![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 29, 2021, 6:31 AM IST
ಹೆಮ್ಮಾಡಿ: ಮೂರು ವರ್ಷಗಳ ಹಿಂದೆ 70ಕ್ಕಿಂತಲೂ ಕಡಿಮೆಯಿದ್ದ ಹೆಮ್ಮಾಡಿ ಸರಕಾರಿ ಮಾದರಿ ಹಿ. ಪ್ರಾ. ಶಾಲೆಯಲ್ಲೀಗ ನೂರಕ್ಕೂ ಮಿಕ್ಕಿ ಮಕ್ಕಳಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಒಂದನೇ ತರಗತಿಯನ್ನು 2 ವಿಭಾಗ ಮಾಡಲಾಗಿದೆ. ಎಲ್ಕೆಜಿ, ಯುಕೆಜಿಯಲ್ಲಿ 40ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಆದರೆ ಕೊಠಡಿ ಸಮಸ್ಯೆಯಿದ್ದು, ಈಗಿರುವ ಎರಡು ಕೊಠಡಿ ಶಿಥಿಲಾವಸ್ಥೆಯಲ್ಲಿದ್ದು ಅದರ ದುರಸ್ತಿಗೆ ಬೇಡಿಕೆ ಕೇಳಿ ಬಂದಿದೆ.
ಹೆಮ್ಮಾಡಿ ಸರಕಾರಿ ಶಾಲೆಯು ಈ ಭಾಗದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಶೈಕ್ಷಣಿಕ ವರ್ಷ ಸೇರಿದಂತೆ ಕಳೆದೆರಡು ವರ್ಷಗಳಿಂದ ಉತ್ತಮ ದಾಖಲಾತಿಯಾಗಿದೆ. ಆದರೆ ಸದ್ಯ ಕೊಠಡಿ ಕೊರತೆಯಿಂದಾಗಿ ಪಾಠ- ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಅಗತ್ಯ ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವ ಆಗ್ರ ಹವನ್ನು ಹೆತ್ತ ವರು ವ್ಯಕ್ತಪಡಿಸಿದ್ದಾರೆ.
110 ಮಕ್ಕಳು
2019 ರಲ್ಲಿ ಈ ಶಾಲೆಯಲ್ಲಿ 70ಕ್ಕಿಂತಲೂ ಕಡಿಮೆ ಮಕ್ಕಳಿದ್ದರು. ಕಳೆದ ಸಾಲಿನಲ್ಲಿ 96 ಮಂದಿ ಮಕ್ಕಳಿದ್ದರೆ, ಈ ಬಾರಿ ಒಟ್ಟು 110 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಒಂದನೇ ತರಗತಿಗೆ 25 ಮಂದಿ ಮಕ್ಕಳ ದಾಖಲಾತಿಯಾಗಿದೆ. ಒಂದನೇ ತರಗತಿಯಲ್ಲದೆ ಇತರ ತರಗತಿಗಳಿಗೂ ಬೇರೆ ಬೇರೆ ಖಾಸಗಿ ಶಾಲೆಗಳಿಂದ ಇಲ್ಲಿಗೆ ಮಕ್ಕಳು ಬಂದಿದ್ದಾರೆ. ಇನ್ನು ಎಲ್ಕೆಜಿ- ಯುಕೆಜಿ ವಿಭಾಗದಲ್ಲಿ 42 ಮಂದಿ ಸೇರಿದಂತೆ ಒಟ್ಟಾರೆ ಈ ಶಾಲೆಯಲ್ಲಿ 152 ಮಂದಿ ವಿದ್ಯಾರ್ಥಿಗಳಿದ್ದಾರೆ.
ಸಮಸ್ಯೆಯೇನು?
ಶಾಲೆಯ ಒಂದು ಕೊಠಡಿ ಹಾಗೂ ಗ್ರಂಥಾಲಯ ಕೋಣೆಯ ಹಂಚಿನ ಮಾಡು, ಗೋಡೆ ಬಿರುಕು ಬಿಟ್ಟು, ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ತರಗತಿ ನಡೆಸುವುದು ಅಪಾಯಕಾರಿ ಎಂದರಿತ ಶಿಕ್ಷಕರು ಮುಂಜಾಗ್ರತೆಯಿಂದಾಗಿ ಈ ಎರಡು ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಕಂಪ್ಯೂಟರ್ ತರಗತಿ ಹಾಗೂ ಸಭಾಭವನದಲ್ಲೂ ನಿತ್ಯದ ತರಗತಿ ನಡೆಸುವಂತಾಗಿದೆ. ಅದಕ್ಕಾಗಿ ಶಿಥಿಲಾವಸ್ಥೆಯಲ್ಲಿರುವ ಎರಡು ಕೊಠಡಿಗಳನ್ನು ಕೂಡಲೇ ದುರಸ್ತಿಪಡಿಸಬೇಕು ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ಇಲಾಖೆಯ ಮುಂದಿರಿಸಲಾಗಿದೆ. ಇನ್ನುಳಿದಂತೆ ಮುಖ್ಯ ಶಿಕ್ಷಕರು ಸೇರಿದಂತೆ 6 ಮಂದಿ ಶಿಕ್ಷಕರಿದ್ದಾರೆ. ಆದರೆ ಆಂಗ್ಲ ಭಾಷಾ ಶಿಕ್ಷಕರ ಅಗತ್ಯವಿದೆ. ಆವರಣ ಗೋಡೆ ಈಗಾಗಲೇ ಹೆಮ್ಮಾಡಿ ಪಂಚಾಯತ್ನಿಂದ ನಿರ್ಮಾಣವಾಗುತ್ತಿದೆ. ಹೆಚ್ಚುವರಿ ಶೌಚಾಲಯದ ಅಗತ್ಯವಿದ್ದು, ಜಿ.ಪಂ. ಅನುದಾನ ಮಂಜೂರಾಗಿದೆ.
ದುರಸ್ತಿಗೆ ಪ್ರಯತ್ನ
ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ ಕೊಠಡಿ ಸಮಸ್ಯೆಯಾಗುತ್ತಿದೆ. ಸದ್ಯಕ್ಕೆ ಮಕ್ಕಳಿಗೆ ತೊಂದರೆಯಾಗದಂತೆ ತರಗತಿಗಳನ್ನು ನಡೆಸಲಾಗುತ್ತಿದೆ. ಕೊಠಡಿ ದುರಸ್ತಿ ಸಂಬಂಧ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು, ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಲಾಗುವುದು.
– ಜಿ.ಎಂ. ಮುಂದಿನಮನಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ
ಕೂಡಲೇ ಗಮನಹರಿಸಲಿ
ಈ ಶಾಲೆಯಲ್ಲಿ ಈ ಬಾರಿ ಉತ್ತಮ ದಾಖಲಾತಿಯಾಗಿದ್ದು, ಈಗಾಗಲೇ ಪಂಚಾಯತ್ನಿಂದ ಆವರಣ ಗೋಡೆ, ಜಿ.ಪಂ. ಅನುದಾನದಿಂದ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆದರೆ ಒಂದೆರಡು ಕೊಠಡಿ ದುರಸ್ತಿಯಾಗದಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಇದರ ದುರಸ್ತಿಗೆ ಕೂಡಲೇ ಇಲಾಖೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸಬೇಕು.
– ಸತ್ಯನಾರಾಯಣ ರಾವ್, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.