ಕೋವಿಡ್‌ – 19 ಕಾಲದಲ್ಲಿ ರೋಗ ನಿರೋಧಕ ಶಕ್ತಿಯ ಬಲವೃದ್ಧಿ


Team Udayavani, Nov 1, 2020, 1:17 PM IST

ಕೋವಿಡ್‌ – 19 ಕಾಲದಲ್ಲಿ ರೋಗ ನಿರೋಧಕ ಶಕ್ತಿಯ ಬಲವೃದ್ಧಿ

ಹಿಂದೊಮ್ಮೆ ಒಂದು ಆನ್‌ಲೈನ್‌ ಕಾರ್ಯಕ್ರಮದಲ್ಲಿ ವಿದೂಷಕರೊಬ್ಬರು ಭಾರತೀಯರ ಮನೆಗಳಲ್ಲಿ ಚ್ಯವನಪ್ರಾಶ ಇರುವುದರ ಬಗ್ಗೆ ಮಾತನಾಡಿದಾಗ ನಾವೂ ನಕ್ಕಿದ್ದೆವು. ಆದರೆ ಅದೇ ಕೋವಿಡ್‌-19 ಮಾರಕ ಸಾಂಕ್ರಾಮಿಕವಾಗಿ ಹಬ್ಬಿದಾಗ ಇಂಟರ್‌ನೆಟ್‌ನ ಸರ್ಚ್‌ ಎಂಜಿನ್‌ಗಳಲ್ಲಿ “ಇಮ್ಯುನಿಟಿ’ ಅಥವಾ “ರೋಗ ನಿರೋಧಕ ಶಕ್ತಿ’ಯ ಬಗ್ಗೆ ಹುಡುಕಾಡುವವರ ಸಂಖ್ಯೆ ಕಾಳಿYಚ್ಚಿನಂತೆ  ಹೆಚ್ಚಿತು. ಸೆಪ್ಟಂಬರ್‌ 13ರಂದು ಪ್ರಕಟಿಸಲಾದ ಕೋವಿಡ್‌ -19 ನಿರ್ವಹಣ ಮಾರ್ಗಸೂಚಿಗಳಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗಾಗಿ ರೋಗ ನಿರೋಧಕ ಶಕ್ತಿ ವರ್ಧಕ ಔಷಧಗಳನ್ನು ಶಿಫಾರಸು ಮಾಡಿದೆ. ಅದಕ್ಕೆ ಮುನ್ನವೂ ಮಾಧ್ಯಮಗಳಲ್ಲಿ ಅರಶಿನ ಹಾಲು, ಚ್ಯವನಪ್ರಾಶ, ತುಳಸಿ ಮತ್ತು ಶುಂಠಿ ಸಾರ ಮಿಶ್ರಿತ ಹಾಲು ಇತ್ಯಾದಿ ಉತ್ಪನ್ನಗಳ ಜಾಹೀರಾತುಗಳು ಝಗಮಗಿಸಲಾರಂಭಿಸಿದ್ದವು. ಹಾಗಾದರೆ ರೋಗ ನಿರೋಧಕ ಶಕ್ತಿ ಅಥವಾ “ಇಮ್ಯುನಿಟಿ ಪವರ್‌’ ಎಂದರೇನು? ಅದು ಔಷಧ ಅಂಗಡಿಯ ಕೌಂಟರ್‌ನಲ್ಲಿ ಸಿಗುವಂಥದ್ದೇ?

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಾಯಿಲೆ ಉಂಟು ಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ದೇಹದ ಸಾಮರ್ಥ್ಯವೇ ರೋಗ ನಿರೋಧಕ ಶಕ್ತಿ. ಇದು ಚೆನ್ನಾಗಿ ಕಾರ್ಯನಿರ್ವಹಿಸಬೇಕಾದರೆ ಅದು ಸಮತೋಲಿತವಾಗಿರಬೇಕು ಮತ್ತು ಸಾಮರಸ್ಯದಿಂದ ಇರಬೇಕು. ಜೀವನ ವಿಧಾನದಲ್ಲಿ ಕಿರು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ದೇಹದ ಪ್ರತೀ ಅಂಗಾಂಗವೂ ತನ್ನ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಅಂತಹ ಜೀವನಶೈಲಿ ಬದಲಾವಣೆಗಳು ಎಂದರೆ, ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನವನ್ನು ತ್ಯಜಿಸುವುದು, ಮಾದರಿ ದೇಹತೂಕವನ್ನು ಕಾಪಾಡಿ ಕೊಳ್ಳುವುದು, ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇರಿಸಿಕೊಳ್ಳುವುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು.

