![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Feb 27, 2024, 11:14 PM IST
ಬೆಂಗಳೂರು: ರಾಜ್ಯದಲ್ಲಿ ಮತ್ತೂಂದು “ಅಡ್ಡಮತದಾನ’ ಪ್ರಕರಣ ನಡೆದಿದೆ. ಈಗ ಮತ್ತೆ ಸಂವಿಧಾನದ ಅನುಚ್ಛೇದ 10ರ ವಿಶ್ಲೇಷಣೆ ಮತ್ತು ವ್ಯಾಖ್ಯಾನ ಮುನ್ನೆಲೆಗೆ ಬಂದಿದೆ.
ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಪಕ್ಷದ ವಿಪ್ ಉಲ್ಲಂ ಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.
ನೇರವಾಗಿ ಹೇಳುವುದಾದರೆ ಬಿಜೆಪಿಯು ಎಸ್.ಟಿ. ಸೋಮಶೇಖರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಲಿದೆ. ಅದರ ಮೊದಲ ಹೆಜ್ಜೆಯಾಗಿ ವಿಧಾನಸಭೆ ಸ್ಪೀಕರ್ಗೆ ದೂರು ಕೊಟ್ಟು ಸೋಮಶೇಖರ್ ಅವರನ್ನು ಶಾಸಕತ್ವದಿಂದ ಅಹರ್ನಗೊಳಿಸಬೇಕು ಎಂದು ಕೋರಲಿದೆ. ಅಲ್ಲಿಂದ ಕಾನೂನು ಜಿಜ್ಞಾಸೆ ಪ್ರಾರಂಭವಾಗಲಿದೆ. ಏಕೆಂದರೆ ಈ ಪ್ರಕರಣ ಸಂವಿಧಾನದ ಅನುಚ್ಛೇದ 10ಕ್ಕೆ ತಳಕು ಹಾಕಲಾಗುತ್ತದೆ. ಸಂವಿಧಾನದ ಅನುಚ್ಛೇದ 10ರ ಕುರಿತು ಕಾನೂನು ತಜ್ಞರು ಭಿನ್ನ ವಾದಗಳನ್ನು ಪ್ರತಿಪಾದಿಸುತ್ತಾರೆ. ವಿಪ್ ಉಲ್ಲಂಘನೆ ಶಾಸನ ಸಭೆಯ ಒಳಗಿನ ನಡಾವಳಿಗಳಿಗೆ ಅನ್ವಯವಾಗಲಿದೆ ಎಂದು ಅನುಚ್ಛೇದ 10ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೇ ರಾಜ್ಯಸಭೆ ಚುನಾವಣೆ ಶಾಸನ ಸಭೆಯ ಒಳಗಿನ ನಡಾವಳಿ ಅಲ್ಲ. ಹಾಗಾಗಿ, ಎಸ್.ಟಿ. ಸೋಮಶೇಖರ್ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಕೆಲವು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಆದರೆ ಇಂತಹುದೇ ಪ್ರಕರಣಗಳಲ್ಲಿ ಇತ್ತೀಚೆಗೆ ಹರಿಯಾಣ ಮತ್ತು ಗೋವಾ ರಾಜ್ಯಗಳಲ್ಲಿ ಅಲ್ಲಿನ ಸ್ಪೀಕರ್ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ರಾಜ್ಯಸಭೆ ಚುನಾವಣೆಯಲ್ಲೂ ಚುನಾವಣ ಆಯೋಗ “ನೋಟಾ’ ಅವಕಾಶ ಜಾರಿಗೆ ತರಲು ಮುಂದಾದಾಗ ಇದು