![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 6, 2022, 5:40 AM IST
ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಜನರ ಸಹಕಾರ ಅತಿ ಅಗತ್ಯ, ಈ ದಿಸೆಯಲ್ಲಿ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಕೋರಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಬುಧವಾರ ಕೋವಿಡ್ ನಿಯಂತ್ರಣ ಸಂಬಂಧ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು ಹಾಗೂ ಪದಾಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಖಾಸಗಿ ಬಸ್ಗಳ ಚಾಲಕರು ಹಾಗೂ ನಿರ್ವಾಹಕರು ಎರಡು ಡೋಸ್ ಲಸಿಕೆ ಪಡೆದಿರಬೇಕು ಮತ್ತು ಕರ್ತವ್ಯ ನಿರ್ವಹಣೆ ವೇಳೆ ಮಾಸ್ಕ್ ಧರಿಸಬೇಕು, ಪ್ರಯಾಣಿಕರು ಬಸ್ ಹತ್ತುವ ವೇಳೆ ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ತಿಳಿಯಬೇಕು, ಪಡೆಯದ ಪ್ರಯಾಣಿಕರಿಗೆ ಅದರ ಬಗ್ಗೆ ಜಾಗೃತಿ ಮೂಡಿಸಬೇಕು, ಪ್ರಯಾಣಿಕರು ಮಾಸ್ಕ್ ಧರಿಸಿಯೇ ಬಸ್ನೊಳಗೆ ತೆರಳುವಂತೆ ತಿಳಿಸಿಕೊಡಬೇಕು ಎಂದು ಸೂಚಿಸಿದರು.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಜಾಗೃತಿ ವಹಿಸಬೇಕು, ಇದಕ್ಕೆ ಸಂಬಂಧಿಸಿ ಸಂಘದ ಮುಖಂ ಡರು, ಪದಾಧಿಕಾರಿಗಳು ಸಭೆ ನಡೆಸಿ, ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅವರು ತಿಳಿಸಿದರು.
ಕ್ಯಾಟರಿಂಗ್ ಮಾಡುವವರು ಸಹ ವಿವಿಧ ಸಮಾರಂಭಗಳಲ್ಲಿ ಊಟ, ಉಪಹಾರ ನೀಡುವ ಸಂದರ್ಭ ಕೋವಿಡ್ ನಿಯಮಾವಳಿಗಳ ಪಾಲನೆ ಕುರಿತು ತಿಳಿದುಕೊಳ್ಳಬೇಕು ಎಂದರು.
ನಗರದಲ್ಲಿರುವ ಎಲ್ಲ ಮಾಲ್ಗಳಲ್ಲಿಯೂ ಕಡ್ಡಾಯವಾಗಿ ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸಬೇಕು, ಹೋಟೆಲ್ಗಳಲ್ಲಿ ಶೇ.50 ಅನುಪಾತದಲ್ಲಿ ಗ್ರಾಹಕರಿಗೆ ಸೇವೆ ನೀಡುವುದು ಸೇರಿದಂತೆ ಬರುವ ಗ್ರಾಹಕರು ಲಸಿಕೆ ಪಡೆದ ಬಗ್ಗೆ ಖಚಿತ ಪಡಿಸಿಕೊಳ್ಳುವಂತಹ ಪ್ರಕ್ರಿಯೆ ಗಳನ್ನು ಅನುಸರಿಸಬೇಕು ಎಂದರು.
ಕೆಲಸಗಾರರಲ್ಲಿ ಯಾವುದಾದರೂ ರೋಗ ಲಕ್ಷಣಗಳು ಗೋಚರವಾದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಬೇಕು, ವಾಣಿಜ್ಯ ಮಳಿಗೆಗಳು ಹಾಗೂ ಇತರ ಕಡೆ ಆರೋಗ್ಯ ಇಲಾಖೆಯವರು ಗಂಟಲ ದ್ರವ ಸಂಗ್ರಹಕ್ಕೆ ಬಂದ ಸಂದರ್ಭ ಅವರಿಗೆ ಸಹಕರಿಸಬೇಕು, ಇಲ್ಲದಿದ್ದರೆ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಿ, ಅವರ ಮಳಿಗೆಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.
