![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 5, 2023, 10:16 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸುವ ಮೂಲಕ ಕಣಿವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಾಂದಿಹಾಡಿ, 4 ವರ್ಷ ಪೂರೈಸಿದ ಹಿನ್ನೆಲೆ ಶ್ರೀನಗರದಲ್ಲಿ ಶನಿವಾರ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಬಿಜೆಪಿ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.
ಕಣಿವೆಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಕೆ. ಅಶೋಕ್ ಕೌಲ್ ನೇತೃತ್ವದಲ್ಲಿ ಜವಾಹರ್ ನಗರದಲ್ಲಿ ಸಭೆ ನಡೆಸಲಾಗಿತ್ತು.
ಈ ವೇಳೆ ಮಾತನಾಡಿರುವ ಬಿಜೆಪಿಯ ವಕ್ತಾರ ಟಾಕೂರ್ ಅಭಿಜಿತ್, 370ನೇ ವಿಧಿ ಹೆಸರಿನಲ್ಲಿ ಜನರನ್ನು ಪ್ರಚೋದಿಸುವವರಿಗೆ, ಕಣಿವೆಯಲ್ಲಿನ ಅಭಿವೃದ್ಧಿ, ಶಾಂತಿ-ಬೆಳವಣಿಗೆಯನ್ನು ಮರೆಮಾಚಲು ಯತ್ನಿಸುತ್ತಿರುವವರ ಕಣ್ಣು ತೆರೆಸಲು ಈ ಸಭೆ ನಡೆಸಲಾಗಿದೆ. ಸಾಮಾನ್ಯ ಜನರಿಗೆ ನಿಮ್ಮ ಸುಳ್ಳುಗಳು ಬೇಡ, ಅಭಿವೃದ್ಧಿ ಬೇಕು. ಯಾವ ಮುಫ್ತಿಯಾಗಲಿ, ಅಬ್ದುಲ್ಲಾ ಆಗಲಿ ಜನರನ್ನು ಮೂರ್ಖರನ್ನಾಗಿಸುವುದು ಅವರಿಗೆ ಬೇಕಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ.
ಇದೇ ವೇಳೆ ವಿಧಿ ರದ್ದಾದ ಬಳಿಕ ಕಣಿವೆಯಲ್ಲಾಗಿರುವ ಸುಧಾರಣೆಗಳ ಪಟ್ಟಿಯನ್ನೂ ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ನಾಯಕರು ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯ ತಿಳಿಸಿ, ಕಣಿವೆ ಪ್ರಗತಿಯನ್ನು ಶ್ಲಾಘಿಸಿದ್ದಾರೆ.
ತಮ್ಮಿಚ್ಛೆಯ ಜೀವನ:
370ನೇ ವಿಧಿ ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಗಳಾಗಿದೆ, ಕಣಿವೆ ಜನರು ಯಾವುದೇ ಭಯವಿಲ್ಲದೇ, ತಮ್ಮ ಇಚ್ಛೆಯಂತೆ ಜೀವನ ನಡೆಸುತ್ತಿರುವುದೇ ಕಣ್ಣಿಗೆ ಕಾಣುತ್ತಿರುವ ಅತಿದೊಡ್ಡ ಉದಾಹರಣೆ. ಹೀಗೆಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ. ಕಣಿವೆ ಸುಧಾರಣೆ ಪ್ರತಿಪಾದಿಸಿದ ಅವರು, ಜಮ್ಮು-ಕಾಶ್ಮೀರದ ಯುವಕರ ಆಸೆ- ಕನಸುಗಳಿಗೆ ಗರಿ ಮೂಡಿದ್ದು, ಯಾರಿಗೂ ಕಮ್ಮಿ ಇಲ್ಲದಂತೆ ದೇಶಕ್ಕೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಗೊಂಡಿದೆ. ಪಾಕಿಸ್ತಾನ ಪ್ರೇರಿತ ಉಗ್ರರ ದಾಳಿಯಿಂದ ವರ್ಷದಲ್ಲಿ 150 ದಿನ ಮುಚ್ಚಿಯೇ ಇರುತ್ತಿದ್ದ ಶಾಲಾ, ಕಾಲೇಜುಗಳು ಈಗ ನಿರಾತಂಕವಾಗಿ ನಡೆಯುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್, ಪಿಡಿಪಿ ಪ್ರತಿಭಟನೆ:
ಕಾಂಗ್ರೆಸ್ ಘಟಕದ ಮುಖ್ಯಸ್ಥ ವಿಕಾರ್ ರಸೂಲ್ ವಾನಿ ನೇತೃತ್ವದಲ್ಲಿ ಶಾಹೀದಿ ಚೌಕ್ನಲ್ಲಿ ಪಿಡಿಪಿ ಸೇರಿದಂತೆ ಪ್ರತಿಪಕ್ಷಗಳು ವಿಧಿ ರದ್ದು ಐತಿಹಾಸಿಕ ದಿನವಲ್ಲ, ಕಣಿವೆ ಪಾಲಿಗೆ ಕರಾಳ ದಿನವೆಂದು ಆಕ್ಷೇಪಿಸಿ ಪ್ರತಿಭಟನೆ ನಡೆಸಿವೆ. ಕಣಿವೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೈಗಾರಿಕಾ ಹೂಡಿಕೆ, ಸಮೃದ್ಧಿ, ಮಾದರಿ ರಾಜ್ಯ ಎಂಬುದೆಲ್ಲ ಬಿಜೆಪಿ ಬರೀ ಬೊಗಳೆ ಮಾತು, ಯಾವುದೂ ನಿಜವಲ್ಲ. ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿವೆ.
