ಒಲುಮೆಯ ಹಾಡು ಹೇಳದವರನ್ನು ಹೇಗೆ ಒಪ್ಪಲಿ?


Team Udayavani, Mar 14, 2021, 6:20 AM IST

ಒಲುಮೆಯ ಹಾಡು ಹೇಳದವರನ್ನು ಹೇಗೆ ಒಪ್ಪಲಿ?

ವಾಸುದೇವನ್‌, ಕೇಂದ್ರ ಸರಕಾರದ ನೌಕರಿಯಲ್ಲಿದ್ದು ನಿವೃತ್ತರಾದವರು. ಹೆಂಡತಿ ಹಾಗೂ ಎರಡು ಗಂಡು ಮಕ್ಕಳು ಅವರ ಕುಟುಂಬ. ಮಕ್ಕಳಿಬ್ಬರೂ ಸಾಫ್ಟ್ ವೇರ್‌ ಎಂಜಿನಿಯರ್‌ಗಳು. ಒಬ್ಬನಿಗೆ ಅಮೆರಿಕದಲ್ಲಿ, ಮತ್ತೂಬ್ಬನಿಗೆ ಆಸ್ಟ್ರೇಲಿಯಾದಲ್ಲಿ ಕೆಲಸ. ವಾಸುದೇವನ್‌ ಅವರಿಗೆ ಎರಡು ಮನೆಗಳಿವೆ. ಒಂದರಲ್ಲಿ ತಾವು ವಾಸವಾಗಿದ್ದಾರೆ. ಇನ್ನೊಂದನ್ನು ಬಾಡಿಗೆಗೆ ನೀಡಿದ್ದಾರೆ. ಇದರ ಜತೆಗೆ ಪೆನ್ಶನ್‌ ಹಣವೂ ಬರುತ್ತದೆ. ಹಾಗಾಗಿ ಜೀವನೋಪಾಯಕ್ಕೆ ಯಾವುದೇ ಕೊರತೆಯೂ ಇಲ್ಲ. ಹೊರಗಿನವರ ಪ್ರಕಾರ ಅವರದ್ದು ಸುಖೀ ಕುಟುಂಬ.

ಜನರ ಕಣ್ಣಲ್ಲಿ ಸುಖೀ ಎನಿಸಿದರೂ ವಾಸುದೇವನ್‌ಗೆ ಖುಷಿಯಿಂದ, ನೆಮ್ಮದಿಯಿಂದ ಬದುಕಲು ಸಾಧ್ಯವಾಗಿರಲಿಲ್ಲ. ಆತ ಅತೃಪ್ತಿಯಿಂದ ನರಳುತ್ತಿದ್ದರು. ಒಂಟಿತನದಿಂದ ಬಸವಳಿದಿದ್ದರು. ಕಡೆಗೊಮ್ಮೆ, ತಮಗೆ ಮತ್ತು ತಮ್ಮ ಕುಟುಂಬದ ಎಲ್ಲರಿಗೂ ಆಪ್ತರಾಗಿದ್ದ ಒಬ್ಬರಿಗೆ ಪತ್ರ ಬರೆದರು. ಆ ಪತ್ರದ ಸಾರಾಂಶ ಹೀಗಿತ್ತು:

“ಮಾನ್ಯರೇ, ನಮಸ್ಕಾರ, ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ, ಮಕ್ಕಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ. ಅದೇ ಕಾರಣದಿಂದ ಈಗ ನಿಮ್ಮೊಂದಿಗೆ ಸಮಸ್ಯೆ ಹೇಳಿಕೊಳ್ಳುತ್ತಿದ್ದೇನೆ. ಇದಕ್ಕೆ ಪರಿಹಾರ ಸೂಚಿಸಲೂ ವಿನಂತಿಸುತ್ತಿದ್ದೇನೆ. ನನ್ನ ಮಕ್ಕಳಿಬ್ಬರೂ ಸಾಫ್ಟ್ ವೇರ್‌ ಎಂಜಿನಿಯರ್‌ಗಳಾಗಿ ವಿದೇಶದಲ್ಲಿ ನೆಲೆಸಿರುವುದು ನಿಮಗೆ ಗೊತ್ತೇ ಇದೆ. ಅವರನ್ನು ನಾನು ಹೇಗೆ ಸಾಕಿದೆ, ಎಷ್ಟೆಲ್ಲ ಮುದ್ದುಮಾಡಿದೆ, ಅವರಿಬ್ಬರ ಬಗ್ಗೆ ಎಷ್ಟೊಂದು ಕನಸು ಕಂಡಿದ್ದೆ ಎಂಬುದನ್ನೂ ನೀವು ಬಲ್ಲಿರಿ. ಈಗೇನಾಗಿದೆ ನೋಡಿ; ಮಕ್ಕಳಿಬ್ಬರೂ ಒಂದರ್ಥದಲ್ಲಿ ನಮ್ಮನ್ನು ಮರೆತೇ ಬಿಟ್ಟಿದ್ದಾರೆ. ವರ್ಷದಲ್ಲಿ ಒಂದೆರಡು ಬಾರಿ ಊರಿಗೆ ಬರುತ್ತಾರೆ. 1 ಅಥವಾ 2 ವಾರವಿದ್ದು ವಾಪಸ್‌ ಹೋಗಿಬಿಡುತ್ತಾರೆ.

ನನ್ನ ಹೆಂಡತಿಗೆ ಈಗ ಆರ್ಥರೈಟಿಸ್‌. ಜತೆಗೆ ನಿಶ್ಶಕ್ತಿ. ಈ ಕಾರಣದಿಂದ ಆಕೆ ಮಹಡಿ ಹತ್ತಿಳಿಯಲಾರಳು. ಅಂಗಡಿಗೆ ಹೋಗಿ ಬರಲಿಕ್ಕೂ ಆಕೆಗೆ ಸಾಧ್ಯವಾಗದು. ನನಗೆ ಆಸ್ತಮಾ. ಏದುಸಿರು, ನಿಶ್ಶಕ್ತಿಯಿಂದ ಸುಸ್ತಾಗಿ ಹೋಗಿದ್ದೇನೆ. ಹೆಂಡತಿ, ಸದಾ ಮಲಗಿಯೇ ಇರುತ್ತಾಳೆ. ಹಾಗಾಗಿ, ನಾನೀಗ ಒಂಟಿ, ಒಂಟಿ, ಒಬ್ಬಂಟಿ. ನನಗೀಗ ಮಾತಾಡಲು ಜನ ಬೇಕು.

