World Osteoporosis Day: ಆಸ್ಟಿಯೊಪೊರೋಸಿಸ್‌ ಅಥವಾ ಮೂಳೆ ಸವಕಳಿ ಎಂದರೇನು?

ದುರ್ಬಲವಾದ ಮೂಳೆಗಳಿಗೆ ವಿದಾಯ ಹೇಳಿ

Team Udayavani, Oct 20, 2024, 4:24 PM IST

1

ವಿಶ್ವ ಆಸ್ಟಿಯೊಪೊರೋಸಿಸ್‌ ದಿನವು ಪ್ರತೀ ವರ್ಷ ಅಕ್ಟೋಬರ್‌ 20ರಂದು ಆಚರಿಸಲಾಗುವ ಜಾಗತಿಕ ಆರೋಗ್ಯ ಕಾರ್ಯಕ್ರಮವಾಗಿದೆ. ಆಸ್ಟಿಯೊಪೊರೋಸಿಸ್‌ನ ಆರಂಭಿಕ ರೋಗನಿರ್ಣಯ, ಅದರ ಚಿಕಿತ್ಸೆ ಮತ್ತು ಮೂಳೆಮುರಿತದ ಅಪಾಯವನ್ನು ತಡೆಗಟ್ಟಲು ವಿವಿಧ ಜಾಗೃತಿ ಅಭಿಯಾನಗಳು ಮತ್ತು ಚಟುವಟಿಕೆಗಳನ್ನು ಈ ದಿನ ನಡೆಸಲಾಗುತ್ತದೆ. ಈ ವರ್ಷ ವಿಶ್ವ ಆಸ್ಟಿಯೊಪೊರೋಸಿಸ್‌ ದಿನದ ಧ್ಯೇಯವಾಕ್ಯವು ‘ದುರ್ಬಲವಾದ ಮೂಳೆಗಳಿಗೆ ವಿದಾಯ ಹೇಳಿ’ “Say No To Fragile Bones”) ಆಗಿದೆ.

‘ಆಸ್ಟಿಯೊ’ ಎಂದರೆ ಮೂಳೆಗಳಿಗೆ ಸಂಬಂಧಿಸಿದ ಮತ್ತು ʼಪೊರೋಸಿಸ್‌’ ಎಂದರೆ ರಂಧ್ರಗಳು ಎಂದರ್ಥ. ಹೀಗಾಗಿ ʼಆಸ್ಟಿಯೊಪೊರೋಸಿಸ್‌’ ಎಂದರೆ ರಂಧ್ರವಿರುವ ಮೂಳೆಗಳು. ನಮ್ಮ ಮೂಳೆಯೊಳಗೆ ಸ್ಪಂಜಿನಂಥ ವಸ್ತುವಿರುತ್ತದೆ. ಈ ಸ್ಪಾಂಜ್‌ ರಂಧ್ರಗಳನ್ನು ಹೊಂದಿರುತ್ತದೆ, ಇವುಗಳು ದೊಡ್ಡದಾಗಬಹುದು ಅಥವಾ ರಂಧ್ರಗಳ ಸಂಖ್ಯೆಯು ಹೆಚ್ಚಾಗಬಹುದು. ಇದರ ಪರಿಣಾಮಗಿ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಮೂಳೆ ಮುರಿತದ ಅಪಾಯ ಹೆಚ್ಚುತ್ತದೆ. ಆಸ್ಟಿಯೊಪೊರೋಸಿಸ್‌ ಬಾಧಿತರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದಾಗ, ಕಡಿಮೆ ಎತ್ತರದಿಂದ ಬಿದ್ದರೂ ಅಥವಾ ನಿಂತ ಸ್ಥಳದಿಂದ ಜಾರಿದರೂ, ಮೂಳೆ ಮುರಿತಕ್ಕೆ ಒಳಗಾಗುವ ಸಂಭವವಿರುತ್ತದೆ.

