![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 16, 2019, 6:39 AM IST
ಪಕ್ಕದಲ್ಲಿರುವವರೆಲ್ಲ ಗೈಡ್ ತೆಗೆದು, ಕದ್ದು ಕದ್ದು ನೋಡಿ ಬರೆಯುತ್ತಿರುವುದನ್ನು ಗಮನಿಸಿದೆ. ನನಗೂ ತಡೆಯಲಾಗಲಿಲ್ಲ. ನಾನು ಓದದೇ ಇದ್ದ ಒಂದು ಗಾದೆ ಮಾತಿನ ವಿವರಣೆಯ ಪ್ರಶ್ನೆಗೆ ಉತ್ತರ ಆಲೋಚಿಸುತ್ತ ಕುಳಿತಿದ್ದೆ. ಎಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಸರಿ, ಎಲ್ಲರೂ ಕಾಪಿ ಮಾಡುತ್ತಿದ್ದಾರೆ. ನಾನೂ ಅದೊಂದು ಪ್ರಶ್ನೆಯನ್ನು ಕಾಪಿ ಮಾಡೇ ಬಿಡೋಣ ಅಂತ ನಿರ್ಧರಿಸಿದೆ.
ಹೈಸ್ಕೂಲ್ನಲ್ಲಿ ಕ್ಲಾಸಿಗೆ ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ಹುಡುಗ ನಾನು. ಆ ಜಾಣತನವೆಲ್ಲವೂ ಹೆತ್ತವರ, ಶಿಕ್ಷಕರ ಶ್ರೀರಕ್ಷೆ ಎಂದರೆ ತಪ್ಪಲ್ಲ. ನಾನು ಸಣ್ಣವನಿದ್ದಾಗ ನನ್ನ ಅಪ್ಪ-ಅಮ್ಮ ಪುಣೆ, ಮಹಾರಾಷ್ಟ್ರ, ಮೀರಜ…, ಸಾಂಗಲಿಗೆ ಉದ್ಯೋಗ ನಿಮಿತ್ತ ಹೋಗಬೇಕಾದಾಗ ನನ್ನನ್ನು ಅಜ್ಜ ಅಜ್ಜಿಯ ಹತ್ತಿರ ಬಿಟ್ಟು, ಶಾಲೆ ಕಲಿಯುವಂತೆ ಮಾಡಿದರು. ನಾನು ಅಜ್ಜಿಯ ಮನೆಯಲ್ಲಿದ್ದುಕೊಂಡು ಓದಿದೆ.
ಜಾಣ ವಿದ್ಯಾರ್ಥಿ ಎಂದರೆ ಕೇಳಬೇಕೆ? ಅಂಕದ ಜೊತೆಗೆ ಅಹಂಕಾರವೂ ಸ್ವಲ್ಪ ಜಾಸ್ತಿ. ಎಲ್ಲರೆದುರು ಗುರುತಿಸಿಕೊಳ್ಳುವ ತುಡಿತ, ಶಾಲೆಯ ಎಲ್ಲ ಕಾರ್ಯಕ್ರಮದಲ್ಲಿ ಮೊದಲ ಸ್ಥಾನ ಪಡೆಯಬೇಕು ಎಂಬ ಹುಚ್ಚು ಹಂಬಲ.
8ನೇ ತರಗತಿಯ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದ್ದವು. ಅಂದು ಹಿಂದಿ ಪರೀಕ್ಷೆ. ಎಲ್ಲರಿಗಿಂತ ನಾನು ಚೆನ್ನಾಗಿ ಓದಿಕೊಂಡು ಪರೀಕ್ಷೆಗೆ ಹೋಗಿದ್ದೆ. ಪರೀಕ್ಷೆಯಲ್ಲಿ ಆರಾಮಾಗಿ ನಕಲು ಮಾಡಬಹುದು ಅಂತ ಗೆಳೆಯರು ಹೇಳುತ್ತಿದ್ದುದನ್ನು ನಂಬಿಕೊಂಡು ಎಲ್ಲರಂತೆ ಒಂದು ಗೈಡನ್ನೂ ಕೂಡ ಹೊತ್ತು ತಂದಿದ್ದೆ. ಆದರೆ ಆ ಗೈಡ್ ಅನ್ನು ಪರೀಕ್ಷಾ ಕೇಂದ್ರಕ್ಕೆ ಒಯ್ಯದೇ, ಶಾಲೆಯ ಸ್ವಲ್ಪ ದೂರದಲ್ಲಿದ್ದ ಶೌಚಾಲಯದ ಗೋಡೆಯ ಮೇಲೆ ಯಾರಿಗೂ ಕಾಣದಂತೆ ಬಚ್ಚಿಟ್ಟು ಬಂದಿದ್ದೆ.
