![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 11, 2017, 12:01 PM IST
ನದಿಯ ಮಧ್ಯೆ, ದೋಣಿಯೊಳಗಿದ್ದು ಕೊಂಡೇ ಇಡೀ ದಿನ ಕಳೆಯಬೇಕು. ಸೂರ್ಯೋಯ, ಸೂರ್ಯಸ್ತ, ಹುಣ್ಣಿಮೆ ಚಂದಿರನನ್ನು ದೋಣಿಯೊಳಗಿದ್ದುಕೊಂಡೇ ನೋಡಬೇಕು. ದೋಣಿಯೊಳಗೆ ತೇಲುತ್ತಲೇ ಸುಖನಿದ್ರೆಗೆ ಜಾರಬೇಕು… ಇಂಥದೊಂದು ಕನಸು ನನಸಾಗಬೇಕಿದ್ದರೆ ಕೇರಳಕ್ಕೆ ಹೋಗಬೇಕು ಎಂಬ ಮಾತು ಮೊನ್ನೆ ಮೊನ್ನೆಯವರೆಗೂ ಚಾಲ್ತಿಯಲ್ಲಿತ್ತು. ಆದರೆ ಈಗ, ನದಿಯ ಮಧ್ಯೆ ಥೇಟ್ ಅರಮನೆಯಂತೆಯೇ ಅಲಂಕಾರಗೊಂಡು ಕಂಗೊಳಿಸುವ ತೇಲುವ ಮನೆ ಉಡುಪಿಯ ಪಡುತೋನ್ಸೆಗೂ ಬಂದಿದೆ. ಕುಟುಂಬದೊಂದಿಗೆ ವೀಕೆಂಡ್ ಕಳೆಯಬೇಕು ಅನ್ನುವವರಿಗೆ, ಹನಿಮೂನ್ನ ಸಂಭ್ರಮದಲ್ಲಿ ಮೈರೆಯಲು ಬಯಸುವವರಿಗೆ, ಸೂರ್ಯೋದಯ ಮತ್ತು ಸೂರ್ಯಾಸ್ತದ ಬೆರಗನ್ನು ಕಣ್ತುಂಬಿಕೊಳ್ಳಲು ಹಂಬಲಿಸುವವರಿಗೆ, ಈ ತೇಲುವ ಮನೆ ಎಂಬುದು ಸ್ವರ್ಗವೇ ಸರಿ…
ಈ ಮನೆಯಲ್ಲಿ ಕುಳಿತರೆ ತೂಗುತ್ತಿರುತ್ತದೆ. ಅಡುಗೆ ಮನೆ, ಹಾಲು, ಬೆಡ್ ರೂಂ. ಎಲ್ಲವೂ ಇದೆ. ತಂಗಾಳಿಗಾಗಿ ಕಿಟಕಿ ತೆರೆದರೆ ಕಣ್ಣು ಹಾಯಿಸಿದಷ್ಟೂ ಉದ್ದಕ್ಕೂ ನೀರೋ ನೀರು. ಜೋರು ಗಾಳಿಬೀಸಿದಾಗ ನೀವಿರುವ ಮನೆ ಸ್ವಲ್ಪ ಅಲುಗಾಡಿಸಿದಂತೆ ಭಾಸವಾಗಬಹುದು. ಅರೆ, ನಾವೇನು ತೊಟ್ಟಿಲಲ್ಲಿ ಕುಳಿತಿದ್ದೇವಾ ಎಂದೆನಿಸಿದರೂ ಆಶ್ಚರ್ಯ ಪಡಬೇಕಿಲ್ಲ.
ಮಳೆ ಬರಲಿ, ಬಿಸಿಲಿರಲಿ ಈ ಬೋಟಿನ ಮನೆ ಅಂದರೆ ಹೀಗೇನೆ. ನದಿಯ ತಟದಲ್ಲಿ ಒಂದು ದಿನ ಕಳೆಯ ಬೇಕು ಎಂದು ಯೋಚಿಸುವವರು ತಪ್ಪದೇ ಈ ಬೋಟ್ ಹೌಸ್ಗೆ ಬರಬೇಕು. ಸುತ್ತಲು ನೀರು, ಮಧ್ಯೆ ಮನೆ. ಎಲ್ಲವೂ ಬೋಟಿನಲ್ಲಿ. ಅಲ್ಲೇ ಊಟ, ತಿಂಡಿ. ಸೂರ್ಯ ಮುಳುಗೋದು, ಸೂರ್ಯ ಹುಟ್ಟೋದು… ಎಲ್ಲವನ್ನು ನೀರಿನ ಮಧ್ಯೆ ಬೋಟ್ನೊಳಗೆ ಕುಳಿತೇ ಕಣ್ತುಂಬಿಕೊಳ್ಳಬಹುದು.