ಮುಖ್ಯವಾಗಿ, ಮಕ್ಕಳು ನನ್ನ ಜತೆಗಿರಬೇಕು ಎಂಬ ಆಸೆ. ಆದರೆ, ಇಬ್ಬರು ಮಕ್ಕಳಿಗೂ ನನ್ನ ಮಾತು ಕೇಳುವ ಆಸಕ್ತಿಯೇ ಇಲ್ಲ. ನಾನು ತುಂಬಾ ಆಸೆಯಿಂದ “ಹಲೋ’ ಅನ್ನುತ್ತಿದ್ದಂತೆಯೇ ಫೋನ್‌ ಕಟ್‌ ಮಾಡುತ್ತಾರೆ. ಇಲ್ಲವಾದರೆ, ಯಾವುದೋ ಪ್ರಾಜೆಕ್ಟ್ಗೆ ಕೆಲಸ ಮಾಡ್ತಾ ಇದ್ದೇವೆ. ಈಗ ತುಂಬಾ ಬ್ಯುಸಿ. ಆಮೇಲಿಂದ ನಾವೇ ಕಾಲ್‌ ಮಾಡ್ತೇವೆ ಅನ್ನುತ್ತಾರೆ. ಆದರೆ ಅಪ್ಪಿ ತಪ್ಪಿ ಕೂಡ ಮತ್ತೆ ಫೋನ್‌ ಮಾಡುವುದಿಲ್ಲ. ಈ ಮಕ್ಕಳಿಗೆ ನೀವಾದರೂ ಬುದ್ಧಿ ಹೇಳಿ. ನಿಮ್ಮ ಮಾತಿಗೆ ಅವರು ಖಂಡಿತ ಬೆಲೆ ಕೊಡುತ್ತಾರೆ…’
***
ವಾಸುದೇವನ್‌ ಅವರ ಪತ್ರ ನೋಡಿ ಸಾಹಿತಿಗೆ ಸಂಕಟವಾಯಿತು. ಹೆತ್ತವರನ್ನು ಮರೆತಿರುವ ಆ ಮಕ್ಕಳಿಗೆ ಬುದ್ಧಿ ಹೇಳಲು ತಮಗೂ ಹಕ್ಕಿದೆ ಎಂದು ಯೋಚಿಸಿದ ಅವರು ಇಬ್ಬರೂ ಮಕ್ಕಳಿಗೆ ಇ-ಮೇಲ್‌ ಕಳುಹಿಸಿದರು. ನಿಮ್ಮನ್ನು ಎಂಜಿನಿಯರ್‌ಗಳನ್ನಾಗಿ ಮಾಡಲು ನಿಮ್ಮ ತಂದೆ-ತಾಯಿ ವಿಪರೀತ ಕಷ್ಟಪಟ್ಟಿದ್ದಾರೆ. ಅದನ್ನು ನೆನಪಿಸಿಕೊಳ್ಳುವ ಸೌಜನ್ಯವೂ ನಿಮಗಿಲ್ಲವಲ್ಲ; ನಿಮ್ಮ ಈ ವರ್ತನೆ ಸರಿಯೇ? ಅಪ್ಪ-ಅಮ್ಮನ ಬಗ್ಗೆ ಹೆಚ್ಚು ಕಾಳಜಿ ತಗೊಳ್ಳಬಾರದೇ? ವಾರಕ್ಕೆ ಎರಡು- ಮೂರು ಬಾರಿ ಅವರಿಗೆ ಕಾಲ್‌ ಮಾಡಿ ಸುಖ-ದುಃಖ ವಿಚಾರಿಸಬಾರದೇ? ಎಂದು ಸಲಹೆ ನೀಡಿದ್ದರು.

ಒಂದು ವಾರದ ಅಅನಂತರ‌ ವಾಸುದೇವನ್‌ರ ಕಿರಿಯ ಮಗ, ಈ ಹಿರಿಯರಿಗೆ ಪತ್ರ ಬರೆದ. ಅದರ ಸಾರಾಂಶ ಹೀಗಿತ್ತು: “ಹಿರಿಯರೆ, ನಿಮ್ಮ ಪತ್ರ ತಲುಪಿದೆ. ಪ್ರತಿಯೊಂದು ಪದವನ್ನೂ ಎರಡೆರಡು ಬಾರಿ ಓದಿಕೊಂಡೇ ನಿಮಗೆ ಉತ್ತರ ಬರೆಯುತ್ತಿರುವೆ. ಸತ್ಯ ಹೇಳಲಾ? ನನಗೆ ಯಾವತ್ತೂ, ಹುಟ್ಟೂರಿಗೆ ಹೋಗಬೇಕೆಂಬ ಆಸೆಯಾಗುವುದಿಲ್ಲ. ಹೆತ್ತವರೊಂದಿಗೆ ಅರ್ಧ ಗಂಟೆ ಮಾತಾಡುವುದರೊಳಗೆ ಚಡಪಡಿಕೆ ಶುರುವಾಗುತ್ತದೆ. ಹೀಗಿರುವಾಗ ವರ್ಷಕ್ಕೆ ಮೂರು ಬಾರಿ ತಲಾ 15 ದಿನ ರಜೆ ಹಾಕಿ, ಬಂದು ಏನು ಮಾಡಲಿ?

