ನಿಮ್ಮೊಳಗೊಬ್ಬ ರ್‍ಯಾಂಕ್‌ ಸ್ಟೂಡೆಂಟ್‌


Team Udayavani, Mar 6, 2018, 3:54 PM IST

nimmalogobba.jpg

ಏಕಾಗ್ರತೆಯ ಮಹತ್ವ ವಿದ್ಯಾರ್ಥಿ ದೆಸೆಯಲ್ಲಿಯೇ ಚೆನ್ನಾಗಿ ಅರ್ಥವಾಗೋದು. ಪರೀಕ್ಷಾ ಕಾಲದಲ್ಲಿ ಏನನ್ನೂ ಗಮನವಿಟ್ಟು ಓದಲು ಸಾಧ್ಯವಾಗುತ್ತಿಲ್ಲ ಎಂದಾದಾಗ ವಿದ್ಯಾರ್ಥಿಗಳು ಆತಂಕಿತರಾಗುವುದು ಸಹಜ. ಚೆನ್ನಾಗಿಯೇ ಪೂರ್ವ ತಯಾರಿಯನ್ನು ಮಾಡಿಕೊಂಡಿದ್ದರೂ ಅಂತಿಮ ಕ್ಷಣದಲ್ಲಿ ಪರೀಕ್ಷೆ ಬರೆಯುವಾಗ ಏಕಾಗ್ರತೆ ಇಲ್ಲವೆಂದಾಗ ಗಾಬರಿಯಿಂದ ಉತ್ತರಗಳು ಮರೆತು ಹೋಗಬಹುದು. ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆಯ ಮೇಲೆ ನಿಯಂತ್ರಣ ಸಾಧಿಸಬೇಕಾದ ಅಗತ್ಯ ತುಂಬಾ ಇದೆ…

ಪರೀಕ್ಷೆಯೆಂದರೆ ವಿದ್ಯಾಫ‌ಲವನ್ನು ಒಕ್ಕಿ ಕಣ ಮಾಡಿ ಜೊಳ್ಳುಗಳನ್ನು ತೂರಿ ಗಟ್ಟಿಗಳನ್ನು ಉಳಿಸಿಕೊಳ್ಳುವ ಸುಗ್ಗಿ. ಆದರೆ, ಈ ಗಟ್ಟಿತನ ಪರೀಕ್ಷೆಗಷ್ಟೆ ಸೀಮಿತವೋ ಬದುಕಿನುದ್ದಕ್ಕೂ ಬೇಕೋ? ವಿದ್ಯಾರ್ಥಿಗಳಿಗೆ ಶಿಕ್ಷಕರಾದವರು ಮತ್ತು ಪೋಷಕರು ಪದೇಪದೆ ಒತ್ತಿಹೇಳುವ ಒಂದು ಉತ್ತಮ ಕಲಿಕಾ ಮಾರ್ಗವೆಂದರೆ ಏಕಾಗ್ರತೆ. ಆ ಏಕಾಗ್ರತೆಯೇ, ಕಲಿಕೆಗೆ ಬೇಕಾದ ಮುಖ್ಯ ಉಪಕರಣ.

ಏಕಾಗ್ರತೆಯ ಸಾಧನೆ ಸುಮ್ಮನೆ ಬರುವುದಿಲ್ಲ. ಅದು ಸಿದ್ಧಿಸುವುದು ಧ್ಯಾನದಿಂದ. ಇವೆರಡೂ ಒಂದಕ್ಕೊಂದು ಪೂರಕ. ಏಕಾಗ್ರತೆಯಿಂದ ಧ್ಯಾನ ಸಿದ್ಧಿಸುತ್ತದೆ. ಧ್ಯಾನದಿಂದ ಏಕಾಗ್ರತೆ ವೃದ್ಧಿಸುತ್ತದೆ. ಈ ಧ್ಯಾನ ಮತ್ತು ಏಕಾಗ್ರತೆ ವಿದ್ಯಾರ್ಥಿಗಳಿಗೂ ಬೇಕು, ಶಿಕ್ಷಕರಿಗೂ ಬೇಕು, ಪೋಷಕರಿಗೂ ಬೇಕು, ಸಮಾಜದ ಎಲ್ಲರಿಗೂ ಬೇಕು.