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರ ಇರಿಸಬಹುದು ಎಂಬ ಒಂದು ಉಕ್ತಿಯಿದೆ. ಅದೇಕೆಂಬುದು ಈಗ ಬಯಲಾಗಿದೆ. ಸ್ಪ್ಯಾನಿಶ್‌ ಫ್ಲ್ಯೂ ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿ ಹತ್ತಿರ ಹತ್ತಿರ ಒಂದು ಶತಮಾನ ಕಳೆಯುತ್ತ ಬಂದರೂ ಏನೂ ಬದಲಾಗಿಲ್ಲ. ಸಾವಿರಾರು ವೈಜ್ಞಾನಿಕ ಸಂಶೋಧನೆಗಳು ಮತ್ತು ಅಧ್ಯಯನ ವರದಿಗಳ ಬಳಿಕವೂ ನಾವು ಸಹಾಯಕ್ಕಾಗಿ ಪ್ರಕೃತಿಯತ್ತಲೇ ನೋಡುತ್ತಿದ್ದೇವೆ. ಪ್ರಕೃತಿಯು ಗುಣಪಡಿಸುವ ಮತ್ತು ಜೀವನವನ್ನು ಸುಗಮಗೊಳಿಸುವ ವಿಚಾರದಲ್ಲಿ ಅಪಾರ ಸಂಪದ್ಭರಿತವಾಗಿದ್ದು, ಇಂತಹ ಸಂದಿಗ್ಧ ಕಾಲದಲ್ಲಿ ಅದನ್ನೇ ಮೊರೆ ಹೋಗುವುದು ಯುಕ್ತವಾಗಿದೆ.

ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ವಿವಿಧ ಅಂಶಗಳನ್ನು ಒಂದು ಸೇನೆಯ ವಿವಿಧ ವಿಭಾಗಗಳಿಗೆ ಹೋಲಿಸಲಾಗಿದೆ. ಅಲ್ಪ ಪ್ರಮಾಣದ ಕೊರತೆಗಳು ಕೂಡ ರೋಗಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದಾಗಿದೆ.

ಆದ್ದರಿಂದ ಅಪಾಯಕಾರಿ ವೈರಸ್‌ ನಿಮ್ಮತ್ತ ಬರುವುದಕ್ಕೆ ಮುನ್ನವೇ ನಿಮ್ಮ ಆಹಾರದಲ್ಲಿ ಹೊಸ ಚೈತನ್ಯವನ್ನು ಒದಗಿಸುವುದಕ್ಕೆ ಪ್ರಯತ್ನ ಪಡಿ. ನಿಮ್ಮ ಆಹಾರದ ಬಟ್ಟಲನ್ನು ತಾಜಾ ತರಕಾರಿಗಳು ಮತ್ತು ಬಣ್ಣಬಣ್ಣದ ಹಣ್ಣುಗಳಿಂದ ಅಲಂಕರಿಸುವುದು, ಊಟ ಉಪಾಹಾರದಲ್ಲಿ ಬೆಳ್ಳುಳ್ಳಿ, ಶುಂಠಿ ಅಥವಾ ಅರಶಿನವನ್ನು ಸೇರಿಸುವುದು, ಅತಿಯಾದ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರವಸ್ತುಗಳನ್ನು ವರ್ಜಿಸುವಂತಹ ಸಣ್ಣಪುಟ್ಟ ಬದಲಾವಣೆಗಳ ಮೂಲಕ ನೀವು ರೋಗದ ವಿರುದ್ಧ ಹೋರಾಟದಲ್ಲಿ ಗೆಲ್ಲಬಹುದು.

