![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Jan 9, 2022, 7:50 AM IST
ಕುಂದಾಪುರ: ಎರಡು ವರ್ಷಗಳಿಂದ ಲಾಕ್ಡೌನ್, ನೆರೆ, ಅತಿವೃಷ್ಟಿಯಿಂದ ಸಂಕಷ್ಟ ಅನುಭವಿಸಿದ್ದ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರ ರಿಗೆ ಈ ಬಾರಿಯೂ ಕೊರೊನಾ ಗಾಯದ ಮೇಲೆ ಬರೆ ಎಳೆದಿದೆ.
ಕೊಯ್ಲು ಆರಂಭವಾಗುವಷ್ಟರಲ್ಲೇ ವಾರ್ಷಿಕ ಕೆಂಡ, ಉತ್ಸವಗಳಿಗೆ ನಿರ್ಬಂಧ ಹೇರಲಾಗಿದ್ದು, ಹೂಗಳನ್ನು ವಿಲೇವಾರಿ ಮಾಡಲಾರದೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಹೆಮ್ಮಾಡಿ ಪರಿಸರದಲ್ಲಿ ಮಾತ್ರ ಬೆಳೆಯುವ ಸೇವಂತಿಗೆ ಬಹುಪಾಲು ವ್ಯಾಪಾರವಾಗುವುದು ಮಕರ ಸಂಕ್ರಾಂತಿ ಸಮಯದಲ್ಲಿ ನಡೆಯವ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರನ ಜಾತ್ರೆ ಯಲ್ಲಿ. ಈ ಬಾರಿ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ವಿಧಿಸಲಾಗಿರುವುದರಿಂದ ಸರಳ ಆಚರಣೆ ನಡೆಯಲಿದೆ. ಇದರಿಂದಾಗಿ ಹೂವಿನ ವ್ಯಾಪಾರಕ್ಕೆ ಪೆಟ್ಟು ಬೀಳಲಿದೆ.
3 ತಿಂಗಳು ಮಾತ್ರ ವಹಿವಾಟು
ಹೆಮ್ಮಾಡಿ, ಕನ್ಯಾನ ಮತ್ತು ಕಟ್ಬೆಲೂ¤ರು ಗ್ರಾಮಗಳ 22 ಎಕರೆಯಲ್ಲಿ 60 ರೈತರು ಹೆಮ್ಮಾಡಿ ಸೇವಂತಿಗೆ ಬೆಳೆಯುತ್ತಾರೆ. ಪ್ರತೀ ವರ್ಷ ಜ. 3ರ ಬಸ್ರೂರು ದೇವಿ ದೇವಸ್ಥಾನದ ಹಬ್ಬದಿಂದ ಆರಂಭಗೊಂಡು ಮಾರ್ಚ್ ಕೊನೆಯ ಅಸೋಡು ಹಬ್ಬದವರೆಗೂ ದಿನಕ್ಕೆರಡು ಜಾತ್ರೆ, ಕೆಂಡೋತ್ಸವಗಳಿಗೆ ಸೇವಂತಿಗೆ ಹೂವಿಗೆ ಬೇಡಿಕೆ ಯಿರುತ್ತದೆ. ಈ ಬಾರಿ ಋತುವಿನ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಿದೆ.
ಹೂವನ್ನು ಏನು ಮಾಡಲಿ?
ಅನೇಕ ವರ್ಷಗಳಿಂದ ಸೇವಂತಿಗೆ ಬೆಳೆಯು ತ್ತಿದ್ದು, ಜನವರಿ ಮೊದಲ ವಾರದಿಂದ ಕೊçಲು ಆರಂಭವಾಗಿ ಮಾರ್ಚ್ವರೆಗೆ ಇರುತ್ತದೆ.
ಮಾರಣಕಟ್ಟೆ ಹಬ್ಬದಲ್ಲಿ ಹೆಚ್ಚು ಹೂವು ಬೆಳೆದವರಿಗೆ ಕನಿಷ್ಠ 1 ಲಕ್ಷದಿಂದ 2.5. ಲಕ್ಷ ರೂ. ವರೆಗೂ ವ್ಯಾಪಾರ ಕುದುರುತ್ತದೆ. ಇನ್ನುಳಿದ ಜಾತ್ರೆ, ಕೆಂಡಗಳಲ್ಲಿ 10 ಸಾವಿರದಿಂದ 50 ಸಾವಿರ ರೂ. ವರೆಗೆ ನಿತ್ಯ ವಹಿವಾಟು ಆಗುತ್ತದೆ. ಕೊಯ್ಲು ವೇಳೆಗೇ ಸರಕಾರ ಹಬ್ಬಗಳಿಗೆ ನಿರ್ಬಂಧ ವಿಧಿಸಿದರೆ ಬೆಳೆದ ಹೂವನ್ನು ಏನು ಮಾಡುವುದು ಎಂದು ಬೆಳೆಗಾರ ಪ್ರಶಾಂತ್ ಭಂಡಾರಿ ಪ್ರಶ್ನಿಸಿದ್ದಾರೆ.
ಶಾಸಕರಿಗೆ ಮನವಿ
ಉತ್ಸವ, ಜಾತ್ರೆ ಇತ್ಯಾದಿಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ಕರಾವಳಿ ಭಾಗಕ್ಕಾದರೂ ಸ್ವಲ್ಪ ಮಟ್ಟಿಗೆ ಸಡಿಲಿಸು ವಂತೆ ಸರಕಾರದ ಗಮನಕ್ಕೆ ತರುವುದಾಗಿ ಶುಕ್ರವಾರ ಬೆಳೆಗಾರರ ಸಂಘದ ವತಿಯಿಂದ ಮನವಿ ಸ್ವೀಕರಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಭರವಸೆ ನೀಡಿದರು.
ಕೈಗೆ ಬಂದ ತುತ್ತು..
ಈ ಬಾರಿ ಪೂರಕ ಹವಾಮಾನದಿಂದಾಗಿ ಸೇವಂತಿಗೆ ಇಳುವರಿ ಉತ್ತಮವಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಪರಿಸ್ಥಿತಿ ಬೆಳೆಗಾರರದ್ದು !
ಬದುಕೇ ನಾಶ
ಧಾರ್ಮಿಕ ಉತ್ಸವಗಳನ್ನೇ ನಂಬಿ ಸೇವಂತಿಗೆ ಬೆಳೆಯುವವರು ನಾವು. ಕೊಯ್ಲುನ ವೇಳೆಗೆ ನಿರ್ಬಂಧ ವಿಧಿಸುವುದೆಂದರೆ ವರ್ಷ ಪೂರ್ತಿ ಶ್ರಮಿಸಿ ಬೆಳೆದ ಹೂವು ಕಮರುವುದರೊಂದಿಗೆ ನಮ್ಮ ಬದುಕೇ ನಾಶವಾದಂತೆ. ಸರಕಾರ ನಮ್ಮ ಹಿತವನ್ನೂ ಗಮನಿಸಬೇಕು. ಇಲ್ಲದೇ ಹೋದರೆ ಕಾಯಬೇಕಾಗಿರುವ ಸರಕಾರವೇ ನಮ್ಮ ಬದುಕಿಗೆ ಕೊಳ್ಳಿ ಇಟ್ಟಂತೆ.
– ಮಹಾಬಲ ದೇವಾಡಿಗ, ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘದ ಅಧ್ಯಕ್ಷ
You seem to have an Ad Blocker on.
To continue reading, please turn it off or whitelist Udayavani.