Kambala Bangalore: ಬೆಂಗಳೂರು ಕಂಬಳ ಹುಟ್ಟಿಕೊಳ್ಳಲು ಇದೇ ಕಾರಣ!
Team Udayavani, Nov 25, 2023, 11:29 AM IST
ಯಾರೂ ಕನಸಲ್ಲೂ ಊಹಿಸಿರಲಿಲ್ಲ. ಕರಾವಳಿಯ ಸಾಂಸ್ಕೃತಿಕ ವೈಭವ ಕಂಬಳ ಕಾರ್ಯಕ್ರಮ ಬೆಂಗಳೂರಿನಲ್ಲೂ ನಡೆಯುತ್ತದೆ ಎಂದು! ಅಂಥದ್ದೊಂದು ಕಲ್ಪನೆಯನ್ನು ಹುಟ್ಟುಹಾಕಿ ಇಂದು ಅದನ್ನು ಮೂರ್ತರೂಪಕ್ಕೆ ತರುತ್ತಿರುವವರು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ. ಸಿಲಿಕಾನ್ ಸಿಟಿಯ ಅರಮನೆ ಮೈದಾನದಲ್ಲಿ ನ.25, 26ರಂದು ನಡೆಯಲಿರುವ ಕರಾವಳಿ ಕಂಬಳ ಉತ್ಸವದ ಕುರಿತು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಪುತ್ತೂರು ಅವರು ಉದಯವಾಣಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದು ಹೀಗಿದೆ…
ಬೆಂಗಳೂರಿಗೆ ಕಂಬಳ ಉತ್ಸವ ಆಯೋಜಿಸಲು ಕಾರಣ?
ಕರಾವಳಿ ಕಂಬಳಕ್ಕೆ 700ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ರಾಜ ಮಹಾರಾಜರು ಮನೋರಂಜನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ಆಯೋಜಿಸುತ್ತಿದ್ದರು. ಅದೇ ಸಂಸ್ಕೃತಿ ಯನ್ನು ತಲೆತಲಾಂತರದಿಂದ ಕರಾವಳಿಯ ಭಾಗದಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ತುಳು ಭಾಷೆಯ ವಿಚಾರವಾಗಿ ವಿಧಾನಸಭೆ ಯಲ್ಲಿ ಪ್ರಸ್ತಾಪಿಸಿದಾಗ, ಅನೇಕ ತುಳುನಾಡಿನ ಮುಖಂಡರು ನನ್ನ ಸಂಪರ್ಕಿಸಿದ್ದಾರೆ. ಈ ವೇಳೆ ತುಳು ಭಾಷೆಗೆ ಮನ್ನಣೆ ಸಿಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಮಾತುಕತೆ ನಡೆಸಿ ದ್ದರು. ಈ ವೇಳೆ ಕಂಬಳ ಆಯೋಜನೆ ಮಾಡುವ ವಿಚಾರ ನನ್ನ ಮನಸ್ಸಿಗೆ ಬಂತು, ಅದೇ ಯೋಚನೆಯೇ ಇವತ್ತಿನ ಬೆಂಗಳೂರು ಕಂಬಳ.
ಎಷ್ಟು ಜೋಡಿ ಕಂಬಳ ಕೋಣಗಳು ಬರಲಿವೆ? ಆಯ್ಕೆ ಹೇಗೆ?
ಪ್ರಾರಂಭದಲ್ಲಿ ಕೋಣಗಳ ಮಾಲೀಕರು ಬರುತ್ತಾರೆಯೋ ಇಲ್ಲವೋ ಎನ್ನುವ ಅನುಮಾನವಿತ್ತು. ಆದರೆ, ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಹೆಚ್ಚಿನ ಮಾಲೀಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇದುವರೆಗೆ 200 ಕೋಣಗಳ ಮಾಲೀಕರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ, ಈ ಬಾರಿ ಕಂಬಳಕ್ಕೆ ಹೊಸದಾಗಿ 18 ಜೋಡಿ ಹೊಸ ಕೋಣಗಳ ಹೆಸರು ಸೇರ್ಪಡೆಯಾಗಿದೆ. ಈ ಜೋಡಿಗಳ ಮಾಲೀಕರು ಬೆಂಗಳೂರು ಕಂಬಳಕ್ಕಾಗಿ ಕೋಣವನ್ನು ಖರೀದಿಸಿದ್ದಾರೆ. ಕಡಿಮೆ ಸಮಯದಲ್ಲಿ ಅವುಗಳಿಗೆ ತರಬೇತಿ ನೀಡಿ, ಕಂಬಳದಲ್ಲಿ ಓಡಲು ಸಿದ್ಧತೆ ನಡೆಸಿದ್ದಾರೆ. ಇದುವೇ ಬೆಂಗಳೂರು ಕಂಬಳದ ವಿಶೇಷ.
