ಗಾಳಿಯಲ್ಲೇ ರಾಕೆಟ್ ಹಿಡಿಯುವ ಯಶಸ್ವಿ ಪ್ರಯೋಗ:Rocket ಮರುಬಳಕೆಗೆ ಸ್ಪೇಸ್ಎಕ್ಸ್ ಹೊಸ ಭಾಷ್ಯ

ಯಾವುದೇ ಹಾನಿ ಉಂಟಾಗದಂತೆ ಪೂರ್ಣವಾಗಿ ಇಳಿಸಬೇಕು ಎನ್ನುವುದು ಸ್ಪೇಸ್ ಎಕ್ಸ್ ಗುರಿ

Team Udayavani, Oct 16, 2024, 12:08 PM IST

ಗಾಳಿಯಲ್ಲೇ ರಾಕೆಟ್ ಹಿಡಿಯುವ ಯಶಸ್ವಿ ಪ್ರಯೋಗ:Rocket ಮರುಬಳಕೆಗೆ ಸ್ಪೇಸ್ಎಕ್ಸ್ ಹೊಸ ಭಾಷ್ಯ

ಭಾನುವಾರ ತನ್ನ ಸ್ಟಾರ್‌ಶಿಪ್ ರಾಕೆಟ್‌ನ ಐದನೇ ಯಶಸ್ವಿ ಪರೀಕ್ಷಾ ಪ್ರಯೋಗ ನಡೆಸುವ ಮೂಲಕ ಸ್ಪೇಸ್ ಎಕ್ಸ್ ಸಂಸ್ಥೆ ಒಂದು ಹೊಸ ಇಂಜಿನಿಯರಿಂಗ್ ಮೈಲಿಗಲ್ಲು ಸ್ಥಾಪಿಸಿತು. ಮೇಲಕ್ಕೆ ಹಾರಿದ ಬಳಿಕ, ರಾಕೆಟ್ ಬೂಸ್ಟರ್ ಮರಳಿ ಉಡಾವಣಾ ವೇದಿಕೆಗೆ ಹಿಂದಿರುಗುವ ಮೂಲಕ ಒಂದು ಐತಿಹಾಸಿಕ ಸಾಧನೆ ನಿರ್ಮಿಸಿತು. ಇದು ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಯಶಸ್ವಿ ಪ್ರಯೋಗ ಎನಿಸಿಕೊಂಡಿತು. ಈ ಸಾಧನೆಯ ಮೂಲಕ, ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ಬಾಹ್ಯಾಕಾಶ ಅನ್ವೇಷಣಾ ವಿಧಾನವನ್ನೇ ಬದಲಾಯಿಸುವ ಸಾಮರ್ಥ್ಯ ಗಳಿಸಿದೆ.

ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ, 233 ಅಡಿಗಳ ಸೂಪರ್ ಹೆವಿ ಬೂಸ್ಟರ್ ಸ್ಟಾರ್‌ಶಿಪ್ ನಿಂದ ಬೇರ್ಪಟ್ಟಿತು. ಸ್ಟಾರ್‌ಶಿಪ್ ಅನ್ನು ಬೂಸ್ಟರ್ ಮೇಲೆ ಅಳವಡಿಸಲಾಗಿತ್ತು. ಆ ಬಳಿಕ, ಬೂಸ್ಟರ್ ಉಡಾವಣಾ ಸ್ಥಳಕ್ಕೆ ಪುನಃ ಆಗಮಿಸಿತು. ಅದು ಉಡಾವಣಾ ವೇದಿಕೆಯ ಮೇಲೆ ಇಳಿಯಲು ಆರಂಭಿಸುತ್ತಿದ್ದ ಹಾಗೇ, ‘ಚಾಪ್ ಸ್ಟಿಕ್ಸ್’ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಎರಡು ದೊಡ್ಡ ಯಾಂತ್ರಿಕ ಕೈಗಳು ಅತ್ಯಂತ ಸೂಕ್ತವಾಗಿ ಅದನ್ನು ಹಿಡಿದುಕೊಂಡವು.

