![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 19, 2020, 6:32 AM IST
ಬೆಂಗಳೂರು: ಈ ಶೈಕ್ಷಣಿಕ ವರ್ಷಪೂರ್ತಿ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದ್ದು, ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಿಸಲು ತೀರ್ಮಾನಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಯಥಾಪ್ರಕಾರ ಬಿಸಿಯೂಟ ಯೋಜನೆ ಆರಂಭಗೊಳ್ಳಲಿದೆ.
ಜನವರಿಯಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಜ. 1ರಿಂದ ವಿದ್ಯಾಗಮ ಆರಂಭವಾಗಲಿದೆ. ವಿದ್ಯಾಗಮ ತರಗತಿ ಶಾಲಾ ವಠಾರದಲ್ಲಿ ನಡೆದರೂ ಬಿಸಿಯೂಟ ನೀಡುವು ದಿಲ್ಲ. ಬದಲಿಗೆ ಆಹಾರ ಧಾನ್ಯ ವಿತರಿಸುತ್ತೇವೆ ಎಂದು ಶಿಕ್ಷಣ ಇಲಾಖೆ ನ್ಯಾಯಾಲಯಕ್ಕೂ ಮಾಹಿತಿ ನೀಡಿದೆ.
ರಜಾದಿನಗಳಲ್ಲಿ ಬಿಸಿಯೂಟ ನೀಡುತ್ತಿರಲಿಲ್ಲ. ಹೀಗಾಗಿ ಶಾಲಾ ದಿನಗಳ ಲೆಕ್ಕಾಚಾರದಲ್ಲೇ ಆಹಾರ ಧಾನ್ಯವನ್ನು ಮಕ್ಕಳಿಗೆ ಅಥವಾ ಅವರ ಹೆತ್ತವರಿಗೆ ವಿತರಿಸಲಾಗುತ್ತದೆ. ಜೂನ್ನಿಂದ ಅಕ್ಟೋಬರ್ ವರೆಗಿನ ಆಹಾರ ಸಾಮಗ್ರಿಯನ್ನು ಶಾಲೆಗಳ ಮೂಲಕ ವಿತರಿಸಲಾಗಿದೆ. ಜನವರಿಯಿಂದ ಪ್ರತೀ ಮಗುವಿಗೆ ದಿನದ ಲೆಕ್ಕಾಚಾರದಲ್ಲಿ ಬಿಸಿಯೂಟದ ಸಾಮಗ್ರಿಯನ್ನು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ನೀಡಲಾಗುತ್ತದೆ ಎಂದು ಇಲಾಖೆಯ ಬಿಸಿಯೂಟ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಕ್ಕಳ ಸುರಕ್ಷೆಗಾಗಿ ಈ ಕ್ರಮ
ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ಶೈಕ್ಷಣಿಕ ವರ್ಷ ಪೂರ್ತಿ ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ನೀಡಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಶಾಲಾರಂಭ: ಇಂದು ನಿರ್ಧಾರ?
ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸುವ ಬಗ್ಗೆ ಸರಕಾರ ಡಿ. 19ರಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅವರು ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ಅನುºಕುಮಾರ್ ಮತ್ತಿತರ ಅಧಿಕಾರಿಗಳ ಸಭೆಯನ್ನು ಡಿ. 19ರ ಮಧ್ಯಾಹ್ನ ನಡೆಸಲಿದ್ದಾರೆ. ಈ ಸಂದರ್ಭ ತರಗತಿ ಆರಂಭದ ಬಗ್ಗೆ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಆಹಾರ ಧಾನ್ಯ ಎಷ್ಟು?
1ರಿಂದ 5ನೇ ತರಗತಿ: ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ, 58 ಗ್ರಾಂ ತೊಗರಿ ಬೇಳೆ
6ರಿಂದ 10ನೇ ತರಗತಿ: ದಿನಕ್ಕೆ 150 ಗ್ರಾಂ ಅಕ್ಕಿ ಅಥವಾ ಗೋಧಿ, 87 ಗ್ರಾಂ ತೊಗರಿ ಬೇಳೆ
ಕೊರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡದೇ ಇರಲು ತಾತ್ಕಾಲಿಕವಾಗಿ ನಿರ್ಧಾರ ಮಾಡಿದ್ದೇವೆ ಮತ್ತು ಈ ಬಗ್ಗೆ ನ್ಯಾಯಾಲಯಕ್ಕೂ ಹೇಳಿಕೆ ನೀಡಿದ್ದೇವೆ.
-ಟಿ. ನಾರಾಯಣ ಗೌಡ, ಸಹ ನಿರ್ದೇಶಕರು, ಮಧ್ಯಾಹ್ನದ ಉಪಾಹಾರ ಯೋಜನೆ
You seem to have an Ad Blocker on.
To continue reading, please turn it off or whitelist Udayavani.