![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 26, 2023, 6:32 AM IST
ಉಕ್ರೇನ್ ವಿರುದ್ಧ ಕಳೆದ 16 ತಿಂಗಳುಗಳಿಂದೀಚೆಗೆ ಸೇನಾ ಆಕ್ರಮಣವನ್ನು ನಡೆಸುತ್ತಿರುವ ರಷ್ಯಾಕ್ಕೆ ಶನಿವಾರದಂದು ಭಾರೀ ಸಂಕಷ್ಟವೊಂದು ಎದು ರಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸ್ವತಃ ದೇಶಬಿಟ್ಟು ಪಲಾಯನ ಗೈಯ್ಯುವಂಥ ಪರಿಸ್ಥಿತಿ ಸೃಷ್ಟಿಯಾದದ್ದೇ ಅಲ್ಲದೆ ರಷ್ಯಾದ ಗೋಸುಂಬೆ ತನವನ್ನು ಬಟಾಬಯಲಾಗಿಸಿತು.
ವ್ಲಾದಿಮಿರ್ ಪುತಿನ್ ಅವರ ಪರಮಾಪ್ತನಾಗಿದ್ದ ಯೆವ್ಗೆನಿ ಪ್ರಿಗೋಝಿನ್ ನೇತೃತ್ವದ ವ್ಯಾಗ್ನರ್ ಪಡೆ ಶನಿವಾರ ಏಕಾಏಕಿಯಾಗಿ ರಷ್ಯಾ ಸೇನೆಯ ವಿರುದ್ಧವೇ ತಿರುಗಿಬಿದ್ದು ಮಾಸ್ಕೋವನ್ನೇ ವಶಪಡಿಸಿಕೊಳ್ಳಲು ಹೊರಟಿತ್ತು. ಈ ಬೆಳವಣಿಗೆ ಇಡೀ ರಷ್ಯಾದ ಆತಂಕಕ್ಕೂ ಕಾರಣವಾಗಿತ್ತು. ಬೆಲಾರೂಸ್ ಅಧ್ಯಕ್ಷರು ನಡೆಸಿದ ಸಂಧಾನ ಮಾತುಕತೆಯ ಫಲವಾಗಿ ಪ್ರಿಗೋಝಿನ್, ತನ್ನ ಪಡೆಗಳನ್ನು ರಾತ್ರಿ ವೇಳೆ ರಷ್ಯಾದಿಂದ ಸಂಪೂರ್ಣವಾಗಿ ವಾಪಸ್ ಕರೆಸಿಕೊಂಡು ಭುಗಿಲೆದ್ದಿದ್ದ ಆಂತರಿಕ ಸಂಘರ್ಷಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ.
ಇದರೊಂದಿಗೆ ರಷ್ಯಾ ನಿಟ್ಟುಸಿರು ಬಿಡುವಂತಾಯಿತು. ಖಾಸಗಿ ಸೇನೆಯಾದ ವ್ಯಾಗ್ನರ್ ಪಡೆಯ ಬಲವರ್ಧನೆಗಾಗಿ ದಶಕದಿಂದ ನೀರೆರೆಯುತ್ತ ಬಂದಿದ್ದ ರಷ್ಯಾಕ್ಕೆ ಈ ಆಂತರಿಕ ಸಶಸ್ತ್ರ ದಂಗೆ ವಿಶ್ವಮಟ್ಟದಲ್ಲಿ ಅವಮಾನ ಉಂಟು ಮಾಡಿದ್ದೇ ಅಲ್ಲದೆ ವಿಶ್ವದ ಪ್ರಬಲ ರಾಷ್ಟ್ರವಾದ ರಷ್ಯಾದ ನೈಜ ಬಂಡವಾಳವನ್ನು ಜಗಜ್ಜಾಹೀರುಗೊಳಿಸಿದೆ. ಉಕ್ರೇನ್ ವಿರುದ್ಧ ಯುದ್ಧ ಮುಂದುವರಿದಿರುವಂತೆಯೇ ರಷ್ಯಾ ಸೇನೆಗೆ ಎದುರಾಗಿರುವ ಸಂಕಷ್ಟ, ರಾಜಕೀಯ ಬೆಳವಣಿಗೆಗಳ ಬಗೆಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯಲಾರಂಭಿಸಿದ್ದವು. ಆದರೆ ಈ ಹುಳುಕುಗಳೆಲ್ಲವನ್ನೂ ಮುಚ್ಚಿಟ್ಟು ರಷ್ಯಾ ಸೇನೆ ಉಕ್ರೇನ್ ವಿರುದ್ಧದ ಸಮರವನ್ನು ಮುಂದುವರಿಸಿತ್ತು.