ಈ ಕಾಯಿಲೆಯ ವಿಶೇಷ ಎಂದರೆ, ಮೂಳೆ ಮುರಿತ ಸಂಭವಿಸುವವರೆಗೆ ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳು ಕಾಣಿಸವು. ಆದ್ದರಿಂದ ಇದನ್ನು ‘ನಿಶ್ಶಬ್ದ ಕಾಯಿಲೆ’ ಎಂದು ಕರೆಯುತ್ತಾರೆ. ಆಸ್ಟಿಯೊಪೊರೋಸಿಸ್‌ನಿಂದಾಗಿ ಸಾಮಾನ್ಯವಾಗಿ ಮಣಿಕಟ್ಟು, ಕೈ, ಸೊಂಟ ಮತ್ತು ಬೆನ್ನುಮೂಳೆ ಮುರಿಯುವ ಅಪಾಯವಿರುತ್ತದೆ ಮತ್ತು ಇದು ತೀವ್ರ ನೋವು, ಅಂಗವೈಕಲ್ಯ ಮತ್ತು ಸಾವಿಗೂ ಕಾರಣವಾಗಬಹುದು.

ಆಸ್ಟಿಯೋಪೋರೋಸಿಸ್‌ ಅಥವಾ ಮೂಳೆ ಸವಕಳಿಗೆ ಕಾರಣವೇನು?
ಮೂಳೆಯು ಒಂದು ಜೀವಂತ ಅಂಗಾಂಶವಾಗಿದ್ದು, ಹಳೆಯ ಮೂಳೆಗಳು ಸ್ವತಃ ನಷ್ಟವಾಗಿ ಹೊಸ ಮೂಳೆ ಸ್ವತಃ ಮರುನಿರ್ಮಾಣಗೊಳ್ಳುತ್ತವೆ. ಈ ಪ್ರಕ್ರಿಯೆ ಯೌವನಾವಸ್ಥೆಯಲ್ಲಿ ತ್ವರಿತವಾಗಿ ನಡೆಯುತ್ತದೆ. ಮೂಳೆ ನಷ್ಟವಾಗುವುದಕ್ಕಿಂತ ಶೀಘ್ರವಾಗಿ ಹೊಸ ಮೂಳೆಗಳು ಬೆಳೆಯುತ್ತವೆ. ಆದರೆ ವಯಸ್ಸಾದಂತೆ ಈ ಪ್ರಕ್ರಿಯೆ ನಿಧಾನವಾಗಿ, ಹಳೆಯ ಮೂಳೆ ಅಂಗಾಂಶಗಳ ನಷ್ಟವಾಗುವಿಕೆಗೆ ಹೋಲಿಸಿದರೆ ಹೊಸ ಮೂಳೆಗಳ ರಚನೆಯು ನಿಧಾನಗೊಳ್ಳುತ್ತದೆ. ಹೀಗಾಗಿ ಮೂಳೆ ದ್ರವ್ಯರಾಶಿ ಮತ್ತು ಸಾಂದ್ರತೆ ಕಡಿಮೆಯಾಗಿ ಮೂಳೆಸವಕಳಿ ಉಂಟಾಗುತ್ತದೆ.

ಆಸ್ಟಿಯೊಪೊರೋಸಿಸ್‌ ಮತ್ತು ದುರ್ಬಲತೆ ಮುರಿತಗಳ ಜಾಗತಿಕ ಪರಿಣಾಮಗಳ ಅಂಕಿಅಂಶಗಳು
ವಿಶ್ವಾದ್ಯಂತ, ಪ್ರತೀ ಮೂರು ಸೆಕೆಂಡಿಗೆ ಒಬ್ಬ ವ್ಯಕ್ತಿಗೆ ಮೂಳೆಸವಕಳಿಯಿಂದ (Osteoporosis) ಮೂಳೆ ಮುರಿತ ಸಂಭವಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. 50 ವರ್ಷ ವಯಸ್ಸಿನ ಇಬ್ಬರು ಮಹಿಳೆಯರಲ್ಲಿ ಒಬ್ಬರು ಮತ್ತು ಐದು ಪುರುಷರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಇದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮೂಳೆಸವಕಳಿಯಿಂದ ಉಂಟಾಗುವ ಮೂಳೆ ಮುರಿತಗಳು ಮಧುಮೇಹ, ಹೃದಯಾಘಾತ ಮತ್ತು ಸ್ತನ ಕ್ಯಾನ್ಸರ್‌ ಸೇರಿದಂತೆ ಇತರ ಅನೇಕ ಕಾಯಿಲೆಗಳಿಗಿಂತ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುವಂತೆ ಮಾಡುತ್ತವೆ.

