Bantwala: 20 ನಿಮಿಷದ ದಾರಿಗೆ ಕೆಲವೊಮ್ಮೆ 2 ಗಂಟೆ!
ಹೆದ್ದಾರಿ ಅವ್ಯವಸ್ಥೆ: ಬೆಂಗಳೂರಿನಿಂದ ಊರಿಗೆ ಬರುವುದೇ ಹರಸಾಹಸ, ಕೆಲವರು ಬರುವುದೇ ಇಲ್ಲ; ಬಿ.ಸಿ.ರೋಡು-ಮಾಣಿ ನಡುವೆ ಸಂಚಾರ ತಪ್ಪಿಸಲು ಒಳದಾರಿಗಳ ಹುಡುಕಾಟ ನಡೆಸುವ ವಾಹನಿಗರು
Team Udayavani, Oct 20, 2024, 12:56 PM IST
ಪಾಣೆಮಂಗಳೂರು ಅಂಡರ್ಪಾಸ್ನಲ್ಲಿ ಅಕ್ಷರಶಃ ಗದ್ದೆಯಾಗಿದೆ.
ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ನಡುವಿನ ರಸ್ತೆ ಕಾಮಗಾರಿಯ ಅವ್ಯವಸ್ಥೆ ಮತ್ತು ನಿಧಾನಗತಿಯಿಂದಾಗಿ ರಾಜಧಾನಿ ಬೆಂಗಳೂರಿನ ಜತೆಗಿನ ಸಾಮಾನ್ಯ ಜನರ ಸಂಪರ್ಕವೇ ಕಡಿದುಹೋಗುವ ಅಪಾಯದಲ್ಲಿದೆ. ಬೆಂಗಳೂರಿನಲ್ಲಿ ಉದ್ಯೋಗ ದಲ್ಲಿರುವ ಮಂದಿ ಊರಿಗೆ ಬರಬೇಕು ಎಂದರೆ ಈಗ ಹತ್ತಾರು ಬಾರಿ ಯೋಚಿಸುತ್ತಿದ್ದಾರೆ. ಅವರಿಗೆ ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯನ್ನು ದಾಟುವುದೇ ದೊಡ್ಡ ತಲೆನೋವು. ಅದರಲ್ಲೂ ವಾಹನಗಳಲ್ಲಿ ಬರುವವರು ದಮ್ಮಯ್ಯ ಬೇಡ ಎಂದು ನಮಸ್ಕಾರ ಹೇಳುತ್ತಿದ್ದಾರೆ. ಉಡುಪಿ ಕಡೆಗೆ ಬರುವವರಂತೂ ಈ ಹೆದ್ದಾರಿ ಸಹವಾಸ ಬೇಡ ಎಂದು ಶಿವಮೊಗ್ಗದ ದಾರಿ ಹಿಡಿಯುತ್ತಿದ್ದಾರೆ. ಪ್ರವಾಸಿಗರು ಕೂಡಾ ಮಂಗಳೂರಿಗೆ ಹೋಗುವುದು ಎಂದಾಗ ಯೋಚಿ ಸಲು ಶುರು ಮಾಡುತ್ತಾರೆ. ಆ ಮಟ್ಟಕ್ಕೆ ಇಲ್ಲಿನ ರಸ್ತೆಯ ಕುಖ್ಯಾತಿ ಎಲ್ಲೆಡೆ ಹರಡಿದೆ.