ಶಿವಧನುಸ್ಸನ್ನು ಮುರಿದಿದ್ದು ಏಕಾಗ್ರತೆ: ಸೂರ್ಯನ ಕಿರಣ ಎಲ್ಲೆಡೆ ಹಂಚಿಹೋಗುತ್ತದೆ. ಆದರೆ, ಸೌರಶಕ್ತಿಯ ಮಹತ್ವ ನಮಗೆ ತಿಳಿದಿದೆ. ಇಂದು ಸೌರಶಕ್ತಿಯ ಬಳಕೆಗೆ ಹೆಚ್ಚಿನ ಆದ್ಯತೆ ಇದೆ. ಹೇಗೆ ಚದುರಿಹೋದ ಸೂರ್ಯರಶ್ಮಿಗಳನ್ನು ಮಸೂರದ ಮೂಲಕ ಕೇಂದ್ರೀಕರಿಸಿ ಶಾಖವನ್ನು, ಬೆಂಕಿಯನ್ನು ಉಂಟು ಮಾಡಬಹುದೋ ಹಾಗೇ ಮನಸ್ಸಿನ ಚದುರಿದ ಶಕ್ತಿಗಳನ್ನು ಒಂದೆಡೆ ಸೇರಿಸುವುದೇ ಏಕಾಗ್ರತೆ.

ಈ ಏಕಾಗ್ರತೆಯಿಂದ ಏನೆಲ್ಲ ಸಾಧಿಸಬಹುದು! ಶಿವಧನುಸ್ಸನ್ನು ಮುರಿಯಬಹುದು. ಶಿವನ ಧನುಸ್ಸನ್ನು ಎತ್ತಬೇಕಾದರೆ, ಅದರ ಆಯವನ್ನು ತಿಳಿದು ಯಾವ ಭಾಗವನ್ನು ಹಿಡಿಯಬೇಕು, ಯಾವ ಕೋನದಿಂದ ಎತ್ತಬೇಕು ಎಂಬ ಸೂಕ್ಷ್ಮತೆಯ ಅರಿವಿರಬೇಕು. ರಾಮನಿಗೆ ಮುಂಚೆ ಪ್ರಯತ್ನಿಸಿದವರೇ ಯಶಸ್ವಿಗಳಾಗಲಿಲ್ಲ, ಏಕೆಂದರೆ ಅವರು ಎತ್ತಬೇಕೆಂಬ ಒತ್ತಡದಲ್ಲಿ ಹೇಗೆ ಎತ್ತಿದರೆ ಬಿಲ್ಲು ನಿಲ್ಲಬಲ್ಲದು ಎಂಬುದರ ಬಗ್ಗೆ ಗಮನ ನೀಡಲಿಲ್ಲ.

ಆದರೆ, ಶ್ರೀರಾಮನ ಏಕಾಗ್ರತೆ ಯಾವ ಮಟ್ಟದ್ದೆಂದರೆ ಬಿಲ್ಲನ್ನು ಸೂಕ್ಷ್ಮವಾಗಿ ಗಮನಿಸಿ ಅದರ ಉದ್ದ, ತೂಕವನ್ನು ಗ್ರಹಿಸಿ, ಯಾವ ಭಾಗದಲ್ಲಿ ಅದರ ಗುರುತ್ವ ಕೇಂದ್ರ (ಸೆಂಟರ್‌ ಆಫ್ ಗ್ರಾವಿಟಿ) ಇದೆ ಎಂದು ತಿಳಿದು ಆ ಭಾಗದಲ್ಲಿ ಹಿಡಿದು ಎತ್ತಿದಾಗ ಅದು ನಿಂತಿತು. ಅರ್ಜುನ ಮತ್ಸ್ಯಯಂತ್ರ ಭೇದಿಸಿದ್ದೂ ಹೀಗೆಯೇ. ಉಳಿದವರೆಲ್ಲರ ಏಕಾಗ್ರತೆಗಿಂತ ಹೆಚ್ಚಿನ ಏಕಾಗ್ರತೆಯನ್ನು ಸಾಧಿಸಿದ್ದ ಅವನು. ಹಾಗಾಗಿ ಅವನ ಬಾಣ ಗುರಿಮುಟ್ಟಿತು. 