ಈಗ ನಮ್ಮ ತಂದೆಯ ವಿಷಯಕ್ಕೆ ಬರೋಣ. ಮಕ್ಕಳು ಹೆಣ್ಣಾದರೂ ಸರಿ, ಅಥವಾ ಗಂಡಾದರೂ ಸರಿ; ಅವರನ್ನು ಎಂಜಿನಿಯರ್‌ಗಳನ್ನಾಗಿಯೇ ಮಾಡಬೇಕೆಂದು ಅಪ್ಪ, ಮದುವೆಗೂ ಮೊದಲೇ ನಿರ್ಧರಿಸಿದ್ದರಂತೆ. ಹಾಗಾಗಿ, ಬಾಲ್ಯದಿಂದಲೂ ನಮಗೆ ಓದು ಬಿಟ್ಟರೆ, ಬೇರೊಂದು ಮಾತನ್ನು ಅವರು ಹೇಳಲಿಲ್ಲ. ಶಾಲೆಯಿಂದ ಬಂದ ತತ್‌ಕ್ಷಣ “ಫ್ರೆಶ್‌ ಆಗಿ’ ಹಾಲು ಕುಡಿದು, ನಾವು ಓದಲು ಕೂರಬೇಕಿತ್ತು. ಗೆಳೆಯರೊಂದಿಗೆ ಆಡುವ, ಕುಣಿಯುವ, ಕೋಳಿ ಜಗಳ ಮಾಡುವ, ರಾಜಿ ಆಗುವ, ಸುತ್ತಾಡುವ ಅವಕಾಶಗಳೇ ನಮಗಿರಲಿಲ್ಲ. ಶನಿವಾರ, ರವಿವಾರ‌ ಸೇರಿ ರಜಾ ದಿನಗಳಲ್ಲಿ ಕೂಡ ಅಪ್ಪ ಆಟವಾಡಲು ನಮ್ಮನ್ನು ಹೊರಗೆ ಕಳಿಸುತ್ತಿರಲಿಲ್ಲ. ಬೆತ್ತ ಹಿಡಿದು ಎದುರಿಗೆ ಕೂತಿರುತ್ತಿದ್ದರು. ಯುಗಾದಿ, ಗೌರಿ-ಗಣೇಶ, ದೀಪಾವಳಿಯಂಥ ಹಬ್ಬಗಳಲ್ಲಿ ಕೂಡ, ನಾವು ಇಡೀ ದಿನ ನಮ್ಮ ಇಷ್ಟದಂತೆ ಬಾಳಲು ಬಿಡಲಿಲ್ಲ. ಈ ಸಂದರ್ಭಗಳಲ್ಲಿ, ಅಮ್ಮ ಕೂಡ ಅಪ್ಪನ ಜತೆಗೆ ನಿಂತಳು. ಏಳನೇ ತರಗತಿಯಿಂದಲೇ ಪ್ರತೀ ವರ್ಷವೂ ರ್‍ಯಾಂಕ್‌ ಬರಲೇಬೇಕು ಎಂದು ಒತ್ತಾಯ ಮಾಡುತ್ತಿದ್ದಳು. ಹೆತ್ತವರ ಈ ಕಾಟ ತಡೆಯಲಾಗದೆ ನಾನೂ-ಅಣ್ಣನೂ ದಿನವಿಡೀ ಓದಿ ಓದಿ ರ್‍ಯಾಂಕ್‌ ಬಂದೆವು.

