![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 22, 2024, 7:25 AM IST
ನ್ಯೂಯಾರ್ಕ್/ಹೊಸದಿಲ್ಲಿ: ಸೌರ ವಿದ್ಯುತ್ಖರೀದಿ ಒಪ್ಪಂದದ ಸಲುವಾಗಿ ಆಂಧ್ರದ ಮಾಜಿ ಸಿಎಂ ಜಗನ್ಮೋಹನ ರೆಡ್ಡಿ, ವಿವಿಧ ರಾಜ್ಯಗಳ ಅಧಿಕಾರಿಗಳಿಗೆ 2,100 ಕೋ. ರೂ. ಲಂಚ ಪಾವತಿಸಿದ ಆರೋಪದಲ್ಲಿ ಉದ್ಯಮಿ ಗೌತಮ್ ಅದಾನಿ ಮತ್ತಿತರರ ವಿರುದ್ಧ ಅಮೆರಿಕದ ನ್ಯಾಯಾಲಯ ದೋಷಾರೋಪ ನಿಗದಿಪಡಿಸಿದೆ.ಲಂಚ ಮಾತ್ರವಲ್ಲದೆ ಷೇರು ವಂಚನೆಯ ಆರೋಪದ ಮೇರೆಗೆ ನ್ಯಾಯಾಲಯವು ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ಬಂಧನ ವಾರಂಟ್ ಕೂಡ ಜಾರಿಗೊಳಿಸಿದೆ.
ಈ ವಾರಂಟನ್ನು ಅಮೆರಿಕದ ಪ್ರಾಸಿಕ್ಯೂಟರ್ಗಳು ಭಾರತದ ಕಾನೂನು ಜಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಎಲ್ಲ ಆರೋಪಗಳನ್ನೂ ಅದಾನಿ ಗ್ರೂಪ್ ನಿರಾಕರಿಸಿದ್ದು, ಇವೆಲ್ಲವೂ ಆಧಾರರಹಿತ ಆರೋಪಗಳಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ. 2 ವರ್ಷಗಳ ಹಿಂದೆ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಕೂಡ ಅದಾನಿ ವಿರುದ್ಧ ಅವ್ಯವಹಾರದ ಆರೋಪ ಮಾಡಿತ್ತು.
ಏನಿದು ಪ್ರಕರಣ?
ಅದಾನಿ ಗ್ರೀನ್ ಎನರ್ಜಿ ಕಂಪೆನಿಯು ಭಾರತದ ಅತಿದೊಡ್ಡ ಸೌರ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಲು ಬಯಸಿತ್ತು. ಈ ಮೂಲಕ 20 ವರ್ಷಗಳ ಅವಧಿಯಲ್ಲಿ 16,900 ಕೋ. ರೂ. ಲಾಭ ಪಡೆಯುವ ಉದ್ದೇಶಹೊಂದಿತ್ತು. ಅದರಂತೆ ಅದಾನಿ ಗ್ರೀನ್ ಎನರ್ಜಿ ಹಾಗೂ ಅಝ್ರೂರ್ ಪವರ್ ಕಂಪೆನಿಗಳು ಒಟ್ಟು 12 ಗಿ.ವ್ಯಾ. ಸೌರ ಶಕ್ತಿಯನ್ನು ಸರಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಇಸಿಐ)ಗೆ ಮಾರಾಟ ಮಾಡುವ ಒಪ್ಪಂದಕ್ಕೆ ಬಂದಿ