ವಿವೇಕಾನಂದರೊಂದಿಗೆ ಪಂಥ ಕಟ್ಟಿದ ಅಮೆರಿಕನ್ನರು: ಸ್ವಾಮಿ ವಿವೇಕಾನಂದರು ಅಮೆರಿಕೆಗೆ ಭೇಟಿ ನೀಡಿದ ಸಂದರ್ಭ. ಮೈದಾನವೊಂದರಲ್ಲಿ ಕೆಲವರು ಗಾಲ್ಫ್ ಆಡುತ್ತಿದ್ದರು. ಆಟವನ್ನು ಗಮನಿಸುತ್ತಿದ್ದ ಅವರನ್ನು ನೋಡಿದ ಅತಿಥೇಯ ಫ್ರಾನ್ಸಿಸ್‌ ಲೆಗೆಟ್‌ “ನೀವೂ ಆಡುತ್ತೀರಾ?’ ಎಂದು ಪ್ರಶ್ನಿಸಿದ. ತಾವದನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆಂದೂ ಆಡುವ ಪರಿ ತಿಳಿಯದೆಂದು ಸ್ವಾಮೀಜಿ ತಿಳಿಸಿದರು.

“ಬಹಳ ಸುಲಭ. ಚೆಂಡನ್ನು ದಾಂಡಿನಿಂದ ಹೊಡೆದು ಅದನ್ನು ಬದ್ದಿಗೆ ಬೀಳುವಂತೆ ಮಾಡಬೇಕು, ಅಷ್ಟೆ’ ಎಂದರು ಆ ಅತಿಥೇಯ ಮಹಾಶಯರು. ಸ್ವಾಮೀಜಿ ಸರಿ ಎಂದು ತೋಳು ಮಡಿಸಿ ದಾಂಡು ಹಿಡಿದು ನಿಂತರು. “ಸ್ವಾಮೀಜಿ ನೀವು ಚೆಂಡನ್ನು ಬದ್ದಿಗೆ ಹಾಕಿದರೆ ನಿಮಗೆ ಹತ್ತು ಡಾಲರ್‌ ಕೊಡುತ್ತೇನೆ’ ಎಂದು ಆಡಲು ಆಹ್ವಾನಿಸಿದವರೇ ಪಂಥವನ್ನೂ ಕಟ್ಟಿದರು. 

ಮುಗುಳ್ನಕ್ಕ ಸ್ವಾಮೀಜಿ ಅತಿಥೇಯರನ್ನು ಸ್ವಲ್ಪ ದೂರದಲ್ಲಿದ್ದ ಬದ್ದಿನ ಬಳಿ ನಿಲ್ಲಿಸಿ, ದಾಂಡನ್ನು ಬೀಸಿದರು. ಚೆಂಡು ಉರುಳುತ್ತ ಸಾಗಿ ಬದ್ದಿನೊಳಗೆ ಬಿದ್ದಿತು. ಆಶ್ಚರ್ಯಚಕಿತನಾದ ಅತಿಥೇಯರು “ನಿಮಗೆ ಇದು ಹೇಗೆ ಸಾಧ್ಯವಾಯಿತು?’ ಎಂದು ಪ್ರಶ್ನಿಸಿದರು. ಸ್ವಾಮೀಜಿಯ ಉತ್ತರ ಸರಳವಾಗಿತ್ತು “ಏಕಾಗ್ರತೆಯಿಂದ’. ಅತಿಥೇಯರ ಮುಖದಲ್ಲಿ ಪ್ರಶ್ನಾರ್ಥಕ ಭಾವ ಕಳೆಯದೇ ಹೋದಾಗ ಸ್ವಾಮೀಜಿಯೇ ಮಾತು ಮುಂದುರಿಸಿದರು “ಏಕಾಗ್ರತೆ ಮತ್ತು ಧ್ಯಾನಶೀಲ ಮನಸ್ಸಿನಿಂದ ಇವೆಲ್ಲ ಸಾಧ್ಯ.

