![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 11, 2022, 8:57 AM IST
ಮಹಾನಗರ: ನಗರದಲ್ಲಿ ಕಳೆದ ಫೆಬ್ರವರಿ 17ರಂದು ರಾತ್ರಿ ವೇಳೆ ಕೆಲವು ಭಾಗಗಳಲ್ಲಿ ಅನುಭವಕ್ಕೆ ಬಂದ ಗ್ಯಾಸ್ ವಾಸನೆಯ ಮೂಲ ಎಲ್ಲಿ ಎನ್ನುವುದನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗದೆ ನಿಗೂಢವಾಗಿದೆ.
ಜಿಲ್ಲಾಡಳಿತವು ಈ ಗ್ಯಾಸ್ ವಾಸನೆಯ ಮೂಲ ಪತ್ತೆ ಮಾಡಿ ವರದಿ ಸಲ್ಲಿಸಲು ಜಿಲ್ಲಾ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಗೆ ಸೂಚನೆ ನೀಡಿತ್ತು. ಇಲಾಖೆಯ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ತಪಾಸಣೆ ನಡೆಸಿ ಮೂಲ ಎಲ್ಲಿ ಎನ್ನುವುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ಕಳೆದ ಗುರುವಾರ (ಎ. 7) ನಡೆದ ಜಿಲ್ಲಾ ವಿಪತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿಯೂ ಈ ವಿಚಾರ ಚರ್ಚೆಗೆ ಬಂದಿತ್ತು. ಗ್ಯಾಸ್ ವಾಸನೆಯ ಮೂಲ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಜಿಲ್ಲಾ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಅಗ್ನಿ ಶಾಮಕ ಸೇವಾ ಇಲಾಖೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳ ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ 50 ದಿನಗಳ ಹಿಂದೆ ಅಂದರೆ ಫೆ. 17ರಂದು ರಾತ್ರಿ ನಗರದ ಕೆಲವು ಪ್ರದೇಶಗಳಲ್ಲಿ ಗ್ಯಾಸ್ ವಾಸನೆ ಹಬ್ಬಿದ್ದ ಬಗ್ಗೆ ವ್ಯಾಪಕ ಸುದ್ದಿಯಾಗಿದ್ದು, ಇದು ಜನರಲ್ಲಿ ಆತಂಕ ಮೂಡಿಸಿತ್ತು. ಮಂಗಳೂರಿನ ಕಾರ್ಸ್ಟ್ರೀಟ್, ಮಣ್ಣಗುಡ್ಡೆ, ಹಂಪನಕಟ್ಟೆ, ಪಾಂಡೇಶ್ವರ, ಸುಭಾಸ್ನಗರ, ಕುದ್ರೋಳಿ, ಕೊಡಿಯಾಲಬೈಲ್, ಕೊಟ್ಟಾರ, ಮಂದಾರಬೈಲ್, ಕೊಂಚಾಡಿ, ಕದ್ರಿ, ಬಿಜೈ ಮೊದಲಾದೆಡೆಗಳಲ್ಲಿ ಗ್ಯಾಸ್ ಲೀಕ್ ಆದ ವಾಸನೆ ಬಂದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಭಯಭೀತಗೊಂಡ ಜನರು ಸಾಮಾಜಿಕ ಜಾಲತಾಣದ ಮೂಲಕ ತಮಗಾದ ಅನುಭವ ಹಂಚಿಕೊಂಡಿದ್ದರು.
ಮಂಗಳೂರು ಪೊಲೀಸ್, ಅಗ್ನಿ ಶಾಮಕ ದಳದ ಅಧಿಕಾರಿಗಳು, ಸಿಬಂದಿ ರಾತೋರಾತ್ರಿ ನಗರ ಮತ್ತು ಹೊರ ವಲಯದ ಕೆಲವು ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಕಾರ್ಸ್ಟ್ರೀಟ್ನ ಕೆಲವು ಬಹು ಮಹಡಿ ಕಟ್ಟಡಗಳು, ಮಣ್ಣಗುಡ್ಡೆ, ಪಣಂಬೂರು, ಕುಳಾಯಿ, ಹೊನ್ನಕಟ್ಟೆ, ಎಂಎಸ್ಇಝಡ್ ಮತ್ತಿತರ ಕಡೆಗಳಿಗೆ ತೆರಳಿ ಗ್ಯಾಸ್ ವಾಸನೆ ಕುರಿತಂತೆ ತಪಾಸಣೆ ಕೈಗೊಂಡಿದ್ದರು.
ಮರುದಿನ (ಫೆ. 18) ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಿತ ಜಿಲ್ಲಾಡಳಿತದ ವತಿಯಿಂದ ಎಲ್ಲೆಡೆ ತಪಾಸಣೆ ನಡೆಸಲಾಗಿತ್ತು. ಆದರೆ ಗ್ಯಾಸ್ ಸೋರಿಕೆಯ ಮೂಲ ಪತ್ತೆ ಆಗಿರಲಿಲ್ಲ.
ಗ್ಯಾಸ್ ಸೋರಿಕೆ ಪತೆಯಾಗಿಲ್ಲ
ಜಿಲ್ಲಾ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಅಧಿಕಾರಿಗಳು ವಿವಿಧ ಭಾಗಗಳಿಗೆ, ಕೈಗಾರಿಕೆ ಘಟಕಗಳಿಗೆ ತೆರಳಿ ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದಾರೆ. ಗ್ಯಾಸ್ ಸೋರಿಕೆ ಎಲ್ಲಿ ಆಗಿದೆ, ಗ್ಯಾಸ್ ವಾಸನೆ ಎಲ್ಲಿಂದ ಬಂತೆಂಬುದು ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. –ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
ಸಾಕಷ್ಟು ಪರಿಶೀಲಿಸಿದರೂ ಗೊತ್ತಾಗಿಲ್ಲ
ಗ್ಯಾಸ್ ವಾಸನೆಯ ಮೂಲ ಪತ್ತೆಗಾಗಿ ನಗರ ಮತ್ತು ಸುತ್ತ ಮುತ್ತ ಇರುವ ಕೈಗಾರಿಕೆ, ಕಾರ್ಖಾನೆಗಳಿಗೆ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ಪರಿಶೀಲಿಸಿದ್ದೇವೆ. ಯಾವುದೇ ಸುಳಿವು ಲಭ್ಯವಾಗಿಲ್ಲ. ಗ್ಯಾಸ್ ವಾಸನೆ ನಿರ್ದಿಷ್ಟವಾಗಿ ಎಲ್ಲಿಂದ ಬಂತೆಂಬುದರ ಬಗ್ಗೆ ಪ್ರತ್ಯಕ್ಷ ಸಾಕ್ಷಿ ಕೂಡ ಎಲ್ಲಿಯೂ ಲಭಿಸಿಲ್ಲ. ಚಲಿಸುತ್ತಿದ್ದ ಯಾವುದೋ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪುನಃ ಇಂತಹ ಪ್ರಕರಣ ವರದಿಯಾದರೆ ಗಂಭೀರವಾಗಿ ಪರಿಶೀಲಿಸಲಾಗುವುದು. –ರಾಜೇಶ್ ಮಿಶ್ರಕೋಟಿ, ಉಪ ನಿರ್ದೇಶಕರು, ದ.ಕ. ಜಿಲ್ಲಾ ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ
You seem to have an Ad Blocker on.
To continue reading, please turn it off or whitelist Udayavani.