  • ಆಸ್ಟಿಯೊಪೊರೋಸಿಸ್‌: ಜಾಗತಿಕವಾಗಿ ಅಂದಾಜು 500 ದಶಲಕ್ಷ ಪುರುಷರು ಮತ್ತು ಮಹಿಳೆಯರನ್ನು ತೀವ್ರವಾಗಿ ಬಾಧಿಸುತ್ತಿದೆ.
  •  ಶೇ. 6.4 ಪುರುಷರು ಮತ್ತು ಶೇ. 21.2 ಮಹಿಳೆಯರು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಾರೆ.
  •  ವಾರ್ಷಿಕ ಸುಮಾರು 37 ದಶಲಕ್ಷ ಜನರಿಗೆ ಮೂಳೆ ಸವಕಳಿಯಿಂದ ಮೂಳೆ ಮುರಿತ ಉಂಟಾಗುತ್ತದೆ.

ಸೊಂಟದ ಮೂಳೆ ಮುರಿತವು ಉಂಟಾದರೆ ಶೇ. 20ರಿಂದ ಶೇ. 24 ಜನರು ಮುರಿತದ ಅನಂತರದ ಮೊದಲ ವರ್ಷದಲ್ಲೇ ಸಾವನ್ನಪ್ಪಬಹುದು. ಇತರ ಮೂಳೆ ಮುರಿತಗಳೂ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ. ಮುರಿತದಿಂದ ಬದುಕುಳಿದರೂ ಸ್ವತಂತ್ರವಾಗಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ತೊಂದರೆ ಉಂಟಾಗಬಹುದು. ಅಂಕಿಅಂಶಗಳ ಪ್ರಕಾರ ಶೇ. 40 ಜನರಿಗೆ ಸ್ವತಂತ್ರವಾಗಿ ನಡೆಯಲು ಸಾಧ್ಯವಾಗುವುದಿಲ್ಲ ಮತ್ತು ಶೇ. 60 ಜನರಿಗೆ ಒಂದು ವರ್ಷದ ಅನಂತರವೂ ಸಹಾಯದ ಆವಶ್ಯಕತೆ ಇರುತ್ತದೆ. ಸೊಂಟದ ಮುರಿತದ ಅನಂತರ ಶೇ. 33 ಜನರು ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತರಾಗುತ್ತಾರೆ. ಇದರಿಂದ ಅವರ ಆರೈಕೆ ಮಾಡುವವರು ಅಥವಾ ಕುಟುಂಬದ ಸದಸ್ಯರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಇದು ಮೂಳೆಸವಕಳಿಯ ತೀವ್ರತೆ ಮತ್ತು ಅದರ ಪರಿಣಾಮಗಳನ್ನು ತೋರಿಸುತ್ತದೆ.

ಎಲ್ಲ ಮೂಳೆಮುರಿತಗಳು ಆಕಸ್ಮಿಕವಲ್ಲ!
ಪ್ರತೀ ವರ್ಷ ಲಕ್ಷಾಂತರ ವಯಸ್ಸಾದವರು ಜಾರಿ ಬೀಳುವುದರಿಂದ ಅಪಾಯಕಾರಿ ಸೊಂಟದ ಮೂಳೆ ಮುರಿತವನ್ನು ಅನುಭವಿಸುತ್ತಾರೆ. ಅನೇಕರು ಮಣಿಕಟ್ಟು, ಭುಜ, ಸೊಂಟ ಅಥವಾ ಬೆನ್ನುಮೂಳೆಯ ಮುರಿತಗಳಿಂದಾಗಿ ತೀವ್ರ ನೋವಿನಿಂದ ಬಳಲುತ್ತಾರೆ. ಈ ಎಲ್ಲ ಮೂಳೆ ಮುರಿತಗಳು ಆಕಸ್ಮಿಕವಲ್ಲ; ಇವುಗಳಿಗೆ ಮೂಲ ಕಾರಣ ಮೂಳೆಸವಕಳಿ ಆಗಿರುವ ಸಾಧ್ಯತೆಯಿದೆ.

ಒಂದು ಮುರಿತವು ಇನ್ನೊಂದಕ್ಕೆ ಕಾರಣವಾಗುತ್ತದೆ
ಮೂಳೆಸವಕಳಿಗೆ ಸರಿಯಾಗಿ ರೋಗನಿರ್ಣಯ ಮಾಡದೆ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ಒದಗಿಸದಿದ್ದರೆ, ಮೂಳೆಸವಕಳಿಯಿಂದ ಒಮ್ಮೆ ಮೂಳೆ ಮುರಿತ ಅನುಭವಿಸಿದ ವ್ಯಕ್ತಿಯು ಭವಿಷ್ಯದಲ್ಲಿ ಮತ್ತೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗುತ್ತದೆ.