ಅನಂತರ‌ವೂ ಹೆತ್ತವರ ಕಿರಿಕಿರಿ ಕಡಿಮೆಯಾಗಲಿಲ್ಲ. ಪಿಯುಸಿಯಲ್ಲಿ ಮತ್ತೆ ರ್‍ಯಾಂಕ್‌ ಬರಬೇಕೆಂದು ಒತ್ತಾಯಿಸಿದರು. ಮನೇಲಿದ್ದರೆ ಮಕ್ಕಳು ಹಾಳಾಗುತ್ತಾರೆಂದು ನಮ್ಮನ್ನು ರೆಸಿಡೆನ್ಶಿಯಲ್‌ ಸ್ಕೂಲ್‌ಗೆ ಸೇರಿಸಿದರು. ಅಲ್ಲಿ ವರ್ಷವಿಡೀ ನಾವು “ಓದುವ’ ಭಜನೆ ಮಾಡಬೇಕಿತ್ತು. ಇಲ್ಲವಾದಲ್ಲಿ, ಭಾರೀ ಶಿಕ್ಷೆಗೆ ಗುರಿಯಾಗಬೇಕಿತ್ತು. ತಿಂಗಳಿಗೊಮ್ಮೆ ಹಾಸ್ಟೆಲ್‌ಗೆ ಬರುತ್ತಿದ್ದ ಹೆತ್ತವರು- ನಿಮಗೆ ಏನಾದ್ರೂ ತೊಂದರೆ ಇದೆಯಾ? ಬೇಸರ ಆಗುತ್ತಾ? ಅಜ್ಜಿ ಊರಿಗೆ ಹೋಗುತ್ತೀರಾ? ಜಾತ್ರೆಗೆ-ಟೂರ್‌ಗೆ ಹೋಗಿ ಬರೋಣವಾ? ಎಂದು ಅಪ್ಪಿತಪ್ಪಿಯೂ ಕೇಳುತ್ತಿರಲಿಲ್ಲ. ಬದಲಾಗಿ, “ಈ ಬಾರಿ ನಿನ್ನದು ಎಷ್ಟು ಪರ್ಸೆಂಟ್‌ ಇದೆ? ಕ್ಲಾಸ್‌ಗೆ ನೀನೇ ಟಾಪರ್‌ ತಾನೇ? ಫಸ್ಟ್ ರ್‍ಯಾಂಕ್‌ ಬರಲಿಲ್ಲ ಅಂದ್ರೆ ನೀನು ನನ್ನ ಮಗನೇ ಅಲ್ಲ’ ಎಂದಷ್ಟೇ ಅವರು ಹೇಳುತ್ತಿದ್ದರು. ಒಂದೊಮ್ಮೆ ನಾನೇನಾದರೂ ಊರಿಗೆ ಹೋಗುವ ಆಸೆಯಿಂದ, ನನಗೆ ಸ್ವಲ್ಪ ಹುಷಾರಿಲ್ಲ ಎಂದು ಪತ್ರ ಬರೆದರೆ-ಅನಾರೋಗ್ಯವಾದರೆ ಅಲ್ಲಿಯೇ ಟ್ರೀಟ್‌ಮೆಂಟ್‌ ತಗೋ. ಯಾವುದೇ ಕಾರಣಕ್ಕೂ ಊರಿಗೆ ಬರಬೇಡ’ ಎಂದೇ ವಾರ್ನ್ ಮಾಡುತ್ತಿದ್ದರು.

ಪಿಯುಸಿಯಲ್ಲೂ ನಾನೂ- ಅಣ್ಣನೂ ರ್‍ಯಾಂಕ್‌ ಬಂದಾಯ್ತು. ನನ್ನ ಹೆತ್ತವರು, ಆಗಲೂ ಸುಮ್ಮನಾಗಲಿಲ್ಲ. ಮುಂದೆ ಏನು ಓದ್ತಿಯಾ? ಏನಾಗ್ಬೇಕು ಅಂತ ಯೋಚನೆ ಮಾಡಿದ್ದೀ ಎಂದು ಕೇಳಲೇ ಇಲ್ಲ. ಬದಲಿಗೆ, ನೀನು ಕಂಪ್ಯೂಟರ್‌ ಸೈನ್ಸನ್ನೇ ತಗೋಬೇಕು. ಆಗ ಕೂಡ ರ್‍ಯಾಂಕ್‌ ಬರಬೇಕು ಎಂದು ಆರ್ಡರ್‌ ಮಾಡಿದರು. ಸಾಫ್ಟ್ವೇರ್‌ ಎಂಜಿನಿಯರ್‌ ಆದರೆ ವರ್ಷಕ್ಕೆ ಎಷ್ಟು ಸಂಬಳ ಪಡೆಯಬಹುದು ಎಂದು ಮಾತ್ರ ಹೇಳಿಕೊಟ್ಟರು. ಆಗ ಕೂಡ, ಹೆತ್ತವರ ಹಿಂಸೆ ತಡೆಯಲಾಗದೆ ರ್‍ಯಾಂಕ್‌ ಪಡೆದೆ. ಇವತ್ತು, ಹೆತ್ತವರು ಅಂದು ಕೊಂಡಾಗ, ಬಾಲ್ಯ ಅಂದುಕೊಂಡಾಗ, ಹುಟ್ಟೂರನ್ನು ನೆನಪಿಸಿಕೊಂಡಾಗ ನನಗೆ ಈಗಲೂ ಬೇಸರವಾಗುತ್ತದೆ. ಭಯವಾಗುತ್ತದೆ.