ಪಕ್ಷಾಂತರಕ್ಕೆ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ. ಶಾಸನ ಸಭೆಯ ಹೊರಗಿನ ನಡಾವಳಿಗೂ ಸಂವಿಧಾನದ ಅನುಚ್ಛೇದ 10 ಅನ್ವಯವಾಲಿದೆ ಎಂಬ ಅಭಿಪ್ರಾಯ ಬರುವಂತೆ 2018ರಲ್ಲಿ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಅದರಂತೆ, ಸ್ಪೀಕರ್ ಅವರು ಪಕ್ಷಾಂತರ ನಿಷೇಧ ಕಾನೂನಿನಡಿ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಇನ್ನೂ ಕೆಲವು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ರಾಜ್ಯಸಭೆ ಚುನಾವಣೆಗೆ ಸಂವಿಧಾನದ ಅನುಚ್ಛೇದ 10ಕ್ಕೆ ಅನ್ವಯ ಆಗಲ್ಲ ಅನ್ನುವ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ನೀಡಿದೆ. ಜತೆಗೆ ಸದನದ ಒಳಗಿನ ನಡಾವಳಿಗಳಿಗೆ ವಿಪ್ ಅನ್ವಯವಾಗುತ್ತದೆ. ಅದರ ಆಧಾರದಲ್ಲಿ ಅಡ್ಡ ಮತದಾನ ಮಾಡಿದವರ ವಿರುದ್ಧ ಸ್ಪೀಕರ್ ಅವರಿಂದ ಕ್ರಮಕ್ಕೆ ಅವಕಾಶವಿಲ್ಲ. ಪಕ್ಷ ಉಚ್ಚಾಟಿಸಿದರೆ ರಾಜಕೀಯ ಪಕ್ಷದ ಸದಸ್ಯತ್ವ ಕಳೆದುಕೊಳ್ಳಬಹುದು. ಆದರೆ ಶಾಸಕ ಸ್ಥಾನ ಕಳೆದುಕೊಳ್ಳುವುದಿಲ್ಲ.
– ಕೆ.ವಿ. ಧನಂಜಯ, ಸುಪ್ರೀಂಕೋರ್ಟ್ ವಕೀಲ
ಸಾಧ್ಯಾಸಾಧ್ಯತೆ?
ಬಿಜೆಪಿ
ಪಕ್ಷದ ವಿಪ್ ಉಲ್ಲಂ ಸುವ ಮೂಲಕ ಪಕ್ಷದ ವಿರೋಧಿ ನಡೆ ಅನುಸರಿಸಿದ್ದಾರೆ. ಪಕ್ಷದ ಶಿಸ್ತನ್ನು ಉಲ್ಲಂ ಸುವ ಮೂಲಕ ಸ್ವ ಇಚ್ಛೇಯಿಂದ ಪಕ್ಷವನ್ನು ತ್ಯಜಿಸಿದ್ದಾರೆ. ಆದ್ದರಿಂದ ಸಂವಿಧಾನದ ಅನುಚ್ಛೇದ 10ರಡಿ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ಗೆ ದೂರು ಕೊಡಬಹುದು. ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಎಸ್.ಟಿ. ಸೋಮಶೇಖರ್ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟು, ಅವರಿಂದ ಸ್ಪಷ್ಟನೆ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಬಹುದು. ಬಹುತೇಕ ಪಕ್ಷದಿಂದ ಉಚ್ಚಾಟಿಸುವ ಹಾದಿಯಲ್ಲಿ ಬಿಜೆಪಿ ಸಾಗುವ ಸಾಧ್ಯತೆಯೇ ಹೆಚ್ಚು.
