ಜ್ಞಾನವೇ ಸಂಪತ್ತು, ಪುಸ್ತಕವೇ ಸಾಧನ
ದಶಕಗಳ ಹಿಂದಿನ ಹುಬ್ಬಳ್ಳಿ ನೆನಪಿನ ಬುತ್ತಿ ಬಿಚ್ಚಿಟ್ಟ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ| ಸುಧಾಮೂರ್ತಿ
Team Udayavani, May 4, 2022, 9:45 AM IST
ಹುಬ್ಬಳ್ಳಿ: ನಗರದಲ್ಲಿ ಹುಟ್ಟಿ ಬೆಳೆದು, ಅಂದಿನ ಕಾಲಕ್ಕೆ ಸಾಹಸ ಎನ್ನುವಂತೆ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದು, ಇಲ್ಲಿನ ಗಲ್ಲಿ ಗಲ್ಲಿ ಸುತ್ತಿದ್ದು, ಟಾಕೀಸ್ಗಳಲ್ಲಿ ಸಿನಿಮಾ ನೋಡಿದ್ದು, ಗೌಡರ ಗದ್ಲ ನಾಟಕ ವೀಕ್ಷಿಸಿದ್ದು, ಕುಡಿಯುವ ನೀರಿನ ಬವಣೆ ಅನುಭವಿಸಿದ್ದು, ಸಕಾರಾತ್ಮಕ, ಉತ್ತಮ ಗುಣವುಳ್ಳ ಸ್ನೇಹಿತರ ಪಡೆಯೊಂದಿಗೆ ಹರಟಿದ್ದು….ಹೀಗೆ ಇಲ್ಲಿನ ಯಾವುದೇ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಹುಬ್ಬಳ್ಳಿ ಎಂದರೆ ನನಗೆ ಬಿಡಿಸಲಾರದ ನಂಟು ಎಂದು ಹೇಳುವ ಮೂಲಕ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ| ಸುಧಾಮೂರ್ತಿಯವರು ತಮ್ಮ ನೆನಪಿನ ಬುತ್ತಿ ಬಿಚ್ಚಿದರು. ಸಂವಾದದಲ್ಲಿ ವಿದ್ಯಾರ್ಥಿ-ಪಾಲಕರಿಗೆ ಶಿಸ್ತು, ನೀತಿ, ಬದ್ಧತೆಯ ಪಾಠ ಮಾಡಿದರು.
ಇಲ್ಲಿನ ಸಪ್ನ ಬುಕ್ಹೌಸ್ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಗಲ್ಲಿ ಗಲ್ಲಿಯೂ ನನಗೆ ಪರಿಚಯವಿದೆ. ಈಗಲೂ ಇಲ್ಲಿ ನಡೆದು ಹೋಗಬೇಕು ಎಂಬ ಆಸೆ ಮೂಡುತ್ತದೆ. 1959ರಲ್ಲಿ ನೋಡಿದ ಮೊದಲ ಹಿಂದಿ ಚಿತ್ರದಿಂದ ಹಿಡಿದು ಅಮಿತಾ ಬಚ್ಚನ್ ಅವರ ಮೊದಲ ಚಿತ್ರ ಮುಂಬೈ ಟು ಗೋವಾ, ಕನ್ನಡದ ದಶಾವತಾರ ಸೇರಿದಂತೆ ಅನೇಕ ಸಿನಿಮಾಗಳನ್ನು ನೆನಪಿಸಿದರು. ಗೌಡರ ಗದ್ಲ ನಾಟಕ ವೀಕ್ಷಿಸಿದ್ದನ್ನು ಸ್ಮರಿಸಿದರು. ಬಿವಿಬಿ ಕಾಲೇಜು ತಮಗೆ ನೀಡಿದ ಜ್ಞಾನಕ್ಕೆ ಚಿರಋಣಿ ಎಂದರು.
ಆಡಂಬರದ ಜೀವನವೇ ನಿಜ ಸಂಪತ್ತಲ್ಲ: ಮಕ್ಕಳು ಹಾಗೂ ಪಾಲಕರೊಂದಿಗಿನ ಸಂವಾದದಲ್ಲಿ ವಿವಿಧ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಹೆಚ್ಚಿನ ಅಂಕ ಗಳಿಸುವುದು, ರ್ಯಾಂಕ್ ಪಡೆಯುವುದು, ಸಿರಿವಂತಿಕೆ ಹೊಂದುವುದು, ಆಡಂಬರದ ಜೀವನ ನಡೆಸುವುದು ನಿಜವಾದ ಸಂಪತ್ತಲ್ಲ. ಯಾರೂ ಕದಿಯಲಾಗದ, ಉತ್ತಮ ಬದುಕಿಗೆ ಸಹಕಾರಿ ಆಗುವ ಜ್ಞಾನವೇ ನಿಜವಾದ ಸಂಪತ್ತು. ಜ್ಞಾನಾರ್ಜನೆಗೆ ಮಹತ್ವದ ಸಾಧನವೆಂದರೆ ಪುಸ್ತಕ.