ಮನಸ್ಸಿನಲ್ಲೇ ದೂರವನ್ನು ಅಳೆದೆ. ಚೆಂಡು ಆ ಬದ್ದನ್ನು ತಲುಪಲು ಎಷ್ಟು ವೇಗ ಮತ್ತು ಶಕ್ತಿಯನ್ನು ಬಳಸಬೇಕೆಂದು ಲೆಕ್ಕ ಹಾಕಿದೆ. ಬಳಿಕ ಅದನ್ನು ತೋಳಿನ ಮಾಂಸಖಂಡಗಳಿಗೆ ತಿಳಿಸಿದೆ. ಸ್ನಾಯುಗಳು ಅಷ್ಟೇ ಬಲ ಉಪಯೋಗಿಸಿ ದಾಂಡನ್ನು ಬೀಸಿ ಚೆಂಡನ್ನು ಬದ್ದು ತಲುಪಿಸಿದವು. ಜೊತೆಗೆ ಮನಸ್ಸಿಗೆ ನಾಟಿಸಿದ್ದೆ, ಚೆಂಡು ಬದ್ದು ತಲುಪಿದರೆ ಹತ್ತು ಡಾಲರ್‌ ನಿನ್ನದಾಗುವುದೆಂದು!’. ಇದನ್ನು ಕೇಳಿದ ಅಮೆರಿಕನ್ನರು ದಂಗಾಗಿದ್ದರು. 

ಇದನ್ನು ಕೇಳಲೇನೋ ಚಂದ. ಆದರೆ ಈ ಮಟ್ಟವನ್ನು ಮುಟ್ಟುವುದು ಹೇಗೆ, ಸಾಧಿಸುವುದು ಹೇಗೆ? ಭಗವದ್ಗೀತೆಯ ಅರ್ಜುನನದೂ ಇದೇ ಪ್ರಶ್ನೆ, ಮನಸ್ಸು ಮದಗಜದಂತೆ, ಇದನ್ನು ನಿಯಂತ್ರಿಸುವುದು ಹೇಗೆ? ಇದಕ್ಕೆ ಕೃಷ್ಣನದು ನೇರ, ಸರಳ ಉತ್ತರ; ಪ್ರಯತ್ನದಿಂದ, ಮತ್ತೆ ಮತ್ತೆ ಅಭ್ಯಾಸ ಮಾಡುವುದರಿಂದ. ಇಂದಿನ ವಿದ್ಯಾಭ್ಯಾಸದಲ್ಲಿ ಮಕ್ಕಳಿಗೆ ಏನೆಲ್ಲ ಕಲಿಸಲಾಗುತ್ತಿದೆ- ಏಕಾಗ್ರತೆಯೊಂದನ್ನು ಬಿಟ್ಟು, ಧ್ಯಾನದ ಮಹತ್ವವನ್ನು ತಿಳಿಸುವುದನ್ನು ಬಿಟ್ಟು ಮಿಕ್ಕವೆಲ್ಲವನ್ನೂ ಹೇಳಿಕೊಡಲಾಗುತ್ತಿದೆ! ಜರಡಿಯಲ್ಲಿ ನೀರು ತುಂಬಿದಂತಹ ಶಿಕ್ಷಣದಿಂದ ವಿದ್ಯಾರ್ಥಿಗಾಗಲಿ, ಪೋಷಕರಿಗಾಗಲಿ ಅಥವಾ ಸಮಾಜಕ್ಕಾಗಲಿ ಕಿಂಚಿತ್ತೂ ಪ್ರಯೋಜನವಿಲ್ಲ.

ಮನಸ್ಸನ್ನು ಧ್ಯಾನದಿಂದ ತೊಳೆಯಬೇಕು: ಮನಸ್ಸು ಕನ್ನಡಿಯಂತೆ, ಗಾಜಿನಂತೆ. ಅದು ವಿಚಾರಗಳನ್ನು ಪ್ರತಿಫ‌ಲಿಸಬೇಕಾದರೆ ಅದಕ್ಕೆ ಧ್ಯಾನಲೇಪನ ಆಗಬೇಕು. ಅದರ ಮೇಲೆ ಧೂಳು ಸಂಗ್ರಹವಾಗಬಾರದು. ಅಂತಹ ಕೊಳಕು ಗಾಜಾಗಲೀ, ಕನ್ನಡಿಯಾಗಲೀ ಬೆಳಕನ್ನು, ಚಿತ್ರವನ್ನು ಪ್ರತಿಫ‌ಲಿಸದು. ಆಲೋಚನೆ ಎಂಬ ಧೂಳಿನ ಕಣಗಳು ಕೂರುತ್ತಲೇ ಇರುತ್ತವೆ. ನಾವದನ್ನು ಒರೆಸುತ್ತಲೇ ಇರಬೇಕು.

