಯ ಸರಕಾರವು ಆಯೋಗದ ಶಿಫಾರಸಿನಂತೆ 5,495 ಕೋಟಿ ರೂ. ವಿಶೇಷ ಅನುದಾನದ ಜತೆಗೆ ರಾಜ್ಯದ ಪಾಲಿನ ಮೊತ್ತ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
14ನೇ ಹಣಕಾಸು ಆಯೋಗದ ಶಿಫಾರಸಿನ ಅವಧಿ ಮುಕ್ತಾಯವಾದ ಬೆನ್ನಲ್ಲೇ 15ನೇ ಹಣಕಾಸು ಆಯೋಗ 2020-21ನೇ ಸಾಲಿಗೆ ಶಿಫಾರಸು ವರದಿ ಸಲ್ಲಿಸಿದೆ. 14ನೇ ಆಯೋಗದ ಅವಧಿಯಲ್ಲಿ ಕೇಂದ್ರೀಯ ತೆರಿಗೆಯಲ್ಲಿ ಶೇ.42ರಷ್ಟು ಪಾಲನ್ನು ರಾಜ್ಯಗಳಿಗೆ ನಿಗದಿಪಡಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿರುವುದು ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶ ರಚನೆ ಹಿನ್ನೆಲೆಯಲ್ಲಿ ರಾಜ್ಯಗಳ ಪಾಲನ್ನು ಶೇ. 41ಕ್ಕೆ ಇಳಿಸಲಾಗಿದ್ದು, ಶೇ. 1ರಷ್ಟು ಕಡಿತವಾಗಿದೆ.
3,131 ಕೋ.ರೂ. ಖೋತಾ
14ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ ನಿಗದಿಪಡಿಸಿದ ಶೇ. 42ರಷ್ಟು ಪಾಲಿನಲ್ಲಿ ಕರ್ನಾಟಕಕ್ಕೆ ಶೇ. 4.71ರಷ್ಟು ನಿಗದಿಯಾಗಿತ್ತು. 15ನೇ ಆಯೋಗದಡಿ ಗೊತ್ತುಪಡಿಸಿದ ಶೇ. 41ರಲ್ಲಿ ಕರ್ನಾಟಕಕ್ಕೆ ಶೇ.3.65 ನಿಗದಿಯಾಗಿದ್ದು, ರಾಜ್ಯದ ಪಾಲು ಗಣನೀಯ ಇಳಿಕೆಯಾಗುವುದು ನಿಶ್ಚಿತ. 14ನೇ ಆಯೋಗದ ಕೊನೆಯ ಅವಧಿ, ಎಂದರೆ 2019-20ರಲ್ಲಿ ರಾಜ್ಯಕ್ಕೆ 39,806 ಕೋ.ರೂ. ನಿಗದಿಪಡಿಸಲಾಗಿತ್ತು.
ಬಳಿಕ ಕೇಂದ್ರವು ತನ್ನ ಪಾಲಿನ ಮೊತ್ತವನ್ನು 36,675 ಕೋ.ರೂ.ಗೆ ಪರಿಷ್ಕರಿಸಿದೆ. ಹಾಗಾಗಿ ಪ್ರಸ್ತುತ ವರ್ಷದಲ್ಲಿ 3,131 ಕೋ.ರೂ. ಖೋತಾ ಆದಂತಾಗಿದೆ ಎಂದು ಮೂಲಗಳು ಹೇಳಿವೆ.
5,495 ಕೋ.ರೂ. ಅನುದಾನಕ್ಕೆ ಶಿಫಾರಸು
15ನೇ ಹಣಕಾಸು ಆಯೋಗದ ಶಿಫಾರಸಿನಡಿ 2020-21ನೇ ಸಾಲಿಗೆ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ 31,180 ಕೋ.ರೂ. ನಿಗದಿಪಡಿಸಲಾಗಿದೆ. ಹಾಗಾಗಿ ಕಳೆದ ಸಾಲಿಗೆ ಮಂಜೂರಾದ ಪಾಲಿಗೆ ಹೋಲಿಸಿದರೆ ಮುಂದಿನ ವರ್ಷದ ಪಾಲಿನಲ್ಲಿ 5,495 ಕೋ.ರೂ. ಕಡಿಮೆಯಾಗಲಿದೆ. ಈ ಕೊರತೆಯನ್ನು ವಿಶೇಷ ಅನುದಾನದ ರೂಪದಲ್ಲಿ 3 ಕಂತಿನಲ್ಲಿ ಬಿಡುಗಡೆ ಮಾಡಬಹುದು ಎಂದು 15ನೇ ಆಯೋಗ ಶಿಫಾರಸು ಮಾಡಿತ್ತು.