ಸ್ಪೀಕರ್
ರಾಜ್ಯಸಭೆ ಚುನಾವಣೆ ಸದನದ ಒಳಗಿನ ನಡಾವಳಿ ಅಲ್ಲ. ವಿಪ್ ಉಲ್ಲಂಘನೆ ಸಂವಿಧಾನದ ಅನುಚ್ಛೇದ 10ರ ವ್ಯಾಪ್ತಿಗೆ ಬರುವುದಿಲ್ಲ ಎಂದು ನೇರವಾಗಿ ಬಿಜೆಪಿ ದೂರನ್ನು ತಿರಸ್ಕರಿಸಬಹುದು. ಒಂದೊಮ್ಮೆ ಪ್ರಕರಣ ಸಂವಿಧಾನದ ಅನುಚ್ಛೇದ 10ರ ವ್ಯಾಪ್ತಿಗೆ ಬರಲಿದೆ ಎಂದು ಕಾನೂನಾತ್ಮಕವಾಗಿ ಮನದಟ್ಟಾದರೆ ಸ್ಪೀಕರ್ ಅವರು ಎಸ್.ಟಿ. ಸೋಮಶೇಖರ್ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಬಹುದು. ಸೋಮಶೇಖರ್ ಕೊಟ್ಟ ಉತ್ತರ ಸಮಂಜಸವಾಗಿದ್ದರೆ ಬಿಜೆಪಿ ಕೊಟ್ಟ ದೂರು ತಿರಸ್ಕರಿಸಬಹುದು. ಅದೇ ರೀತಿ ವಿಚಾರಣೆಯನ್ನು ಸುದೀರ್ಘ ಕಾಲ ಮುಂದುವರಿಸಬಹುದು. ಸ್ಪೀಕರ್ ತೀರ್ಮಾನದ ಬಳಿಕವಷ್ಟೇ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ. ದೂರನ್ನು ತ್ವರಿತ ವಿಚಾರಣೆ ಮಾಡುವಂತೆ ಸ್ಪೀಕರ್ಗೆ ನಿರ್ದೇಶನ ನೀಡುವಂತೆ ದೂರು ಕೊಟ್ಟವರು ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಳ್ಳಲೂಬಹುದು.
ಎಸ್.ಟಿ. ಸೋಮಶೇಖರ್
ರಾಜ್ಯಸಭೆ ಚುನಾವಣೆ ಸದನದ ಒಳಗಿನ ನಡಾವಳಿ ಅಲ್ಲ. ರಾಜ್ಯಸಭೆ ಚುನಾವಣೆಗೆ ವಿಪ್ ಜಾರಿಗೇ ಅವಕಾಶ ಇಲ್ಲದಿರುವಾಗ ಅದರ ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಡ್ಡ ಮತದಾನ ಮಾಡಿದ್ದಕ್ಕೆ ವಿಪ್ ಉಲ್ಲಂಘನೆ ಆರೋಪದಲ್ಲಿ ಅನರ್ಹಗೊಳಿಸಲು ಅವಕಾಶವಿಲ್ಲ. ನಾನು ಪಕ್ಷ ಬಿಟ್ಟಿಲ್ಲ, ಶಾಸಕ ಸ್ಥಾನವನ್ನೂ ತ್ಯಜಿಸಿಲ್ಲ. ಪಕ್ಷ ಸೂಚಿಸಿದ ಅಭ್ಯರ್ಥಿ ಸೂಕ್ತ’ವಲ್ಲದ ಕಾರಣಕ್ಕೆ ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಇನ್ನೊಂದು ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಈ ಸ್ವಾತಂತ್ರ್ಯವನ್ನು ಅನುಚ್ಛೇದ 10 ನನ್ನಿಂದ ಕಸಿದುಕೊಂಡಿಲ್ಲ ಎಂದು ಎಸ್.ಟಿ. ಸೋಮಶೇಖರ್ ಪ್ರತಿಪಾದಿಸಬಹುದು.