  • ಒಮ್ಮೆ ಮೂಳೆಸವಕಳಿಯಿಂದ ಮೂಳೆ ಮುರಿತ ಅನುಭವಿಸಿದ ಜನರಲ್ಲಿ ಸರಿಸುಮಾರು ಅರ್ಧದಷ್ಟು ಜನರು ಮತ್ತೂಮ್ಮೆ ಮುರಿತಕ್ಕೆ ಒಳಗಾಗುತ್ತಾರೆ.
  • ಮೊದಲನೆಯ ಸಲ ಮೂಳೆ ಮುರಿತ ಉಂಟಾಗುವವರಿಗೆ ಮುಂದೆ ಮತ್ತೆ ಮೂಳೆ ಮುರಿತವಾಗುವ ಅಪಾಯವೂ ಹೆಚ್ಚಿರುತ್ತದೆ.
  • ಹೊಸದಾಗಿ ಬೆನ್ನುಮೂಳೆ ಮುರಿತ ಅನುಭವಿಸಿದ ನಾಲ್ಕು ಮಹಿಳೆಯರಲ್ಲಿ ಒಬ್ಬರು ಒಂದು ವರ್ಷದೊಳಗೆ ಮತ್ತೂಮ್ಮೆ ಮೂಳೆ ಮುರಿತವನ್ನು ಅನುಭವಿಸುತ್ತಾರೆ.
  • ಸರಿಯಾದ ರೋಗನಿರ್ಣಯ ಮತ್ತು ಮುಂಚಿತ ಚಿಕಿತ್ಸೆಯೊಂದಿಗೆ ಈ ಅಪಾಯವನ್ನು ತಡೆಯಲು ಪ್ರಯತ್ನಿಸಬೇಕು

ನೀವು ಏಕೆ ಕಾಳಜಿ ವಹಿಸಬೇಕು?
ಮೂಳೆಸವಕಳಿಯಿಂದ ಉಂಟಾಗುವ ಮುರಿತಗಳ ಪರಿಣಾಮಗಳು ಅತ್ಯಂತ ಗಂಭೀರವಾಗಬಹುದು. ಈ ಮುರಿತಗಳಿಂದಾಗಿ ದೀರ್ಘ‌ಕಾಲದ ನೋವು, ನಿಶ್ಚಲತೆ ಮತ್ತು ಅಂಗವೈಕಲ್ಯ ಉಂಟಾಗುವುದರಿಂದ ಜೀವನದ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಬೇರೆಯವರ ಮೇಲೆ ಅವಲಂಬನೆಯು ಹೆಚ್ಚಾಗುತ್ತದೆ.

ಮೂಳೆ ಮುರಿತಗಳ ಎಚ್ಚರಿಕೆಯ ಚಿಹ್ನೆಗಳು
ಸೊಂಟದ ಮೂಳೆ ಮುರಿತಕ್ಕಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು ಅರ್ಧದಷ್ಟು ರೋಗಿಗಳು ಈ ಹಿಂದೆ ಯಾವುದಾದರೂ ಒಂದು ರೀತಿಯ ಮೂಳೆ ಮುರಿತಕ್ಕೆ ಒಳಗಾಗಿರುತ್ತಾರೆ. ಯಾವಾಗಲೂ ಮೊದಲ ಮುರಿತವು ಎಚ್ಚರಿಕೆಯ ಸಂಕೇತವಾಗಿರುತ್ತದೆ! ಇದನ್ನು ತತ್‌ಕ್ಷಣಕ್ಕೆ ಮೂಳೆ ಸವಕಳಿ ಎಂದು ರೋಗನಿರ್ಣಯ ಮಾಡಿದರೆ ನಿರ್ವಹಣೆ ಮತ್ತು ಚಿಕಿತ್ಸೆ ಸುಲಭವಾಗಿರುತ್ತದೆ. ವಾಸ್ತವವೆಂದರೆ ಬಹುತೇಕ ಸಂದರ್ಭಗಳಲ್ಲಿ ಮೂಳೆಮುರಿತವುಂಟಾದಾಗ, ಅದು ಮೂಳೆಸವಕಳಿಯಿಂದಲೇ ಉಂಟಾಗಿದೆ ಎಂದು ಗುರುತಿಸಲಾಗುವುದಿಲ್ಲ. ಇದರಿಂದ ರೋಗಿಗಳು ಮುಂದೆ ಹೆಚ್ಚಿನ ಅಪಾಯವನ್ನು ಅನುಭವಿಸಬೇಕಾಗುತ್ತದೆ. ಮುರಿತದ ಅಪಾಯವನ್ನು ಶೇ. 30-70ರಷ್ಟು ಕಡಿಮೆ ಮಾಡುವ ಪರಿಣಾಮಕಾರಿ ಔಷಧಗಳಿದ್ದರೂ ಶೇ. 80ಕ್ಕಿಂತ ಹೆಚ್ಚು ಮುರಿತದ ರೋಗಿಗಳು ಮೂಳೆಸವಕಳಿ ತಪಾಸಣೆ ಅಥವಾ ಚಿಕಿತ್ಸೆಗೆ ಒಳಗಾಗಿರುವುದಿಲ್ಲ.

