Health: ಆಹಾರ ಚೆನ್ನಾಗಿ ಜಗಿದು ನುಂಗಿ ನೆತ್ತಿಗೆ ಹತ್ತದಿರಲಿ!
Team Udayavani, Sep 22, 2024, 5:19 PM IST
ಜಗತ್ತಿನ ಎಲ್ಲ ಜನಾಂಗಗಳು, ಸಂಸ್ಕೃತಿಗಳು, ಸ್ತ್ರೀ-ಪುರುಷ ಲಿಂಗಗಳು ಮತ್ತು ಎಲ್ಲ ವಯೋಮಾನದವರಲ್ಲಿ ಆಹಾರ ನೆತ್ತಿಗೆ ಹತ್ತುವುದು ಹೆಚ್ಚುತ್ತಿದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ. ವೃದ್ಧರಲ್ಲಿ ಇದು ಇನ್ನೂ ಹೆಚ್ಚಾಗಿದೆ. ಅಮೆರಿಕದಲ್ಲಿ ಅನುದ್ದೇಶಿತ ಮರಣಗಳಿಗೆ ಕಾರಣಗಳಲ್ಲಿ ಆಹಾರ ನೆತ್ತಿಗೆ ಹತ್ತುವುದು ನಾಲ್ಕನೆಯ ಸ್ಥಾನದಲ್ಲಿದೆ. ಆದರೂ ನಮ್ಮದೇ ಅನುಭವದ ಆಧಾರದಲ್ಲಿ ಹೇಳುವುದಾದರೆ ಆಹಾರ ನೆತ್ತಿಗೆ ಹತ್ತುವ ಅಪಾಯವನ್ನು ನಾವು ಬಹಳ ನಿರ್ಲಕ್ಷಿಸಿದ್ದೇವೆ. ಈ ಸಂಬಂಧಿ ಅಂಕಿಅಂಶಗಳು ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದ್ದರೂ ನಾವು ಅಪಾಯದ ಗಂಭೀರತೆಯನ್ನು ಇನ್ನೂ ಮನಗಂಡಿಲ್ಲ.
ಆಹಾರದ ಜಗಿತದಲ್ಲಿ ಯಾವುದೇ ಸಮಸ್ಯೆಯನ್ನು ಹೊಂದಿಲ್ಲದ ಜನರಲ್ಲಿಯೂ ಜಗಿತದ ಅಸಮರ್ಪಕ ಅಭ್ಯಾಸವು ಆಹಾರ ನೆತ್ತಿಗೇರುವ ಅಪಾಯವನ್ನು ಹೆಚ್ಚಿಸಬಲ್ಲುದಾಗಿದೆ. ಆದ್ದರಿಂದ ಯಾವುದೇ ವಯಸ್ಸಿನವರಾಗಿರಲಿ, ಆಹಾರ ಸೇವಿಸುವ ಸಮಯದಲ್ಲಿ ಮುಂಜಾಗ್ರತೆ ಅಗತ್ಯ ಎಂಬುದಾಗಿ ಅಮೆರಿಕನ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಅಸೋಸಿಯೇಶನ್ ಎಚ್ಚರಿಕೆಯ ಸಲಹೆ ನೀಡುತ್ತದೆ.
ನಮ್ಮ ಹಿರಿಯರು ‘ಸರಿಯಾಗಿ ಜಗಿದು ತಿನ್ನಬೇಕು, ಉಣ್ಣುವಾಗ ಮಾತನಾಡ ಬಾರದು, ಮಾತನಾಡಿದರೆ ಅದು ನೆತ್ತಿಗೆ ಹತ್ತುತ್ತದೆ’ (ಉಸಿರುಗಟ್ಟುವುದು, ಮಂಡಿಗೇರುವುದು ಎಂದರೆ ಇದೇ) ಎಂಬುದಾಗಿ ಬುದ್ಧಿವಾದ ಹೇಳುವುದನ್ನು ನೀವು ಕೇಳಿರಬಹುದು. ವಯಸ್ಸಿನ ತಾರತಮ್ಯವಿಲ್ಲದೆ ಎಲ್ಲರೂ ಅನುಸರಿಸಬೇಕಾದ ಸಲಹೆ ಇದು. ಉಸಿರುಗಟ್ಟುವುದು ಅಥವಾ ನೆತ್ತಿಗೆ ಹತ್ತುವುದು ಎಂದರೆ ತಿನ್ನಬಹು ದಾದ ಅಥವಾ ಇತರ ಬಾಹ್ಯ ವಸ್ತು ವ್ಯಕ್ತಿಯ ಉಸಿರಾಟ ಮಾರ್ಗಕ್ಕೆ ಸೇರುವುದು. ಇದರಿಂದ ವ್ಯಕ್ತಿಯ ಉಸಿರಾಟ ಮಾರ್ಗದಲ್ಲಿ ತಡೆಯುಂಟಾಗುತ್ತದೆ ಮತ್ತು ಶ್ವಾಸ ಕೋಶಕ್ಕೆ ವಾಯುಸಂಚಾರ ಭಾಗಶಃ ಅಥವಾ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ
ಆಹಾರ ತಯಾರಿ: ಖಾದ್ಯವಸ್ತುಗಳನ್ನು ಸೇವಿಸುವವರ ವಯಸ್ಸಿಗೆ ಸರಿಯಾಗಿ ತುಂಡುಗಳನ್ನು ಮಾಡಿಕೊಡಬೇಕು. ವಿಶೇಷವಾಗಿ ಮಕ್ಕಳಿಗೆ ದುಂಡನೆಯ ತುಂಡುಗಳನ್ನು ಕೊಡಬಾರದು, ಅವು ಅವರಲ್ಲಿ ಆಲಿಕೆಯ ರೂಪದಲ್ಲಿರುವ ವಾಯುಮಾರ್ಗದಲ್ಲಿ ಸೇರಿಕೊಳ್ಳುವ ಅಪಾಯವಿದೆ
