![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Mar 15, 2023, 6:04 AM IST
ಕಬ್ಬಿಣದ ಸರಳು ಕಳವು: ಲಾರಿ ನೌಕರರ ವಿರುದ್ಧ ಕೇಸು
ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ಊರಾಳುಂಗಲ್ ಸೊಸೈಟಿ ಮಂಗಳೂರಿನಿಂದ ಮೂರು ಲಾರಿಗಳಲ್ಲಿ ತುಂಬಿಸಿ ಕಳುಹಿಸಿಕೊಟ್ಟ ಕಬ್ಬಿಣದ ಸರಳುಗಳ ಪೈಕಿ 54,90,000 ರೂ. ಸರಳುಗಳು ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಊರಾಳುಂಗಲ್ ಸೊಸೈಟಿ ಸೀನಿಯರ್ ಪ್ರೊಜೆಕ್ಟ್ ಮೆನೇಜರ್ ನಾರಾಯಣನ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಮಂಗಳೂರಿನ ಜೆ.ಕೆ.ಟ್ರಾನ್ಸ್ಲೈನ್ ಲಾರಿ ಕಂಪೆನಿಯ ಮೂವರು ಲಾರಿ ನೌಕರರ ವಿರುದ್ಧ ಕೇಸು ದಾಖಲಿಸಿದ್ದಾರೆ.
ತಲಪಾಡಿಯಿಂದ ಚೆರ್ಕಳದ ವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವುಳ್ಳ ಸಾಮಗ್ರಿಗಳನ್ನು ಭದ್ರವಾಗಿಡುವ ಊರಾಳುಂಗಲ್ನ ಸೂರಂಬೈಲ್ನ ಯಾರ್ಡ್ನಲ್ಲಿ ಇಳಿಸಲು ಕಳುಹಿಸಿಕೊಟ್ಟ ಸರಳುಗಳನ್ನು ದಾರಿ ಮಧ್ಯೆ ತೆಗೆದು ಮಾರಾಟಗೈದಿರಬಹುದೆಂದು ಸಂಶಯಿಸಲಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
——-
ವೃದ್ಧನ ಅಪಹರಿಸಿ ಹಲ್ಲೆ : ಐವರ ಬಂಧನ
ಹೊಸದುರ್ಗ: ಇರಿಯ ಕಾಡುಮಠಂ ನಿವಾಸಿ ಪಿ.ಚಂದ್ರನ್(74) ಅವರನ್ನು ಕಾಞಿರಡ್ಕದಿಂದ ಕಾರಿನಲ್ಲಿ ಅಪಹರಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ವೇಲೂರು ಅರಿಯಳಂ ನಿವಾಸಿಗಳಾದ ಮುರಳೀಧರನ್(40), ಗೋಪ ಕುಮಾರ್(33), ಇರಿಯ ಕ್ಲಾಯಿಯ ಪವಿತ್ರನ್(44), ಕಾಡುಮಠಂ ನಿವಾಸಿಗಳಾದ ಸಜೀಶ್(31) ಮತ್ತು ಸುಮೇಶ್(34)ನನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಫೆ.24 ರಂದು ಸಂಜೆ 5.30 ಕ್ಕೆ ಆರ್ಥಿಕ ವ್ಯವಹಾರದಲ್ಲಿ ಉಂಟಾದ ವಿವಾದ ಅಪಹರಿಸಲು ಕಾರಣವೆನ್ನಲಾಗಿದೆ. ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
——
ಅಡಿಕೆ ಕಳವು ಯತ್ನ : ಬಂಧನ
ಕಾಸರಗೋಡು: ಮನೆಯ ಬೀಗ ಮುರಿದು ಅಡಿಕೆ ಕಳವು ಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ವೆಳ್ಳರಿಕುಂಡು ಕೂವಪ್ಪಾರ ನಿವಾಸಿ ಕೆ.ಬಾಬು(55)ನನ್ನು ವೆಳ್ಳರಿಕುಂಡು ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡು ಸಮೀಪದ ಕಲ್ಲಾಳಿಚಿರದ ಮೀನತ್ ನಾಜಾರ್ ಅವರ ಮನೆಯಿಂದ ಅಡಿಕೆ ಕಳವು ಗೈಯ್ಯಲೆತ್ನಿಸಲಾಗಿತ್ತು. ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದರು.
