NEET Scam; 40 ಲಕ್ಷಕ್ಕೆ ನೀಟ್ ಪ್ರಶ್ನೆಪತ್ರಿಕೆ ಬಿಕರಿ: ಆರೋಪಿಗಳು
ಫಿಸಿಕ್ಸ್ನಲ್ಲಿ 85; ಕೆಮಿಸ್ಟ್ರಿಯಲ್ಲಿ 5 ಬಂಧಿತ ವಿದ್ಯಾರ್ಥಿಗೆ ಸಿಕ್ಕಿದ್ದಿಷ್ಟೇ!
Team Udayavani, Jun 21, 2024, 6:48 AM IST
ಪಟ್ನಾ: ನೀಟ್-ಯುಜಿ ಅಕ್ರಮ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ನಿಜ ಎಂದು ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಪರೀಕ್ಷೆಯ ಹಿಂದಿನ ದಿನ ರಾತ್ರಿಯೇ ನಮಗೆ ಪ್ರಶ್ನೆಪತ್ರಿಕೆಯನ್ನು ನೀಡಿ, ಉತ್ತರಗಳನ್ನು ನೆನಪಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು. ಮಾರನೇ ದಿನ ಪರೀಕ್ಷೆ ವೇಳೆ ಅದೇ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಬಂಧಿತ ನೀಟ್ ಆಕಾಂಕ್ಷಿ ಹೇಳಿದ್ದಾರೆ.
ನೀಟ್ ಅವ್ಯವಹಾರ ಸಂಬಂಧ ಬಿಹಾರದಲ್ಲಿ ನೀಟ್ ಆಕಾಂಕ್ಷಿ ಅನುರಾಗ್ ಯಾದವ್, ಆತನ ಸಂಬಂಧಿ, ದಾನಾಪುರ ಮುನ್ಸಿಪಲ್ ಕೌನ್ಸಿಲ್ನ ಕಿರಿಯ ಎಂಜಿನಿಯರ್ ಸಿಕಂದರ್ ಹಾಗೂ ನಿತೀಶ್ ಕುಮಾರ್, ಅಮಿತ್ ಆನಂದ್ ಎಂಬ ನಾಲ್ವರನ್ನು ಬಂಧಿಸಲಾಗಿತ್ತು.
ಈ ಪೈಕಿ ಅನುರಾಗ್ ಯಾದವ್ ರಾಜಸ್ಥಾನದ ಕೋಟಾದಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. “ಪ್ರಶ್ನೆಪತ್ರಿಕೆ ಸೋರಿಕೆಗೆ ಪ್ಲ್ರಾನ್ ಮಾಡಿದ್ದೇವೆ. ಎಲ್ಲ ವ್ಯವಸ್ಥೆ ಆಗಿದೆ. ಕೋಚಿಂಗ್ ಎಲ್ಲ ನಿಲ್ಲಿಸಿ, ಕೂಡಲೇ ವಾಪಸ್ ಬಾ ಎಂದು ನನ್ನ ಅಂಕಲ್ ಸಿಕಂದರ್ ನನ್ನನ್ನು ಕರೆಸಿಕೊಂಡಿದ್ದರು. ಪರೀಕ್ಷೆ ಹಿಂದಿನ ದಿನ ರಾತ್ರಿ ನನಗೆ ಪ್ರಶ್ನೆಪತ್ರಿಕೆ ಕೊಟ್ಟರು. ಉತ್ತರಗಳನ್ನು ಬಾಯಿಪಾಠ ಮಾಡಿಕೊಂಡು, ನೆನಪಲ್ಲಿಟ್ಟುಕೊಳ್ಳುವಂತೆ ಸೂಚಿಸಿ ದರು. ನಾನು ಹಾಗೆಯೇ ಮಾಡಿದೆ. ಮಾರನೇ ದಿನ ಪರೀಕ್ಷೆಯಲ್ಲಿ ಅದೇ ಪ್ರಶ್ನೆಗಳು ಬಂದಿದ್ದವು. ಅದಾದ ಬಳಿಕ ನನ್ನನ್ನು ಬಂಧಿಸಲಾಯಿತು. ನಾನೀಗ ತಪ್ಪೊಪ್ಪಿಕೊಂಡಿದ್ದೇನೆ’ ಎಂದು ಅನುರಾಗ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಕಂದರ್ ಹೇಳಿದ್ದೇನು? ದಲ್ಲಾಳಿಗಳಾದ ನಿತೀಶ್ ಮತ್ತು ಅಮಿತ್ ಆನಂದ್ ನನ್ನ ಬಳಿ ಬಂದು, ನಾವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನೂ ಸೋರಿಕೆ ಮಾಡಬಲ್ಲೆವು. ನೀಟ್ ಪಾಸ್ ಮಾಡಿಸಬೇಕೆಂದರೆ ಪ್ರತೀ ಅಭ್ಯರ್ಥಿ 30-32 ಲಕ್ಷ ರೂ. ನೀಡಬೇಕು ಎಂದು ಹೇಳಿದರು. ಅದಕ್ಕೆ ಒಪ್ಪಿದ ನಾನು, ನನಗೆ ಪರಿಚಿತರಿರುವ ನಾಲ್ವರು ನೀಟ್ ಆಕಾಂಕ್ಷಿಗಳನ್ನು ಸಂಪರ್ಕಿಸಿದೆ. ದುಡ್ಡಿನಾಸೆಗಾಗಿ ಅವರಿಂದ ತಲಾ 40 ಲಕ್ಷ ರೂ. ಪಡೆದುಕೊಂಡೆ. ಪರೀಕ್ಷೆಯ ಮಾರನೇ ದಿನ ನನ್ನ ವಾಹನ ತಪಾಸಣೆ ನಡೆಸಿದಾಗ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಸಿಕ್ಕಿದವು ಎಂದು ಆರೋಪಿ ಸಿಕಂದರ್ ಹೇಳಿದ್ದಾರೆ.
