

Team Udayavani, Nov 12, 2023, 7:46 PM IST
ದಾವಣಗೆರೆ: ಬಿಜೆಪಿಯವರದ್ದು ಕುಟುಂಬ ರಾಜಕಾರಣ ಎಂದು ಟೀಕಿಸುವ ನೈತಿಕತೆ ಸಚಿವ ಪ್ರಿಯಾಂಕ ಖರ್ಗೆಗೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರದ್ದು ಕುಟುಂಬ ರಾಜಕಾರಣ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಅವರಿಗೆ ಟೀಕೆ ಮಾಡುವ ನೈತಿಕತೆಯೇ ಇಲ್ಲ. ಕಾಂಗ್ರೆಸ್ ಎಂದರೆನೇ ಕುಟುಂಬ ರಾಜಕಾರಣ. ನೆಹರು ಕಾಲದಿಂದ ಇಂದಿರಾಗಾಂಧಿ, ರಾಜೀವ್ಗಾಂಧಿ, ಸೋನಿಯಾಗಾಂಧಿ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಇಷ್ಟು ಜನ ಕುಟುಂಬ ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ನಲ್ಲೇ ಕುಟುಂಬ ರಾಜಕಾರಣ ಇದೆ ಎಂದರು.
ಮಲ್ಲಿಕಾರ್ಜುನ್ ಖರ್ಗೆ ಅವರು ಅನೇಕ ಹುದ್ದೇ ಅಲಂಕರಿಸಿ, ಕೇಂದ್ರ ಸಚಿವರಾಗಿ, ಈಗ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಅವರನ್ನು ಗೌರವಿಸುತ್ತೇನೆ. ಪ್ರಿಯಾಂಕ ಖರ್ಗೆ ಮಲ್ಲಿಕಾರ್ಜುನ್ ಖರ್ಗೆ ಅವರ ಮಗ ಎಂದು ಸಚಿವ ಸ್ಥಾನ ನೀಡಿದ್ದಾರೆ ಅಷ್ಟೇ ಎಂದರು.
ಬಂಗಾರಪ್ಪನವರ ಮಗ ಎಂದು ಮಧುಬಂಗಾರಪ್ಪ, ಗುಂಡುರಾವ್ ಅವರ ಮಗ ದಿನೇಶ್ ಗುಂಡುರಾವ್ ಅವರು ಸಚಿವರಾಗಿರುವುದೇ ಕುಟುಂಬ ರಾಜಕಾರಣಕ್ಕೆ ಉದಾಹರಣೆ. ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ ಮಹಾನ್ ನಾಯಕ ಅವರ ಬಗ್ಗೆ ಟೀಕೆ ಮಾಡುವ ಯಾವ ನೈತಿಕತೆ ಪ್ರಿಯಾಂಕ ಖರ್ಗೆ ಅವರಿಗಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ಬಿಡುವುದಿಲ್ಲ..
ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಯೇ ಇಲ್ಲ. ಸಿಎಂ, ಡಿಸಿಎಂ, ಸಚಿವರು, ಜಿಲ್ಲಾ ಉಸ್ತವಾರಿ ಸಚಿವರನ್ನು ಭೇಟಿ ಮಾಡಿದ್ದು ಕೇವಲ ಬರಗಾಲ ಪಟ್ಟಿಗೆ ಅವಳಿ ತಾಲೂಕು ಸೇರಿಸಲು, ಅವಳಿ ತಾಲೂಕಿನ ಅಭಿವೃದ್ಧಿ ವಿಚಾರಗಳಿಗೆ ಮಾತ್ರ ಎಂದು ತಿಳಿಸಿದರು.
ನಮ್ಮಲ್ಲೇ ನನ್ನನ್ನು ಹೊರಗೆ ಕಳುಹಿಸ ಬೇಕು ಎಂಬುದು ಕೆಲವರಿಗೆ ಇತ್ತು. ಕಾರ್ಯಕರ್ತರ, ಮುಖಂಡರ ಆಪೇಕ್ಷೆ ಇದೆ. ಎಲ್ಲರ ಒತ್ತಾಯಕ್ಕೆ ಮಣಿದು ನಾನು ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದೇನೆ ಎಂದರು.
ನಾನು ಸೋಲು ಗೆಲುವು ಎರಡನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ.ಹಾಗಾಗಿಯೇ ಕಳೆದ ಆರು ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕೂರದೇ ಅವಳಿ ತಾಲೂಕಿನ ಪ್ರವಾಸ ಮಾಡಿದ್ದೇನೆ ಎಂದರು.
ನನಗೆ ಸಂಘರ್ಷ ಬೇಕಾಗಿಲ್ಲ. ಇನ್ನೇನ್ನಿದ್ದರೂ ಸಾಮರಸ್ಯ ಬೇಕಾಗಿದೆ. ಒಟ್ಟಾಗಿ ಸೇರಿ ಪಕ್ಷ ಕಟ್ಟ ಬೇಕಾಗಿದೆ. ಇನ್ನು ಮುಂದೆ ಈ ರೇಣುಕಾಚಾರ್ಯ ನಿದ್ರೆ ಮಾಡುವುದಿಲ್ಲ. ಎಲೆಮರೆಕಾಯಿಯಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.