![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 25, 2019, 2:50 PM IST
ಮುಂಬಯಿ: ಸಾಧನೆ, ಶೋಧನೆಯ ಜೊತೆಗೆ ಯೋಗ ಬಲದ ಪ್ರತಿಷ್ಠೆಯ ಮೂಲಕ ಮನುಷ್ಯ ಮುಂದುವರಿದರೆ ಆತನೋರ್ವ ಶ್ರೇಷ್ಠ ವ್ಯಕ್ತಿಯಾಗಲು ಸಾಧ್ಯ. ಪ್ರಶಸ್ತಿ, ಸಮ್ಮಾನ ಜೀವಮಾನದ ಸಾಧನೆಯಲ್ಲಿ ಮಹತ್ವವಾಗಿದೆ. ಪ್ರಶಸ್ತಿ ಪಡೆಯಲು ಯೋಗ ಬಲ ಬೇಕು. ಜೊತೆಗೆ ಅಭಿಮಾನಿಗಳ ಪ್ರೀತ್ಯಾಧರ ಬೇಕು. ಆ ಪ್ರೀತಿ ವಿಶ್ವಾಸದ ಅಭಿಮಾನ ನಿಮ್ಮಿಂದ ದೊರೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನನಾದೆ ಎಂದು ಮೀರಾ-ಡಹಾಣೂ ಬಂಟ್ಸ್ನ ಗೌರವಾಧ್ಯಕ್ಷ ಸಮಾಜ ಸೇವಕ ವಿರಾರ್ ಶಂಕರ್ ಶೆಟ್ಟಿ ಅವರು ನುಡಿದರು.
ಜ. 19 ರಂದು ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯ ವತಿಯಿಂದ ಅಸ್ಮಿತಾ ಕ್ಲಬ್ ಲಾನ್ನಲ್ಲಿ ನಡೆದ 19 ನೇ ವಾರ್ಷಿಕೋತ್ಸವ ಹಾಗೂ ವಿದ್ಯಾನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿದ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದ ಮೂಲಕ ಸಂಘಟನೆ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈಯುವ ಮೂಲಕ ತಮ್ಮ ಶ್ರಮಫಲದಿಂದ ಎಲ್ಲಾ ಕ್ಷೇತ್ರದಲ್ಲೂ ಗಮನೀಯವಾಗಿ ಬಿಲ್ಲವ ಸಮಾಜ ಮುಂದುವರಿದಿದೆ. ಜಯ ಸುವರ್ಣರ ದೂರದೃಷ್ಟಿತ್ವದ ಚಿಂತನೆ, ಸಮಾಜದ ಉನ್ನತಿಯ ಜೊತೆಗೆ ಶೈಕ್ಷಣಿಕ ಮಹತ್ತರ ಸಾಧನೆಯ ಮೂಲಕ ಮಹಾನಗರದಲ್ಲಿ ಭಾರತ್ ಬ್ಯಾಂಕ್ ಹಣಕಾಸು ಸಂಸ್ಥೆಯನ್ನು ಸುದೃಢಗೊಳಿಸುವ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಮಹಾನ್ ವ್ಯಕ್ತಿಯಾಗಿ ಮೆರೆದಿದ್ದಾರೆ. ಜತೆಗೆ 22 ಸ್ಥಳೀಯ ಸಮಿತಿಗಳನ್ನು ರಚಿಸಿ, ಆ ಮೂಲಕ ಸ್ಥಳೀಯರಿಗೆ ನಾಯಕತ್ವ ಅನಾವರಣಗೊಳಿಸುವ ಅವಕಾಶ ನೀಡಿದ್ದಾರೆ. ಮಹಾಪುರುಷರಾದ ಕೋಟಿ-ಚೆನ್ನಯರ ದೈವಶಕ್ತಿಯನ್ನು ನಂಬಿಕೊಂಡಿರುವ ಬಿಲ್ಲವ ಸಮಾಜ ನನ್ನ ಅಚ್ಚುಮೆಚ್ಚಿನ ಸಮಾಜ. ತಾಯಿಯಿಂದ ದೊರೆತ ಪ್ರೇರಣೆ ನನಗೂ ಇಂದು ಸಮಾಜ ಸೇವೆ ಮಾಡುವ ಭಾಗ್ಯ ದೊರೆತಿದೆ ಎಂದರು.
ಸಮ್ಮಾನ ಸ್ವೀಕರಿಸಿದ ಬಿಲ್ಲವರ ಸಂಘ ಹಳೆಯಂಗಡಿಯ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಚಂದ್ರಶೇಖರ ನಾನಿಲ್ ಮಾತನಾಡಿ, ಪ್ರಶಸ್ತಿ ದೊರೆಯುವುದು ಅರ್ಹತೆಗಾಗಿ ಎಂದು ಇಂದು ಅರಿವಾಗಿದೆ. ನಾವು ಮಾಡುವ ಸಮಾಜ ಸೇವೆ ನಿಸ್ವಾರ್ಥವಾಗಿರಬೇಕು. ಸ್ವಾರ್ಥ ಇದ್ದರೆ ಅದಕ್ಕೆ ಫಲವಿಲ್ಲ. ಶ್ರೀ ನಾರಾಯಣ ಗುರುಗಳ ತಣ್ತೀ ಸಂದೇಶವನ್ನು ಪಾಲಿಸುವ ನಾವು ಮಾತಾಪಿತರ ಹಾಗೂ ಕುಟುಂಬಸ್ಥರನ್ನು ಪ್ರೀತಿಸುವ ಗುಣ ನಮ್ಮಲ್ಲಿ ಬೆಳೆಯಬೇಕು. ಸಮಾಜ ಸೇವೆ ಮಾಡುವುದು ಒಂದು ರೀತಿಯ ಸುಯೋಗವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಲ್ಲವ ಸಮಾಜದ ಕ್ರೀಡಾಪಟು ಕಾವ್ಯಾ ಜೆ. ಕರ್ಕೇರ ಅವರನ್ನು ಪ್ರತಿಭಾಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜಾಫರ್ ಹುಸೇನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಉದ್ಯಮಿ ನಾರಾಯಣ ಪೂಜಾರಿ, ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುರೋಹಿತ ಸಾಣೂರು ಸಾಂತಿಂಜ ಜನಾರ್ದನ ಭಟ್, ಉದ್ಯಮಿ ಶೇಖರ ಕೆ. ಪೂಜಾರಿ, ಮೀರಾರೋಡ್ ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಭೋಜ ಬಿ. ಸಾಲ್ಯಾನ್, ಕಾರ್ಯಾಧ್ಯಕ್ಷ ವಿಶ್ವನಾಥ ಎಂ. ಸಾಲ್ಯಾನ್, ಗೌರವ ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್, ಉಪ ಕಾರ್ಯಾಧ್ಯಕ್ಷರುಗಳಾದ ಸುಭಾಶ್ಚಂದ್ರ ಎಂ. ಕರ್ಕೇರ ಮತ್ತು ಸುಂದರ ಎ. ಪೂಜಾರಿ. ಗೌರವ ಕೋಶಾಧಿಕಾರಿ ಎಚ್. ಎಂ. ಪೂಜಾರಿ, ಜತೆ ಕೋಶಾಧಿಕಾರಿ ಲೀಲಾ ಡಿ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ ಎನ್. ಅಮೀನ್ ಹಾಗೂ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು. ಸಮಾಜದ ಹಲವಾರು ಗಣ್ಯರು, ಸ್ಥಳೀಯ ಗಣ್ಯರು, ಅಸೋಸಿಯೇಶನ್ನ ಉಪಸಮಿತಿ ಮತ್ತು ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.