ಒಪ್ಪಿಗೆ ನೀಡದ ಕೇಂದ್ರ
ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ನೀಡಬಹುದೆಂಬ ಶಿಫಾರಸನ್ನು ಕೇಂದ್ರವು ಒಪ್ಪದೆ, ಅದನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿದೆ.
15ನೇ ಹಣಕಾಸು ಆಯೋಗದ ಶಿಫಾರಸನ್ನು ಒಪ್ಪಿ 2020-21ನೇ ಸಾಲಿನಲ್ಲಿ ಕರ್ನಾಟಕಕ್ಕೆ ಸುಮಾರು 5,495 ಕೋಟಿ ರೂ. ವಿಶೇಷ ಅನುದಾನ ನೀಡಬೇಕು. ಜತೆಗೆ ಕೇಂದ್ರೀಯ ತೆರಿಗೆ ಪಾಲಿನಲ್ಲಿ ಕರ್ನಾಟಕದ ಮೊತ್ತ ಕಡಿಮೆಯಾಗಿದ್ದು, ಹೆಚ್ಚುವರಿ ಅನುದಾನ ನೀಡಬೇಕು ಎಂದು ಕೋರಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಹಾಗೆಯೇ 15ನೇ ಹಣಕಾಸು ಆಯೋಗವು 2021ರಿಂದ 2025ರ ವರೆಗಿನ ಅವಧಿಗೆ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳ ಪಾಲು ನಿಗದಿಪಡಿಸುವ ಮಾನದಂಡ ಬದಲಾವಣೆಗೆ ಕ್ರಮ ಕೈಗೊಳ್ಳುವಂತೆಯೂ ಪ್ರಸ್ತಾಪಿಸಲು ಚಿಂತನೆ ನಡೆದಿದೆ ಎಂದು ಸರಕಾರದ ಮೂಲಗಳು ಹೇಳಿವೆ.
ವರವಾಗುವ ಬದಲು ಶಾಪ!
ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳಿಗೆ ಪಾಲಿನ ಮೊತ್ತ ನಿಗದಿಗೆ ಹಲವು ಮಾನದಂಡ ಅನುಸರಿಸಲಾಗುತ್ತದೆ. ತಲಾದಾಯ, ಜನಸಂಖ್ಯೆ, ಅರಣ್ಯ ಪ್ರದೇಶ ವಿಸ್ತೀರ್ಣ ಇತ್ಯಾದಿ ಅಂಶಗಳು ಪ್ರಮುಖ. ತಲಾದಾಯ ಹೆಚ್ಚಿರುವ ರಾಜ್ಯಗಳಿಗೆ ಕಡಿಮೆ, ಕಡಿಮೆ ಇರುವ ರಾಜ್ಯಗಳಿಗೆ ಹೆಚ್ಚಿನ ಪಾಲು ನಿಗದಿಯಾಗುತ್ತದೆ. ಹಾಗೆಯೇ ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಿಗೆ ಪಾಲಿನ ಮೊತ್ತವೂ ಅಧಿಕ. ಹಾಗಾಗಿ ಉತ್ತಮ ತಲಾದಾಯ ಮತ್ತು ಜನಸಂಖ್ಯೆ ನಿಯಂತ್ರಣವೂ ಆಶಾದಾಯಕವಾಗಿರುವುದು ಕರ್ನಾಟಕಕ್ಕೆ ಈ ವಿಚಾರದಲ್ಲಿ ಶಾಪವಾಗಿ ಪರಿಣಮಿಸಿದೆ. ರಾಜ್ಯಗಳು ಪಡೆಯುವ ಪಾಲಿನ ಮೊತ್ತವನ್ನು ಸರಿದೂಗಿಸಲು ಕರ್ನಾಟಕ ಸೇರಿದಂತೆ ತೆಲಂಗಾಣ, ಮಿಜೋರಾಂ ರಾಜ್ಯಗಳಿಗೆ ವಿಶೇಷ ಅನುದಾನ ನೀಡುವಂತೆ ಆಯೋಗ ಶಿಫಾರಸು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಪತ್ನಿ ಜತೆ ಅನೈತಿಕ ಸಂಬಂಧ:ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಪತಿ!!
Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!
BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಶಾಸಕ ವಿನಯ ಕುಲಕರ್ಣಿ ಆಕ್ರೋಶ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.