ಚುನಾವಣೆಗೆ ನಿಲ್ಲುವ ಎಲ್ಲರೂ ಗೆಲ್ಲುತ್ತೇವೆ ಎಂದೇ ಹೇಳುವುದು, ಯಾರೂ ಸೋಲುತ್ತೇವೆ ಎಂದು ಹೇಳುವುದಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿಗೆ ಎಷ್ಟು ಬೇಕೋ ಅಷ್ಟು ಮತಗಳಿಲ್ಲ. ಆದರೂ ಅಭ್ಯರ್ಥಿಯನ್ನು ನಿಲ್ಲಿಸಿದ್ದರು. ಜೆಡಿಎಸ್ಗೆ ಆತ್ಮ ಎಲ್ಲಿದೆ? ಆತ್ಮಸಾಕ್ಷಿ ಎಲ್ಲಿದೆ? ಸಾಲದ್ದಕ್ಕೆ ನಮ್ಮ ಶಾಸಕರಿಗೆ ಬೆದರಿಕೆ ಹಾಕಿದ್ದವರ ವಿರುದ್ಧ ಎಫ್ಐಆರ್ ಕೂಡ ಆಗಿದೆ. ಅಡ್ಡಮತದಾನ ಏನಿದ್ದರೂ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ತಮ್ಮ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳಬೇಕಿತ್ತು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದು ಅಕ್ಷಮ್ಯ ಅಪರಾಧ. ಅಡ್ಡ ಮತದಾನ ಮಾಡಿರುವವರ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲಿದೆ. ಅವರು ಬೇರೆ ಪಕ್ಷಕ್ಕೆ ಸೇರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡೋಣ. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ನಾವೆಲ್ಲ ಕೂಡಿ ಚರ್ಚಿಸಿ ತೀರ್ಮಾನ ಮಾಡಿ ಕ್ರಮ ವಹಿಸುತ್ತೇವೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ
1969ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ಕೈಗೊಂಬೆಯನ್ನು ರಾಷ್ಟ್ರಪತಿ ಮಾಡಲು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವರೆಡ್ಡಿ ವಿರುದ್ಧ ವಿ.ವಿ. ಗಿರಿ ಅವರನ್ನು ಕಣಕ್ಕಿಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಂದು ನೀಲಂ ಸಂಜೀವರೆಡ್ಡಿ ಸೋತಿದ್ದರು. ಅಡ್ಡಮತದಾನಗಳ ಜನಕ ಕಾಂಗ್ರೆಸ್. ಆತ್ಮಸಾಕ್ಷಿಯ ಮತವೆಂದರೆ ಅಡ್ಡಮತದಾನವೇ? ಇಂದು ಕಾಂಗ್ರೆಸ್ ಗೆದ್ದಿರುವುದು ಆತ್ಮಸಾಕ್ಷಿಯ ಮತದಿಂದಲ್ಲ, ಅಡ್ಡಮತದಾನದಿಂದ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹೆಬ್ಬಾರ್ ಮತದಾನ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ. ತಪ್ಪುಗಳು ಕಂಡು ಬಂದಲ್ಲಿ ಪಕ್ಷದ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಸೋಮಶೇಖರ್ ಅವರಿಗೆ ಸಮಾಧಾನ ಪಡಿಸುವ ಪ್ರಯತ್ನ ನಡೆಸಲಾಗಿತ್ತು. ಆದರೂ ಅವರು ಸಮಾಧಾನಗೊಂಡಿಲ್ಲ. ಅವರ ಹೇಳಿಕೆ ಅನುದಾನ ಯಾರು ಕೊಡುತ್ತಾರೆ ಅವರ ಪರ ಎನ್ನುವ ರೀತಿ ಇದೆ.
-ಬಿ.ವೈ.ರಾಘವೇಂದ್ರ ಸಂಸದ
ಕಳೆದ ಐದಾರು ಬಾರಿ ಪಕ್ಷ ಹೇಳಿದಂತೆ ಕೇಳಿದ್ದೇನೆ. ರಾಜ್ಯಸಭಾ ಚುನಾವಣೆಗೆ ನಿಂತಾಗ, ಗೆದ್ದರೆ ಅನುದಾನ ಕೊಡುವುದಾಗಿ ಭರವಸೆ ಕೊಡುತ್ತಾರೆ. ಆದರೆ ಚುನಾವಣೆ ಅನಂತರ ನಮ್ಮ ಕೈಗೇ ಸಿಗುವುದಿಲ್ಲ. ಹೀಗಾಗಿ ನನ್ನ ಬೇಡಿಕೆ ಈಡೇರಿಸುವ ಗಟ್ಟಿ ಭರವಸೆ ಕೊಟ್ಟವರಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ನನ್ನ ಮತವನ್ನು ಹಾಕಿದ್ದೇನೆ.
-ಎಸ್.ಟಿ.ಸೋಮಶೇಖರ್, ಬಿಜೆಪಿ ಶಾಸಕ
ಎಸ್.ಟಿ.ಸೋಮಶೇಖರ್ ಪಕ್ಷದಿಂದ ಗೆದ್ದು, ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದು ರಾಜಕೀಯ ವ್ಯಭಿಚಾರ. ಪಕ್ಷ ಇದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
-ಸಿ.ಟಿ.ರವಿ ಮಾಜಿ ಸಚಿವ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.