![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 5, 2020, 11:18 AM IST
ಮಂಗಳೂರು: ಕೋಟ್ಯಂತರ ಉದ್ಯೋಗ ಸೃಷ್ಟಿಸಿ ರಾಷ್ಟ್ರೀಯ ಆಸ್ತಿಯಾಗಿದ್ದ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿರುವುದೇ ಎರಡನೇ ಅವಧಿಗೆ ಮೋದಿ ಸರಕಾರದ ಬಹುದೊಡ್ಡ ಸಾಧನೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಖಾಸಗಿ ಮೊಬೈಲ್ ಕಂಪೆನಿ ಹಿತಾಸಕ್ತಿ ಕಾಪಾಡಲು ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಮುಚ್ಚಿಸಿ, ಲಕ್ಷಾಂತರ ಉದ್ಯೋಗಿಗಳು ಬೀದಿಗೆ ಬರುವಂತೆ ಮಾಡಲಾಗಿದೆ. ವಿಮಾನ ನಿಲ್ದಾಣ, ಬಂದರು ಖಾಸಗೀಕರಣ ಮಾಡಿದ್ದು, ಕಲ್ಲಿದ್ದಲು ಗಣಿ, ನಿಗಮಗಳು, ವಿದ್ಯುತ್ ಕಂಪೆನಿಗಳನ್ನು ಕೂಡ ಖಾಸಗೀಕರಣ ಮಾಡಲು ಹೊರಟಿರುವುದು ಮೋದಿ ಸರಕಾರದ ಸಾಧನೆ ಎಂದು ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ವ್ಯಂಗ್ಯವಾಡಿದರು. ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಕೋವಿಡ್ ಕಾರಣ ಎನ್ನಲಾಗುತ್ತಿದೆ. ಕೋವಿಡ್ ದಿಂದ ಜಿಡಿಪಿ ಕುಸಿಯುವುದಾದರೆ ಅಮೆರಿಕದಲ್ಲಿ ಡಾಲರ್ ಮೌಲ್ಯ ಕುಸಿಯಬೇಕಿತ್ತು. ಆದರೆ ಅಲ್ಲಿ ಕರೆನ್ಸಿ ಮೌಲ್ಯ ಕುಸಿದಿಲ್ಲ ಎಂದರು.
ಮೆಸ್ಕಾಂ ಮೇಲೆ ಹಿಡಿತವಿಲ್ಲವೇ?
ವಿದ್ಯುತ್ ಬಿಲ್ ಕಡಿಮೆ ಮಾಡಲು ಸಿಎಂ ಹೇಳಿದರೂ ಮೆಸ್ಕಾಂ ಒಪ್ಪುತ್ತಿಲ್ಲ, ಸಿಎಂಗೆ ಮೆಸ್ಕಾಂ ಮೇಲೆ ಹಿಡಿತವಿಲ್ಲವೇ ಎಂದು ರೈ ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರಾದ ಶಾಹುಲ್ ಹಮೀದ್, ಕೋಡಿಜಾಲ್ ಇಬ್ರಾಹಿಂ, ಅಬ್ದುಲ್ ರವೂಫ್, ಅಪ್ಪಿ, ನವೀನ್ ಡಿ’ಸೋಜಾ, ಶಾಲೆಟ್ ಪಿಂಟೋ, ಶುಭೋದಯ ಆಳ್ವ, ಡಿ.ಕೆ. ಅಶೋಕ್ ಉಪಸ್ಥಿತರಿದ್ದರು.
ಹೆದ್ದಾರಿ ಯೋಜನೆ ಕುಂಠಿತ
ಬಿ.ಸಿ. ರೋಡ್ನಿಂದ ಅಡ್ಡಹೊಳೆ ತನಕದ ಚತುಷ್ಪಥ ಯೋಜನೆಯಿಂದ ಗುತ್ತಿಗೆದಾರ ಎಲ್ ಆ್ಯಂಡ್ ಟಿ ಕಂಪೆನಿ ಬಿಟ್ಟು ಹೋಗಿದೆ. ಮಂಗಳೂರು- ಮೂಡುಬಿದಿರೆ ಚತುಷ್ಪಥ ಯೋಜನೆ ಪ್ರಗತಿಯಾಗಿಲ್ಲ. ರಾಜ್ಯ ಎಂಜಿನಿಯರಿಂಗ್ ಇಲಾಖೆಯಡಿ ಕಾರ್ಯಾಚರಿಸುವ ರಾ.ಹೆ. ಇಲಾಖೆಯಿಂದ ಹೆದ್ದಾರಿ ಕಾಮಗಾರಿ ನಡೆದಿದ್ದು, ಅದು ತನ್ನ ಸಾಧನೆ ಎಂದು ಸಂಸದರು ಬೋರ್ಡ್ ಹಾಕಿದ್ದಾರೆ. ಜಿಲ್ಲೆಯ ಮೂರು ಬ್ಯಾಂಕ್ಗಳನ್ನು ನಾಮಾವಶೇಷ ಮಾಡಲಾಯಿತು ಎಂದು ರಮಾನಾಥ ರೈ ದೂರಿದರು.
You seem to have an Ad Blocker on.
To continue reading, please turn it off or whitelist Udayavani.