ಮೂಳೆಮುರಿತದ ಅಪಾಯ ಪರೀಕ್ಷಿಸಿಕೊಳ್ಳಿ
ನೀವು 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷದವರಾಗಿದ್ದರೆ ಮತ್ತು ಈ ಹಿಂದೆ ಮೂಳೆ ಮುರಿತಕ್ಕೆ ಒಳಗಾಗಿದ್ದರೆ ಮೂಳೆ ಖನಿಜ ಸಾಂದ್ರತೆಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇದಲ್ಲದೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಎಫ್ಆರ್‌ಎಎಕ್ಸ್‌ ಕ್ಯಾಲ್ಕುಲೇಟರ್‌ ಮುಖಾಂತರ ಸ್ವತಃ ನಿಮ್ಮ ಅಪಾಯದ ಮಟ್ಟವನ್ನು ತಿಳಿದುಕೊಳ್ಳಬಹುದು. ನೀವು ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಕಂಡುಬಂದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರನ್ನು ಭೇಟಿ ಮಾಡಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ಪಡೆಯಬಹುದು.

ಅಪಾಯ ಉಂಟು ಮಾಡುವ ಅಂಶಗಳ ಬಗ್ಗೆ ಎಚ್ಚರದಿಂದಿರಿ
ಮೂಳೆಸವಕಳಿ ಮತ್ತು ಅದರಿಂದ ಉಂಟಾಗುವ ಮೂಳೆ ಮುರಿತವನ್ನು ತಡೆಯಲು ಕೆಲವು ಅಪಾಯಕಾರಿ ಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ:

ಎತ್ತರದ ನಷ್ಟ: 3 ಸೆಂ.ಮೀ. ಅಥವಾ 1 ಇಂಚು ಎತ್ತರ ಕಡಿಮೆಯಾಗುವುದು.

ಬೇಗ ಋತುಬಂಧ: 45 ವರ್ಷಕ್ಕಿಂತ ಮೊದಲು ಋತುಬಂಧಗೊಳ್ಳುವುದು.

ದೀರ್ಘಾವಧಿಯ ಗ್ಲುಕೊಕಾರ್ಟಿಕಾಯ್ಡ ಅಥವಾ ಸ್ಟಿರಾಯ್ಡ ಚಿಕಿತ್ಸೆ: ಆಸ್ಟಿಯೊಪೊರೋಸಿಸ್‌ ಅಪಾಯವು ಸ್ಟಿರಾಯ್ಡಗಳ ಪ್ರಮಾಣ, ತೆಗೆದುಕೊಳ್ಳುವ ಸಮಯ ಮತ್ತು ಇತರ ಅಂಶಗಳೊಂದಿಗೆ ಹೆಚ್ಚಾಗುತ್ತದೆ.

