Kadaba;ಹೊರ ರಾಜ್ಯ ಕಾರ್ಮಿಕರ ಮಾಹಿತಿ ಸ್ವೀಕರಿಸಲು ಕಡಬ ಠಾಣೆಯಲ್ಲಿ ನಕಾರ
ಜಾಲತಾಣದಲ್ಲಿ ಸಂದೇಶ ವೈರಲ್; ಮಾಹಿತಿ ಸ್ವೀಕರಿಸಿದ ಉಪ ನಿರೀಕ್ಷಕ
Team Udayavani, Feb 1, 2024, 1:42 AM IST
ಕಡಬ: ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದ ಕಾರ್ಮಿಕರ ಮಾಹಿತಿ ನೀಡಲು ಕಡಬ ಪೊಲೀಸ್ ಠಾಣೆಗೆ ಹೋದ ವೇಳೆ ಅಲ್ಲಿನ ಪೊಲೀಸ್ ಸಿಬಂದಿ ಅರ್ಜಿ ಮತ್ತು ಕಾರ್ಮಿಕರ ಗುರುತಿನ ದಾಖಲೆ ಪಡೆಯಲು ನಿರಾಕರಿಸಿರುವ ಕುರಿತು ಕಡಬದ ಐತ್ತೂರು ಗ್ರಾಮದ ನಿವಾಸಿಯೊಬ್ಬರ ಸಾಮಾಜಿಕ ಜಾಲತಾಣದ ಸಂದೇಶ ಎಲ್ಲೆಡೆ ವೈರಲ್ ಆಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ಬಾಲಕೃಷ್ಣ ಭಟ್ ತನ್ನ ತೋಟದಲ್ಲಿ ಕೆಲಸ ಮಾಡಿಕೊಂಡು ತೋಟದ ಮನೆಯಲ್ಲಿ ವಾಸ್ತವ್ಯ ಇರಲು ಝಾರ್ಖಂಡ್ ಮೂಲದ ಮೂವರು ಕೆಲಸಗಾರರನ್ನು ತನ್ನ ಸಂಬಂಧಿಕರ ಮೂಲಕ ಕರೆಸಿಕೊಂಡಿದ್ದರು. ಕಾರ್ಮಿಕರು ಅಪರಿಚಿತರು ಮತ್ತು ಬೇರೆ ರಾಜ್ಯದವರಾದುದರಿಂದ ಮುಂಜಾಗರೂಕತೆಗಾಗಿ ಅರ್ಜಿಯ ಜತೆ ಕಾರ್ಮಿಕರ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ನೀಡಲು ಮಂಗಳವಾರ ಠಾಣೆಗೆ ಹೋಗಿದ್ದರು. ಠಾಣೆಯಲ್ಲಿದ್ದ ಸಿಬಂದಿಯೊಬ್ಬರು ಅರ್ಜಿ ಮತ್ತು ಕಾರ್ಮಿಕರ ಗುರುತಿನ ಪುರಾವೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಅವರು ನಾಳೆ ಏನಾದರೂ ಕದ್ದುಕೊಂಡು ಹೋದರೆ ನಮ್ಮ ತಲೆ ಮೇಲೆ ಬರುತ್ತದೆ ಎಂದು ಹೇಳಿರುವುದಾಗಿ ಬಾಲಕೃಷ್ಣ ಭಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಳಿಕ ಉಪ ನಿರೀಕ್ಷಕರ ಕೊಠಡಿಗೆ ಹೋದಾಗ ಅಲ್ಲಿದ್ದ ತನಿಖಾ ಉಪ ನಿರೀಕ್ಷಕ ಅಕ್ಷಯ ಡವಗಿ ಅವರು ಕಾರ್ಮಿಕರ ಫೋನ್ ನಂಬರ್ ಸಮೇತ ಅರ್ಜಿಯನ್ನು ಪಡೆದಿದ್ದಾರೆ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಅಪರಿಚಿತ ಮತ್ತು ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗಿ ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ತೆಗೆದಿರಿಸಿಕೊಂಡು ಪೊಲೀಸ್ ಠಾಣೆಗೂ ನೀಡಬೇಕೆಂದು ಈ ಹಿಂದೆ ಇಲಾಖೆಯೇ ಪ್ರಕಟನೆ ನೀಡಿತ್ತು. ಅದರಂತೆ ನಾವು ಮಾಹಿತಿ ನೀಡಲು ಠಾಣೆಗೆ ಹೋದಾಗ ಅಲ್ಲಿನ ಸಿಬಂದಿ ಈ ರೀತಿ ವರ್ತಿಸುವುದು ಸರಿಯೇ ಎಂದು ಬಾಲಕೃಷ್ಣ ಭಟ್ ಪ್ರಶ್ನಿಸಿದ್ದಾರೆ.
ಅರ್ಥವಾಗದೆ ಸಮಸ್ಯೆ
ಠಾಣೆಯ ತನಿಖಾ ಉಪ ನಿರೀಕ್ಷಕ ಅಕ್ಷಯ ಡವಗಿ ಘಟನೆಯ ಕುರಿತು ಪ್ರತಿಕ್ರಿಯಿಸಿ ಬಾಲಕೃಷ್ಣ ಭಟ್ ಹೇಳಿರುವುದು ನಮ್ಮ ಸಿಬಂದಿಗೆ ಸರಿಯಾಗಿ ಆರ್ಥವಾಗದೇ ಇದ್ದುದರಿಂದ ಸಮಸ್ಯೆ ಉದ್ಭವಿಸಿದೆ. ಬಾಲಕೃಷ್ಣ ಭಟ್ ಅವರಿಂದ ಕಾರ್ಮಿಕರ ಎಲ್ಲ ಮಾಹಿತಿ ಪಡೆದುಕೊಂಡು ಅವರನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.