ಫಿಸಿಕ್ಸ್ನಲ್ಲಿ 85; ಕೆಮಿಸ್ಟ್ರಿಯಲ್ಲಿ 5 ಬಂಧಿತ ವಿದ್ಯಾರ್ಥಿಗೆ ಸಿಕ್ಕಿದ್ದಿಷ್ಟೇ!
ನೀಟ್ ಅಕ್ರಮದಲ್ಲಿ ಬಂಧನಕ್ಕೊಳಗಾಗಿದ್ದ ಅಭ್ಯರ್ಥಿಯ ಅಂಕಪಟ್ಟಿ ಲಭ್ಯವಾಗಿದ್ದು, ಇದು ಪ್ರಶ್ನೆಪತ್ರಿಕೆ ಸೋರಿಕೆಗೆ ಬಲವಾದ ಸಾಕ್ಷಿಯಾಗಿದೆ. ಬಂಧನಕ್ಕೊಳಗಾದ ನಾಲ್ವರಲ್ಲಿ ಒಬ್ಬನಾದ ಅನುರಾಗ್ ಯಾದವ್ 720ಕ್ಕೆ 185 ಅಂಕಗಳನ್ನು ಪಡೆದಿದ್ದು, ಶೇಕಡಾವಾರು 54.84 ರಷ್ಟು ಇದೆ. ವಿಷಯವಾರು ಅಂಕಗಳಲ್ಲಿ ಬಹಳ ವ್ಯತ್ಯಾಸವಿದೆ. ಭೌತಶಾಸ್ತ್ರದಲ್ಲಿ ಶೇ.85.8 ಅಂಕ ಪಡೆದಿರುವ ಅನುರಾಗ್ ಜೀವಶಾಸ್ತ್ರದಲ್ಲಿ ಶೇ.51 ರಷ್ಟು ಅಂಕ ಪಡೆದಿದ್ದಾನೆ. ಆದರೆ ರಸಾಯನಶಾಸ್ತ್ರದಲ್ಲಿ ಅತೀ ಕಡಿಮೆ ಶೇ.05ರಷ್ಟು ಅಂಕ ಗಳಿಸಿದ್ದಾನೆ. ಅಖೀಲ ಭಾರತ ಮಟ್ಟದಲ್ಲಿ ಆತ ರ್ಯಾಂಕ್ 10,51,525 ಆಗಿತ್ತು. ಒಬಿಸಿ ವಿಭಾಗದಲ್ಲಿ ಆತ 4,67,824 ಆಗಿತ್ತು.
ಪ್ರಶ್ನೆಪತ್ರಿಕೆ ಮೊದಲೇ ಸಿಕ್ಕರೂ ಕ್ವಾಲಿಫೈ ಆಗಲಿಲ್ಲ!