ಈ ಮಹತ್ವದ ಸಾಧನೆಯೊಡನೆ, ಸ್ಪೇಸ್ ಎಕ್ಸ್ ಸಂಸ್ಥೆ ಎಲಾನ್ ಮಸ್ಕ್ ಅವರ ಕನಸಾದ, ಮೊದಲ ಸಂಪೂರ್ಣ ಮರುಬಳಕೆ ಮಾಡಬಲ್ಲ ರಾಕೆಟ್ ನಿರ್ಮಾಣದತ್ತ ಸಾಗಿದೆ. ರಾಕೆಟ್ ಮರುಬಳಕೆ ಮಾಡುವ ಮೂಲಕ, ಬಾಹ್ಯಾಕಾಶ ಪ್ರಯಾಣದ ವೆಚ್ಚವನ್ನು ಕಡಿಮೆಗೊಳಿಸಿ, ಕಾಲಕ್ರಮೇಣ ಮಾನವರು ಇತರ ಗ್ರಹಗಳಲ್ಲಿ ವಾಸಿಸಲು ಸಾಧ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ.

ಅದಾಗಿ ಅಂದಾಜು ಒಂದು ಗಂಟೆಯ ಬಳಿಕ, ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ಸುರಕ್ಷಿತವಾಗಿ ಭೂಮಿಗೆ ಬಂತು. ಅದರ ಇಂಜಿನ್‌ಗಳು ಚಾಲ್ತಿಯಲ್ಲಿ ಇರುವಾಗಲೇ, ಅದನ್ನು ನಿಯಂತ್ರಿತವಾಗಿ ಹಿಂದೂ ಮಹಾಸಾಗರದಲ್ಲಿ ಇಳಿಸಲಾಯಿತು. ಆದರೆ ಅದು ನೀರಿನಲ್ಲಿ ಮುಳುಗಿದ್ದರಿಂದ ಬೆಂಕಿ ಹಿಡಿಯುವಂತೆ ತೋರುತ್ತಿತ್ತು. ಮುಂದಿನ ದಿನಗಳಲ್ಲಿ ಸ್ಟಾರ್ ಶಿಪ್ ಅನ್ನೂ ಗಟ್ಟಿಯಾದ ನೆಲದ ಮೇಲೆ, ಯಾವುದೇ ಹಾನಿ ಉಂಟಾಗದಂತೆ ಪೂರ್ಣವಾಗಿ ಇಳಿಸಬೇಕು ಎನ್ನುವುದು ಸ್ಪೇಸ್ ಎಕ್ಸ್ ಗುರಿಯಾಗಿದೆ.

ಸ್ಪೇಸ್ ಎಕ್ಸ್ ಈಗ ತನ್ನ ಯಶಸ್ವಿ ಪ್ರಯೋಗದ ಮೂಲಕ ಸ್ಟಾರ್‌ಶಿಪ್ ಮತ್ತು ಸೂಪರ್ ಹೆವಿ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿ, ಮರಳಿ ಭೂಮಿಯ ಮೇಲೆ ಸುರಕ್ಷಿತವಾಗಿ ಇಳಿಸಬಲ್ಲೆ ಎಂದು ಸಾಬೀತುಪಡಿಸಿದೆ. ಈ ಮೂಲಕ, ಸ್ಪೇಸ್ ಎಕ್ಸ್ ತನ್ನ ರಾಕೆಟ್ ಉಡಾವಣಾ ವೆಚ್ಚವನ್ನು 10 ಪಟ್ಟು ಕಡಿಮೆಗೊಳಿಸಲು ಸಾಧ್ಯವಾಗುವ ನಿರೀಕ್ಷೆಗಳಿವೆ.