ಮುಫ್ತಿಗೆ ಗೃಹ ಬಂಧನ
4ನೇ ವರ್ಷಾಚರಣೆ ದಿನವೇ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಕುರಿತು ಜಾಲತಾಣ ಎಕ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ನನ್ನನ್ನೂ, ನನ್ನ ಪಕ್ಷದ ಹಲವು ನಾಯಕರನ್ನು ಅಕ್ರಮವಾಗಿ ಗೃಹ ಬಂಧನದಲ್ಲಿ ಸರ್ಕಾರ ಇರಿಸಿದೆ. ಒಂದೆಡೆ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ, ಕಣಿವೆಯಲ್ಲಿ ಸಹಜತೆ ಮರಳಿದೆ ಎನ್ನುತ್ತಿದ್ದಾರೆ, ಇದೇನಾ ಅವರ ಸಹಜತೆ ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ, ಪ್ರತ್ಯೇಕತೆ, ವಂಶಾಡಳಿತ, ದುರಾಡಳಿತವನ್ನು ತಂದೆಯಂತೆ ಪೋಷಿಸಿದ್ದ 370ನೇ ವಿಧಿ ಹಾಗೂ 35-ಎ ವಿಧಿಗಳೆಂಬ ಜಮ್ಮು-ಕಾಶ್ಮೀರಕ್ಕೆ ಅಂಟಿದ ಕಳಂಕ ತೊಡೆದು 4 ವರ್ಷ ಪೂರೈಸಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕಣಿವೆ ಇದೀಗ ಅಭಿವೃದ್ಧಿಯ ಪರ್ವವನ್ನು ಕಾಣುತ್ತಿದೆ.
– ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ
ಕಾಶ್ಮೀರದ ಅಭಿವೃದ್ಧಿಯಲ್ಲಿ 370ನೇ ವಿಧಿ ರದ್ದು ಮಹತ್ವದ ಪಾತ್ರ ವಹಿಸಿದ್ದು, ಇದರಿಂದ ಕಣಿವೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಮನಾರ್ಹ ಏರಿಕೆ ದಾಖಲಿಸಿದೆ(ಶೇ.170). ಜಮ್ಮು-ಕಾಶ್ಮೀರ ಇದೀಗ ಪ್ರಗತಿ ಮತ್ತು ಸಮೃದ್ಧಿಯ ಸರಿಯಾದ ಪಥದಲ್ಲಿದೆ.
– ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವ
ಮೂವರು ಯೋಧರು ಹುತಾತ್ಮ
ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಶುಕ್ರವಾರ ಉಗ್ರರು ಹಾಗೂ ಭದ್ರತಾಪಡೆ ನಡುವೆ ನಡೆದ ಎನ್ಕೌಂಟರ್ನಲ್ಲಿ ಗಾಯಗೊಂಡಿದ್ದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಪ್ರದೇಶದಲ್ಲಿ ಉಗ್ರರು ಅಡಗಿರುವ ಶಂಕೆ ಮೇಲೆ ಸೇನೆ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಮೂವರು ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದ್ದಾರೆ. ಉಗ್ರರನ್ನು ಹೆಡೆಮುರಿ ಕಟ್ಟಲು ಶೋಧ ಮುಂದುವರಿಸಿರುವುದಾಗಿ ಸೇನೆ ತಿಳಿಸಿದೆ. ಇನ್ನು ರಜೌರಿ ಜಿಲ್ಲೆಯ ಗುಂಧಾ-ಖವಾಸ್ ಗ್ರಾಮದಲ್ಲೂ ಉಗ್ರರು ಇರುವ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿ ಕಾರ್ಯಾಚರಣೆ ನಡೆಸಿದ್ದು, ಶನಿವಾರ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.