ಸೀರೆ, ಚಪ್ಪಲಿ, ಮೊಬೈಲ್ ಖರೀದಿ, ಹೋಟೆಲ್, ಪ್ರವಾಸದ ವೆಚ್ಚಕ್ಕೆ ಹಿಂದೆ ಮುಂದೆ ನೋಡದ ನಾವು ಪುಸ್ತಕಗಳ ಖರೀದಿಗೆ ಹತ್ತು ಬಾರಿ ಯೋಚಿಸುತ್ತೇವೆ. ಒಮ್ಮೆ ಓದಿದ ನಂತರ ಪುಸ್ತಕದ ಕೆಲಸವೇನಿದೆ, ಅದನ್ನೇಕೆ ಖರೀದಿಸಬೇಕು, ಪುಸ್ತಕ ಖರೀದಿಸಿದರೆ ಇರಿಸಲು ಮನೆಯಲ್ಲಿ ಜಾಗವಿಲ್ಲ ಎಂಬಿತ್ಯಾದಿ ನೆಪಗಳು ಬಹುತೇಕರದ್ದಾಗಿರುತ್ತವೆ. ಪುಸ್ತಕ ಕ್ರಿಯಾಶೀಲತೆ ಹೆಚ್ಚಿಸುತ್ತದೆ, ಜ್ಞಾನ ಕೊಡುತ್ತದೆ. ಖರೀದಿದ ಪುಸ್ತಕಗಳು ಬೇಡವಾದರೆ ಗ್ರಂಥಾಲಯಕ್ಕೆ ನೀಡಿ ಎಂದು ಸಲಹೆ ನೀಡಿದರು.
ಮಕ್ಕಳ ಜನ್ಮದಿನಕ್ಕೆ ಕಾಣಿಕೆಯಾಗಿ ಪುಸ್ತಕ ನೀಡಿ. ಇಂದಿನ ಮಕ್ಕಳಿಗೆ ಓದು, ಟ್ಯೂಷನ್, ಅಧಿಕ ಅಂಕ-ರ್ಯಾಂಕ್ ಎಂಬಿತ್ಯಾದಿ ಒತ್ತಡಗಳು ಇವೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಇಂತಹ ಒತ್ತಡ ಇರುತ್ತಿರಲಿಲ್ಲ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಮುಖ್ಯ. ಎಸ್ಸೆಸ್ಸೆಲ್ಸಿ ವರೆಗೆ ಕನ್ನಡ ಮಾಧ್ಯಮದಲ್ಲೇ ಓದು ಮುಗಿಸಿದ ನಾನು ಇಂಗ್ಲಿಷ್ನಲ್ಲಿ ಕೃತಿ ರಚಿಸಲು ಕಲಿತಿದ್ದೇನೆ. ಇತರೆ ಭಾಷೆಗಳನ್ನು ಕಲಿಯುವುದು ಬೇಡ ಎಂದಲ್ಲ, ಅವು ಬೇಕು. ಆದರೆ ಮಾತೃಭಾಷೆಗೆ ಮೊದಲ ಸ್ಥಾನ ಇರಬೇಕು ಎಂದರು.
ಪಕ್ಕದ ಮನೆಯ ಮಕ್ಕಳ ಅಂಕಗಳಿಗೆ ಹೋಲಿಸಿ ಮಕ್ಕಳನ್ನು ಮೂದಲಿಸುವುದನ್ನು ಬಿಡಬೇಕು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮಕ್ಕಳು ಕಲಿಯುತ್ತಾರೆ. ಅಧಿಕ ಅಂಕ-ರ್ಯಾಂಕ್ ಮಾತ್ರ ಜೀವನವಲ್ಲ. ಸಂಸ್ಕಾರಯುತ ನಡತೆ, ಉತ್ತಮ ಬದುಕಿನ ನಡೆ ನಿಜವಾದ ರ್ಯಾಂಕ್. ಏಕಾಗ್ರತೆ, ಪ್ರೀತಿ, ಪುಸ್ತಕ, ಉತ್ತಮ ಶಿಕ್ಷಕ, ಒಳ್ಳೆಯ ಸ್ನೇಹಿತರು ಮಕ್ಕಳ ಉತ್ತಮ ಬದುಕಿಗೆ ಅಡಿಪಾಯವಾಗುತ್ತವೆ. ಬಟ್ಟೆ ಕಡಿಮೆ ಇದ್ದರೂ ಪರವಾಗಿಲ್ಲ ಪುಸ್ತಕಗಳು ಹೆಚ್ಚಿರಲಿ ಎಂದು ಕಿವಿಮಾತು ಹೇಳಿದರು.