ಸ್ಟಾರ್‌ಶಿಪ್ ಅನ್ನು ಜಗತ್ತಿನ ಮೊತ್ತಮೊದಲ ಸಂಪೂರ್ಣ ಮರುಬಳಕೆ ಮಾಡಬಲ್ಲ ರಾಕೆಟ್ ಆಗುವಂತೆ ನಿರ್ಮಿಸಲಾಗಿದೆ. ಅಂದರೆ, ಬೂಸ್ಟರ್ ಮತ್ತು ಬಾಹ್ಯಾಕಾಶ ನೌಕೆಗಳೆರಡೂ ಉಡಾವಣೆಯ ಬಳಿಕ ಭೂಮಿಗೆ ಮರಳಿ, ಮರು ನಿರ್ಮಾಣದ ಅಗತ್ಯವಿಲ್ಲದೆ ಪುನಃ ಉಡಾವಣೆಗೆ ಲಭ್ಯವಾಗಲಿವೆ.

ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ, ಸೂಪರ್ ಹೆವಿ ಬೂಸ್ಟರ್‌ನ ಯಶಸ್ವಿ ಲ್ಯಾಂಡಿಂಗ್ ಅಂತಿಮ, ಪ್ರಮುಖ ಪ್ರಯೋಗಗಳಲ್ಲಿ ಒಂದಾಗಿತ್ತು.

ರಾಕೆಟ್‌ಗಳ ಮರುಬಳಕೆಯಿಂದಾಗಿ ಉಡಾವಣಾ ವೆಚ್ಚ ಸಾಕಷ್ಟು ಕಡಿಮೆಯಾಗುವುದು ನಿಜ. ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ 9 ಬೂಸ್ಟರ್‌ಗಳು ಈಗಾಗಲೇ ರಾಕೆಟ್ ಮರುಬಳಕೆ ವೆಚ್ಚವನ್ನು ಕಡಿಮೆಗೊಳಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ. ಅವುಗಳು ಪ್ರತಿಯೊಂದು ಹಾರಾಟವನ್ನೂ ಕೈಗೆಟುಕುವ ದರವಾದ 67 ಮಿಲಿಯನ್ ಡಾಲರ್‌ಗೆ ನೆರವೇರಿಸಬಲ್ಲವು. ಅಂದರೆ, ತಲಾ ಒಂದು ಪೌಂಡ್ ತೂಕದ ಸಾಗಾಟಕ್ಕೆ 1,500 ಡಾಲರ್ ವೆಚ್ಚ ತಗಲುತ್ತದೆ.

ಇದಕ್ಕೆ ಹೋಲಿಸಿದರೆ, ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಪೇಸ್ ಶಟಲ್ ಬಳಕೆಯಲ್ಲಿದ್ದಾಗ, ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರತಿಯೊಂದು ಪೌಂಡ್ ತೂಕಕ್ಕೂ ಅಂದಾಜು 25,000 ಡಾಲರ್ ವೆಚ್ಚ ತಗಲುತ್ತಿತ್ತು.

ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಆಗಿರುವ ಎಲಾನ್ ಮಸ್ಕ್ ಅವರು ತನ್ನ ಗುರಿ ಸ್ಟಾರ್ ಶಿಪ್ ಉಡಾವಣಾ ವೆಚ್ಚವನ್ನು ಅಂದಾಜು 10 ಮಿಲಿಯನ್ ಡಾಲರ್‌ಗಳಿಗೆ ಇಳಿಸುವುದು ಎಂದು ಈಗಾಗಲೇ ಘೋಷಿಸಿದ್ದಾರೆ. ಉಡಾವಣಾ ವೆಚ್ಚದಲ್ಲಿ ಇಷ್ಟೊಂದು ಇಳಿಕೆ ಸಾಧ್ಯವಾದರೆ, ಕ್ಷುದ್ರಗ್ರಹ ಗಣಿಗಾರಿಕೆ, ಬಾಹ್ಯಾಕಾಶ ಆಧಾರಿತ ಕಾರ್ಖಾನೆಗಳಂತಹ ಭವಿಷ್ಯದ ಬಾಹ್ಯಾಕಾಶ ಉದ್ಯಮಗಳ ಕನಸು ನನಸಾಗಬಹುದು. ದೀರ್ಘಾವಧಿಯಲ್ಲಿ, ಮಂಗಳ ಗ್ರಹದ ಮೇಲೆ 10 ಲಕ್ಷ ಜನರ ವಸಾಹತು ಸ್ಥಾಪಿಸಬೇಕು ಎಂಬ ಮಸ್ಕ್ ಕನಸಿಗೂ ಇದು ಪೂರಕವಾದೀತು. ಮಂಗಳ ಗ್ರಹವನ್ನು ತಲುಪಬೇಕು ಎಂಬ ಎಲಾನ್ ಮಸ್ಕ್ ಕನಸಿಗೆ ಪೂರಕವಾಗಿಯೇ ಸ್ಟಾರ್ ಶಿಪ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಎಪ್ರಿಲ್‌ನಲ್ಲಿ ಹೇಳಿಕೆ ನೀಡಿದ್ದ ಎಲಾನ್ ಮಸ್ಕ್, “ಇಲ್ಲಿಯತನಕ ಯಾವುದೇ ರಾಕೆಟ್ ಇನ್ನೊಂದು ಗ್ರಹದಲ್ಲಿ ಜೀವನಕ್ಕೆ ಅನುವು ಮಾಡಿಕೊಡುವ ಸಾಮರ್ಥ್ಯ ಹೊಂದಿರಲಿಲ್ಲ” ಎಂದಿದ್ದರು. ಎಲಾನ್ ಮಸ್ಕ್ ಅವರು ಇತರ ಗ್ರಹಗಳಲ್ಲಿ ಮಾನವ ವಾಸವನ್ನು ಸಾಧ್ಯವಾಗಿಸುವ ಗುರಿಯೊಂದಿಗೆ 2002ರಲ್ಲಿ ಸ್ಪೇಸ್ ಎಕ್ಸ್ ಸಂಸ್ಥೆಯನ್ನು ಆರಂಭಿಸಿದ್ದರು. ಹಾಗೆಂದು ಅದು ಕೇವಲ ಎಲಾನ್ ಮಸ್ಕ್ ಒಬ್ಬರ ಕನಸು ಮಾತ್ರವಲ್ಲ.

ಎಂಐಟಿಯಲ್ಲಿ ಏರೋನಾಟಿಕ್ಸ್, ಆ್ಯಸ್ಟ್ರೋನಾಟಿಕ್ಸ್ ಮತ್ತು ಇಂಜಿನಿಯರಿಂಗ್ ಉಪನ್ಯಾಸಕರಾಗಿರುವ ಆಲಿವರ್ ಡಿ ವೆಕ್ ಅವರು ಈ ಹಿಂದೆ ಸ್ಟಾರ್ ಶಿಪ್ ನೌಕೆಯೇ ಮಾನವರನ್ನು ಚಂದ್ರನ ಮೇಲೆ, ಅಷ್ಟೇ ಯಾಕೆ ಮಂಗಳ ಗ್ರಹದ ಮೇಲಕ್ಕೂ ಕರೆದೊಯ್ಯಬಲ್ಲದು ಎಂದು ಹೇಳಿದ್ದರು.

ಇದೊಂದು ಮಹತ್ವದ ರಾಕೆಟ್ ಯೋಜನೆ ಮಾತ್ರವಲ್ಲದೆ, ಮಾನವ ಜನಾಂಗದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವ ಯೋಜನೆಯೂ ಹೌದು ಎಂದು ಅವರು ವಿವರಿಸಿದ್ದರು.

ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ ಸ್ಪೇಸ್ಎಕ್ಸ್

ವೈಜ್ಞಾನಿಕ ಚಲನಚಿತ್ರದ ದೃಶ್ಯ ಎಂಬಂತೆ ಭಾಸವಾದ ಆ ಕ್ಷಣದಲ್ಲಿ, ರಾಕೆಟ್ ನಿಧಾನವಾಗಿ ಕೆಳಗಿಳಿದು, ಒಂದು ಟವರ್‌ನ ಚಾಚಿದ ಯಾಂತ್ರಿಕ ಕೈಗಳತ್ತ ಸಾಗಿತು. ಆ ಕ್ಷಣದಲ್ಲಿ ಸ್ಪೇಸ್ ಎಕ್ಸ್ ಸಿಬ್ಬಂದಿಗಳು ಅತ್ಯಂತ ಸಂಭ್ರಮಪಟ್ಟರು.