ಶ್ರೀರಾಮಕೃಷ್ಣರ ಅದ್ವೆ„ತ ಗುರು ತೋತಾಪುರಿ. ಅವನ ಬಳಿ ಒಂದು ಹಿತ್ತಾಳೆಯ ಕಮಂಡಲವಿತ್ತು. ಅದನ್ನು ಅವನು ದಿನವೂ ತೊಳೆದು ಅದು ಚಿನ್ನಧ್ದೋ ಎಂಬಂತೆ ಹೊಳೆಯುತ್ತಿರುವಂತೆ ಇಟ್ಟುಕೊಂಡಿರುತ್ತಾನೆ. ಸ್ವತಃ ಬ್ರಹ್ಮಜ್ಞಾನಿಯಾದರೂ ದಿನವೂ ಧ್ಯಾನ ಮಾಡುವ ಅವನನ್ನು ಯಾರಾದರೂ ಏಕೆ ಧ್ಯಾನ ಮಾಡುತ್ತೀರೆಂದು ಪ್ರಶ್ನಿಸಿದರೆ ಅವನು ತನ್ನ ಬಳಿಯಿದ್ದ ಕಮಂಡಲವನ್ನು ತೋರಿಸಿ ಹೇಳುತ್ತಿದ್ದನಂತೆ,

“ಒಂದು ದಿನ ತೊಳೆಯದಿದ್ದರೆ ಈ ಕಮಂಡಲವು ಕಪ್ಪಿಟ್ಟುಹೋಗುತ್ತದೆ, ಅಂಥದ್ದರಲ್ಲಿ ನಮ್ಮ ಮನಸ್ಸಿಗೆ ನಿತ್ಯ ಧ್ಯಾನವ್ಯಾಯಾಮ ಮಾಡಿಸದಿದ್ದರೆ ಅದು ಹೇಗೆ ಶುದ್ಧವಾಗಿರುತ್ತದೆ? ಏಕಾಗ್ರತೆ ಸಾಧಿಸಲು, ಧ್ಯಾನ ಮಾಡಲು ಹತ್ತು ಹಲವಾರು ಮಾರ್ಗಗಳಿವೆ. ಇವುಗಳಲ್ಲಿ ಯಾವುದಾದರೊಂದು ಮಾರ್ಗದಿಂದ ಅದನ್ನು ಸಾಧಿಸುವುದು ಬಹಳ ಮುಖ್ಯ.

ಅರಿವಳಿಕೆ ಇಲ್ಲದೆ ಆಪರೇಷನ್‌!: ಉಸಿರಾಟವನ್ನು ಗಮನಿಸುವುದು ಅತ್ಯಂತ ಸರಳ ಏಕಾಗ್ರತಾ ಮಾರ್ಗ. ಉಸಿರು ನಮ್ಮ ಪ್ರಾಣವೇ. ಹೀಗಾಗಿ ಅದನ್ನು ನಿಯಂತ್ರಿಸಬಲ್ಲೆವಾದರೆ ನಮ್ಮ ಇಡೀ ದೇಹ ಮತ್ತು ಮನಸ್ಸಿನ ಮೇಲೆ ನಾವು ಹತೋಟಿ ಪಡೆದಂತೆ. ರಮಣ ಮಹರ್ಷಿಗಳಿಗೆ ಒಮ್ಮೆ ಶಸ್ತ್ರಚಿಕಿತ್ಸೆ ಆಗಬೇಕು ಎಂಬ ಸಂದರ್ಭ. ಅವರು ಅರಿವಳಿಕೆಗೆ ಒಳಪಡಲು ನಿರಾಕರಿಸಿದರು ಮತ್ತು ಶಸ್ತ್ರಚಿಕಿತ್ಸಕರಲ್ಲಿ, ಚಿಕಿತ್ಸೆ ಆರಂಭಿಸುವ ಕೆಲವು ಕ್ಷಣ ಮೊದಲು ತಿಳಿಸಿದರೆ ತಾವು ಮನಸ್ಸನ್ನು ದೇಹದ ಆ ಭಾಗದಿಂದ ಹಿಂತೆಗೆದುಕೊಳ್ಳುತ್ತೇವೆಂದು ತಿಳಿಸಿದರು.