ಗಂಟೆ ಬಾರಿಸಿದ ನಂತರ ಎಲ್ಲರೂ ತರಗತಿಯೊಳಗೆ ಹೋಗಿ ಕುಳಿತೆವು. ಪ್ರಶ್ನೆಪತ್ರಿಕೆ ಕೈಗೆ ಬಂದ ತಕ್ಷಣವೇ ಬರೆಯಲು ಆರಂಭಿಸಿದೆ. ಬಹುತೇಕ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ. ನೂರಕ್ಕೆ ನೂರು ತೆಗೆಯಬೇಕು ಎನ್ನುವ ತವಕ. ಹೆಚ್ಚಾ ಕಡಿಮೆ ಎಲ್ಲದಕ್ಕೂ ಉತ್ತರಿಸಿದ್ದೆ.
ಪಕ್ಕದಲ್ಲಿರುವವರೆಲ್ಲ ಆಗಾಗ ಅಂಗಿಯೊಳಗಿಂದ ಗೈಡ್ ತೆಗೆದು, ಕದ್ದು ಕದ್ದು ನೋಡಿ ಬರೆಯುತ್ತಿರುವುದನ್ನು ಗಮನಿಸಿದೆ. ನನಗೂ ತಡೆಯಲಾಗಲಿಲ್ಲ. ನಾನು ಓದದೇ ಇದ್ದ ಒಂದು ಗಾದೆ ಮಾತಿನ ವಿವರಣೆಯ ಪ್ರಶ್ನೆಗೆ ಉತ್ತರ ಆಲೋಚಿಸುತ್ತ ಕುಳಿತಿದ್ದೆ. ಎಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಸರಿ, ಎಲ್ಲರೂ ಕಾಪಿ ಮಾಡುತ್ತಿದ್ದಾರೆ. ನಾನು ಅದೊಂದು ಪ್ರಶ್ನೆಯನ್ನು ಕಾಪಿ ಮಾಡೋಣ ಅಂತ ನಿರ್ಧರಿಸಿದೆ. ಅಂದು ಕೊಠಡಿಯ ಮೇಲ್ವಿಚಾರಕರಾಗಿ ಬಂದಿದ್ದವರು, ಹಿಂದಿ ಗುರುಗಳಾದ ಪ್ರಭುದೇವ ಸರ್. ಶೌಚಾಲಯಕ್ಕೆ ಹೋಗಬೇಕು ಅಂತ ಅವರನ್ನು ಕೇಳಿದೆ. ಅವರು ಹೋಗಿ ಬಾ ಅನ್ನುವಂತೆ ತಲೆ ಅಲ್ಲಾಡಿಸಿದರು. ಸೀದಾ ಶೌಚಾಲಯದತ್ತ ಓಡಿದವನೇ, ಅಲ್ಲಿ ಮುಚ್ಚಿಟ್ಟಿದ್ದ ಗೈಡ್ ತೆರೆದು, ಆ ಗಾದೆಮಾತಿನ ವಿವರದ ಪುಟವನ್ನು ಕಿತ್ತು ಅಂಗಿಯೊಳಗಿಟ್ಟುಕೊಂಡು, ಏನೂ ಮಾಡಿಲ್ಲ ಅನ್ನುವಂತೆ ಒಳಬಂದ ಕುಳಿತೆ.