ಇದು ಸ್ಪೇಸ್ ಎಕ್ಸ್ ಸಂಸ್ಥೆಯ ಐತಿಹಾಸಿಕ ‘ಚಾಪ್ ಸ್ಟಿಕ್’ ಚಲನೆಯ ಮೊದಲ ಪ್ರಯೋಗವೂ ಆಗಿತ್ತು. ಇಂಜಿನಿಯರ್‌ಗಳು ಬೂಸ್ಟರ್ ಲ್ಯಾಂಡ್ ಆಗುವ ಕ್ಷಣವನ್ನು ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗುವ ಕ್ಷಣ ಎಂದು ಬಣ್ಣಿಸಿದ್ದಾರೆ.

ಎಲಾನ್ ಮಸ್ಕ್ ಕಳೆದ ಹಲವು ವರ್ಷಗಳಿಂದ ಈ ಕುರಿತು ಮಾತನಾಡುತ್ತಿದ್ದರೂ, ಈ ಇಂಜಿನಿಯರಿಂಗ್ ಸಾಧನೆ ಹಿಂದೆ ಕಕ್ಷೀಯ ರಾಕೆಟ್ ತಂತ್ರಜ್ಞಾನದಲ್ಲಿ ಕಂಡ ಸಾಧನೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ.

ಯೂಟ್ಯೂಬ್ ಚಾನೆಲ್ ಒಂದಕ್ಕೆ 2021ರಲ್ಲಿ ಸಂದರ್ಶನ ನೀಡಿದ್ದ ಮಸ್ಕ್, “ಈ ಯೋಜನೆ ಒಂದು ಹುಚ್ಚು ಯೋಜನೆಯಂತೆಯೇ ಕೇಳುತ್ತದೆ ಎನ್ನುವುದು ನನಗೆ ಗೊತ್ತು. ನಾನು ಈ ಸಾಧ್ಯತೆಯನ್ನು ಮೊದಲ ಬಾರಿಗೆ ಹೇಳಿದಾಗ, ಜನರು ನನಗೆ ತಲೆ ಕೆಟ್ಟಿದೆ ಎಂದೇ ಭಾವಿಸಿದ್ದರು!” ಎಂದು ಹೇಳಿದ್ದರು.

ಎಫ್ಎಎ ಜೊತೆಗೆ ಸ್ಪೇಸ್ ಎಕ್ಸ್ ವಿವಾದಗಳು

18 ತಿಂಗಳ ಹಿಂದೆ, ಸ್ಟಾರ್ ಶಿಪ್ ತನ್ನ ಮೊದಲ ಅತ್ಯಂತ ಎತ್ತರದ ಹಾರಾಟ ನಡೆಸಿದ ಬಳಿಕ ಸ್ಪೇಸ್ ಎಕ್ಸ್ ಹಲವು ಹಿನ್ನಡೆಗಳು ಮತ್ತು ವಿಳಂಬಗಳನ್ನು ಎದುರಿಸಿತು. ಕೆಲವು ಸಣ್ಣಪುಟ್ಟ ಬದಲಾವಣೆಗಳ ಕಾರಣದಿಂದ ನಿಯಂತ್ರಕರು ಐದನೇ ಪರೀಕ್ಷಾ ಹಾರಾಟವನ್ನು ತಡೆಹಿಡಿಯುತ್ತಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ. ಅದರೊಡನೆ, ಫೆಡೆರಲ್ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ (ಎಫ್ಎಎ) ಕಾರ್ಯಾಚರಣೆಯನ್ನು ನಿಧಾನಗೊಳಿಸಿದೆ ಎಂದೂ ಸ್ಪೇಸ್ ಎಕ್ಸ್ ಹೇಳಿದೆ.

