![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Oct 31, 2023, 6:17 PM IST
ಮುಂಬಯಿ: ಬಿಎಸ್ಕೆಬಿ ಅಸೋಸಿಯೇಶನ್ ಗೋಕುಲದ ಭವ್ಯ ಶ್ರೀಕೃಷ್ಣನ ಮಂದಿರದಲ್ಲಿ ಸನಾತನ ಹಿಂದೂ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಬೆಳೆಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ನಮ್ಮ ಸಂಸ್ಥೆಯ
ಆಶ್ರಯದಲ್ಲಿ ಯಕ್ಷಗಾನ, ನಾಟಕ, ಸಂಗೀತ, ನೃತ್ಯ, ಭಜನೆ ಸಹಿತ ವಿವಿಧ ಕಲೆಗಳನ್ನು ಆಸಕ್ತ ಮಕ್ಕಳಿಗೆ ಕಲಿಸುವ ತರಬೇತಿ ಪ್ರಾರಂಭಿಸಲಾಗುವುದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಬಿಎಸ್ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ರಾವ್ ತಿಳಿಸಿದರು.
ಬಿಎಸ್ಕೆಬಿ ಅಸೋಸಿಯೇಶನ್ ಸಹಕಾರ ದೊಂದಿಗೆ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಸಂಚಾಲಕತ್ವದ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಸಂಯೋಜನೆಯಲ್ಲಿ ಸಯಾನ್ ಬಿಎಸ್ಕೆಬಿ ಅಸೋಸಿಯೇಶನ್ ಗೋಕುಲದ ಸರಸ್ವತಿ ಸಭಾಗೃಹದಲ್ಲಿ ಅ. 27ರಂದು ಸಂಜೆ ನಡೆದ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದ ಈ ವರ್ಷದ ಮುಂಬಯಿ ಪ್ರವಾಸದ ಉದ್ಘಾಟನ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ – ಕಲಾವಿದರನ್ನು ಗೌರವಿಸುವ ಕಾರ್ಯವು
ಮುಂಬಯಿಯಲ್ಲಿ ಸದಾ ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿದ್ದ ನಗರದ ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಸದಾನಂದ ಶೆಟ್ಟಿ ಮಾತನಾಡಿ, ಪ್ರಕಾಶ್ ಶೆಟ್ಟಿಯವರು ಕಳೆದ ಸುಮಾರು 35 ವರ್ಷಗಳಿಂದ ಮುಂಬಯಿಗೆ ಯಕ್ಷಗಾನ ತಂಡವನ್ನು ಆಹ್ವಾನಿಸಿ ಆ ಮೂಲಕ ಕಲಾಸೇವೆ ಮಾಡುತ್ತಿದ್ದಾರೆ. ನಮ್ಮ ತುಳುನಾಡಿನ ಸಂಸ್ಕೃತಿ ಯಕ್ಷಗಾನವನ್ನು ಮುಂಬಯಿ ಮಹಾ ನಗರದಲ್ಲಿ ಪ್ರದರ್ಶಿಸಿ ಯಕ್ಷಗಾನವನ್ನು
ಉಳಿಸಿ-ಬೆಳೆಸಲು ಅವರು ಮಾಡುತ್ತಿರುವ ಕಾರ್ಯ ಅಭಿನಂದನೀಯ ಎಂದು ಹೇಳಿದರು.
ಕರ್ನಾಟಕ ಸಂಘ ಸಯಾನ್ ಗೌರವಾಧ್ಯಕ್ಷ ಜಯರಾಮ್ ಶೆಟ್ಟಿ ಮಾತನಾಡಿ, ಪ್ರಕಾಶ್ ಎಂ. ಶೆಟ್ಟಿಯವರು ಯಕ್ಷಗಾನದ ಮೇಲಿರುವ ಅಭಿಮಾನದಿಂದ ನಿಸ್ವಾರ್ಥವಾಗಿ ಈ ಕಲಾ ಸೇವೆ ಮಾಡುತ್ತಿದ್ದಾರೆ ಎಂದರು. ಇನ್ನೋರ್ವ ಅತಿಥಿ ಪ್ರಭಾದೇವಿ ಶ್ರೀ
ಸಿದ್ಧಿವಿನಾಯಕ ಮಂದಿರದ ಟ್ರಸ್ಟಿ ಭಾಸ್ಕರ ಶೆಟ್ಟಿ ಮಾತನಾಡಿ, ಸಯಾನ್ ಪರಿಸರದಲ್ಲಿರುವ ಬಿಎಸ್ಕೆಬಿ ಅಸೋಸಿಯೇಶನ್ ಧಾರ್ಮಿಕತೆ ಯೊಂದಿಗೆ ಕಲೆಗೂ ಉತ್ತಮ ಪ್ರೋತ್ಸಾಹ ನೀಡುತ್ತಾ ಬಂದಿದೆ. ಯಕ್ಷಗಾನದಂತಹ ಸಾಂಸ್ಕೃತಿಕ ಕಲೆಗೆ ಆಶ್ರಯ ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಉದ್ಯಮಿ ಶಿಮಂತೂರು ಚಂದ್ರಹಾಸ ಶೆಟ್ಟಿ, ಕಲಾಪೋಷಕ ಸುಧೀರ್ ಶೆಟ್ಟಿ ಕೆಂಚನೂರು, ಹರೀಶ್ ಶೆಟ್ಟಿ ಜಾರ್ಕಳ, ಮೇಳದ
ಮುಂಬಯಿ ಸಂಚಾಲಕ ಪ್ರಕಾಶ್ ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯ
ಕ್ರಮಕ್ಕೆ ಚಾಲನೆ ನೀಡಿದರು. ಕಲಾಪ್ರಕಾಶ ಪ್ರತಿಷ್ಠಾನದ ರೂವಾರಿ ಪ್ರಕಾಶ್ ಎಂ. ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.
ಪೆರ್ಡೂರು ಮೇಳದ ಖ್ಯಾತ ಕಲಾವಿದ ಶ್ರೀಪಾದ್ ಭಟ್ ಥಂಡಿಮನೆಯವರನ್ನು ಕಲಾ ಪ್ರಕಾಶ ಪ್ರತಿಷ್ಠಾನದ ವತಿಯಿಂದ ಅತಿಥಿಗಳು ಶಾಲು ಹೊದೆಸಿ, ಫಲಪುಷ್ಪ ಹಾಗೂ ಹತ್ತು ಸಾವಿರ ರೂ. ನಗದು ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಸಂಘಟಕ ವಿಜಯ್ ಶೆಟ್ಟಿ ಕುತ್ತೆತ್ತೂರು ನಿರೂಪಿಸಿ, ವಂದಿಸಿದರು. ಉದ್ಘಾಟನ ಸಮಾರಂಭದ ಬಳಿಕ ಪಾವನ ತುಳಸಿ ಯಕ್ಷಗಾನ ಪ್ರದರ್ಶನಗೊಂಡಿತು. ಕಲಾಭಿ ಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ- ವರದಿ: ಸುಭಾಷ್ ಶಿರಿಯಾ
You seem to have an Ad Blocker on.
To continue reading, please turn it off or whitelist Udayavani.