![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 1, 2020, 1:17 PM IST
ಹಿಂದೊಮ್ಮೆ ಒಂದು ಆನ್ಲೈನ್ ಕಾರ್ಯಕ್ರಮದಲ್ಲಿ ವಿದೂಷಕರೊಬ್ಬರು ಭಾರತೀಯರ ಮನೆಗಳಲ್ಲಿ ಚ್ಯವನಪ್ರಾಶ ಇರುವುದರ ಬಗ್ಗೆ ಮಾತನಾಡಿದಾಗ ನಾವೂ ನಕ್ಕಿದ್ದೆವು. ಆದರೆ ಅದೇ ಕೋವಿಡ್-19 ಮಾರಕ ಸಾಂಕ್ರಾಮಿಕವಾಗಿ ಹಬ್ಬಿದಾಗ ಇಂಟರ್ನೆಟ್ನ ಸರ್ಚ್ ಎಂಜಿನ್ಗಳಲ್ಲಿ “ಇಮ್ಯುನಿಟಿ’ ಅಥವಾ “ರೋಗ ನಿರೋಧಕ ಶಕ್ತಿ’ಯ ಬಗ್ಗೆ ಹುಡುಕಾಡುವವರ ಸಂಖ್ಯೆ ಕಾಳಿYಚ್ಚಿನಂತೆ ಹೆಚ್ಚಿತು. ಸೆಪ್ಟಂಬರ್ 13ರಂದು ಪ್ರಕಟಿಸಲಾದ ಕೋವಿಡ್ -19 ನಿರ್ವಹಣ ಮಾರ್ಗಸೂಚಿಗಳಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗಾಗಿ ರೋಗ ನಿರೋಧಕ ಶಕ್ತಿ ವರ್ಧಕ ಔಷಧಗಳನ್ನು ಶಿಫಾರಸು ಮಾಡಿದೆ. ಅದಕ್ಕೆ ಮುನ್ನವೂ ಮಾಧ್ಯಮಗಳಲ್ಲಿ ಅರಶಿನ ಹಾಲು, ಚ್ಯವನಪ್ರಾಶ, ತುಳಸಿ ಮತ್ತು ಶುಂಠಿ ಸಾರ ಮಿಶ್ರಿತ ಹಾಲು ಇತ್ಯಾದಿ ಉತ್ಪನ್ನಗಳ ಜಾಹೀರಾತುಗಳು ಝಗಮಗಿಸಲಾರಂಭಿಸಿದ್ದವು. ಹಾಗಾದರೆ ರೋಗ ನಿರೋಧಕ ಶಕ್ತಿ ಅಥವಾ “ಇಮ್ಯುನಿಟಿ ಪವರ್’ ಎಂದರೇನು? ಅದು ಔಷಧ ಅಂಗಡಿಯ ಕೌಂಟರ್ನಲ್ಲಿ ಸಿಗುವಂಥದ್ದೇ?
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಾಯಿಲೆ ಉಂಟು ಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ದೇಹದ ಸಾಮರ್ಥ್ಯವೇ ರೋಗ ನಿರೋಧಕ ಶಕ್ತಿ. ಇದು ಚೆನ್ನಾಗಿ ಕಾರ್ಯನಿರ್ವಹಿಸಬೇಕಾದರೆ ಅದು ಸಮತೋಲಿತವಾಗಿರಬೇಕು ಮತ್ತು ಸಾಮರಸ್ಯದಿಂದ ಇರಬೇಕು. ಜೀವನ ವಿಧಾನದಲ್ಲಿ ಕಿರು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ದೇಹದ ಪ್ರತೀ ಅಂಗಾಂಗವೂ ತನ್ನ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಅಂತಹ ಜೀವನಶೈಲಿ ಬದಲಾವಣೆಗಳು ಎಂದರೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನವನ್ನು ತ್ಯಜಿಸುವುದು, ಮಾದರಿ ದೇಹತೂಕವನ್ನು ಕಾಪಾಡಿ ಕೊಳ್ಳುವುದು, ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು.
ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರ ಇರಿಸಬಹುದು ಎಂಬ ಒಂದು ಉಕ್ತಿಯಿದೆ. ಅದೇಕೆಂಬುದು ಈಗ ಬಯಲಾಗಿದೆ. ಸ್ಪ್ಯಾನಿಶ್ ಫ್ಲ್ಯೂ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿ ಹತ್ತಿರ ಹತ್ತಿರ ಒಂದು ಶತಮಾನ ಕಳೆಯುತ್ತ ಬಂದರೂ ಏನೂ ಬದಲಾಗಿಲ್ಲ. ಸಾವಿರಾರು ವೈಜ್ಞಾನಿಕ ಸಂಶೋಧನೆಗಳು ಮತ್ತು ಅಧ್ಯಯನ ವರದಿಗಳ ಬಳಿಕವೂ ನಾವು ಸಹಾಯಕ್ಕಾಗಿ ಪ್ರಕೃತಿಯತ್ತಲೇ ನೋಡುತ್ತಿದ್ದೇವೆ. ಪ್ರಕೃತಿಯು ಗುಣಪಡಿಸುವ ಮತ್ತು ಜೀವನವನ್ನು ಸುಗಮಗೊಳಿಸುವ ವಿಚಾರದಲ್ಲಿ ಅಪಾರ ಸಂಪದ್ಭರಿತವಾಗಿದ್ದು, ಇಂತಹ ಸಂದಿಗ್ಧ ಕಾಲದಲ್ಲಿ ಅದನ್ನೇ ಮೊರೆ ಹೋಗುವುದು ಯುಕ್ತವಾಗಿದೆ.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ವಿವಿಧ ಅಂಶಗಳನ್ನು ಒಂದು ಸೇನೆಯ ವಿವಿಧ ವಿಭಾಗಗಳಿಗೆ ಹೋಲಿಸಲಾಗಿದೆ. ಅಲ್ಪ ಪ್ರಮಾಣದ ಕೊರತೆಗಳು ಕೂಡ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದಾಗಿದೆ.