ಆದರೆ, ಅಂತಿಮವಾಗಿ ಶನಿವಾರ ಎಫ್ಎಎ ಸ್ಟಾರ್ ಶಿಪ್‌ನ ಐದನೇ ಉಡಾವಣೆಗೆ ಹಸಿರು ನಿಶಾನೆ ತೋರಿತು. ಸ್ಪೇಸ್ ಎಕ್ಸ್ ತಕ್ಷಣವೇ ಸಿದ್ಧವಾಗಿ, ಮರುದಿನವೇ ಈ ಮಹತ್ವದ ಉಡಾವಣೆಯನ್ನು ಕೈಗೊಂಡಿತು. ಭವಿಷ್ಯದಲ್ಲಿ ಪರಿಸರದ ಮೇಲಿನ ಪರಿಣಾಮಗಳನ್ನು ಅವಲೋಕಿಸುವ ನಿಟ್ಟಿನಲ್ಲಿ ತನ್ನ ಉಡಾವಣೆಗಳಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಸ್ಪೇಸ್ ಎಕ್ಸ್ ಸಂಸ್ಥೆಗೆ ಎಫ್ಎಎ ಸೂಚಿಸಿದೆ.

ಉದಾಹರಣೆಗೆ, ಸ್ಪೇಸ್ ಎಕ್ಸ್ ಸಂಸ್ಥೆಯ ಉಡಾವಣೆಗಳು ಸ್ಥಳೀಯ ಪ್ರಾಣಿಗಳ ಆವಾಸ ಸ್ಥಾನಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅವಲೋಕಿಸಲು ಸ್ಪೇಸ್ ಎಕ್ಸ್ ಪರಿಸರ ಇಂಜಿನಿಯರ್‌ಗಳನ್ನು ಹೊಂದಲಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಟಾಪ್ ನ್ಯೂಸ್

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

1-s-j

SCO Summit; ಉಗ್ರವಾದದ ವಿರುದ್ಧ ಪಾಕಿಸ್ಥಾನದಲ್ಲೇ ಸ್ಪಷ್ಟ ಸಂದೇಶ ನೀಡಿದ ಎಸ್. ಜೈಶಂಕರ್

1-yekanath

Maharashtra Poll; ”ತ್ಯಾಗ” ಮಾಡಲು ಸಿದ್ಧರಾಗಬೇಕು.. ಶಿಂಧೆಗೆ ಬಿಜೆಪಿ ಸ್ಪಷ್ಟ ಸಂದೇಶ!

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-nikk

Viral video; ಕನ್ಸರ್ಟ್ ವೇಳೆ ಲೇಸರ್ ಬಿಟ್ಟ ಪ್ರೇಕ್ಷಕ!: ವೇದಿಕೆಯಿಂದ ಹೊರಗೋಡಿದ ನಿಕ್

ashish.jpg

Celebrity Corner: ನಿಜವಾದ ಗೆಳೆಯನನ್ನು ಕೊಟ್ಟ ಈ ಕ್ರಿಕೆಟ್‌ ಜಗತ್ತಿಗೆ ನಾನು ಚಿರಋಣಿ…

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Celebrity Corner:ಕಾಲೇಜುಗಳು ಕಲಿಸುತ್ತವೆಂದು ಕಾಯದಿರಿ-ಆದಾಯದ ಮಾಡೆಲ್‌ ಎಂದರೇನು?

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

Success Story-ಮುನಿಯಾಲ್‌ To ಅಬುಧಾಬಿ; ಯಶಸ್ವಿ ಹೋಟೆಲ್‌ ಉದ್ಯಮಿ ಸುಂದರ ಶೆಟ್ಟಿ ಜೀವನಗಾಥೆ

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

10-udupi

Udupi: ಅಕ್ರಮ ಪಟಾಕಿ ದಾಸ್ತಾನು; ಪೊಲೀಸ್‌ ವಶಕ್ಕೆ

15(1)

Manipal: ಎಂಜಿಎಂ ಚಿಟ್ಟೆ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು

14

Malpe: ಸಿಎನ್‌ಜಿ ಕೊರತೆ; ರಿಕ್ಷಾ ಚಾಲಕರಿಗೆ ಚಿಂತೆ

9-sagara

Sagara: ನಗರ ವ್ಯಾಪ್ತಿಯ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ; ಬೇಳೂರು ಸೂಚನೆ

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.