ಗಮನಕೊಟ್ಟು ಆಹಾರ ಸೇವಿಸಿ: ಮಕ್ಕಳಿಗೆ ಉಣ್ಣಿಸಲು ಅಥವಾ ತಿನ್ನಿಸಲು ಮೊಬೈಲ್ ಅಥವಾ ಟಿವಿ ಬೇಕೇ ಬೇಕು ಎಂದು ಹೇಳುವ ಅನೇಕ ಹೆತ್ತವರಿದ್ದಾರೆ. ಹೆತ್ತವರು ಇಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸಬಾರದು. ಆಹಾರದ ಮೇಲೆ ಗಮನ ಕೇಂದ್ರೀಕರಿಸಿ, ಆಹಾರ ಜಗಿಯುವ ಸರಿಯಾದ ಪದ್ಧತಿ ರೂಢಿಸಿಕೊಳ್ಳಲು ಮಕ್ಕಳಿಗೆ ತಿಳಿಹೇಳಿ. ವಿಭಿನ್ನ ಮಾದರಿಯ ಆಹಾರಗಳನ್ನು ಜಗಿಯುವ ಉತ್ತಮ ಪದ್ಧತಿಯನ್ನು ಅಭ್ಯಾಸ ಮಾಡಿಕೊಳ್ಳಲು ಹೆತ್ತವರು ಮಾದರಿಯಾಗಬೇಕು. ಹೆಚ್ಚುವರಿ ಆಹಾರವನ್ನು ಬಾಯಿಯಿಂದ ಹೊರಹಾಕುವ ಅಭ್ಯಾಸವನ್ನು ಮೃದುವಾಗಿ ನಿರುತ್ತೇಜಿಸಿ. ನೆನಪಿಡಿ, ಮಕ್ಕಳು ನೀವು ಹೇಳುವುದಕ್ಕಿಂತ ಹೆಚ್ಚಾಗಿ ನೀವು ಮಾಡುವುದನ್ನು ನೋಡಿ ಅನುಸರಿಸುತ್ತಾರೆ.
ಭಂಗಿ: ಸುರಕ್ಷಿತ ಆಹಾರ ಸೇವನೆಗಾಗಿ ಕುಳಿತು ತಿನ್ನುವ – ಉಣ್ಣುವ ಭಂಗಿಯನ್ನು ರೂಢಿಸಿಕೊಳ್ಳಿ. ಆಹಾರ ಸೇವಿಸುವ ಸಮಯದಲ್ಲಿ ಮಕ್ಕಳು ಓಡಾಡುವುದು ಬೇಡ. ವ್ಯಕ್ತಿಯು ಹಾಸಿಗೆಯಲ್ಲಿದ್ದರೆ ಅವರು ಎದ್ದು ಕುಳಿತು ಆಹಾರ ಸೇವಿಸಲಿ. ಯಾವುದೇ ಕಾರಣಕ್ಕೂ ಮಲಗಿರುವ ಭಂಗಿಯಲ್ಲಿ ಆಹಾರ ಸೇವಿಸಬಾರದು.
ದ್ರವಾಹಾರ ಸೇವನೆ: ಬಹುತೇಕ ಮಂದಿ ಗುಟುಕರಿಸಿ ಕುಡಿಯುವುದರ ಬದಲಾಗಿ ಒಂದೇಟಿಗೆ ಗಳಗಳನೆ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಹೀಗೆ ಗಳಗಳನೆ ಕುಡಿಯುವ ಹೊತ್ತಿನಲ್ಲಿ ಹಲವು ಸೆಕೆಂಡುಗಳ ಕಾಲ ಉಸಿರಾಟ ಸ್ಥಗಿತಗೊಳ್ಳಬೇಕಾಗುತ್ತದೆ, ಇದು ಗಮನಾರ್ಹ ಉದ್ವಿಗ್ನತೆಗೆ ಕಾರಣವಾಗುತ್ತದೆಯಲ್ಲದೆ ವಿಶೇಷವಾಗಿ ಮಕ್ಕಳು ಮತ್ತು ಹಿರಿಯರಲ್ಲಿ ಸಂಕೀರ್ಣ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಸುರಕ್ಷೆ ಮತ್ತು ಆಸ್ವಾದಿಸಿ ಕುಡಿಯುವುದಕ್ಕಾಗಿ ಗುಟುಕರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಮಾತಾಡಬಾರದು, ನಗಬಾರದು: ಆಹಾರ ಸೇವನೆ ಮತ್ತು ನಗುವುದು ಅಥವಾ ಮಾತನಾಡುವುದು ಏಕಕಾಲದಲ್ಲಿ ನಡೆಯಲೇಬಾರದು. ಸಾಮಾಜಿಕ ಸಂದರ್ಭಗಳಲ್ಲಿ ಒಂದು ತುತ್ತು ತೆಗೆದುಕೊಳ್ಳುವುದಕ್ಕೆ ಮೊದಲು ಮಾತನಾಡಿ ಅಥವಾ ಜಗಿದು ನುಂಗಿದ ಬಳಿಕ ಮಾತನಾಡಿ. ಊಟ ಉಪಾಹಾರ ಮುಗಿದ ಬಳಿಕ ವಿಸ್ತಾರವಾಗಿ ಮಾತನಾಡುವುದು ಹಿತಕರ.