ಅಧ್ಯಕ್ಷ ಪುತಿನ್ ಕೂಡ ಈ ಬಗ್ಗೆ ತುಟಿ ಪಿಟಿಕ್ ಎನ್ನದೆ ಯುದ್ಧ ಮುಂದುವರಿಸುವ ನಿಲುವಿಗೆ ಅಂಟಿಕೊಳ್ಳುವ ಮೂಲಕ ತಮ್ಮ ಪ್ರತಿಷ್ಠೆ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಲೇ ಬಂದಿದ್ದರು. ಈ ಆಂತರಿಕ ಸಂಘರ್ಷ ಕೇವಲ ಒಂದು ದಿನಕ್ಕೆ ಸೀಮಿತಗೊಂಡರೂ ಜಗತ್ತಿನ ಎಲ್ಲ ರಾಷ್ಟ್ರಗಳು ಈ ಬೆಳವಣಿಗೆಗಳಿಂದ ಕಲಿಯಬೇಕಿರುವುದು ಬಹಳಷ್ಟಿದೆ. ವ್ಯಾಗ್ನರ್ ಪಡೆ, ಇದರ ರೂವಾರಿ ಯೆವ್ಗೆನಿ ಪ್ರಿಗೋಝಿನ್ ಕೇಟರಿಂಗ್ನಿಂದ ಖಾಸಗಿ ಸೇನೆಯ ಮುಖ್ಯಸ್ಥನಾದುದು, ಈತನ ಪಡೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ನಡೆಸಿದ ದೌರ್ಜನ್ಯ, ಕ್ರೌರ್ಯಗಳ ಬಗೆಗೆ ಅರಿವಿದ್ದರೂ ರಷ್ಯಾ ವ್ಯಾಗ್ನರ್ ಪಡೆಯ ಬೆಳವಣಿಗೆಗೆ ಎಲ್ಲ ತೆರನಾದ ಪ್ರೋತ್ಸಾಹ, ಸಹಕಾರ ನೀಡುತ್ತ ಬಂದಿರುವುದು ಅನುಮಾನಗಳಿಗೆ ಕಾರಣವಾಗಿದೆ. ರಷ್ಯಾದಲ್ಲಿ ಪರ್ಯಾಯ ಸೇನೆಯನ್ನು ರಚಿಸಲು ಕಾನೂನಿನಲ್ಲಿ ಅವಕಾಶವಿಲ್ಲವಾದರೂ ಇದನ್ನು ಉಲ್ಲಂಘಿಸಿ ಕಂಪನಿಯಾಗಿ ನೋಂದಾಯಿಸಿಕೊಂಡು ಅದನ್ನು ಅಧಿಕೃತಗೊಳಿಸಿ, ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟ ಪುತಿನ್ ನಡೆ ಕೂಡ ಚರ್ಚಾರ್ಹ.
ಈ ಇಡೀ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಯಾವುದೇ ರಾಷ್ಟ್ರ ತನ್ನ ಹಿತಾಸಕ್ತಿ ಕಾಪಾಡುವ ಸಲುವಾಗಿ ಇನ್ನೊಂದು ಹಂತಕ ಪಡೆಯ ಮೊರೆ ಹೋದ ಸಂದರ್ಭದಲ್ಲಿ ಭವಿಷ್ಯದಲ್ಲಿ ಅದು ತನ್ನ ಪಾಲಿಗೇ ಮುಳುವಾಗಿ ಪರಿಣಮಿಸುತ್ತದೆ ಎಂಬುದು ಜಾಗತಿಕ ಮಟ್ಟದಲ್ಲಿ ಮತ್ತೂಮ್ಮೆ ಸಾಬೀತಾದಂತಾಗಿದೆ. ಇಂತಹ ಘಟನೆಗಳು ಇದೇ ಮೊದಲ ಲ್ಲವೇನಾದರೂ ರಷ್ಯಾದಂತಹ ಪ್ರಬಲ ರಾಷ್ಟ್ರಗಳೂ ಇಷ್ಟೊಂದು ದುರ್ಬಲ ರಕ್ಷಣ ಕಾರ್ಯತಂತ್ರಗಳನ್ನು ಹೊಂದಿರುವುದು ಅಚ್ಚರಿಯೇ ಸರಿ. ಇಂತಹ ಕಾರ್ಯತಂತ್ರಗಳು ತಾತ್ಕಾಲಿಕ ಯಶಸ್ಸನ್ನು ಕಂಡರೂ ಇದನ್ನೇ ಮುಂದು ವರಿಸಿದಲ್ಲಿ ಅದು ತಿರುಗುಬಾಣವಾಗಿ ಪರಿಣಮಿಸುವುದು ನಿಶ್ಚಿತ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.