ಕಂಬಳದಲ್ಲಿ ಸುಪ್ರೀಂ ಕೋರ್ಟ್ ನಿಯಮಾವಳಿ ಪಾಲನೆ ಮಾಡಲು ಸಾಧ್ಯವೇ?
ಖಂಡಿತವಾಗಿಯೂ ಕಂಬಳದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿದ ನಿಯಾಮವಳಿಯನ್ನು ಪಾಲನೆ ಮಾಡಲು ಸಾಧ್ಯವಿದೆ. ಯಾಕೆಂದರೆ, ನಮ್ಮ ಕಂಬಳದ ಕೋಣಗಳು ಕಣಕ್ಕೆ ಇಳಿದ ತಕ್ಷಣವೇ ಓಡಲು ಪ್ರಾರಂಭಿಸುತ್ತದೆ. ಈ ವೇಳೆ ಕೋಣ ಓಡಿಸುವವರು ಬಿದ್ದರೂ, ಅದರ ಓಟ ನಿಲ್ಲದು. ಇದರಿಂದ ಹೊಡೆಯುವ ಪ್ರಸಂಗವೇ ಬರುವುದಿಲ್ಲ. ಜತೆಗೆ ಎಲ್ಲಿಯೂ ಸುಪ್ರೀಂ ಕೋರ್ಟ್ ನಿಯಮಾವಳಿ ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಲು ತಹ ಶೀ ಲ್ದಾರ್ ಹಾಗೂ ನೋಡಲ್ ಅಧಿಕಾರಿಗಳು ಕಂಬಳ ಕೂಟದಲ್ಲಿ ಭಾಗವಹಿಸಿ ಪರಿಶೀಲನೆ ನಡೆಸಲಿದ್ದಾರೆ.
ಕರಾವಳಿಯಲ್ಲಿ ಕಂಬಳಕ್ಕೆ ಧಾರ್ಮಿಕ ನೆಲೆಗಟ್ಟಿದೆ, ಬೆಂಗಳೂರಿನ ಕಂಬಳಕ್ಕೇನಿದೆ?
-ಹೌದು ಬೆಂಗಳೂರಿನಲ್ಲಿಯೂ ಧಾರ್ಮಿಕ ಆಚರಣೆ ಪಾಲನೆ ಮಾಡಿಕೊಂಡೆ ಕಂಬಳ ಆಯೋಜಿಸಲಾಗುತ್ತದೆ. ಮೊದಲಿಗೆ ಕರೆ ಮುಹೂರ್ತ ಮಾಡಲಾಗಿದೆ. ಇದೀಗ ಕಂಬಳ ಪೂರ್ವಭಾವಿಯಾಗಿ ಕುದಿ(ಕಂಬಳದ ಕಣದಲ್ಲಿ ಪ್ರಾರಂಭಿಕವಾಗಿ ಕಂಬಳ ಕೋಣಗಳನ್ನು ಓಡಿಸುವುದು) ಮುಹೂರ್ತ ಸಹ ಪೂರ್ಣಗೊಂಡಿದೆ. ದೇವರಿಗೆ ಪೂಜೆ ಸಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅರಮನೆ ಮೈದಾನದಲ್ಲಿ ನಾಗದೇವರ ಹುತ್ತವಿದ್ದು, ಇದಕ್ಕೆ ವಿಶೇಷ ಪೂಜೆ ಹಾಗೂ ವಿಘ್ನ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿ ಕಂಬಳ ಆಯೋಜನೆ ಮಾಡಲಾಗುತ್ತದೆ. ಕಂಬಳಕ್ಕೆ ದೈವಿಕ ಶಕ್ತಿಯೂ ಸಾಥ್ ನೀಡಿದೆ. ಅಕ್ಕಪಕ್ಕದಲ್ಲಿ 1200 