Mangaluru: ಹೆಣ್ಣು ಮಗುವಿನ ಅಪಹರಣ; ದೂರು ಬಂದ 2 ಗಂಟೆಯಲ್ಲಿ ಆರೋಪಿ ಸೆರೆ!
ಸಿಸಿ ಕ್ಯಾಮೆರಾಗಳ ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಂಕನಾಡಿ ನಗರ ಠಾಣೆ ಪೊಲೀಸರು
Team Udayavani, Sep 1, 2024, 10:41 PM IST
ಮಂಗಳೂರು: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್ ಬಳಿ ಸಂಭವಿಸಿದ್ದು ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ಬಂದ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್ ಕುಮಾರ್(59) ಬಂಧಿತ ಆರೋಪಿ. ಪಡೀಲ್ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ಕಾರ್ಮಿಕರ ಶೆಡ್ನಲ್ಲಿ ವಾಸವಾಗಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ 4.30ರ ವೇಳೆಗೆ ನೋಡುವಾಗ ಒಂದು ಮಗು ಕಾಣೆಯಾಗಿತ್ತು. ಹಲವೆಡೆ ಹುಡುಕಾಟ ನಡೆಸಿ ಸುಮಾರು 7.30ಕ್ಕೆ ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದರು.
ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾ ನೆರವು
ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿ ಲಭ್ಯ ಸಿಸಿ ಕ್ಯಾಮೆರಾಗಳ ಪರಿಶೀಲಿಸಿದರು. ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸುವಾಗ ಓರ್ವ ವ್ಯಕ್ತಿ ತನ್ನೊಂದಿಗೆ ಮಗುವನ್ನು ಕರೆದೊಯ್ಯುವುದು ಕಂಡು ಬಂತು. ಕೂಡಲೇ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಅಲ್ಲಿಗೆ ತೆರಳಿದ ಮಂಗಳೂರಿನ ಪೊಲೀಸರು ಕಾಸರಗೋಡು ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಗು ಸಹಿತವಾಗಿ ರಾತ್ರಿ 9.30ಕ್ಕೆ ವಶಕ್ಕೆ ಪಡೆದಿದ್ದಾರೆ. ಮಗು ಸುರಕ್ಷಿತವಾಗಿದ್ದು ಅದನ್ನು ಹೆತ್ತವರಿಗೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
“ಹೆಣ್ಣು ಮಗುವಿನ ಮೇಲಿನ ಆಸೆ’
ಆರೋಪಿ ಅನೀಶ್ ಕುಮಾರ್(59) ಎರ್ನಾಕುಲಂ ನಿವಾಸಿಯಾಗಿದ್ದು ಈತನನ್ನು ಪೊಲೀಸರು ವಿಚಾರಿಸಿದಾಗ “ನನಗೆ ಮೂವರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಲ್ಲ. ನಾನು ಮಗುವಿನ ಬಳಿ ಹೋದಾಗ ಅದು ನೋಡಿ ನಗಾಡಿತು. ಅದು ನನ್ನ ಹಿಂದೆ ಬಂತು. ನಾನು ಎತ್ತಿಕೊಂಡು ಬಂದೆ’ ಎಂದು ಉತ್ತರಿಸಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಅನೀಶ್ ಕುಮಾರ್ ವಿವಿಧ ಕಡೆಗಳಿಗೆ ರೈಲಿನಲ್ಲಿ ತಿರುಗಾಡುತ್ತಿದ್ದು ಕೆಲವು ದಿನಗಳ ಹಿಂದೆ ಮುಂಬೈಗೆ ಹೋಗಿ ಬಂದಿದ್ದ. ಶನಿವಾರದಂದು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಬಂದು ಇಳಿದಿದ್ದ. ಅಲ್ಲಿಂದ ನಗರದ ಕಡೆಗೆ ಬರುತ್ತಿದ್ದಾಗ ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಬಜಾಲ್ನಲ್ಲಿ ಮಗುವನ್ನು ಕಂಡು ಅದರ ಹತ್ತಿರ ಹೋಗಿದ್ದ. ಬಳಿಕ ಎತ್ತಿಕೊಂಡು ಬಂದಿದ್ದ. ಈತನ ವಿರುದ್ಧ ಈ ಹಿಂದೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿರುವ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.