ಆದರೂ ಲಕ್ಷಾಂತರ ಮಂದಿಗೆ ಇದೇ ರಸ್ತೆಯಲ್ಲಿ ಸಾಗುವುದು ಅನಿವಾರ್ಯ. ಅವರೆಲ್ಲ ಶಾಪ ಹಾಕುತ್ತಾ, ಮೈ ಕೈ ನೋಯಿಸಿಕೊಳ್ಳುತ್ತಾ, ಹೊಂಡ ಗಳಲ್ಲಿ ಬೀಳುತ್ತಾ ಏಳುತ್ತಾ ಸಾಗಲೇಬೇ ಕಾಗುತ್ತದೆ. ಮಂಗಳೂರಿ ನಿಂದ ಹಾಸನ ಕಡೆಗೆ ಹೋಗುವವರಿಗೆ ಬಿ.ಸಿ. ರೋಡ್ ಸರ್ಕಲ್ನಿಂದಲೇ ನರಕ ದರ್ಶನ ಶುರುವಾಗುತ್ತದೆ. ಪುತ್ತೂರು ಭಾಗದಿಂದ ಬರುವವರಿಗೆ ಮಾಣಿ ದಾಟಿದ ಕೂಡಲೇ ಒಮ್ಮೆಗೇ ಚಕ್ರವ್ಯೂಹ ಪ್ರವೇಶ ಮಾಡಿದ ಅನುಭವ.
ಬಿ.ಸಿ.ರೋಡ್-ಮಾಣಿ ಬರೀ ಹೊಂಡ ಗುಂಡಿ!
ಒಂದೆರಡು ಸ್ಥಳಗಳು ಹೊರತುಪಡಿಸಿದರೆ ಬಿ.ಸಿ.ರೋಡಿನಿಂದ ಮಾಣಿವರೆಗೂ ಎದ್ದು ಬಿದ್ದು ಸಾಗಬೇಕಾದ ಸ್ಥಿತಿ ಇದೆ. ಕಲ್ಲಡ್ಕದ ಪೂರ್ಲಿಪಾಡಿಯಿಂದ ಸೂರಿಕುಮೇರುವರೆಗೆ ಕಾಂಕ್ರೀಟ್ ಹಾಕಲಾಗಿದೆ. ಉಳಿದೆಡೆ ಬರೀ ಹೊಂಡಗಳೇ ತುಂಬಿದೆ.
ಬಿ.ಸಿ.ರೋಡಿನಿಂದ ಮಾಣಿಗೆ 13 ಕಿ.ಮೀ. ಅಂತರ. ಹೆದ್ದಾರಿ ಸರಿ ಇದ್ದರೆ 20 ನಿಮಿಷದಲ್ಲಿ ತಲುಪಬಹುದು. ಆದರೆ ಈಗ ಅದೇ ದೂರ ಕ್ರಮಿಸಲು ಒಂದು ಗಂಟೆ ಬೇಕಾಗುತ್ತದೆ. ಈ ನಡುವೆ ಟ್ರಾಫಿಕ್ ಜಾಮ್ ಸಿಕ್ಕರೆ ಎರಡೂ ಗಂಟೆಯೂ ಆಗಬಹುದು ಅಥವಾ ಅದನ್ನೂ ಮೀರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಕೊಂಚ ಅರ್ಜೆಂಟಿದೆ ಎಂದು ವಾಹನದ ವೇಗವನ್ನು ಸ್ವಲ್ಪ ಹೆಚ್ಚಿಸಿದರೂ ಮರುದಿನ ಪಕ್ಕಾ ಗ್ಯಾರೇಜಿನಲ್ಲಿಡಬೇಕು.