ಅಡಿ ಆಳದಲ್ಲಿ ಬೋರ್ ಹೊಡೆದರೂ ನೀರು ಸಿಕ್ಕಿಲ್ಲ. ಆದರೆ, ಕಂಬಳ ನಡೆಯುವ ಸ್ಥಳದಲ್ಲಿ ಕೇವಲ 300ಅಡಿಯಲ್ಲಿ ಒಳ್ಳೆಯ ನೀರು ಲಭ್ಯವಾಗಿದೆ. ಜತೆಗೆ ಇದುವರೆಗೆ ಯಾವುದೇ ಅಡ್ಡಿ ಆತಂಕವಿಲ್ಲದೆ ಕಂಬಳ ಪೂರ್ವಭಾವಿ ಕೆಲಸಗಳು ಪೂರ್ಣಗೊಂಡಿರುವುದೇ ದೇವರ ಅನುಗ್ರಹ ದಿಂದ, ಇದಕ್ಕಿಂತ ಬೇರೆ ಸಾಕ್ಷಿ ತೋರಿಸಲು ಸಾಧ್ಯವಿಲ್ಲ.
ಕಂಬಳ ಕೋಣಗಳಿಗೆ ಆಹಾರ ವ್ಯವಸ್ಥೆ ಹೇಗಿರಲಿದೆ?
ಕಂಬಳದ ಕೋಣಗಳ ಮಾಲೀಕರು ಎಲ್ಲಿ ಹೋದರೂ, ಕಂಬಳ ಆಯೋಜಕರು ನೀಡುವ ಆಹಾರ ಅಥವಾ ನೀರನ್ನು ಕೋಣಗಳಿಗೆ ನೀಡು ವು ದಿಲ್ಲ. ತಾವೇ ತರುವ ಬೈ ಹುಲ್ಲು, ಕುಡಿಯುವ ನೀರು ಹಾಗೂ ಹುರುಳಿಯನ್ನು ನೀಡಲಿದ್ದಾರೆ. ಅದಕ್ಕಾಗಿಯೇ ಕೋಣಗಳ ಮಾಲೀಕರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಟೆಂಟ್ ನೀಡಲಾಗಿದ್ದು, ಅಲ್ಲಿಯೇ ಬೈ ಹುಲ್ಲು ಹಾಗೂ ನೀರು ಇಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ಹುರುಳಿ ಬೇಯಿಸಲು ಅಗತ್ಯವಿರುವ ಅನುಕೂಲವನ್ನು ಮಾಡಿಕೊಡಲಾಗುತ್ತಿದೆ.
ಕಂಬಳಕ್ಕೆ ತಗಲುವ ವೆಚ್ಚ ಹಾಗೂ ನಿರ್ವಹಣೆ ಹೇಗೆ? ಕಂಬಳಕ್ಕೆ ಸುಮಾರು 7ರಿಂದ 8 ಕೋಟಿ ಖರ್ಚು ಆಗಲಿದೆ. ಸುಮಾರು 2 ಕೋಟಿ ರೂ. ವೆಚ್ಚದ ಪೆಂಡಾಲ್, 1 ಕೋಟಿ ರೂ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಒಂದು ಕೋಣ ಬೆಂಗಳೂರಿಗೆ ತರಲು 50 ಸಾವಿರ ರೂ. ವೆಚ್ಚವಾಗುತ್ತದೆ. ಸುಮಾರು 200 ಕೋಣಗಳ ಒಟ್ಟು ಬಾಬ್ತು ಸುಮಾರು 1 ಕೋಟಿ ಆಗಲಿದೆ. ಸರ್ಕಾರದಿಂದ 1 ಕೋಟಿ ರೂ. ಅನುದಾನ ಘೋಷಣೆಯಾಗಿದೆ.
ಸಾರ್ವಜನಿಕರಿಗೆ ಕಂಬಳ ಆಹ್ವಾನವಿದೆಯೇ?
ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಪ್ರವೇಶ ಶುಲ್ಕವಿಲ್ಲ. 10,000 ವಿವಿಐಪಿ ಆಸನ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಆಹಾರ ಸ್ಟಾಲ್ಗಳು ಇರಲಿದೆ. ರಾತ್ರಿ ಪೂರ್ತಿ ಕುಳಿತುಕೊಂಡು ಕಂಬಳ ವೀಕ್ಷಣೆ ಮಾಡಲು ಅಗತ್ಯವಿರುವ ಎಲ್ಲ ವ್ಯವಸ್ಥೆ ಬೆಂಗಳೂರು ಕಂಬಳ ಉತ್ಸವದಲ್ಲಿ ಇದೆ. ಪಕ್ಷ , ಜಾತಿ ಭೇದವಿಲ್ಲದೆ ಕಂಬಳ ಆಯೋಜನೆ ಮಾಡಲಾಗುತ್ತಿದೆ.
ಬೇರೆಡೆಗೆ ಕಂಬಳ ಆಯೋಜಿಸಲು ಆಹ್ವಾನವಿದೆಯೇ?
ಮುಂಬಯಿನಿಂದ ಈಗಾಗಲೇ ಅನೇಕ ಕರಾವಳಿ ಮೂಲದ ಸಂಘಟನೆಗಳು ನಮ್ಮನ್ನು ಸಂಪರ್ಕಿಸಿವೆ. ಅಲ್ಲಿಯೂ ಕಂಬಳ ಆಯೋಜಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ಅನೇಕ ನ್ಪೋರ್ಟ್ಸ್ ಚಾನೆಲ್ಗಳು ಕಂಬಳದ ಬಗ್ಗೆ ಮಾಹಿತಿ ಪಡೆದುಕೊಂಡಿವೆ. ಮುಂದೆ ಐಪಿಎಲ್ ತರಹ ಕಂಬಳ ಕ್ರೀಡಾಕೂಟ ಆಯೋಜನೆಯಾಗುವ ಸಾಧ್ಯತೆಗಳನ್ನು ತೆಗೆದು ಹಾಕುವಂತಿಲ್ಲ.
ಕಂಬಳ ಒಂದೇ ವರ್ಷಕ್ಕೆ ಸೀಮಿತವೇ?
ಇದೇ ಮೊದಲ ಬಾರಿ ಕಂಬಳ ಕರಾವಳಿ ಬಿಟ್ಟು ಬೆಂಗಳೂರಿನಲ್ಲಿ ಆಯೋಜಿಸಿರುವುದು. ಮುಂದಿನ ವರ್ಷವೂ ನಡೆಸುವ ಚಿಂತನೆ ಇದೆ. ಕಂಬಳದ ಕರೆ(ಕಣ/ಟ್ರ್ಯಾಕ್) ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತದೆ.
ಬೆಂಗಳೂರು ಕಂಬಳಕ್ಕೆ ಕರಾವಳಿ ಸ್ಪಂದನೆ ಹೇಗಿದೆ?: ಬೆಂಗಳೂರು ಕಂಬಳ ವೀಕ್ಷಿಸಲು ಕರಾವಳಿಗರು ಮುಂದಾಗುತ್ತಿದ್ದಾರೆ. ಕರಾವಳಿಯಲ್ಲಿ ಲಾರಿಗಳ ಕೊರತೆ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣವೇ ಕೋಣಗಳನ್ನು ಬೆಂಗಳೂರಿಗೆ ಕರೆತರಲು ಬುಕ್ ಮಾಡಿರುವುದು ವರದಿಯಾಗಿದೆ. ಜತೆಗೆ ಅನೇಕರು ಮಹಿಳಾ ಗ್ರೂಪ್ನ ಸದಸ್ಯರು ದೂರವಾಣಿಯಲ್ಲಿ ಸಂಪರ್ಕಿಸಿ ಹೊಟೇಲ್ ಗಳು ಬುಕ್ ಮಾಡಲು ಮನವಿ ಮಾಡುತ್ತಿದ್ದಾರೆ. ಕರಾವಳಿ ಸಂಸ್ಕೃತಿ ಬೆಂಗಳೂ ರಿಗೆ ಪರಿಚಯಿಸಲು ಮುಂದಾಗಿ ರುವುದೇ ಒಂದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.