ಪರೀಕ್ಷೆ ಮುಗಿಯಲು ಇನ್ನೂ ಅರ್ಧಗಂಟೆಯಿತ್ತು. ಆಗ, “ರಾಜು ಎದ್ದು ನಿಲ್ಲು’ ಎಂಬ ಪ್ರಭುದೇವ ಸರ್ ಕೂಗು ಕಿವಿಗೆ ಅಪ್ಪಳಿಸಿತು. ನನಗೆ ಗಾಬರಿಯಾಯ್ತು. ಕ್ಲಾಸ್ನಲ್ಲಿದ್ದ ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಡುಗುತ್ತಲೇ ಎದ್ದು ನಿಂತೆ. “ಚೀಟಿ ಕೊಡು’ ಎಂದರು. ಧಾರಾಕಾರವಾಗಿ ಬೆವರುತ್ತಲೇ, “ಚೀಟಿ ಇಲ್ಲ ಸರ್’ ಎಂದೆ. “ಒಳ್ಳೆ ಮಾತಿನಲ್ಲಿ ಕೊಡು. ನಾನು ನೋಡಿದ್ದೀನಿ’ ಅಂದ್ರು ಸರ್. “ಇಲ್ಲ ಸರ್’ ಅಂತ ನಾನೂ ವಾದಿಸಿದೆ. “ಕಿಲಿಪ್ರಟ್ ಕೆಳಗಡೆ ಏನಿದೆಯೋ ಅದನ್ನು ಕೊಡು’ ಅಂದರು ಗುರುಗಳು.
ಇನ್ನು ಸುಳ್ಳು ವಾದಿಸಿ ಪ್ರಯೋಜನವಿಲ್ಲ ಅಂತ ಅರಿವಾಗಿ, ನಡುಗುವ ಕೈಗಳಿಂದ ಗೈಡ್ನಿಂದ ಹರಿದ ಹಾಳೆಯನ್ನು ಅವರ ಕೈಗಿಟ್ಟೆ. ಆ ಕ್ಷಣ ಮನದೊಳಗೆ ದುಗುಡ, ದುಮ್ಮಾನ, ಪಶ್ಚಾತ್ತಾಪ, ಜುಗುಪ್ಸೆ, ನಿರುತ್ಸಾಹ, ಕೋಪ, ಅಳು, ಎಲ್ಲವೂ ಒಟ್ಟಿಗೆ ಮೇಳೈಸಿದವು. ಜಾಣ ವಿದ್ಯಾರ್ಥಿ ಅಂತ ಎಲ್ಲರಿಂದ ಹೊಗಳಿಸಿಕೊಂಡಿದ್ದ ನಾನು, ನಕಲು ಚೀಟಿ ಹಿಡಿದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದೆ! ನಾನು ನಿರೀಕ್ಷಿಸಿದಂತೆ ಗುರುಗಳು ನನಗೆ ಹೊಡೆಯಲಿಲ್ಲ. ಬದಲಿಗೆ- “ಶ್ಯಾಣೆ ಶ್ಯಾಣೆ ಅಂದ್ರ, ಬರಬರ್ತಾ ರಾಯರ ಕುದುರಿ ಕತ್ತಿ ಆತಂತ. ಹಂಗ ಆದೆಲ್ಲೋ’ ಅಂತ ಮಾತಿನಲ್ಲೇ ಛಾಟಿ ಏಟು ಕೊಟ್ಟರು. ಕ್ಲಾಸಿನವರೆಲ್ಲ ಗೊಳ್ ಎಂದು ನಗಲಾಗದಿದ್ದರೂ, ನನ್ನನ್ನು ನೋಡಿ ಒಳಗೊಳಗೇ ಮುಸಿಮುಸಿ ನಕ್ಕರು. ಅವಮಾನದಿಂದ ಪ್ರಾಣ ಹೋದಂತಾಗಿತ್ತು.
ಅವತ್ತೇ ನಿರ್ಧರಿಸಿದೆ; ಪರೀಕ್ಷೆಯಲ್ಲಾಗಲೀ, ಬದುಕಿನಲ್ಲಾಗಲಿ ಇನ್ನೆಂದೂ ನಕಲು ಮಾಡಲಾರೆ, ಅಪ್ರಾಮಾಣಿಕನಾಗಲಾರೆ ಎಂದು. ಗುರುಗಳು ಹೇಳಿದ ಬುದ್ಧಿವಾದದ ಮಾತುಗಳು ಬದುಕಿನ ಪ್ರತಿ ಹಂತದಲ್ಲೂ ಜೊತೆಗಿವೆ. ಅಂದು ಶಿಕ್ಷಕರು ತಿದ್ದದೇ ಹೋಗಿದ್ದರೆ, ನಕಲು ಮಾಡುತ್ತಲೇ ಹಾಳಾಗುತ್ತಿದ್ದೆನೇನೋ!
ರಾಜು ಹಗ್ಗದ, ಮುದ್ದೇಬಿಹಾಳ
You seem to have an Ad Blocker on.
To continue reading, please turn it off or whitelist Udayavani.