ಅಂಡರ್ಪಾಸ್ ಒಳಗೆ ಗದ್ದೆ
ಹೆದ್ದಾರಿಯಲ್ಲಿ ವಾಹನಗಳು ನೇರವಾಗಿ ಸಾಗುವುದಕ್ಕೆ ಕ್ರಾಸಿಂಗ್ ಇರುವ ಜಾಗಗಳಾದ ಪಾಣೆಮಂಗಳೂರು, ಮೆಲ್ಕಾರ್, ಮಾಣಿಯಲ್ಲಿ ಅಂಡರ್ಪಾಸ್ ನಿರ್ಮಾಣ ಗೊಂಡಿದ್ದು, ಅದರ ಒಳಪ್ರ ವೇಶ ಗದ್ದೆಗಿಂತಲೂ ಕಡೆ ಇದೆ. ಬೃಹದಾಕಾರದ ಹೊಂಡ ಗಳಲ್ಲಿ ನೀರು ತುಂಬಿ ಸಂಪೂರ್ಣ ಕೊಳಚೆಯ ಸ್ಥಿತಿ ನಿರ್ಮಾಣ ವಾಗಿದೆ. ಅದೇ ಅವ್ಯವಸ್ಥೆ ಯಲ್ಲಿ ಆಟೋ ರಿಕ್ಷಾಗಳನ್ನು ನಿಲ್ಲಿಸಬೇಕಾದ ಸ್ಥಿತಿ ಇದೆ.
ಚರಂಡಿ ಇಲ್ಲದೆ ಹೆದ್ದಾರಿ ತುಂಬ ಕೆಸರು
- ಚರಂಡಿ ಇಲ್ಲದೆ ಇರುವುದರಿಂದ ಮಳೆ ಬಂದಾಗ ಹೆದ್ದಾರಿಯಲ್ಲಿ ಪೂರ್ತಿ ನೀರು ತುಂಬುತ್ತಿದೆ. ರಸ್ತೆ, ಗುಂಡಿ, ತೋಡು ಯಾವುದೂ ಕಾಣಿಸುವುದಿಲ್ಲ.
- ರಸ್ತೆ ಬದಿ ನಡೆದುಕೊಂಡು ಹೋಗುವವರು, ಬಸ್ಸು ನಿಲ್ದಾಣಗಳನ್ನು ಕೆಡವಿದ ಪರಿಣಾಮ ರಸ್ತೆ ಬದಿ ನಿಂತು ಬಸ್ಸಿಗೆ ಕಾಯುವವರು, ಹೆದ್ದಾರಿ ದಾಟಲು ನಿಂತವರ ಸ್ಥಿತಿ ಇನ್ನೂ ಗಂಭೀರ.
- ನಿಂತಿರುವ ವೇಳೆ ವಾಹನವೊಂದು ಸಾಗಿದರೆ ಕೆಸರು ಎರಚಿ ಮತ್ತೆ ನೇರ ವಾಗಿ ಮನೆಗೇ ಹೋಗಬೇಕಿದೆ. ಇಂಥ ಹಲವು ಘಟನೆಗಳು ನಡೆದಿವೆ.
ಬಸ್ಸುಗಳಿಗೆ ಭಾರೀ ನಷ್ಟ
ದಿನಕ್ಕೆ 5-6 ಬಾರಿ ಸಂಚರಿಸುವ ಬಸ್ಸುಗಳು ಚಾಲಕರು- ನಿರ್ವಾಹಕರ ಸ್ಥಿತಿ ಊಹಿಸು ವುದೂ ಅಸಾಧ್ಯ. ಅವುಗಳ ಮಾಲಕರಿಗೆ ಆಗುತ್ತಿರುವ ನಷ್ಟ ದೇವರಿಗೇ ಗೊತ್ತು. ಮೈಲೇಜ್ ಇಳಿಯುತ್ತದೆ, ಹೊಂಡಗಳಿಂದಾಗಿ ಟಯರ್, ಬಿಡಿಭಾಗಳು ಕಿತ್ತು ಹೋಗುತ್ತವೆ. ಅವರೆಲ್ಲ ಗ್ಯಾರೇಜಿಗೆ ಹಾಕಿದ ದುಡ್ಡು ಎಷ್ಟಿರಬಹುದು?