ನಿಮ್ಮ ಆಹಾರ ಶಿಫಾರಸುಗಳು :

  • ತೆಳು ಮಾಂಸ, ಕೋಳಿಮಾಂಸ, ಮೀನು ದ್ವಿದಳ ಧಾನ್ಯಗಳು, ಮೊಟ್ಟೆ, ಯೋಗರ್ಟ್‌ ಇತ್ಯಾದಿ ಆಹಾರವಸ್ತುಗಳು ಪ್ರೊಟೀನ್‌ ಅಂಶವನ್ನು ಧಾರಾಳವಾಗಿ ಹೊಂದಿವೆ. ಆ್ಯಂಟಿಬಾಡಿಗಳು ಮತ್ತು ಬಿಳಿ ರಕ್ತ ಕಣಗಳಂತಹ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಪ್ರಮುಖ ಅಂಗಗಳನ್ನು ಕಟ್ಟಿ ಬೆಳೆಸುವುದಕ್ಕೆ ಪ್ರೊಟೀನ್‌ ಅಗತ್ಯವಾಗಿ ಬೇಕು. ಬೂತಾಯಿ ಮೀನಿನಲ್ಲಿ ಪ್ರೊಟೀನ್‌ ಮಾತ್ರವಲ್ಲದೆ ಉರಿಯೂತ ನಿರೋಧಕವಾಗಿ ಕೆಲಸ ಮಾಡುವ ಒಮೇಗಾ 3 ಆವಶ್ಯಕ ಫ್ಯಾಟಿ ಆ್ಯಸಿಡ್‌, ಝಿಂಕ್‌ ಮತ್ತು ಸೆಲೆನಿಯಂ ಕೂಡ ಇರುವುದರಿಂದ ಅದು ನಮ್ಮ ಆಹಾರದ ಭಾಗವಾಗಿರುವುದು ಇನ್ನಷ್ಟು ರಕ್ಷಣೆಯನ್ನು ಒದಗಿಸುತ್ತದೆ.
  • ಚೀನೀ ಕಾಯಿಗಳನ್ನು ಕತ್ತರಿಸುವಾಗ ಬೀಜಗಳನ್ನು ಎಸೆಯುವುದುಂಟು, ಆದರೆ ಈಗ ಅವುಗಳನ್ನು ತೆಗೆದಿಟ್ಟು ಸೇವಿಸುವುದಕ್ಕೆ ಉತ್ತಮ ಕಾಲ. ಚೀನೀಕಾಯಿಯ ಅರ್ಧ ಕಪ್‌ನಷ್ಟು ಬೀಜಗಳಲ್ಲಿ 5 ಮಿಲಿಗ್ರಾಂನಷ್ಟು ಝಿಂಕ್‌ ಇರುತ್ತದೆ. ಇದು ರೋಗ ನಿರೋಧಕ ಶಕ್ತಿ ಸಮರ್ಪಕವಾಗಿ ಕೆಲಸ ಮಾಡಲು ಅಗತ್ಯ. ನೀವು ಚೀನೀಕಾಯಿ ಬೀಜಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಅಥವಾ ಮೈಕ್ರೊವೇವ್‌ ಓವನ್‌ನಲ್ಲಿ ಏಳೆಂಟು ನಿಮಿಷ ಬೇಯಿಸಿ ತಿನ್ನಬಹುದು.
  • ಯೋಗರ್ಟ್‌ ಮತ್ತು ಮೊಸರು ಅಗತ್ಯ: ನಮ್ಮ ದೇಹದ ಶೇ.70ರಷ್ಟು ರೋಗ ನಿರೋಧಕ ಅಂಗಾಂಶಗಳು ಕರುಳಿನಲ್ಲಿ ಇರುತ್ತವೆ. ಕೆಲವು ಬಗೆಯ ಯೋಗರ್ಟ್‌ಗಳು ಮತ್ತು ಮೊಸರಿನಲ್ಲಿ ಕಂಡುಬರುವ ಸೂಕ್ಷ್ಮಾಣುಗಳ ಸಜೀವ ಸಮೂಹಗಳು ನಮ್ಮ ಪಚನಾಂಗ ವ್ಯೂಹವನ್ನು ಸೇರಿದ ಬಳಿಕ ಅಲ್ಲಿರುವ ಲ್ಯಾಕ್ಟೊಬೆಸಿಲಸ್‌ ಆ್ಯಸಿಡೋಫಿಲಸ್‌ನಂತಹ ಬ್ಯಾಕ್ಟೀರಿಯಾಗಳ ಜತೆಗೆ ಸೇರಿಕೊಂಡು ವೃದ್ಧಿಸುತ್ತವೆ. ನಿಮ್ಮ ಫ್ರುಟ್‌ ಡೆಸರ್ಟ್‌ಗಳನ್ನು ಯೋಗರ್ಟ್‌ನಿಂದ ಅಲಂಕರಿಸಲು ಮತ್ತು ದಾಲಿcನ್ನಿ ಅಥವಾ ನಟ್‌ಮೆಗ್‌ ಪುಡಿ ಸಿಂಪಡಿಸಿ ವೆನಿಲ್ಲಾ ಫ್ಲೇವರ್‌ ಜತೆಗೆ ಸ್ವಾದ ಹೆಚ್ಚಿಸಲು ಪ್ರಯತ್ನಿಸಿ.
  • ಜಪಾನಿಯರಲ್ಲಿ ರೋಗ ಉಂಟಾಗುವಿಕೆ ಕಡಿಮೆ. ಯಾಕೆಂದರೆ ಅವರು ಗ್ರೀನ್‌ ಟೀ ಕುಡಿಯುವುದು ಹೆಚ್ಚು. ಇದು ಆ್ಯಂಟಿಓಕ್ಸಿಡೆಂಟ್‌ಗಳ ಆಗರವಾಗಿದೆ. ಕಪ್ಪು ಚಹಾದಲ್ಲಿರುವ ಎಲ್‌-ಥಿಯಾನಿನ್‌ ಎಂಬ ಸಂಯುಕ್ತವು ರೋಗ ಪ್ರತಿರೋಧ ಶಕ್ತಿಗೆ ಬಲ ಒದಗಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
  • ಬೆಳ್ಳುಳ್ಳಿ ಮತ್ತು ನೀರುಳ್ಳಿಗಳಲ್ಲಿ ಗಂಧಕ ಸಂಯುಕ್ತಗಳಿದ್ದು, ಇದು ಮ್ಯಾಕ್ರೊಫೇಗಸ್‌ ಮತ್ತು ಟಿ ಸೆಲ್‌ಗ‌ಳ ಹೋರಾಟ ಶಕ್ತಿಯನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ. ಅರಶಿನ, ದಾಲಿcನ್ನಿ, ಲವಂಗ ಮತ್ತು ಕಾಳುಮೆಣಸಿನಂತಹ ಸಂಬಾರ ಪದಾರ್ಥಗಳು ಉರಿಯೂತ ನಿರೋಧಕ ಅಂಶಗಳನ್ನು ಹೊಂದಿವೆ. ಇವುಗಳನ್ನು ಅನಾದಿ ಕಾಲದಿಂದಲೂ ಭಾರತೀಯ ಅಡುಗೆ ಪದ್ಧತಿಯಲ್ಲಿ ಉಪಯೋಗಿಸಲಾಗುತ್ತಿದೆ.
  • ತಾಜಾ ಹಣ್ಣು ತರಕಾರಿಗಳಿಂದ ಊಟದ ಬಟ್ಟಲನ್ನು ಅಲಂಕರಿಸಿ. ಸಾವಯವವಾಗಿರಲಿ ಅಲ್ಲದಿರಲಿ; ಪ್ರತೀ ದಿನ ಏಳೆಂಟು ಸಲವಾದರೂ ಗಾಢ ಬಣ್ಣದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.

