![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Oct 22, 2019, 4:12 AM IST
ಗುನ್ನಾಳ ಶಾಲೆಗೆ ಬಂದರೆ ಸಾಕು; ಹಸಿರ ಸಿರಿ ಕಣ್ಣು ತುಂಬಿಕೊಳ್ಳುತ್ತದೆ. ಇಲ್ಲಿ ಪಾಠ ಪ್ರವಚನದ ಜೊತೆಗೆ ಶಿಕ್ಷಕರು ಹಸಿರ ಬೆಳೆಸುವ ಸ್ಫೂರ್ತಿಯನ್ನೂ ತುಂಬುತ್ತಾರೆ. ಹಾಗಾಗಿ, ಶಾಲೆಯ ಅಂಗಳದ ತುಂಬಾ ಹಸಿರ ನಗು.
ವ್ಹಾ..! ಎಷ್ಟೊಂದು ಸುಂದರ. ಆವರಣಕ್ಕೆ ಕಾಲಿಟ್ಟರೆ ಸಾಕು, ಕೈ ಬಿಸಿ ಕರೆಯುವ ಪ್ರಕೃತಿ ಮಾತೆ. ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನ ತೋರಣ. ಮಕ್ಕಳಿಗೆ ನೆರಳಿನ ಆಸರೆ ನೀಡುವ ಮರ, ಜೊತೆಗೆ ಪಕ್ಷಿಗಳ ಕಲರವ. ಇದು, ಬಿಸಿಲ ನಾಡಿನಲ್ಲೊಂದು ಹಸಿರಿನಿಂದ ಕಂಗೊಳಿಸುವ ಸರಕಾರಿ ಶಾಲೆಯ ನೋಟ.
ಹೌದು, ಇಂತಹ ಪರಿಸರ ಪ್ರೀತಿಯ ಶಾಲೆ ನೋಡಬೇಕೆಂದರೆ, ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಬರಬೇಕು. ಸರಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಾ, ಖಾಸಗಿ ಶಾಲೆಗಳತ್ತ ಮುಖ ಮಾಡುವ ಪಾಲಕರು ಒಮ್ಮೆ ಈ ಶಾಲೆಗೆ ತಪ್ಪದೇ ಬರಬೇಕು. ಇಲ್ಲಿನ ಶಿಕ್ಷಕರು ಬರೀ ಗಿಡ-ಮರ ಬೆಳಸುತ್ತಾ ಕೂತಿದ್ದಾರೆ ಅಂದುಕೊಳ್ಳಬೇಡಿ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲೂ ಅವರು ಆಸಕ್ತಿ ಹೊಂದಿದ್ದಾರೆ.
202 ಮಕ್ಕಳ ಕಲಿಕೆ: ಮೂರು ಎಕರೆಯಲ್ಲಿರುವ ಶಾಲೆಯಲ್ಲಿ ಸುಂದರ ವಾತಾವರಣ, ಹಸಿರು ತುಂಬಿದ ಗಿಡಮರಗಳು, ಪಕ್ಷಿಗಳು ಕಣ್ಣಿಗೆ ಮುದ ನೀಡುತ್ತವೆ. ವಿದ್ಯಾರ್ಥಿಗಳಿಗೆ ಈ ಶಾಲೆಯ ಕುರಿತು ಆಸಕ್ತಿ ಹೆಚ್ಚಿರುವುದಕ್ಕೆ ಇದೂ ಒಂದು ಕಾರಣ. ಈ ಹಸಿರ ರೂವಾರಿ ಮುಖ್ಯಶಿಕ್ಷಕ ವಿ.ಎಂ. ಕಂದಕೂರು. ಇವರ ಜೊತೆಗೆ ಉಳಿದ, ಶಿಕ್ಷಕರು ಕೂಡ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಉತ್ತಮ ಪರಿಸರವಿದ್ದರೆ, ಮಕ್ಕಳ ಕಲಿಕಾಸಕ್ತಿಗೆ ಪೂರಕವಾಗಲಿದೆ ಎಂಬ ಮಂತ್ರದೊಂದಿಗೆ ಶಾಲೆಯನ್ನೇ ಹಸಿರುವನವಾಗಿ ಬದಲಿಸಿದ್ದಾರೆ.
ಶಾಲೆಯಲ್ಲಿ 202 ವಿದ್ಯಾರ್ಥಿಗಳು, 8 ಜನ ಶಿಕ್ಷಕರು ಇದ್ದಾರೆ. ವರ್ಷದಿಂದ ವರ್ಷಕ್ಕೆ ಹಾಜರಾತಿ ಹೆಚ್ಚುತ್ತಿದೆ. ಕಳೆದ 10 ವರ್ಷಗಳಿಂದಲೂ ಈ ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ. ಗುನ್ನಾಳ ಗ್ರಾಮದ ಎಲ್ಲ ಮಕ್ಕಳೂ ಈಶಾಲೆಯ ವಿದ್ಯಾರ್ಥಿಗಳು. ಶಾಲೆಗೆ ಸೇರುವ ಮೊದಲು, ಸೇರಿದ ನಂತರ, ಹಾಗೂ ಶಾಲೆ ಬಿಟ್ಟ ಮೇಲೂ ಕೂಡ ಸಂಬಂಧ ಕಳೆದುಕೊಳ್ಳುವುದಿಲ್ಲ. ಹಸಿರ ಕೆಲಸ ಏನೇ ಇದ್ದರೂ, ನಾವು ಓದಿದ ಶಾಲೆ ಅಲ್ವಾ? ಅಂತ ಶ್ರಮದಾನಕ್ಕೆ ಮುಂದಾಗುತ್ತಾರೆ.