ಬಾಲ್ಯದಲ್ಲಿ ನಾನು ಚಿಟ್ಟೆ ಹಿಡಿಯಲಿಲ್ಲ. ಅಜ್ಜಿ ಕಥೆಗೆ “ಹೂಂ’ ಅನ್ನಲಿಲ್ಲ. ಐ-ಸ್ಪೈ ಆಡಲಿಲ್ಲ. ಚೌಕಾಬಾರ ಆಟವನ್ನೇ ನೋಡಲಿಲ್ಲ ಅನ್ನಿಸಿ ಸಂಕಟವಾಗುತ್ತದೆ. ಅಬ್ಟಾ, ನಾನು ಹೇಗೆಲ್ಲ ಬದುಕಿಬಿಟ್ಟೆನಲ್ಲ ಅನ್ನಿಸಿ ಹಿಂಸೆಯಾಗುತ್ತದೆ. ಹಾಗಾಗಿ, ಊರಿಗೆ ಹೋಗಬೇಕೆಂಬ, ಹೆತ್ತವರ ನೋಡಬೇಕೆಂಬ ಚಡಪಡಿಕೆ ನನಗೆ ಉಂಟಾಗುವುದೇ ಇಲ್ಲ. ಯಾಕೆಂದರೆ ಊರಲ್ಲಿ ನನಗೆ ಯಾರೂ ಆತ್ಮೀಯರಿಲ್ಲ. ಗೆಳೆಯರ ಬಳಗವೇ ಇಲ್ಲ.

ಹೆತ್ತವರೊಂದಿಗೆ ಹತ್ತು ನಿಮಿಷದ ಅನಂತರ‌ ಮಾತಾಡಲು ವಿಷಯಗಳೇ ಇರುವುದಿಲ್ಲ. ಪ್ರೀತಿ, ಮಾನವೀಯತೆ, ತ್ಯಾಗ, ಕರುಣೆ ಎಂಬ ಪದಗಳ ಪರಿಚಯವನ್ನೇ ಮಾಡಿಕೊಡದ, ನಮ್ಮದೇ ಅಭಿಪ್ರಾಯ ಹೇಳಲು ಅವಕಾಶ ಕೊಡದ ಹೆತ್ತವರನ್ನು ನಾನು ಇಷ್ಟಪಡುವುದಾದರೂ ಹೇಗೆ? ನನ್ನ ಅಣ್ಣನ ಮಾತುಗಳೂ ಹೆಚ್ಚು ಕಡಿಮೆ ಇವೇ ಆಗಿರುತ್ತವೆ. ನಮ್ಮಿಬ್ಬರ ಈ ಮಾತುಗಳಿಂದ ನಮ್ಮ ಹೆತ್ತವರಿಗೆ ತುಂಬ ಸಂಕಟವಾಗುತ್ತದೆಂದು ಗೊತ್ತು. ಆದರೂ ಪರವಾಗಿಲ್ಲ. ಈ ಪತ್ರವನ್ನು ದಯವಿಟ್ಟು ಅವರಿಗೆ ತಲುಪಿಸಿ…’
***
ಈ ಪತ್ರ ಓದಿದ ಆ ಹಿರಿಯರಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಅವರು ತಲೆ ಮೇಲೆ ಕೈಹೊತ್ತು ಮೌನವಾಗಿ ಕೂತುಬಿಟ್ಟರು.

– ಎ.ಆರ್‌.ಮಣಿಕಾಂತ್‌

 

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.