ತಮ್ಮ ಕೃತಿಗಳನ್ನು ಖರೀದಿಸಿದವರಿಗೆ ಸುಧಾಮೂರ್ತಿಯವರು ಹಸ್ತಾಕ್ಷರ ಹಾಕಿದರು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಪ್ನ ಬುಕ್ಹೌಸ್ ವ್ಯವಸ್ಥಾಪಕ ರಘು ಇದ್ದರು. ಮೇಘನಾ ರಘು ನಿರೂಪಿಸಿದರು.
ಉದಯೋನ್ಮುಖ ಲೇಖಕರಿಗೆ ಸಲಹೆ: ತರಾತುರಿಗೆ ಬಿದ್ದು ಕೃತಿ ಪ್ರಕಟಕ್ಕೆ, ಸ್ಪರ್ಧೆಗೆ ಕಳುಹಿಸಲು ಮುಂದಾಗಬೇಡಿ. ಬರೆದಿದ್ದನ್ನು ಪ್ರಕಟಿಸದೆ ಆರು ತಿಂಗಳ ನಂತರ ಮತ್ತೆ ಓದಿ ಅದರಲ್ಲಿನ ಲೋಪ, ಕೊರತೆ, ಬದಲಾವಣೆಗೆ ಮುಂದಾಗಿ. ನಾನು ಸುಮಾರು 40 ಕೃತಿಗಳನ್ನು ರಚಿಸಿದ್ದೇನೆ. ನನ್ನ ಬಹುತೇಕ ಕೃತಿಗಳನ್ನು ಪ್ರಕಟಿಸುವ ಮುನ್ನ ಓದಿ ಅಭಿಪ್ರಾಯ ತಿಳಿಸಿದವರು ಮಕ್ಕಳು. ಪುಸ್ತಕ ಸ್ಪರ್ಧೆಯಿಂದ ತಿರಸ್ಕಾರವಾದರೆ ಅದನ್ನು ಸಹಿಸಿಕೊಳ್ಳುವ, ಬರವಣಿಗೆ ಮುಂದುವರಿಸುವ ಮನೋಭಾವ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಪುಸ್ತಕ ಓದಿನ ಅಭಿರುಚಿ ಇಲ್ಲ ಎಂಬುದಕ್ಕೆ ಪಾಲಕರ ಪಾತ್ರವೂ ಇದೆ. ಪಾಲಕರು ಗಂಟೆಗಟ್ಟಲೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿ, ಮಕ್ಕಳ ಬಳಿ ಪುಸ್ತಕ ಓದು ಎಂದರೆ ಹೇಗೆ, ನೀವು ಪುಸ್ತಕ ಓದಲು ಮುಂದಾಗುವ ಮೂಲಕ ಮಕ್ಕಳಿಗೆ ಪುಸ್ತಕ ಓದಿನ ಪ್ರೇರಣೆ ನೀಡಬೇಕು. –ಡಾ| ಸುಧಾಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಹಿಂಗಾರು ಮಳೆಯಬ್ಬರಕ್ಕೆ ಇಬ್ಬರು ಸಾವು, ಬೆಳೆ ಹಾನಿ
Flight: ಹುಬ್ಬಳ್ಳಿ-ಅಹ್ಮದಾಬಾದ್ ವಿಮಾನ ಸೇವೆ ಆರಂಭಕ್ಕೆ ಜೋಶಿ,ನಾಯ್ಡು ಚರ್ಚೆ
Pralhad Joshi: ಬೆಂಬಲ ಬೆಲೆ ಹೆಚ್ಚಳದೊಂದಿಗೆ ಅನ್ನದಾತರಿಗೆ ನೆರವು
Hubli; ಗಲಭೆ ಪ್ರಕರಣ ವಾಪಸ್ ಖಂಡಿಸಿ ಠಾಣೆ ಮುಂಭಾಗ ಶ್ರೀರಾಮ ಸೇನೆ ಪ್ರತಿಭಟನೆ
Dharwad: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದಿದ್ದು ಸರಿ ಇದೆ : ಸಚಿವ ಮಧು ಬಂಗಾರಪ್ಪ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.