ಆದ್ದರಿಂದ ಅಪಾಯಕಾರಿ ವೈರಸ್ ನಿಮ್ಮತ್ತ ಬರುವುದಕ್ಕೆ ಮುನ್ನವೇ ನಿಮ್ಮ ಆಹಾರದಲ್ಲಿ ಹೊಸ ಚೈತನ್ಯವನ್ನು ಒದಗಿಸುವುದಕ್ಕೆ ಪ್ರಯತ್ನ ಪಡಿ. ನಿಮ್ಮ ಆಹಾರದ ಬಟ್ಟಲನ್ನು ತಾಜಾ ತರಕಾರಿಗಳು ಮತ್ತು ಬಣ್ಣಬಣ್ಣದ ಹಣ್ಣುಗಳಿಂದ ಅಲಂಕರಿಸುವುದು, ಊಟ ಉಪಾಹಾರದಲ್ಲಿ ಬೆಳ್ಳುಳ್ಳಿ, ಶುಂಠಿ ಅಥವಾ ಅರಶಿನವನ್ನು ಸೇರಿಸುವುದು, ಅತಿಯಾದ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರವಸ್ತುಗಳನ್ನು ವರ್ಜಿಸುವಂತಹ ಸಣ್ಣಪುಟ್ಟ ಬದಲಾವಣೆಗಳ ಮೂಲಕ ನೀವು ರೋಗದ ವಿರುದ್ಧ ಹೋರಾಟದಲ್ಲಿ ಗೆಲ್ಲಬಹುದು.
ನಿಮ್ಮ ಆಹಾರ ಶಿಫಾರಸುಗಳು :
ಇನ್ನಷ್ಟು ಸಲಹೆಗಳು :
ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ವೃದ್ಧಿಸುವ ಅಡ್ಡದಾರಿಗಳ ಬಗ್ಗೆ ಕೆಲವು ಅನಧಿಕೃತ ಆರೋಗ್ಯ ಸೇವಾದಾರರು ಪ್ರಕಟಿಸುತ್ತಿರುವ ಪ್ರಕಟನೆ, ಸುದ್ದಿಗಳನ್ನು ನಂಬದಿರುವುದು ಲೇಸು. ದೇಹವನ್ನು ಒಮ್ಮೆ ಶುದ್ಧಗೊಳಿಸಿ ಬಳಿಕ ವಿಟಮಿನ್ಗಳು, ಖನಿಜಾಂಶಗಳು ಮತ್ತು ಅಮೈನೊ ಆ್ಯಸಿಡ್ಗಳ ಭಾರೀ ಡೋಸ್ಗಳನ್ನು ದೇಹಕ್ಕೆ ನೀಡುವ ಯೋಜನೆಗಳನ್ನು ಅವರು ಶಿಫಾರಸು ಮಾಡುತ್ತಾರೆ. ಆದರೆ ಇಂತಹ ಯೋಜನೆಗಳಿಂದ ಪ್ರಯೋಜನವಾಗುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ, ಅಲ್ಲದೆ ಪೂರಕ ಆಹಾರ, ಪೌಷ್ಟಿಕಾಂಶಗಳ ಭಾರೀ ಡೋಸ್ಗಳಿಂದ ಲಾಭಕ್ಕಿಂತ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.
ವೈರಸ್ಗಳು ನಮ್ಮ ದೇಹದ ವಂಶವಾಹಿ ಕಾರ್ಯವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿ ಸಾಮಾನ್ಯ ಶೀತದಿಂದ ತೊಡಗಿ ಮಾರಕ ಕೊರೊನಾದಂತಹ ಕಾಯಿಲೆಗಳನ್ನು ಉಂಟು ಮಾಡಬಲ್ಲವು. ನಮ್ಮ ಮೂಗು ಮತ್ತು ಬಾಯಿಗಳನ್ನು ಮುಚ್ಚುವಂತಹ ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಶುಚಿಗೊಳಿಸಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕಿಗೆ ಒಳಗಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. “ನಮ್ಮ ದೇಹದ ಒಳಗೆಯೇ ಅತ್ಯಂತ ದಕ್ಷ ಮತ್ತು ಅತ್ಯುತ್ತಮವಾದ ಔಷಧಾಲಯವಿದೆ’ ಎಂಬುದಾಗಿ ರಾಬರ್ಟ್ ಸಿ. ಪೀಲೆ ಹೇಳಿರುವುದು ಸರಿಯಾಗಿಯೇ ಇದೆ.
ಡಾ| ರಶ್ಮಿ ಡಿ’ಸೋಜಾ
ನ್ಯೂಟ್ರಿಶನಿಸ್ಟ್, ಹೆಲ್ತ್ ಮತ್ತು ವೆಲ್ನೆಸ್ ತರಬೇತುಗಾರರು, ಇಎನ್ಟಿ ಸರ್ಜನ್
ಕೆಎಂಸಿ ಆಸ್ಪತ್ರೆ, ಮಂಗಳೂರು
You seem to have an Ad Blocker on.
To continue reading, please turn it off or whitelist Udayavani.