ವಡ್ಡರಸ ಆಳಿದ ನಾಡು ಈ ವಡ್ಡರ್ಸೆ
Team Udayavani, Mar 21, 2020, 4:38 AM IST
ಕೋ ಟ-ಬನ್ನಾಡಿ ಜಿಲ್ಲಾ ಮುಖ್ಯರಸ್ತೆಯಲ್ಲಿ ನಾಲ್ಕು ಕಿ.ಮೀ. ಮುಂದೆ ಸಾಗಿದರೆ ಸಿಗುವ ಐತಿಹಾಸಿಕ ಊರೇ ವಡ್ಡರ್ಸೆ. 1-2ನೇ ಶತಮಾನದ ಮಧ್ಯಭಾಗದಲ್ಲಿ ವಡ್ಡರ್ಸೆ ವೈಭವದಿಂದ ಮೆರೆದಾಡಿತ್ತು. ಬಾರಕೂರು ಸಂಸ್ಥಾನದ ರಾಜ ವಡ್ಡರಸನ ಈ ಊರನ್ನು ಚರಿತ್ರೆಯ ಪುಟದಲ್ಲಿ ದಾಖಲಿಸುವಂತೆ ಬದಲಾಯಿಸಿದ್ದ. ಹೀಗಾಗಿ ವಡ್ಡರಸನಾಳಿದ ಮಣ್ಣು ವಡ್ಡರಸೆಯಾಗಿ ಕಾಲಕ್ರಮೇಣ ವಡ್ಡರ್ಸೆಯಾಗಿ ಖ್ಯಾತಿ ಪಡೆಯಿತು.
ಉಡುಪಿ ಜಿಲ್ಲೆಯ ಅತೀ ಪ್ರಾಚೀನ ಶಾಸನ ಪತ್ತೆಯಾಗಿರುವುದು ವಡ್ಡರ್ಸೆಯಲ್ಲಿ. ಅಳುಪರ 1ನೇ ಅರಸ ಅನ್ನದಾನಕ್ಕಾಗಿ ಭೂಮಿಯನ್ನು ನೀಡಿದ ದಾಖಲೆಯಾಗಿ ಬರೆಸಿದ ಶಾಸನ ಅತೀ ಪ್ರಾಚೀನ ಅಳುಪ ಶಾನನವಾಗಿ ಖ್ಯಾತಿಪಡೆದಿದೆ. ಅಳುಪ ವಂಶದ ಕಂದವರ್ಮ ಅರಸನ ನಂಬಿಕಸ್ಥ ಗುಂಡಂಣನು ವಡ್ಡರ್ಸೆ ಪ್ರಾಂತ್ಯದ ಅ ಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಬನ್ನದ( ಈಗಿನ ಬನ್ನಾಡಿ) ಆಡಳಿತವನ್ನು ಸತ್ತಿಗಾರಿ ಎಂಬಾತ ನಿರ್ವಹಿಸುತ್ತಿದ್ದ ಎಂಬುವುದು ಶಾಸನಗಳು ಹೇಳುತ್ತಿವೆ. ವಡ್ಡರ್ಸೆಯ ಒಕ್ಕಲುತನ ಅಡಕಪ್ಪನೆಂಬಾತನಿಗೆ ಸೇರಿತ್ತು. ಇವರ ಕಾಲಘಟ್ಟದಲ್ಲಿ ಈಗಿನ ಕೋಟೆಕಣಿವೆಯಲ್ಲಿ ಅರಮನೆ ಮತ್ತು ಸುತ್ತಲೂ ಕೋಟೆ ಇದ್ದಿರಬಹುದು ಎನ್ನಲಾಗುತ್ತದೆ. ಸುಮಾರು 5ಎಕ್ರೆ ವಿಸ್ತೀರ್ಣವಿರುವ ಈ ಕೋಟೆಕಣಿವೆಯಲ್ಲಿ ಅರಮನೆ, ಕುದುರೆಲಾಯ ಮುಂತಾದ ಆವಶೇಷಗಳು ನಮಗೆ ಇಂದಿಗೂ ಕಾಣಸಿಗುತ್ತವೆ.
ವಡ್ಡರಸನ ಕಾಲದಲ್ಲಿ ಇಲ್ಲಿನ ಪುರಾತನ ಮಹಾಲಿಂಗೇಶ್ವರ ದೇವಸ್ಥಾನ ಸಾಕಷ್ಟು ವೈಭವಯುತವಾಗಿ ಮೆರೆದಿತ್ತು. ಪ್ರಸ್ತುತ ವಡ್ಡರ್ಸೆ ಎನ್ನುವುದು ಸ್ಥಳೀಯಾಡಳಿತದ ಗ್ರಾ.ಪಂ. ಕೇಂದ್ರವಾಗಿ ಹೆಸರುಗಳಿಸಿದೆ ಹಾಗೂ ಪ್ರತಿವರ್ಷ ಇಲ್ಲಿ ನಡೆಯುವ ಮಹಾಲಿಂಗೇಶ್ವರ ರಥೋತ್ಸವಕ್ಕೆ ಸುತ್ತ-ಮುತ್ತಲಿನ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರು ಕೂಡ ಈ ಊರಿನವರು.
ರಾಜೇಶ್ ಅಚ್ಲಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.