ದ್ದವು. ಆದರೆ ಈ ಸೌರ ಶಕ್ತಿಯನ್ನು ಖರೀದಿಸಲು ಯಾವುದೇ ರಾಜ್ಯ ವಿದ್ಯುತ್ ವಿತರಣ ಕಂಪೆನಿಗಳು ಮುಂದೆಬಾರದ ಕಾರಣ ಎಸ್ಇಸಿಐ ಈ ಒಪ್ಪಂದವನ್ನು ಕೈಬಿಟ್ಟಿತ್ತು. ಇದರಿಂದ ಚಿಂತೆಗೀಡಾದ ಈ 2 ಕಂಪೆನಿಗಳು ಎಸ್ಇಸಿಐನಿಂದ ರಾಜ್ಯ ವಿದ್ಯುತ್ ವಿತರಣ ಕಂಪೆನಿಗಳು ವಿದ್ಯುತ್ ಖರೀದಿಸುವಂತೆ ಮಾಡಬೇಕಾದರೆ ಸರಕಾರಿ ಅಧಿಕಾರಿಗಳಿಗೆ ಲಂಚ ಕೊಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದವು. ಅದರಂತೆ 2020ರಿಂದ 2024ರ ಮಧ್ಯೆ ಭಾರತದ ಅಧಿಕಾರಿಗಳಿಗೆ 2,100 ಕೋಟಿ ರೂ. ಲಂಚ ಪಾವತಿಸಲಾಗಿದೆ ಎಂಬ ಆರೋಪ ಅದಾನಿ ಗ್ರೀನ್ ಎನರ್ಜಿ ಮತ್ತು ಅಝೂÂರ್ ಪವರ್ ಮೇಲಿದೆ. ಇದಲ್ಲದೆ ಅದಾನಿ ಸಂಸ್ಥೆಯು ಸುಳ್ಳು ಹೇಳಿ ಅಮೆರಿಕದ ಹೂಡಿಕೆದಾರರಿಗೆ 25,300 ಕೋಟಿ ರೂ. (3 ಶತಕೋಟಿ ಡಾಲರ್) ಸಂಗ್ರಹಿಸಿದೆ ಎಂಬ ಆರೋಪವನ್ನೂ ಹೊರಿಸಲಾಗಿದೆ.
ವಿಶೇಷವೆಂದರೆ ಅಮೆರಿಕದ ಷೇರು ಮತ್ತು ವಿನಿಮಯ ಆಯೋಗ (ಭಾರತದ ಸೆಬಿ ಮಾದರಿ ಸಂಸ್ಥೆ)ವು ಅದಾನಿ ವಿರುದ್ಧ ನೀಡಿದ 41 ಪುಟಗಳ ದೂರಿನಲ್ಲಿ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ರೆಡ್ಡಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖೀಸಿದೆ. “2021ರಲ್ಲಿ ಅದಾನಿ ಅವರು ಆಂಧ್ರದ ಅಂದಿನ ಸಿಎಂ ಅನ್ನು ಭೇಟಿಯಾದ ಬಳಿಕ 1,750 ಕೋಟಿ ರೂ. ಲಂಚ ಪಾವತಿಸಲಾಯಿತು’ ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಅದಾನಿ ಅವರು ಆಂಧ್ರ ಸಿಎಂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಎಸ್ಇಸಿಐ ಜತೆ ವಿದ್ಯುತ್ ಪೂರೈಕೆ ಒಪ್ಪಂದ ಮಾಡಿಕೊಳ್ಳುವಂತೆ ಕೇಳಿಕೊಂಡರು. ಅದಕ್ಕೆ ಪ್ರತಿಯಾಗಿ 1,750 ಕೋಟಿ ರೂ. ಲಂಚ ನೀಡುವ ಒಪ್ಪಂದಕ್ಕೆ ಬಂದರು. ಅದರಂತೆ ಸರಕಾರವು ಎಸ್ಇಸಿಐನಿಂದ 7,000 ಮೆ.ವ್ಯಾ. ವಿದ್ಯುತ್ ಖರೀದಿಗೆ ಮುಂದಾಯಿತು ಎಂದು ಆರೋಪಿಸಲಾಗಿದೆ. ಜತೆಗೆ ಒಡಿಶಾ ಸರಕಾರಕ್ಕೆ ನೀಡಿದ ಲಂಚಕ್ಕಿಂತ ಹೆಚ್ಚಿನ ಮೊತ್ತವನ್ನು ಆಂಧ್ರಕ್ಕೆ ನೀಡಲಾಗಿತ್ತು ಎಂದೂ ಉಲ್ಲೇಖೀಸಲಾಗಿದೆ.