ನಿಧಾನ, ನಿಧಾನ: ಗಡಿಬಿಡಿಯಲ್ಲಿ ಉಣ್ಣುವುದು ಬೇಡ. ಆಹಾರ ಸೇವನೆಗೆ ಸಮಯ ಸಾಕಷ್ಟು ಸಿಗುವ ಹಾಗೆ ಹೊಂದಿಸಿಕೊಳ್ಳಿ. ಇದರಿಂದ ಸರಿಯಾದ ತುತ್ತುಗಳನ್ನು ಸಮರ್ಪಕವಾಗಿ ಜಗಿದು ಉಣ್ಣುವುದು ಸಾಧ್ಯವಾಗುತ್ತದೆ.
ಆಹಾರ ಮತ್ತು ನಿದ್ದೆಯ ನಡುವೆ ಅಂತರ: ಆಹಾರ ಸೇವಿಸಿದ ಕೂಡಲೇ ಮಲಗಬಾರದು ಎಂಬುದನ್ನು ನೆನಪಿಡಿ, ಹಾಗೆ ಮಾಡಿದರೆ ಉಳಿದ ಆಹಾರ ಶ್ವಾಸನಾಳಕ್ಕೆ ಸೇರುವ ಸಾಧ್ಯತೆಯಿದೆ. ಊಟ-ಉಪಾಹಾರದ ಬಳಿಕ 30 ನಿಮಿಷಗಳಾದರೂ ಕುಳಿತಿರಬೇಕು.
ಹಲ್ಲು ಹುಳುಕು, ಹಾಳಾಗಿರುವವರು: ಇವರಲ್ಲಿ ಬಾಯಿಯ ಸಂವೇದನೆ ಕಡಿಮೆಯಿರುತ್ತದೆ. ಇದರಿಂದ ಮಾಂಸಾಹಾರದಲ್ಲಿರುವ ಸಣ್ಣ ಮೂಳೆಗಳು ಇವರ ಅರಿವಿಗೆ ಬಾರದಿರುವ ಸಾಧ್ಯತೆ ಇದೆ. ಇಂಥವರು ವಿಶೇಷವಾಗಿ ಮಾಂಸಾಹಾರ ಸೇವನೆಯ ಸಂದರ್ಭದಲ್ಲಿ ಹೆಚ್ಚುವರಿ ಎಚ್ಚರಿಕೆ ವಹಿಸಬೇಕಾಗುತ್ತದೆ.
ಈ ಸರಳ ಹೆಜ್ಜೆಗಳನ್ನು ಅನುಸರಿಸುವ ಮೂಲಕ ಆಹಾರ ನೆತ್ತಿಗೆ ಹತ್ತುವ ಅಪಾಯವನ್ನು ದೂರ ಮಾಡಿ. ಸುರಕ್ಷಿತವಾಗಿ, ಚೆನ್ನಾಗಿ ಆಹಾರ ಸೇವಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation ಥಿಯೇಟರ್ ಒಳಗೆ ಏನು ನಡೆಯುತ್ತದೆ?
Expiry Date; ಔಷಧಗಳ ಅವಧಿ ಮುಗಿಯುವ ದಿನಾಂಕ; ರಾಷ್ಟ್ರೀಯ ಫಾರ್ಮಕೋವಿಜಿಲೆನ್ಸ್ ಸಪ್ತಾಹ
Red Meat: ಮಧುಮೇಹ ಉಂಟಾಗುವ ಅಪಾಯ ಮತ್ತು ಕೆಂಪು ಮಾಂಸ ಸೇವನೆಗಿರುವ ಸಂಬಂಧ
Body Weight: ಕ್ರೀಡಾಳುಗಳ ಸಾಧನೆಯ ಮೇಲೆ ಕ್ಷಿಪ್ರ ದೇಹತೂಕ ಏರಿಳಿತದ ಪರಿಣಾಮಗಳು
Females Health: ಲಘು ರಕ್ತಸ್ರಾವ ಮತ್ತು ಋತುಸ್ರಾವ್ರ ವ್ಯತ್ಯಾಸ ತಿಳಿಯಿರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.