ಇತ್ತೀಚೆಗೆ ಪೂಂಙಚ್ಚಾರ ಕೊಡಿಯಂಕುಂಡಿನ ಕೆ.ಮಧುಸುಂದರ ಅವರ ಅಂಗಡಿಯ ಬೀಗ ಮುರಿದು ಅಡಿಕೆ ಕಳವು ಮಾಡಿದ ಪ್ರಕರಣದಲ್ಲೂ ಬಾಬು ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
———
ಸಲಿಂಗರತಿ ಕಿರುಕುಳ : 3 ವರ್ಷ ಸಜೆ, ದಂಡ
ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಹೊಸದುರ್ಗ ಕೊಡಕ್ಕಾಡ್ ಪೊಳ್ಳಾಪೊಯಿಲ್ನ ಪಿ.ನಾರಾಯಣನ್(62) ಗೆ ಹೊಸದುರ್ಗ ವಿಶೇಷ ಕ್ಷಿಪ್ರ ನ್ಯಾಯಾಲಯ ಮೂರು ವರ್ಷ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2021 ಆಗಸ್ಟ್ ತಿಂಗಳಲ್ಲಿ 14 ವರ್ಷದ ಬಾಲಕನಿಗೆ ಕಿರುಕುಳ ನೀಡಲಾಗಿತ್ತು. ಚೀಮೇನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
—-
ಗೂಡ್ಸ್ ಆಟೋ ಚಾಲಕ ಆತ್ಮಹತ್ಯೆ
ಬದಿಯಡ್ಕ: ಗೂಡ್ಸ್ ಆಟೋ ಚಾಲಕ ಪಳ್ಳತ್ತಡ್ಕ ಕಡ³ಂಗುಳಿ ನಿವಾಸಿ ಅಬ್ದುಲ್ ಸಲಾಂ(27) ಮನೆ ಸಮೀಪದ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
———-
65 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ
ಕಾಸರಗೋಡು: ಕೊಲ್ಲಿಯಿಂದ ಬಂದ ಕಾಸರಗೋಡು ಸೂರ್ಲು ನಿವಾಸಿ ಅಬ್ದುಲ್ ಲತೀಫ್ನಿಂದ 65 ಲಕ್ಷ ರೂ. ಮೌಲ್ಯದ 1,329 ಗ್ರಾಂ ಚಿನ್ನವನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಕಸ್ಟಂಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾ.13 ರಂದು ರಾತ್ರಿ ವಿಮಾನ ನಿಲ್ದಾಣಕ್ಕೆ ತಲುಪಿದ್ದ. ಈತ ತನ್ನ ಶೂನ ಸಾಕ್ಸ್ನೊಳಗೆ ಚಿನ್ನವನ್ನು ಬಚ್ಚಿಟ್ಟಿದ್ದನೆನ್ನಲಾಗಿದೆ.
—-
ಗಾಂಜಾ : 17 ಮಂದಿ ಬಂಧನ
ಕಾಸರಗೋಡು: ಮಂಜೇಶ್ವರದ ವಿವಿಧ ಸ್ಥಳಗಳಿಂದ ಗಾಂಜಾ ಉಪಯೋಗಿಸುತ್ತಿದ್ದ ನಾಲ್ವರು, ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಾ.14 ರಂದು ಮತ್ತೆ 11 ಮಂದಿಯನ್ನು ಬಂಧಿಸಿದ್ದಾರೆ.
——-
ಎಂಡಿಎಂಎ ಸಹಿತ ಬಂಧನ
ಕಾಸರಗೋಡು: ಕೋಟೆಕುನ್ನು ಅಗಸರ ಹೊಳೆಯಿಂದ ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ ಎರಡು ಗ್ರಾಂ ಎಂಡಿಎಂಎ ಸಹಿತ ತೆಕ್ಕಿಲ್ ಫೆರಿಯ ಎಂ.ಶಾಬಿನ್(35)ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಈತನ ಜತೆಗಿದ್ದ ಬೇಕಲ ಬಿಲಾಲ್ನಗರದ ನಿಜಾರ್ ಪರಾರಿಯಾಗಿದ್ದಾನೆ.
—-
You seem to have an Ad Blocker on.
To continue reading, please turn it off or whitelist Udayavani.