ಅಮೆರಿಕದ ಹೂಡಿಕೆದಾರರಿಗೆ ವಂಚನೆ
ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿಯ ಮಾಜಿ ಸಿಇಒ ವಿನೀತ್ ಜೈನ್ ತಮ್ಮ ಭ್ರಷ್ಟಾಚಾರದ ವಿಚಾರವನ್ನು ಸಾಲಗಾರರು ಹಾಗೂ ಹೂಡಿಕೆದಾರರಿಂದ ಮುಚ್ಚಿಟ್ಟು, 25300 ಕೋಟಿ ರೂ. (ಸಾಲ ಮತ್ತು ಬಾಂಡ್ಗಳ ರೂಪದಲ್ಲಿ) ಸಂಗ್ರಹಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಅದಾನಿ ಗ್ರೀನ್ ಸಂಸ್ಥೆ ಲಂಚ ವಿರೋಧಿ ನಿಯಮಗಳನ್ನು ಪಾಲಿಸುತ್ತ ಬಂದಿದ್ದು, ಯಾರಿಗೂ ಲಂಚ ನೀಡುವುದಿಲ್ಲ ಎಂದು ಸುಳ್ಳು ಹೇಳಿ ಅಮೆರಿಕದ ಹೂಡಿಕೆದಾರರ ಮನವೊಲಿಸಿ ಕಂಪೆನಿಯ ಬಾಂಡ್ ಖರೀದಿಸುವಂತೆ ಮಾಡಿದ್ದರು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಈ ಮೂವರ ವಿರುದ್ಧ ಷೇರು ವಂಚನೆ ಹಾಗೂ ಅಮೆರಿಕದ ಕಾನೂನು ಉಲ್ಲಂಘನೆ ಆರೋಪ ಹೊರಿಸಲಾಗಿದೆ. ಇದೇ ವೇಳೆ ಕೆನಡಾದ ಪಿಂಚಣಿ ನಿಧಿ ಸಿಡಿಪಿಕ್ಯು (ಅದಾನಿ ಕಂಪೆನಿಯ ಷೇರು ಹೊಂದಿರುವ ಸಂಸ್ಥೆ)ನ 3 ಮಾಜಿ ಉದ್ಯೋಗಿಗಳ ವಿರುದ್ಧವೂ ದೋಷಾರೋಪ ನಿಗದಿಪಡಿಸಲಾಗಿದೆ. ಲಂಚಕ್ಕೆ ಸಂಬಂಧಿಸಿದ ಇಮೇಲ್ಗಳನ್ನು ಡಿಲೀಟ್ ಮಾಡಿದ, ಅಮೆರಿಕ ಸರಕಾರಕ್ಕೆ ಸುಳ್ಳು ಮಾಹಿತಿ ನೀಡುವ ಮೂಲಕ ಲಂಚದ ಕುರಿತ ತನಿಖೆಗೆ ಅಡ್ಡಿಪಡಿಸಿದ ಆರೋಪ ಇವರ ಮೇಲಿದೆ.
ಅಮೆರಿಕದಲ್ಲಿ ಪ್ರಕರಣ ಏಕೆ?
ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಚಟುವಟಿಕೆಗಳು ಭಾರತದಲ್ಲೇ ನಡೆದಿದ್ದರೂ ಲಂಚ ಹಾಗೂ ವಂಚನೆಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳು ನ್ಯೂಯಾರ್ಕ್ನಲ್ಲಿ ನಡೆದಿವೆ. ಅಲ್ಲದೆ ಅದಾನಿ ವಂಚಿಸಿರುವ ಹೂಡಿಕೆದಾರರು ಕೂಡ ಅಮೆರಿಕನ್ನರು. ಅಮೆರಿಕದ ಹೂಡಿಕೆದಾರರು ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಬಂಡವಾಳ ಪಡೆಯುವ ಸಲುವಾಗಿ ಅದಾನಿ ಕಂಪೆನಿಯು ಸುಳ್ಳು ಹಾಗೂ ಹಾದಿ ತಪ್ಪಿಸುವ ಭರವಸೆ ನೀಡಿದೆ ಎಂಬ ಆರೋಪವಿದೆ. ಅಮೆರಿಕದ ಕಾನೂನಿನ ಪ್ರಕಾರ ವಿದೇಶದಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಅದಕ್ಕೆ ಅಮೆರಿಕದ ಹೂಡಿಕೆದಾರರು ಅಥವಾ ಮಾರುಕಟ್ಟೆಯೊಂದಿಗೆ ಸಂಬಂಧವಿದ್ದರೆ ಆ ಬಗ್ಗೆ ತನಿಖೆ ನಡೆಸುವ ಅಧಿಕಾರ ಅಲ್ಲಿನ ಪೊಲೀಸರಿಗಿದೆ.
ಬಾಂಡ್ ಮಾರಾಟ ರದ್ದುಗೊಳಿಸಿದ ಅದಾನಿ ಗ್ರೀನ್
ಅಮೆರಿಕ ಕೋರ್ಟ್ನಲ್ಲಿ ದೋಷಾರೋಪ ನಿಗದಿ ಬೆನ್ನಲ್ಲೇ ಅದಾನಿ ಸಮೂಹದ ಅದಾನಿ ಗ್ರೀನ್ ಎನರ್ಜಿ ಸಂಸ್ಥೆ ಗುರುವಾರ ತನ್ನ 5,069 ಕೋಟಿ ರೂ. ಮೊತ್ತದ ಬಾಂಡ್ ಮಾರಾಟ ರದ್ದುಗೊಳಿಸಿದೆ. ದೋಷಾರೋಪ ನಿಗದಿಗೆ ಒಂದು ದಿನ ಮುನ್ನ ಗ್ರೀನ್ ಬಾಂಡ್ ಮಾರಾಟ ಮಾಡುವ ಬಗ್ಗೆ ಕಂಪೆನಿ ಘೋಷಿಸಿತ್ತು. ಇದಕ್ಕೆ 3 ಪಟ್ಟು ಅಧಿಕ ಬೇಡಿಕೆ ಬಂದಿತ್ತು. ಆದರೆ ಆರೋಪ ಕೇಳಿಬಂದ ಕೂಡಲೇ ಬಾಂಡ್ ಮಾರಾಟದ ನಿರ್ಧಾರ ವಾಪಸ್ ಪಡೆದಿದೆ.
ಯಾರ್ಯಾರ ವಿರುದ್ಧ ಆರೋಪ?
ಗೌತಮ್ ಅದಾನಿ, ಸೋದರಳಿಯ ಸಾಗರ್ ಅದಾನಿ, ಅದಾನಿ ಗ್ರೀನ್ ಎನರ್ಜಿ ಮಾಜಿ ಸಿಇಒ ವಿನೀತ್ ಜೈನ್, ದಿಲ್ಲಿಯ ಅಝೂÂರ್ ಪವರ್ ಗ್ಲೋಬಲ್ನ ಮಾಜಿ ಸಿಇಒ ರಂಜಿತ್ ಗುಪ್ತಾ, ಅದೇ ಕಂಪೆನಿಯ ಮುಖ್ಯ ಕಾರ್ಯತಂತ್ರ ಅಧಿಕಾರಿ ರೂಪೇಶ್ ಅಗರ್ವಾಲ್, ಕೆನಡಾದ ಪಿಂಚಣಿ ನಿಧಿ ಸಿಡಿಪಿಕ್ಯು (ಅದಾನಿ ಕಂಪೆನಿಯ ಷೇರು ಹೊಂದಿರುವ ಸಂಸ್ಥೆ)ನ 3 ಮಾಜಿ ಉದ್ಯೋಗಿಗಳಾದ ಸಿರಿಲ್ ಕ್ಯಾಬನೀಸ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.