Karnataka: 52,189 ಮನೆಗಳ ಪೂರ್ಣಕ್ಕೆ ಪ್ರಸ್ತಾವನೆ ಸಲ್ಲಿಸಿ: ಸಿಎಂ
ಫಲಾನುಭವಿ ವಂತಿಗೆ 2013 ಕೋಟಿ ಪೈಕಿ 134 ಕೋಟಿ ಮಾತ್ರ ಪಾವತಿ
Team Udayavani, Dec 29, 2023, 9:07 PM IST
ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದಿಂದ ಪ್ರಧಾನ ಮಂತ್ರಿ ಅವಾಸ್ (ನಗರ) ಯೋಜನೆಯಡಿ ನಿರ್ಮಿಸಲಾಗುತ್ತಿರುವ 52,189 ಮನೆಗಳ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಅನುದಾನ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಫಲಾನುಭವಿಗಳ ವಂತಿಗೆ 2013 ಕೋಟಿ ರೂ. ಪಾವತಿ ಆಗದೇ ಇರುವುದನ್ನು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಕಾಮಗಾರಿ ಪೂರ್ಣ ಗೊಳಿಸಲು 2,168 ಕೋಟಿ ರೂ. ಅಗತ್ಯ ಇದೆ. ಹಂತ ಹಂತವಾಗಿ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯವಿರುವ ಅನುದಾನ ಕುರಿತು ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ನಿರ್ದೇಶಿಸಿದ್ದಾರೆ ಎಂದು ಸಭೆ ಬಳಿಕ ವಸತಿ ಸಚಿವ ಜಮೀರ್ ಅಹಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
2013ರಿಂದ ಇದುವರೆಗೆ 52,189 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಫಲಾನುಭವಿಗಳ ವಂತಿಗೆ 2013 ಕೋಟಿ ರೂ. ಬರಬೇಕಿದ್ದು, 134 ಕೋಟಿ ರೂ. ಮಾತ್ರ ಪಾವತಿ ಆಗಿದೆ. ಫಲಾನುಭವಿಗಳು ಬಡವರಾಗಿದ್ದು, 4 ಲಕ್ಷ ರೂ.ಪಾವತಿ ಕಷ್ಟ. ಬ್ಯಾಂಕ್ ಗಳಿಂದಲೂ ಸಾಲ ಸಿಗುತ್ತಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ಯೋಜನೆಯಡಿ ಕೈಗೊಂಡಂತೆ ಫಲಾನುಭವಿಗಳು 1 ಲಕ್ಷ ರೂ. ಪಾವತಿಸಿ ಉಳಿದ ಹಣ ಸರ್ಕಾರ ಭರಿಸಿದರೆ ಮಾತ್ರ ಯೋಜನೆ ಪೂರ್ಣಗೊಂಡು ಬಡವರಿಗೆ ಮನೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
100 ಕೋಟಿ ರೂ. ಹಣ ನೀಡಿದರೆ ಫೆಬ್ರವರಿ ವೇಳೆಗೆ 5 ಸಾವಿರ ಮನೆ ನೀಡಬಹುದು. ಅದೇ ರೀತಿ ಹಂತ ಹಂತವಾಗಿ 1879 ಕೋಟಿ ರೂ. ಫಲಾನುಭವಿಗಳ ವಂತಿಗೆ ಮೊತ್ತ ಹಾಗೂ ಮೂಲ ಸೌಕರ್ಯಕ್ಕೆ 289 ಕೋಟಿ ರೂ. ಸೇರಿದಂತೆ ಒಟ್ಟು 2168 ಕೋಟಿ ರೂ. ನೀಡಿದರೆ ಮುಂದಿನ ಡಿಸೆಂಬರ್ ವೇಳೆಗೆ ಎಲ್ಲ ಮನೆಗಳ ಕಾಮಗಾರಿ ಪೂರ್ಣ ಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಪ್ರತಿ ಮನೆಗೆ 7.50 ಲಕ್ಷ ರೂ. ವೆಚ್ಚ ಆಗಲಿದೆ. 3.50 ಲಕ್ಷ ರೂ. ಸಬ್ಸಿಡಿ ಸಿಗಲಿದ್ದು 4 ಲಕ್ಷ ರೂ. ಫಲಾನುಭವಿ ಕಟ್ಟಬೇಕಿತ್ತು. ಇದೀಗ ಫಲಾನುಭವಿ ಒಂದು ಲಕ್ಷ ರೂ. ಕಟ್ಟಿದರೆ 3 ಲಕ್ಷ ರೂ. ಸರ್ಕಾರವೇ ಭರಿಸಲಿದೆ. ಇದರ ಜತೆಗೆ ಸಂಪುಟದಲ್ಲಿ ಒಪ್ಪಿಗೆ ನೀಡಿರುವ ಕೊಳಗೇರಿ ಅಭಿವೃದ್ಧಿ ಮಂಡಳಿಯ 1.82 ಲಕ್ಷ ಮನೆಗಳನ್ನು ಪೂರ್ಣ ಗೊಳಿಸುವ ಸಂಬಂಧ 500 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಲು ಮುಖ್ಯಮಂತ್ರಿ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.