ಶಸ್ತ್ರಚಿಕಿತ್ಸೆ ಆರಂಭವಾಯಿತು. 3-4 ನಿಮಿಷಗಳ ಬಳಿಕ ವೈದ್ಯರಿಗೆ ಆಶ್ಚರ್ಯದ ಮೇಲೆ ಆಶ್ಚರ್ಯ. ರಮಣರೇನೋ ಸುಮ್ಮನೆ ಕುಳಿತಿದ್ದರು. ಈಗ ವೈದ್ಯರು ಅವರನ್ನು ಹೀಗೆ ಕೇಳಿಕೊಂಡರು, “ಸ್ವಾಮಿ ನಿಮ್ಮ ಮನಸ್ಸಿನ ಸ್ವಲ್ಪ ಭಾಗವನ್ನಾದರೂ ಆ ಭಾಗಕ್ಕೆ ಕಳಿಸಿ, ಅಲ್ಲಿ ರಕ್ತಪರಿಚಲನೆಯೇ ಆಗುತ್ತಿಲ್ಲ. ನಾವು ಚಿಕಿತ್ಸೆ ಮಾಡುವುದಾದರೂ ಹೇಗೆ?’. ರಮಣರು, “ಓ ಹಾಗೋ?’ ಎಂದು ಮುಗುಳ್ನಕ್ಕರು. ಸ್ವಲ್ಪ ಮನಸ್ಸನ್ನು ಅತ್ತ ಕಳಿಸಿದರು. ರಕ್ತಪರಿಚಲನೆ ಆರಂಭವಾಯಿತು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿಯಿತು. 

ಉಸಿರಾಟವನ್ನು ನಿಯಂತ್ರಿಸಿ…: ಉಸಿರಾಡುವುದು ಅಪ್ರಜ್ಞಾಪೂರ್ವಕ ಕ್ರಿಯೆಯಾಗಿ ಬಿಟ್ಟಿದೆ ಎಲ್ಲರಲ್ಲೂ. ಆದರೆ ಅದನ್ನೇ ಗಮನವಿಟ್ಟು ಮಾಡಿದರೆ ಏಕಾಗ್ರತೆಯನ್ನು ಸಾಧಿಸಬಹುದು ಮತ್ತು ಧ್ಯಾನದ ಸ್ಥಿತಿಯನ್ನು ತಲುಪಬಹುದು. ಧ್ಯಾನವೆಂಬುದು ಏಕಾಗ್ರತೆಯ ಫ‌ಲಿತ. ಅದೊಂದು ಘನೀಕೃತ ಏಕಾಗ್ರತೆ. ಮನಸ್ಸಿನ ತೆರೆಗಳು ನಿಂತು ನಿಶ್ಚಲ ಸಮುದ್ರವಾದಂತೆ ಅದು. ಚಲನೆಯ ಎಲ್ಲ ಶಕ್ತಿಯು ಸಾರಸಂಗ್ರಹ ಹೊಂದಿದಂತೆ. ಇಂಥ ಧ್ಯಾನಶೀಲ ಮನಸ್ಸಿಗೆ ಏನನ್ನೂ ಸಾಧಿಸುವುದು ಸುಲಭ. ವಿದ್ಯಾರ್ಥಿ ದೆಸೆಯಲ್ಲಿ ಪರೀಕ್ಷೆ, ನೌಕರಿ ಸಂದರ್ಶನ, ಸಂಸಾರ ಹೀಗೆ ಬದುಕಿನ ಪ್ರತಿಯೊಂದು ಹಂತಗಳಲ್ಲೂ ಗೆಲುವು ಪಡೆಯಬಹುದು. ಏಕಾಗ್ರತೆಯನ್ನು ಸಾಧಿಸುವ ವ್ಯವಧಾನ ಎಲ್ಲರಿಗೂ ಬರಲಿ.

* ರಘು ವಿ.
(ಲೇಖಕರು: ಪ್ರಾಂಶುಪಾಲರು, ಸಿಲಿಕಾನ್‌ ಸಿಟಿ ಕಾಲೇಜ್‌ ಆಫ್ ಮ್ಯಾನೇಜ್‌ಮೆಂಟ್‌ ಅಂಡ್‌ ಕಾಮರ್ಸ್‌, ಬೆಂಗಳೂರು)

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.