

Team Udayavani, Jan 30, 2025, 12:52 PM IST
ಉಪ್ಪಿನಂಗಡಿ: ಜನರಿಗೆ ಮಾಹಿತಿ ಕೊಡಬೇಕಾದ ಅಧಿಕಾರಿಗಳು ಸಭೆಗೆ ಬಾರದೆ ಗ್ರಾಮಸಭೆ ನಡೆಸುವ ಅಗತ್ಯವೇ ಇಲ್ಲ. ಅವರು ಬರಲಿ. ಅನಂತರ ಸಭೆ ನಡೆಸುವ ಎಂದು ಗೊಳಿತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪಟ್ಟು ಹಿಡಿದ ಕಾರಣ ಸಭೆಯು ನಿಗದಿತ ಅವಧಿಗಿಂತ ಸುಮಾರು ಒಂದೂವರೆ ಗಂಟೆಯ ಬಳಿಕ ಆರಂಭವಾಯಿತು.
ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಮಾರ್ಗದರ್ಶಿ ಅಧಿಕಾರಿ ಡಾ| ಅಜಿತ್ ಅವರ ನೇತೃತ್ವದಲ್ಲಿ ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಗೈರಿಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಸಭೆ ನಡೆಸಬೇಡಿ ಎಂದರು.
ವರದಿ, ಸುತ್ತೋಲೆ ಮುಂತಾದವುಗಳು ಮುಗಿದಾಗ ಅಧಿಕಾರಿಗಳು ಬರುತ್ತಾರೆ ಸಭೆ ಆರಂಭಿಸುವ ಎಂದು ನೋಡೆಲ್ ಅಧಿಕಾರಿಗಳು ಹೇಳಿದರೂ ಜನ ಒಪ್ಪದೆ ಇದ್ದಾಗ ಅಗತ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿ ಬರುವಿಕೆಯನ್ನು ಖಾತ್ರಿ ಪಡಿಸಲಾಯಿತು. ಅದಾದ ಬಳಿಕ ಸಭೆ ನಡೆಸಲು ಗ್ರಾಮಸ್ಥರು ಅನುಮತಿ ನೀಡಿದರು. ಸಭೆಗೆ ಗೈರು ಹಾಜರಿಯಾಗಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಜಿ.ಪಂ. ಸಿಇಒಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಪವರ್ಮನ್ ನೇಮಿಸಿ
ಗೋಳಿತೊಟ್ಟು ಗ್ರಾಮದಲ್ಲಿ 102 ಟಿ.ಸಿ.ಗಳಿದ್ದು ಒಬ್ಬರೇ ಪವರ್ಮ್ಯಾನ್ ಇರುವುದರಿಂದ ಸಮಸ್ಯೆ ಆಗಿದೆ. ಇಲ್ಲಿಗೆ ಹೆಚ್ಚುವರಿ ಪವರ್ಮನ್ ನೇಮಕ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದರು. ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಎಂಜಿನಿಯರ್ ನಿತಿನ್ ಪ್ರತಿಕ್ರಿಯಿಸಿ ಸದ್ಯವೇ 3 ಸಾವಿರ ಪವರ್ಮನ್ಗಳ ನೇಮಕ ಆಗಲಿದ್ದು ಆಗ ಸಮಸ್ಯೆ ಪರಿಹಾರ ಆಗಲಿದೆ ಎಂದರು. ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಕುಶಾಲಪ್ಪ ಗೌಡ ಅನಿಲ ಹಾಗೂ ಇತರರು ಮನವಿ ಮಾಡಿದರು.
ಮಂಗಳೂರು-ಬೆಂಗಳೂರು ರಾ.ಹೆ. 75ರ ಚತುಷ್ಪಥ ಕಾಮಗಾರಿ ಗೋಳಿತೊಟ್ಟು, ಆರ್ಲ ಜಂಕ್ಷನ್ ಸೇರಿದಂತೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಆಸ್ಪತ್ರೆ ಮೇಲ್ದರ್ಜೆಗೆ ನಿರ್ಣಯ
ನೆಲ್ಯಾಡಿ ಬೆಳೆಯುತ್ತಿರುವ ಪೇಟೆ. ಇಲ್ಲಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ದಿನದ 24 ಗಂಟೆಯೂ ಸೇವೆ ದೊರೆಯುವಂತಾಗಬೇಕು ಎಂದು ಮಹಮ್ಮದ್ ರಫೀಕ್ ಆಗ್ರಹಿಸಿದಾಗ ಸದಸ್ಯದ ಸ್ಥಿತಿಯನ್ನು ಸಿಎಚ್ಒ ಪ್ರಜ್ವಲ್ ವಿವರಿಸಿದರು. ಬಳಿಕ ಚರ್ಚೆ ನಡೆದು ಆಸ್ಪತ್ರೆ ಮೇಲ್ದರ್ಜೆಗೇರಿಸಲು
ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು
ಉಪಾಧ್ಯಕ್ಷ ಬಾಬು ಪೂಜಾರಿ ಸದಸ್ಯರಾದ ಜನಾ ರ್ದನ ಗೌಡ, ಕುಶಾಲಪ್ಪ ಗೌಡ, ಸಂಧ್ಯಾ, ಗುಲಾಬಿ, ನೋಣಯ್ಯ ಗೌಡ, ಶೇಖರ ಗೌಡ, ರಜಾಕ್, ಕೆ.ಇ. ರಫೀಕ್ ಇದ್ದರು. ಪಿ.ಡಿ.ಒ. ಜಗದೀಶ ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಾವತಿ ವಂದಿಸಿದರು.
ಪ್ರಮುಖ ವಿಚಾರಗಳು
– ಗೋಳಿತೊಟ್ಟಿಗೆ ರಾಷ್ಟ್ರೀಕೃತ ಬ್ಯಾಂಕ್ ಬೇಕು: ಶೇಖರ ಗೌಡ ಅನಿಲಬಾಗ್
– ಸಭೆಗೊಂದು ನೋಡೆಲ್ ಅಧಿಕಾರಿ ಬಂದರೆ ಕೆಲಸ ಆಗುವುದಿಲ್ಲ: ಮಹಮ್ಮದ್ ರಫೀಕ್ ಕೋಲ್ಪೆ
– ಆಲಂತಾಯ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಿ: ಪದ್ಮನಾಭ ಪೂಜಾರಿ, ಶಿವಪ್ರಸಾದ್
– ಮೀನು ಮಾರಾಟದ ಹಕ್ಕು ಏಲಂ ಮಾಡ ಬೇಕು, ಮಾರುಕಟ್ಟೆ ನಿರ್ಮಿಸಬೇಕು
– ಸರ್ವೆ ಇಲಾಖೆಯಿಂದ ಯಾವುದೇ ಕೆಲಸ ಆಗುತ್ತಿಲ್ಲ: ಆರೋಪ
– ಆರ್ಲ ಜಂಕ್ಷನ್ನಲ್ಲಿರುವ ಹೈಮಾಸ್ಟ್ ದೀಪದ 3 ಬಲ್ಬ್ ಉರಿಯುವಂತೆ ಮಾಡಿ
You seem to have an Ad Blocker on.
To continue reading, please turn it off or whitelist Udayavani.