ಸುವ್ಯವಸ್ಥೆ: ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆಗೂ ಒತ್ತು ನೀಡುತ್ತಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ಪ್ರತ್ಯೇಕ ಶೌಚಾಲಯ, ಕುಡಿವ ನೀರು, ಫ್ಯಾನ್ ಸೇರಿದಂತೆ ಹೈಟೆಕ್ ಸೌಲಭ್ಯ ಈ ಶಾಲೆಯಲ್ಲಿ ಇರುವುದು ಮತ್ತೂಂದು ಹೆಚ್ಚುಗಾರಿಕೆ. ಈಗಾಗಲೇ ಈ ಶಾಲೆ ಹಸಿರು ಮಿತ್ರಶಾಲೆ ಪ್ರಶಸ್ತಿ ಪಡೆದಿದೆ. ಫಲಿತಾಂಶ, ಕ್ರೀಡೆಯಲ್ಲಿಯೂ ಮುಂದೆ ಇದೆ. ನವಿಲು, ಪಾರಿವಾಳಗಳು ಶಾಲೆಯ ಅಂದ ಮತ್ತು ಖ್ಯಾತಿ ಹೆಚ್ಚಿಸಿವೆ.
ಕಣ್ಣ ಹಾಯಿಸಿದ್ದಷ್ಟೂ ಹಚ್ಚ ಹಸಿರು ಅಂಗಳವನ್ನು ತುಂಬಿ ಕೊಂಡಿದೆ. ಶಿಕ್ಷಕರು, ವಿದ್ಯಾರ್ಥಿಗಳು ಸದ್ದಿಲ್ಲದೇ ಹಸಿರು ಕ್ರಾಂತಿ ಆರಂಭಿಸಿದ್ದಾರೆ. ಅಶೋಕ, ಗುಲ್ ಮಹರ್, ಸಿಲ್ವರ್, ಕ್ರಿಸ್ಮಸ್, ತೇಗ, ನೇರಳ, ಹೊಂಗೆ, ಹುಲಗಲಿ, ರಬ್ಬರ್ ಸೇರಿದಂತೆ 100ಕ್ಕೂ ಅಧಿ ಕ ಬಗೆಯ ಮರಗಳಿವೆ. ಇದರ ಜೊತೆಗೆ ತರಕಾರಿ ಹೂ-ಹಣ್ಣು ಬೆಳೆಯಲಾಗುತ್ತಿದೆ. ವಿದ್ಯಾರ್ಥಿಗಳು ಬೆಳೆದ ತರಕಾರಿಯಿಂದಲೇ ಬಿಸಿಯೂಟದ ಸಾಂಬಾರ್ ತಯಾರಾಗುವುದು.
ಮಳೆಯ ನೀರು ಶಾಲೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ. ಅದಕ್ಕಾಗಿ ಗುಂಡಿ ತೋಡಿದ್ದಾರೆ. ಅಲ್ಲಿ ಸಂಗ್ರಹವಾಗುವ ನೀರನ್ನು ಗಿಡಗಳ ಆರೈಕೆಗೆ ಬಳಸುತ್ತಾರೆ. ಅದಕ್ಕೆ ಬೇಕಾದ ಸಾವಯವ ಗೊಬ್ಬರವನ್ನು ಕೂಡ ಶಾಲೆಯಲ್ಲೇ, ಮಕ್ಕಳೇ ತಯಾರಿಸುತ್ತಾರೆ. “ಇಷ್ಟು ದೊಡ್ಡ ಹಸಿರೀಕರಣ ಮಾಡುವುದು ಸುಲಭವಲ್ಲ. ಇದರ ಹಿಂದೆ ನಮ್ಮ ಶ್ರಮದ ಜೊತೆಗೆ ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ಹುಮ್ಮಸ್ಸು ಇದೆ. ಔಷಧ ಸಸ್ಯಗಳನ್ನು ಬೆಳೆಸುವ ಉದ್ದೇಶವಿದ್ದು, ಇದಕ್ಕೆ ಗ್ರಾಮಸ್ಥರು ಸಹಕಾರಕ್ಕೆ ನಿಂತಿದ್ದಾರೆ ‘ ಎನ್ನುತ್ತಾರೆ ಮುಖ್ಯ ಶಿಕ್ಷಕ ವಿ.ಎಂ. ಕಂದಕೂರು.
* ಮಲ್ಲಪ್ಪ ಮಾಟರಂಗಿ
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.