![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 16, 2021, 1:15 PM IST
ಸೊಲ್ಲಾಪುರ: ಕೋವಿಡ್ ಹಿನ್ನಲೆಯಲ್ಲಿ ಪೋಷಕರ ಸಾವಿನಿಂದ ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬಿರುತ್ತಿದ್ದು, ಅಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಆಶಯದೊಂದಿಗೆ ಅಕ್ಕಲ್ಕೋಟೆಯಲ್ಲಿ ಪ್ರಾರಂಭಿಸಿದ ಬಸವ ವಿದ್ಯಾ ದಾಸೋಹ-21 ಎಂಬ ವೆಬ್ಸೈಟ್ ಅನ್ನು ಪೊಲೀಸ್ ನಿರೀಕ್ಷಕ ಗೋಪಾಲ್ ಪವಾರ್ ಲೋಕಾರ್ಪಣೆಗೊಳಿಸಿದರು.
ಅಕ್ಕಲ್ಕೋಟೆಯ ವಿರಕ್ತ ಮಠದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಪೂಜ್ಯ ಬಸವಲಿಂಗ ಶ್ರೀಗಳ ಸಾನಿಧ್ಯದಲ್ಲಿ ಬಸವ ಪ್ರತಿಮೆಗೆ ಪೂಜೆ ಸಲ್ಲಿಸಿ ಬಸವ ವಿದ್ಯಾ ದಾಸೋಹ -21 ಎಂಬ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಸ್ವಾಮಿನಾಥ ಹರವಾಳಕರ್ ಅವರು, ಸದ್ಯ ಸೊಲ್ಲಾಪುರ ಜಿಲ್ಲೆಗೆ ಸೀಮಿತವಾಗಿರುವ ಈ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜಾರಿಗೆ ತರಲಾಗುವುದು. ಸೊಲ್ಲಾಪುರ ಜಿಲ್ಲೆಯಲ್ಲಿ ಕೋವಿಡ್ ಗೆ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಲಾಗುವುದು ಎಂದರು.
ಕೊರೊನಾದಿಂದ ಅನೇಕ ಕುಟುಂಬಗಳು ಬಾಧಿತವಾಗಿವೆ. ಹೆತ್ತವರ ಸಾವಿನಿಂದ ಮಕ್ಕಳ ಮೇಲೆ ಒತ್ತಡವನ್ನುಂಟು ಮಾಡಿದ್ದು, ಅಂತಹ ವಿದ್ಯಾರ್ಥಿಗಳು ಶಿಕ್ಷಣವನ್ನು ನಿಲ್ಲಿಸಬಾರದು, ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳು ಜೀವನದಲ್ಲಿ ತಮ್ಮ ಕಾಲ ಮೇಲೆ ನಿಲ್ಲಬೇಕು, ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣದವರೆಗೆ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲಾಗುವುದು ಮತ್ತು ಅವರಿಗೆ ಸರಿಯಾದ ಮಾರ್ಗದರ್ಶನ ನೀಡಲಾಗುವುದು ಎಂದು ಸ್ವಾಮಿನಾಥ ಹರವಾಳಕರ್ ಹೇಳಿದರು.
ಅಲ್ಲದೆ ಸಂಪೂರ್ಣ ಶಿಕ್ಷಣ ಮುಗಿಯುವವರೆಗೆ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ಶೈಕ್ಷಣಿಕ ಸಾಮಗ್ರಿಗಳು ಮತ್ತು ಶಿಕ್ಷಣಕ್ಕಾಗಿ ಇತರ ವೆಚ್ಚಗಳನ್ನು ನೀಡಲಾಗುತ್ತದೆ. ಕಾಲಕಾಲಕ್ಕೆ ಸರಿಯಾದ ಮಾರ್ಗ ದರ್ಶನ ನೀಡಲಾಗುವುದು ಎಂದು ವಿರಕ್ತ ಮಠದ ಪೂಜ್ಯ ಬಸವಲಿಂಗ ಮಹಸ್ವಾಮಿಜಿ ಹೇಳಿದರು.
ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳ ಅಥವಾ ಆರ್ಥಿಕ ತೊಂದರೆಗಳಲ್ಲಿರುವ ವಿದ್ಯಾರ್ಥಿಗಳ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಮೂವರು ಆಪ್ತ ಸಂಬಂಧಿಕರ ಹೆಸರುಗಳು, ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳನ್ನು ತಿಳಿಸುವಂತೆ ಚನ್ಮಲ್ಲಪ್ಪ ಶೆಟ್ಟಿ ಮನವಿ ಮಾಡಿದ್ದಾರೆ.
ಸಮಾಜದ ಅನೇಕ ಲೋಕೋಪಕಾರಿಗಳು, ಶಿಕ್ಷಣ ಸಂಸ್ಥೆಗಳು ಅಂತಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಒಪ್ಪಿಕೊಂಡಿವೆ. ಈ ಯೋಜನೆ ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ಜಾತಿಗಳಿಗೆ ಲಭ್ಯವಾಗಲಿದ್ದು, ಹಿಚ್ಚಿನ ಮಾಹಿತಿಗಾಗಿ ಚನ್ಮಲ್ಲಪ್ಪ ಶೆಟ್ಟಿ ಅವರನ್ನು ಸಂಪರ್ಕಿಸುವಂತೆ ಪ್ರೊ| ಸಂತೋಷ್ ಅಗರಖೇಡ್ ಮನವಿ ಮಾಡಿದ್ದಾರೆ.
ಪ್ರೊ| ಉಮಾಕಾಂತ ಚನಶೆಟ್ಟಿ, ರಾಜು ಚನಶೆಟ್ಟಿ, ಕಾಶಿನಾಥ್ ಭತಗುಣಕಿ, ಕಾಶಿನಾಥ್ ಗೋಳ್ಳೆ, ರಾಜಶೇಖರ್ ಹಿಪ್ಪರಗಿ, ಎಂಜಿನಿಯರ್ ಕಿರಣ್ ಪಾಟೀಲ, ಮಲ್ಲಮ್ಮಾ ಪಸಾರೆ, ಸುಚೇತಾ ಹಿರೇಮಠ, ಮನೀಶಾ ಮಾಳಶೆಟ್ಟಿ, ಡಾ| ಬಸವರಾಜ್ ಚಿನಕೇಕರ್, ಪ್ರೊ| ಸಂತೋಷ್ ಅಗರಖೇಡ್, ಹೇಮಂತ್ ಹಿರೆಮಠ, ಸಿದ್ಧಯ್ಯ ಮಠ, ಸೋಮನಾಥ್ ಮಾಳಶೆಟ್ಟಿ, ಶಿವಾನಂದ ಗೋಗಾಂವ, ರಾಮ ಸಮಾಣೆ ಇವರನ್ನು ಕಾರ್ಯಕಾರಿ ಸಮಿತಿಗೆ ನೇಮಿಸಲಾಗಿದೆ. ಈ ಸಂದರ್ಭ ರೇವಣಸಿದ್ಧ ದಿಕಸಂಗಿ, ವೀರೇಶ್ ಕೋಳ್ಳೆ, ಸಿಕಂದರ್ ಚೌಸ್, ಸಂಜಯ ಅಡವಿತೋಟೆ, ಧನರಾಜ್ ಶಿಂಧೆ, ರಾಜಶೇಖರ್ ಪವಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.