![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 6, 2024, 11:06 PM IST
ಮಂಗಳೂರು: ಬಿಜೆಪಿ ವಿಸ್ತರಣೆಗಾಗಿ ಸದಸ್ಯತ್ವ ಅಭಿಯಾನವನ್ನು ಪಕ್ಷವು ತಪಸ್ಸಿನಂತೆ ನಡೆಸುತ್ತ ಬಂದಿದೆ. ದ.ಕ. ಜಿಲ್ಲೆಯಲ್ಲಿ ಮೂರೂವರೆ ಲಕ್ಷದಿಂದ ನಾಲ್ಕು ಲಕ್ಷದವರೆಗೆ ಸದಸ್ಯರನ್ನು ಈ ಬಾರಿ ನಡೆಸಲಿದ್ದೇವೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಲೋಗೋ ಅನಾವರಣದ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಂಸತ್ನಿಂದ ಗ್ರಾಮ ಪಂಚಾಯತ್ವರೆಗೆ ಅತಿ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿರುವ ಪಕ್ಷ ಬಿಜೆಪಿ. ಕೇವಲ ಸದಸ್ಯರ ಸಂಖ್ಯೆ ಹೆಚ್ಚಳ ಮಾಡುವುದಷ್ಟೇ ನಮ್ಮ ಗುರಿಯಲ್ಲ. ಪಕ್ಷದ ಚಟುವಟಿಕೆ ವಿಸ್ತರಣೆಗಾಗಿ ಸದಸ್ಯತನ ಅಭಿಯಾನ ನಡೆಯುತ್ತಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದು, ಮಂಡಲ ಅಧ್ಯಕ್ಷರಿಂದ ರಾಜ್ಯ ಘಟಕದವರೆಗೆ ಪ್ರಜಾಪ್ರಭುತ್ವ ಮಾದರಿಯಲ್ಲೇ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಈ ಕಾರ್ಯ ಪದ್ಧತಿಯಿಂದಾಗಿಯೇ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ನಳಿನ್ ಕುಮಾರ್ ಹೇಳಿದರು.
ಕಲಾವಿದರು, ವೈದ್ಯರು ಸಹಿತ ವಿವಿಧ ಕ್ಷೇತ್ರಗಳ ಸಾಧಕರ ಮನೆಗೆ ತೆರಳಿ ನಮ್ಮ ಪಕ್ಷದ ಗುರಿಯನ್ನು ತಿಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಸದಸ್ಯತ್ವ ಅಭಿಯಾನ ಪಕ್ಷಕ್ಕೆ ಶಕ್ತಿ ತುಂಬುವಂಥದ್ದಾಗಿದೆ. ಆ ಮೂಲಕ ಪಕ್ಷ ಮೌಲ್ಯವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಎಲ್ಲ ಸಮುದಾಯವನ್ನು ತಲುಪಿ ಅವರನ್ನು ಬಿಜೆಪಿಯ ಸದಸ್ಯರಾಗಿ ಬಳಿಕ ಕಾರ್ಯಕರ್ತರನ್ನಾಗಿ ಮುಂದಕ್ಕೆ ಅವರನ್ನೇ ಜನಪ್ರತಿನಿಧಿಗಳನ್ನಾಗಿ ಮಾಡುವ ಕಾರ್ಯದ ಭಾಗವಾಗಿದೆ. ಅತಿ ಹೆಚ್ಚು ಯುವಜನರು, ಮಹಿಳೆಯರನ್ನು ಪಕ್ಷದ ಸದಸ್ಯರಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ದ.ಕ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ|ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಪ್ರಮುಖರಾದ ವಿಕಾಸ್ ಪುತ್ತೂರು, ವಿಜಯ ಕುಮಾರ್ ಶೆಟ್ಟಿ, ನಿತಿನ್ ಕುಮಾರ್ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ದೇವದಾಸ್ ಶೆಟ್ಟಿ ನಿರೂಪಿಸಿದರು.
You seem to have an Ad Blocker on.
To continue reading, please turn it off or whitelist Udayavani.