ಪಟ್ನಾದ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಲಾಭ ಪಡೆದ 3 ಅಭ್ಯರ್ಥಿಗಳು ನೀಟ್ನಲ್ಲಿ ಕ್ವಾಲಿಫೈ ಆಗುವ ಅಂಕ ಪಡೆಯುವಲ್ಲಿ ವಿಫಲರಾಗಿರುವ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಇವರಲ್ಲಿ 71 ಸಾವಿರನೇ ರ್ಯಾಂಕ್ ಪಡೆದಾತನೇ ಅತ್ಯಧಿಕ ರ್ಯಾಂಕ್ ಪಡೆದ ಅಭ್ಯರ್ಥಿ(720ರ ಪೈಕಿ 609 ಅಂಕ) ಎನ್ನಲಾಗಿದೆ. ಇನ್ನು, 720ರ ಪೈಕಿ 500, 400, 300, 200 ಮತ್ತು 185 ಅಂಕ ಪಡೆದ 9 ಅಭ್ಯರ್ಥಿಗಳು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಪ್ರವೇಶ ಪಡೆದಿದ್ದಾರೆ.
ಆರ್ಜೆಡಿ ನಾಯಕ ತೇಜಸ್ವಿ ಆಪ್ತ ಭಾಗಿ ಎಂದ ಡಿಸಿಎಂ
ನೀಟ್ ಅಕ್ರಮ ಆರೋಪದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೆಸರು ಕೂಡ
ಈಗ ಕೇಳಿ ಬರಲಾರಂಭಿಸಿದೆ. ಈ ಬಗ್ಗೆ ಬಿಹಾರ ಡಿಸಿಎಂ ವಿಜಯ ಸಿನ್ಹಾ ಗಂಭೀರ ಆರೋಪ ಮಾಡಿ ದ್ದಾರೆ. ಪ್ರಕರಣದಲ್ಲಿ ಬಂಧ ನದಲ್ಲಿರುವ ವಿದ್ಯಾರ್ಥಿ ಅನುರಾಗ್ ಯಾದವ್ ಬಂಧು ಸಿಕಂದರ್ ಯಾದ ವೇಂದು ಎಂಬಾತನಿಗೆ ಪರೀಕ್ಷೆಗೆ ಮುನ್ನಾದಿನ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಆಪ್ತ ಸಹಾಯಕ ಪ್ರೀತಮ್ ಕುಮಾರ್, ಗೆಸ್ಟ್ ಹೌಸ್ ಒಂದರಲ್ಲಿ ರೂಂ ಬುಕ್ ಮಾಡಿ ಪ್ರಶ್ನೆಪತ್ರಿಕೆ ನೀಡಿ ಮನನ ಮಾಡಲು ಸಹಾಯ ಮಾಡಿದ್ದರು ಎಂದು ಅವರು ಹೇಳಿದ್ದಾರೆ.
ಎನ್ಟಿಎಗೆ ಸುಪ್ರೀಂ ಕೋರ್ಟ್ ನೋಟಿಸ್
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ, ಮರುಪರೀಕ್ಷೆಗೆ ಆದೇಶ ಸೇರಿ ವಿವಿಧ ಆಗ್ರಹ ಗಳೊಂದಿಗೆ ಸಲ್ಲಿಕೆ ಯಾಗಿ ರುವ ಅರ್ಜಿಗಳ ಕುರಿತು ಪ್ರತಿಕ್ರಿಯೆ ಕೋರಿ ಗುರು ವಾರ ಕೇಂದ್ರ ಸರಕಾರ, ಎನ್ಟಿಎ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ದೇಶದ ವಿವಿಧ ಹೈಕೋರ್ಟ್ಗಳಲ್ಲಿ ನೀಟ್-ಯುಜಿ ಪ್ರಕರಣ ಸಂಬಂಧ ಆರಂಭವಾಗಿರುವ ವಿಚಾರಣೆ ಗಳಿಗೂ ನ್ಯಾಯಾಲಯ ತಡೆಯಾಜ್ಞೆ ತಂದಿದೆ. ಕೌನ್ಸಿಲಿಂಗ್ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ತರುವುದಿಲ್ಲ ಎಂದ ಪೀಠ, ಜು.8ಕ್ಕೆ ವಿಚಾರಣೆ ಮುಂದೂಡಿದೆ.
ಪ್ರಧಾನ್ ನಿವಾಸ ಎದುರು ಪ್ರತಿಭಟನೆ
ನೀಟ್, ಯುಜಿಸಿ ನೆಟ್ ಪರೀಕ್ಷೆಗಳಲ್ಲಿ ಅಕ್ರಮ ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿವಾಸದ ಎದುರು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ 30 ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಪ್ರತಿಭಟನಕಾರರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಯನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಕ್ರಮ ವಿಚಾರ ರಾಜಕೀಯವಾಗಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರಕಾರದ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್, ಟಿಎಂಸಿ ನಾಯಕ ಸಾಕೇತ್ ಗೋಖಲೆ ಸೇರಿದಂತೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು
T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ
Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು
Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.