

Team Udayavani, Jan 30, 2025, 12:55 PM IST
ಪುತ್ತೂರು: ಧರ್ಮ ಶಿಕ್ಷಣದ ಜಾರಿಗಾಗಿ ಎಲ್ಲರೂ ಏಕ ಮನಸ್ಸಿನಿಂದ ಕಾರ್ಯನಿರ್ವಹಿಸಬೇಕು. ನಮ್ಮ ನಮ್ಮ ರಾಜಕೀಯ ಆಲೋಚನೆಗಳನ್ನು, ಪಕ್ಷಗಳನ್ನು ಬದಿಗಿರಿಸಿ ಕೇವಲ ಹಿಂದೂ ಎಂಬ ಆದರ್ಶದಡಿ ಎಲ್ಲರೂ ಒಂದಾಗಬೇಕು. ರಾಜಕೀಯದ ಅಲ್ಪ ಅಡ್ಡ ವಾಸನೆ ಬಂದರೂ ನಮ್ಮ ಉದ್ದೇಶಿತ ಕಾರ್ಯ ವಿಫಲವಾಗುತ್ತದೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗೆ ಧರ್ಮ ಜ್ಞಾನ ನೀಡುವ ಮಹದುದ್ದೇಶದೊಂದಿಗೆ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದು ರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ಅವರ ನಿರ್ದೇಶನದ ಮೇರೆಗೆ ಪುತ್ತೂರು, ಕಡಬ ಹಾಗೂ ಸನಿಹದ ತಾಲೂಕುಗಳಾದ್ಯಂತ ಆರಂಭಿಸಲು ಉದ್ದೇಶಿಸಿರುವ ಹಿಂದೂ ಧರ್ಮ ಶಿಕ್ಷಣದ ಕುರಿತಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ನಟರಾಜ ವೇದಿಕೆ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ನೇತಾರ ಬಾಲಕೃಷ್ಣ ಬೋರ್ಕರ್ ಮಾತನಾಡಿ, ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲೂ ಧರ್ಮಶಿಕ್ಷಣ ಜಾರಿಯಾಗಬೇಕು. ಅದಕ್ಕಾಗಿ ಎಲ್ಲ ಗ್ರಾಮಗಳಲ್ಲೂ ಗ್ರಾಮ ಸಮಿತಿಗಳನ್ನು ರಚಿಸುವ ಕಾರ್ಯ ನಡೆಯುತ್ತಿದೆ. ಇನ್ನೂ ಹಲವು ಗ್ರಾಮಗಳಲ್ಲಿ ಈ ಪ್ರಕ್ರಿಯೆ ನಡೆಯಬೇಕಿದೆ. ಅದಕ್ಕಾಗಿ ಎಲ್ಲರೂ ಸ್ವಯಂ ಆಸಕ್ತಿಯಿಂದ ಮುಂದೆ ಬಂದು ಗ್ರಾಮ ಸಮಿತಿ ರಚನೆಯ ಜವಾಬ್ದಾರಿ ಹೊರಬೇಕಾಗಿದೆ ಎಂದರು.
ಉದ್ಯಮಿಗಳಾದ ಮುಳಿಯ ಕೇಶವ ಪ್ರಸಾದ್, ಸೀತಾರಾಮ ರೈ ಕೆದಂಬಾಡಿಗುತ್ತು, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಉದಯ ಮಾದೋಡಿ, ಹಿರಿಯ ಸಾಮಾಜಿಕ ನೇತಾರರಾದ ಮೊಗೆರೋಡಿ ಬಾಲಕೃಷ್ಣ ರೈ, ದಂಬೆಕಾನ ಸದಾಶಿವ ರೈ, ವಾಸುದೇವ ಇಡ್ಯಾಡಿ, ಹಿರಿಯ ನ್ಯಾಯವಾದಿ ಎನ್.ಕೆ.ಜಗನ್ನಿವಾಸ ರಾವ್, ಸುರೇಶ್ ಕೆಮ್ಮಿಂಜೆ, ಹೆಗ್ಗಡೆ ಸಮಾಜದ ಅಧ್ಯಕ್ಷ ಗಣೇಶ್ ಹೆಗ್ಡೆ ಮೊದಲಾದವರು ಗ್ರಾಮ ಸಮಿತಿಯ ರಚನೆಗೆ ತಮ್ಮ ಸಲಹೆ ಸೂಚನೆಗಳನ್ನಿತ್ತರು.
ಪುತ್ತೂರಿಗರ ಮೇಲೆ ಶೃಂಗೇರಿ ಶ್ರೀಗಳಿಗೆ ವಿಶ್ವಾಸ
ಶೃಂಗೇರಿ ಕಿರಿಯ ಜಗದ್ಗುರುಗಳು ಈ ಹಿಂದೆ ಎರಡು ಬಾರಿ ಪುತ್ತೂರಿಗೆ ಆಗಮಿಸಿ ಇಲ್ಲಿನ ಜನರನ್ನು ಆಶೀರ್ವದಿಸಿದ್ದಾರೆ. ಇದೀಗ ಪುತ್ತೂರಿಗರ ಮೇಲೆ ಅಪಾರ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ನೆರವೇರಿಸಬೇಕಾದದ್ದು ನಮ್ಮ ಕರ್ತವ್ಯ. ಗುರುಗಳೇ ಮುಂದೆ ಬಂದಿರುವಾಗ ನಾವು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕ್ರಿಯಾಶೀಲರಾಗಿ ಧರ್ಮಶಿಕ್ಷಣದ ಜಾರಿಗೆ ಶ್ರಮವಹಿಸಬೇಕು. ದಿನದಲ್ಲಿ ಕನಿಷ್ಠ ಎರಡು ಗಂಟೆಗಳಷ್ಟು ಕಾಲ ಧರ್ಮ ಶಿಕ್ಷಣದ ಕಾರ್ಯಕ್ಕೆ ಮೀಸಲಿಡಬೇಕು ಎಂದು ಧರ್ಮ ಶಿಕ್ಷಣ ಜಾರಿಗಾಗಿ ನಿರಂತರ ಶ್ರಮಿಸುತ್ತಿರುವ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.