ಪರ್ಯಾಯ ದಾರಿಗಳ ಹುಡುಕಾಟ
- ಹೆದ್ದಾರಿ ಕಾಮಗಾರಿಯಿಂದಾಗಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವವರು ತೀರಾ ಅನಿವಾ ರ್ಯವಿದ್ದವರು ಮಾಣಿವರೆಗೆ ಹೋಗಿ ಪುತ್ತೂರು-ಮೈಸೂರು ಹೆದ್ದಾರಿಯಲ್ಲಿ ಸಾಗುತ್ತಾರೆ. ಕೆಲವರು ಉಜಿರೆ-ಚಾರ್ಮಾಡಿ ದಾರಿ ಹಿಡಿಯುತ್ತಾರೆ. ಉಡುಪಿ ಭಾಗದವರು ದೂರವಾದರೂ ಸುರಕ್ಷಿತ ಎಂಬ ಕಾರಣಕ್ಕೆ ಆಗುಂಬೆ ಘಾಟಿ ಮೂಲಕ ಸಾಗುತ್ತಿದ್ದಾರೆ.
- ಸ್ಥಳೀಯವಾಗಿ ಬಿ.ಸಿ. ರೋಡು-ಮಾಣಿ ಮಧ್ಯೆ ಹೆದ್ದಾರಿ ತಪ್ಪಿಸುವವರು ಪಾಣೆಮಂಗಳೂರು ಜಂಕ್ಷನ್ ಅಥವಾ ನೆಹರೂ ನಗರದ ಮೂಲಕ ಒಳಹೊಕ್ಕು ನರಿಕೊಂಬು-ಶಂಭೂರು ರಸ್ತೆಯಲ್ಲಿ ಸಾಗಿ ದಾಸಕೋಡಿ ಯಲ್ಲಿ ಹೆದ್ದಾರಿ ಸೇರುತ್ತಿದ್ದಾರೆ.
- ಕೆಲವರು ಬಿ.ಸಿ.ರೋಡಿನಿಂದ ಪಾಣೆಮಂಗಳೂರು-ನಂದಾವರ ಮೂಲಕ ಸಾಗಿ ಅಮೂrರು-ಕಲ್ಲಡ್ಕ ರಸ್ತೆಯಲ್ಲಿ ಸಾಗುತ್ತಾರೆ.
- ವಿಟ್ಲ ಭಾಗಕ್ಕೆ ಹೋಗುವವರು ಬಿ.ಸಿ.ರೋಡಿನಿಂದ ಮಂಚಿ ಸಾಲೆ ತ್ತೂರು ರಸ್ತೆಯಲ್ಲೂ ಸಾಗುತ್ತಿದ್ದಾರೆ.
- ಬಿ.ಸಿ.ರೋಡಿನಿಂದ ಉಪ್ಪಿನಂಗಡಿಗೆ ಹೋಗುವವರು ಧರ್ಮಸ್ಥಳ ರಸ್ತೆಯಲ್ಲಿ ಮಣಿಹಳ್ಳದವರೆಗೆ ಸಾಗಿ ಅಲ್ಲಿಂದ ಅಜಿಲಮೊಗರು-ಸರಪಾಡಿ ರಸ್ತೆಯ ಮೂಲಕ ಉಪ್ಪಿನಂಗಡಿಗೆ ತೆರಳುತ್ತಿದ್ದಾರೆ.
-ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maha Election: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; ಫಡ್ನವೀಸ್, ರಾಣೆ ಸೇರಿ ಹಲವರಿಗೆ ಟಿಕೆಟ್
Belthangady: ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ತೇಪೆ
WTC 2025: ಭಾರತದ ಸೋಲಿನ ಬಳಿಕ ಹೇಗಿದೆ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿ
BBK11: ಆತ ಹೀರೋ, ಸಿಂಹವಲ್ಲ ಅವನು ಇಲಿ.. ಜಗದೀಶ್ ಬಗ್ಗೆ ರಂಜಿತ್ ಮಾತು
Gundlupete: ಎರಡು ಬೈಕ್ ಗಳ ನಡುವೆ ಅಪಘಾತ; ಇಬ್ಬರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.