![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Sep 8, 2023, 8:44 PM IST
ನವದೆಹಲಿ: ಶೀಘ್ರದಲ್ಲೇ ರಸ್ತೆ ಮಾರ್ಗದಲ್ಲಿ ಬೆಂಗಳೂರು ಮತ್ತು ಚೆನ್ನೈ ನಡುವೆ ಕೇವಲ ಎರಡು ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, “ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲಿಸಲಾಯಿತು.
ಇದೇ ವರ್ಷ ಡಿಸೆಂಬರ್ ಅಥವಾ 2024ರ ಜನವರಿಯಲ್ಲಿ ಹೆದ್ದಾರಿ ಲೋಕಾರ್ಪಣೆಗೊಳಿಸಲಾಗುವುದು. ಇದರ ಮೂಲಕ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣ ಅವಧಿ ಕೇವಲ ಎರಡು ಗಂಟೆಗೆ ಇಳಿಯಲಿದೆ’ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, “ಪ್ರವೇಶ ನಿಯಂತ್ರಿತ ಹೆದ್ದಾರಿ ಯೋಜನೆ ಮೂಲಕ ಶೀಘ್ರದಲ್ಲೇ ದೆಹಲಿಯೊಂದಿಗೆ ಚೆನ್ನೈ ಸಂಪರ್ಕ ಹೊಂದಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಚೆನ್ನೈನಲ್ಲಿ ನಡೆದ ಅಶೋಕ್ ಲೇಲ್ಯಾಂಡ್ ಕಂಪನಿಯ 75ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಪ್ರವೇಶ ನಿಯಂತ್ರಿತ ಹೆದ್ದಾರಿ ಯೋಜನೆ ಮೂಲಕ ದೆಹಲಿ, ಸೂರತ್, ನಾಸಿಕ್, ಅಹ್ಮದ್ನಗರ್, ಕರ್ನೂಲ್, ಚೆನ್ನೈ, ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ಗೆ ಒಳ್ಳೆಯ ರಸ್ತೆಯನ್ನು ಒದಗಿಸುತ್ತಿದ್ದೇವೆ. ದೆಹಲಿ ಮತ್ತು ಜೈಪುರದ ನಡುವೆ ಎಲೆಕ್ಟ್ರಿಕ್ ಕೇಬಲ್ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ,’ ಎಂದರು.
“ದೇಶದಲ್ಲಿ ಎಲೆಕ್ಟ್ರಿಕ್ ಬಸ್ಗಳ ಅಗತ್ಯ ಹೆಚ್ಚಿದೆ. ಪರ್ಯಾಯ ಇಂಧನ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಎಲೆಕ್ಟ್ರಿಕ್, ಬಯೊ-ಎಥನಾಲ್ ಮತ್ತು ಎಥನಾಲ್ ಚಾಲಿತ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯಬೇಕಿದೆ’ ಎಂದು ನಿತಿನ್ ಗಡ್ಕರಿ ಹೇಳಿದರು
You seem to have an Ad Blocker on.
To continue reading, please turn it off or whitelist Udayavani.