  • ಮೂಳೆಸವಕಳಿಯ ಕುಟುಂಬ ಇತಿಹಾಸ: ಕುಟುಂಬದಲ್ಲಿ ಮೂಳೆಸವಕಳಿಯುಂಟಾ ಗುವ ಹಿನ್ನಲೆ ಇದ್ದರೆ ಮುರಿತದ ಅಪಾಯ ಹೆಚ್ಚಾಗಿರುತ್ತದೆ.
  • ರುಮಟಾಯ್ಡ್ ಸಂಧಿವಾತ: ಈ ಕಾಯಿಲೆ ಇತರ ಮೂಳೆ ಸಂಬಂಧಿತ ಸಮಸ್ಯೆಗಳ ಅಪಾಯವನ್ನೂ ಹೆಚ್ಚಿಸುತ್ತದೆ.
  • ಪುರುಷರಲ್ಲಿ ಪ್ರಾಥಮಿಕ/ಮಾಧ್ಯಮಿಕ ಹೈಪೊಗೊನಾಡಿಸಮ್‌: ಪುರುಷರಲ್ಲಿ ಹಾರ್ಮೋನ್‌ ಸಮತೋಲನದ ಸಮಸ್ಯೆಗಳು.
  • ಕಡಿಮೆ ತೂಕ: ಬಾಡಿ ಮಾಸ್‌ ಇಂಡೆಕ್ಸ್‌ 19 ಕೆ.ಜಿ. /ಎಂಪಿಗಿಂತ ಕಡಿಮೆ ಇದ್ದರೆ.
  • ಜೀವನಶೈಲಿ ಅಂಶಗಳು: ಧೂಮಪಾನ, ಅತಿಯಾದ ಆಲ್ಕೋಹಾಲ್‌ ಸೇವನೆ, ಕಡಿಮೆ ದೈಹಿಕ ಚಟುವಟಿಕೆ, ಮತ್ತು ಕಡಿಮೆ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಮಟ್ಟಗಳು.

– ಡಾ| ಅನುಪಮಾ ಡಿ.ಎಸ್‌., ಅಸಿಸ್ಟೆಂಟ್‌ ಪ್ರೊಫೆಸರ್‌, ಪ್ರಸನ್ನ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Kar-kerala

Ranaji Trophy: ಕರ್ನಾಟಕ-ಕೇರಳ ಮೂರನೇ ದಿನದಾಟ ರದ್ದು

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್‌ಸ್ಟೆಬಲ್‌

Fraud Case: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ನಗದು ದೋಚಿದ ಕಾನ್‌ಸ್ಟೆಬಲ್‌

BNg-Bulls

Pro Kabaddi: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಸೋಲು

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ

Shiggaon Bypoll: ನಾವು ಟಿಕೆಟ್‌ ಕೇಳಿಲ್ಲ: ಭರತ್‌ ಬೊಮ್ಮಾಯಿ

BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ

BBK11: ಹೋದವರನ್ನೆಲ್ಲ ವಾಪಸ್ ಕರೆಸಿದರೆ ಹುಚ್ಚ ವೆಂಕಟ್ ಅವರನ್ನು ಸಹ ಕರೆಸಬೇಕು.. ಕಿಚ್ಚ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Health: ರೋಗಿ ಸುರಕ್ಷೆಗೆ ಒಂದು ನಮನ

10

Health: ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯಕ್ಕೆ ಉತ್ತೇಜನ

7

Health: ಮಾತನಾಡುವ ಕಲೆ ಮತ್ತು ಆಲಿಸುವ ಶಕ್ತಿ

6-anasthesia

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

5-health

Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

Udupi: ಗೀತಾರ್ಥ ಚಿಂತನೆ 70: ಅರ್ಜುನನಲ್ಲಿ ಮೋಹದ ಕಾರಣದಿಂದ ಭಯ

1-a-suddu

Kukke Subrahmanya: ದಿಢೀರ್‌ ಮಳೆಗೆ ತುಂಬಿ ಹರಿದ ದರ್ಪಣ ತೀರ್ಥ ನದಿ

1-mulky

Mulki: ಮನೆಗೆ ನುಗ್ಗಿ ಸೆರೆ ಸಿಕ್ಕ ಚಿರತೆ ; ಜನರಲ್ಲಿ ಹೆಚ್ಚಾದ ಭೀತಿ

Kar-kerala

Ranaji Trophy: ಕರ್ನಾಟಕ-ಕೇರಳ ಮೂರನೇ ದಿನದಾಟ ರದ್ದು

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Karnataka: ಆನ್‌ಲೈನ್‌ನಲ್ಲೇ ಅನುಕಂಪದ ಅರ್ಜಿ ನಿರ್ವಹಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.