ಇನ್ನಷ್ಟು ಸಲಹೆಗಳು :

  • ಸಂಸ್ಕರಿತ ಸಕ್ಕರೆ ಮತ್ತು ಪಿಷ್ಟ ಸಹಿತ ಆಹಾರವಸ್ತುಗಳು ಹೆಚ್ಚು ಗ್ಲೆ„ಸೇಮಿಕ್‌ ಇಂಡೆಕ್ಸ್‌ ಹೊಂದಿದ್ದು, ಬಿಳಿ ರಕ್ತ ಕಣಗಳ ಚಟುವಟಿಕೆಯನ್ನು ತಗ್ಗಿಸುತ್ತವೆ. ಇದರಿಂದ ರೋಗಕಾರಕಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಸಾಮರ್ಥ್ಯ ಕುಗ್ಗುತ್ತದೆ.
  • ಸ್ಯಾಚ್ಯುರೇಟೆಡ್‌ ಮತ್ತು ಟ್ರಾನ್ಸ್‌ ಫ್ಯಾಟ್‌ಗಳನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಉರಿಯೂತ ಉಂಟಾಗುವ ಸಾಧ್ಯತೆ ಇರುತ್ತದೆ.
  • ಮದ್ಯವು ರೋಗ ನಿರೋಧಕ ಶಕ್ತಿಯನ್ನು ಕೂಡ ಅಮಲಿಗೀಡು ಮಾಡುತ್ತದೆ. ಆದ್ದರಿಂದ ವರ್ಜಿಸುವುದೇ ಲೇಸು.

ರೋಗ ನಿರೋಧಕ ಶಕ್ತಿಯ ಸಾಮರ್ಥ್ಯ ವೃದ್ಧಿಸುವ ಅಡ್ಡದಾರಿಗಳ ಬಗ್ಗೆ ಕೆಲವು ಅನಧಿಕೃತ ಆರೋಗ್ಯ ಸೇವಾದಾರರು ಪ್ರಕಟಿಸುತ್ತಿರುವ ಪ್ರಕಟನೆ, ಸುದ್ದಿಗಳನ್ನು ನಂಬದಿರುವುದು ಲೇಸು. ದೇಹವನ್ನು ಒಮ್ಮೆ ಶುದ್ಧಗೊಳಿಸಿ ಬಳಿಕ ವಿಟಮಿನ್‌ಗಳು, ಖನಿಜಾಂಶಗಳು ಮತ್ತು ಅಮೈನೊ ಆ್ಯಸಿಡ್‌ಗಳ ಭಾರೀ ಡೋಸ್‌ಗಳನ್ನು ದೇಹಕ್ಕೆ ನೀಡುವ ಯೋಜನೆಗಳನ್ನು ಅವರು ಶಿಫಾರಸು ಮಾಡುತ್ತಾರೆ. ಆದರೆ ಇಂತಹ ಯೋಜನೆಗಳಿಂದ ಪ್ರಯೋಜನವಾಗುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ, ಅಲ್ಲದೆ ಪೂರಕ ಆಹಾರ, ಪೌಷ್ಟಿಕಾಂಶಗಳ ಭಾರೀ ಡೋಸ್‌ಗಳಿಂದ ಲಾಭಕ್ಕಿಂತ ಹಾನಿಯಾಗುವ ಸಾಧ್ಯತೆಯೇ ಹೆಚ್ಚು.

ವೈರಸ್‌ಗಳು ನಮ್ಮ ದೇಹದ ವಂಶವಾಹಿ ಕಾರ್ಯವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿ ಸಾಮಾನ್ಯ ಶೀತದಿಂದ ತೊಡಗಿ ಮಾರಕ ಕೊರೊನಾದಂತಹ ಕಾಯಿಲೆಗಳನ್ನು ಉಂಟು ಮಾಡಬಲ್ಲವು. ನಮ್ಮ ಮೂಗು ಮತ್ತು ಬಾಯಿಗಳನ್ನು ಮುಚ್ಚುವಂತಹ ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ಶುಚಿಗೊಳಿಸಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕಿಗೆ ಒಳಗಾಗದಂತೆ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. “ನಮ್ಮ ದೇಹದ ಒಳಗೆಯೇ ಅತ್ಯಂತ ದಕ್ಷ ಮತ್ತು ಅತ್ಯುತ್ತಮವಾದ ಔಷಧಾಲಯವಿದೆ’ ಎಂಬುದಾಗಿ ರಾಬರ್ಟ್‌ ಸಿ. ಪೀಲೆ ಹೇಳಿರುವುದು ಸರಿಯಾಗಿಯೇ ಇದೆ.

 

ಡಾ| ರಶ್ಮಿ ಡಿ’ಸೋಜಾ

ನ್ಯೂಟ್ರಿಶನಿಸ್ಟ್‌, ಹೆಲ್ತ್‌ ಮತ್ತು ವೆಲ್‌ನೆಸ್‌ ತರಬೇತುಗಾರರು, ಇಎನ್‌ಟಿ ಸರ್ಜನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.