ಜಿ.ಪಂ. ಸಿಇಒ ಡಾ| ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಖಾಸಗಿ ಬಸ್, ಹೊಟೇಲ್, ಚಲನಚಿತ್ರ, ಮಾಲ್, ಕ್ಯಾಟರಿಂಗ್ ಸೇರಿದಂತೆ ವಿವಿಧ ಸಂಘಗಳ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ: ಕೋವಿಡ್ ಮಾರ್ಗಸೂಚಿಗಳನ್ನು ಗ್ರಾಹಕರು ಪಾಲಿಸುವಂತೆ ಅಂಗಡಿ ಮುಂಗಟ್ಟುಗಳ ಮುಖ್ಯಸ್ಥರು ಎಚ್ಚರಿಸುವುದರೊಂದಿಗೆ ವ್ಯವ ಹರಿಸಬೇಕು ತಪ್ಪಿದಲ್ಲಿ ಅಂಗಡಿ ಮಾಲಕರಿಗೆ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದ್ದಾರೆ.
ಮಣಿಪಾಲದ ಟೈಗರ್ ಸರ್ಕಲ್, ಬಸ್ ನಿಲ್ದಾಣ, ರಸ್ತೆ ಬದಿಯ ಅಂಗಡಿ ಮುಂಗಟ್ಟು ಸೇರಿದಂತೆ ಮಾಲ್ಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯಾಪಾರಿಗಳಿಗೆ ಕೋವಿಡ್ ಮಾರ್ಗಸೂಚಿ ಪಾಲಿ ಸಲು ನಿರ್ದೇಶಿಸಿ, ಮಾಸ್ಕ್ ಧರಿಸದೆ
ವ್ಯಾಪಾರ ವಹಿವಾಟು ಮಾಡುವವ ರಿಗೆ ದಂಡ ವಿಧಿಸಲು ನಗರಸಭಾ ಸಿಬಂದಿಗೆ ಸೂಚಿಸಿದರು.
ಅಂಗಡಿ ಮಾಲಕರು ತಮ್ಮ ಅಂಗಡಿ ಮುಂಭಾಗ ಗ್ರಾಹಕರು ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಸೂಕ್ತ ಮಾರ್ಕಿಂಗ್ ಮಾಡಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂಬ ನಾಮಫಲಕ ಅಳವಡಿಸಬೇಕು ಎಂದರು.
ಮಾಲ್ಗಳ ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಜತೆಗೆ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಬೇಕು. ಮಾಲ್ ಒಳಗೆ ಜನದಟ್ಟಣೆಯಗದಂತೆ ಎಚ್ಚರವಹಿಸಿ ಶೇ.50 ಕ್ಕಿಂತ ಕಡಿಮೆ ಜನ ಸಾಂದ್ರತೆ ಇರುವಂತೆ ನೋಡಿ ಕೊಳ್ಳಬೇಕು. ಒಂದೊಮ್ಮೆ ನಿಯಮ ಉಲ್ಲಂ ಸಿದಲ್ಲಿ ಮಾಲ್ಗಳನ್ನು ಮುಚ್ಚಲು ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಲಾಗುವುದು. ಔಷಧ ವ್ಯಾಪಾರ ಮಳಿಗೆಯಲ್ಲಿ ಕೆಮ್ಮು, ಶೀತ ಜ್ವರದ ಔಷಧಗಳನ್ನು ವಿತರಿಸುವ ಮಾಹಿತಿ ಪಡೆದರು. ಅನಂತರ ಖರೀದಿಸಿದವರ ಮಾಹಿತಿಯ ಪ್ರತೀ ದಿನದ ವರದಿಗಳನ್ನು ಸೂಕ್ತ ಪ್ರಾಧಿಕಾರಕ್ಕೆ, ಹಿಂದಿನಂತೆ ಕಡ್ಡಾಯ ವಾಗಿ ನೀಡಬೇಕು ಎಂದು ಸೂಚನೆ ನೀಡಿದರು.
ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗಳು ನಿತ್ಯ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮಾರ್ಗ
ಸೂಚಿಗಳು ಪಾಲನೆಯಾಗುತ್ತಿ ದೆಯೇ ಎಂಬ ಬಗ್ಗೆ ನಿಗಾ ವಹಿಸ ಬೇಕು ಎಂದು ನಿರ್ದೇಶನ ನೀಡಿ ದರು. ನಗರಸಭೆ ಆಯುಕ್ತ ಉದಯ ಶೆಟ್ಟಿ , ಸಿಬಂದಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.