![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 20, 2022, 10:38 AM IST
ನಾವುಂದ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಎರಡನೇ ವಾರ್ಡಿನ ಅರೆಹೊಳೆ ಸಮೀಪ ಕಳೆದ 5-6 ವರ್ಷಗಳಿಂದ ಮಳೆಗಾಲದಲ್ಲಿ ರಾಜು ಕಾಲುವೆ ಒಡೆದು ಹೋಗಿ, ಕೃಷಿಗೆ ಹಾನಿಯಾಗುತ್ತಿದ್ದು, ಇಲ್ಲಿನ ರೈತರು ತಡೆಗೋಡೆಗೆ ಒತ್ತಾಯಿಸುತ್ತಿದ್ದರೂ, ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿದೆ.
ಅರೆಹೊಳೆ ಮದಗ ಹಾಗೂ ಅಲ್ಲಿನ ಸುತ್ತಮುತ್ತಲಿನ ಹಾಡಿಯ ನೀರು ಈ ರಾಜಕಾಲುವೆಯಲ್ಲಿ ಹರಿದು ಬಂದು, ಸೌಪರ್ಣಿಕ ನದಿ ಸೇರಬೇಕು. ಆದರೆ ಈ ಕಾಲುವೆ ಮಣ್ಣಿನಿಂದ ನಿರ್ಮಿಸುವುದರಿಂದ ಭಾರೀ ಮಳೆಗೆ ಅಲ್ಲಲ್ಲಿ ಒಡೆದು ಹೋಗಿ ಕೃಷಿ ಭೂಮಿಗಳಿಗೆ ಗುಡ್ಡದ ಮಣ್ಣು ನುಗ್ಗಿ, ಕೃಷಿ ಚಟುವಟಿಕೆ ತುಂಬಾ ತೊಂದರೆ ಆಗುತ್ತಿದೆ.
50 ಎಕರೆಗೂ ಮಿಕ್ಕಿ ಭೂಮಿ
ಅರೆಹೊಳೆಯ ಈ ರಾಜುಕಾಲುವೆ ಒಡೆದ ಪ್ರದೇಶದಲ್ಲಿ ಸುಮಾರು 50 – 60 ಎಕರೆ ಕೃಷಿ ಭೂಮಿಯಿದ್ದು, ಇಲ್ಲಿ ಹತ್ತಾರು ಮಂದಿ ಕೃಷಿಕರು ಭತ್ತದ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.
ಕಳೆದ 5 ವರ್ಷಗಳಿಂದಲೂ ಈ ಭಾಗದ ರೈತರು ಈ ಸಮಸ್ಯೆಯನ್ನು ಅನುಭವಿಸುತ್ತಲೇ ಇದ್ದಾರೆ. ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುವ ನೀರು ಮಾತ್ರವಲ್ಲದೆ, ಕಸ-ಕಡ್ಡಿ, ಮಣ್ಣು, ಮರಳು ಎಲ್ಲವೂ ನಾಟಿ ಮಾಡಿದ ಗದ್ದೆಗಳಿಗೆ ಸೇರುತ್ತಿದೆ. ಇದರಿಂದ ಬೆಳೆದ ಬೆಳೆ ಅರ್ಧಕರ್ಧ ನಾಶವಾಗುತ್ತದೆ.
ಶೀಘ್ರ ತಡೆಗೋಡೆ ನಿರ್ಮಿಸಿ
ಈ ರಾಜಕಾಲುವೆಗೆ 100 ವರ್ಷಗಳ ಇತಿಹಾಸವಿದೆ. ಹಿಂದೆ ಗುಡ್ಡದಿಂದ ಹರಿದು ಬರುವ ನೀರಿನ ಪ್ರಮಾಣ ಅಷ್ಟೊಂದು ಇರಲಿಲ್ಲ. ಹಾಗಾಗಿ ಸಮಸ್ಯೆ ಯಾಗುತ್ತಿರಲಿಲ್ಲ. ಈಗ ಅಂದರೆ ಕಳೆದ 5 ವರ್ಷಗಳಿಂದ ನೀರಿನ ಹರಿವು ಹೆಚ್ಚಿದ್ದು, ಮಣ್ಣಿನಿಂದ ನಿರ್ಮಿಸುವ ತಡೆಗೋಡೆ ಭಾರೀ ಮಳೆ ಬಂದಾಗ ಒಡೆದು ಹೋಗುತ್ತದೆ. ಅದಕ್ಕಾಗಿ ಶಾಶ್ವತ ಅಂದರೆ ಕಲ್ಲುಗಳನ್ನು ಕಟ್ಟಿ, ಸಿಮೆಂಟ್ (ರಿವಿಟ್ಮೆಂಟ್) ಹಾಕಿ ತಡೆಗೋಡೆ ನಿರ್ಮಿಸಿದರೆ ಈ ಸಮಸ್ಯೆ ಇರುವುದಿಲ್ಲ. ಈಗಿನ್ನು ಮುಂಗಾರು ನಾಟಿ ಕಾರ್ಯ ಆರಂಭವಾಗಲಿದ್ದು, ತಡೆಗೋಡೆ ನಿರ್ಮಿಸ ದಿದ್ದರೆ ಮತ್ತೆ ಕೃಷಿಗೆ ಹಾನಿಯಾಗುವ ಭೀತಿಯಿದೆ ಎಂದು ಇಲ್ಲಿನ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸುದಿನ ವರದಿ
ಅರೆಹೊಳೆಯ ರಾಜಕಾಲುವೆ ಒಡೆದು, ಇಲ್ಲಿನ ಕೃಷಿ ಪ್ರದೇಶಗಳಿಗೆ ಹಾನಿಯಾಗುತ್ತಿರುವ ಬಗ್ಗೆ, ಶಾಶ್ವತ ತಡೆಗೋಡೆ ಬೇಕು ಎನ್ನುವ ಕುರಿತಂತೆ ‘ಉದಯವಾಣಿ ಸುದಿನ’ವು ಕಳೆದ ವರ್ಷದ ಜು. 20ರಂದು ವಿಶೇಷ ವರದಿ ಪ್ರಕಟಿಸಿತ್ತು.
ಮನವಿ ನೀಡಿದರೂ ಪ್ರಯೋಜನವಾಗಿಲ್ಲ
ಈ ಕಾಲುವೆ ಅಲ್ಲಲ್ಲಿ ಒಡೆದು ಹೋಗಿ ಕೃಷಿ ಭೂಮಿಗಳಿಗೆ ಗುಡ್ಡದ ಮಣ್ಣು ನುಗ್ಗಿ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧ್ಯಕ್ಷರ ಸಹಿತ ಎಲ್ಲರಿಗೂ ಮನವಿ ಮಾಡಿದರೂ, ಏನೂ ಪ್ರಯೋಜನವಾಗಿಲ್ಲ. -ಮಂಜುನಾಥ್ ನಾವುಂದ ಕೆಳಾಬದಿ, ಕೃಷಿಕರು
You seem to have an Ad Blocker on.
To continue reading, please turn it off or whitelist Udayavani.