ಹೌದು, ಕೇರಳ ಮಾದರಿಯ ಬೋಟ್ಹೌಸ್ ಇದೀಗ ಉಡುಪಿ ಜಿಲ್ಲೆಯ ಪಡುತೋನ್ಸೆ ಬೆಂಗ್ರೆಯಲ್ಲಿ ಆರಂಭಗೊಂಡಿದೆ. ದೇಶ ವಿದೇಶದ ಪ್ರವಾಸಿಗರಿಗಾಗಿ ಉಡುಪಿ ಜಿಲ್ಲೆಯ ಪಡುತೋನ್ಸೆ, ಕೋಡಿಬೆಂಗ್ರೆ ಸ್ವರ್ಣ ನದಿಯಲ್ಲಿ ಪಾಂಚಜನ್ಯ ಕ್ರೂಸ್ನ ಬೋಟ್ ಹೌಸ್ ವರ್ಷದ ಹಿಂದೆ ಆರಂಭಗೊಂಡಿತು. ಈಗಾಗಲೇ ಸಾವಿರಾರು ಪ್ರವಾಸಿಗರನ್ನು ಆಕರ್ಷಸುತ್ತಿದೆ.
35 ರಿಂದ 40 ಮಂದಿ ಪ್ರವಾಸಿಗರನ್ನು ಹೊತ್ತೂಯ್ಯಬಲ್ಲ ಸಾಮರ್ಥಯ ಹೊಂದಿರುವ ಈ ಅತ್ಯಾಧುನಿಕ ಶೈಲಿ ದೋಣಿ ಮನೆಯಲ್ಲಿ ಒಂದು ಹವಾನಿಯಂತ್ರಿತ ಬೆಡ್ರೂಂ, ಆಟ್ಯಾಚಡ್ ಮತ್ತು ಪ್ರತ್ಯೇಕ ಬಾತ್ರೂಂ, ಅಡುಗೆ ಕೋಣೆ, ಆಕರ್ಷಕ ಲಿವಿಂಗ್ರೂಮ್, ವರ್ಕ್ಶಾಪ್, ಸಣ್ಣ ಪಾರ್ಟಿ ಆಯೋಜನೆ ಮಾಡಲು ಸ್ಥಳಾವಕಾಶದ ವ್ಯವಸ್ಥೆ ಇದೆ. ಸುಂದರ ಪರಿಸರದ ದೃಶ್ಯವನ್ನು ನೋಡಲು ಬಾಲ್ಕನಿ ಇದ್ದು, ಅದು ಅಧುನಿಕ ಸೌಲಭ್ಯಗಳ ಎಲ್ಲಾ ಅನುಕೂಲತೆಯನ್ನು ಹೊಂದಿದೆ. ಒಬ್ಬ ಅಡುಗೆ ತಯಾರಕ, ಒಬ್ಬ ಸಹಾಯಕ, ವೈಟರ್, ದೋಣಿ ನಿಯಂತ್ರಕ ಮತ್ತು ಪ್ರವಾಸಿಗರ ಸುರಕ್ಷತೆಗೆ ನುರಿತ ಈಜು ತಜ್ಞರು ಸೇರಿದಂತೆ ಒಟ್ಟು 5 ಮಂದಿ ಬೋಟಿನಲ್ಲಿ ಖಾಯಂ ಆಗಿ ಇರುತ್ತಾರೆ.
ಮೂರು ವಿಭಾಗದಲ್ಲಿ ಯಾನ
ಡೇ ಕ್ರೂಸಿಂಗ್, ಡಿನ್ನರ್ ಕ್ರೂಸಿಂಗ್ ಮತ್ತು ಓವರ್ನೆçಟ್ ಸೇr …ಹೀಗೆ, ಒಟ್ಟು ಮೂರು ವಿಭಾಗವಿದೆ. ಡೇ ಕ್ರೂಸ್ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ, ಡಿನ್ನರ್ ಕ್ರೂಸ್ ಸಂಜೆ 5ರಿಂದ ರಾತ್ರಿ 9 ಗಂಟೆಯ ವರೆಗೆ, ಓವರ್ನೆçಟ್ ಸೇr ಸಂಜೆ 6ರಿಂದ ಮಾರನೇ ದಿನ ಬೆಳಗ್ಗೆ 9 ಗಂಟೆಯವರೆಗೆ. ಅಲ್ಲದೆ 1- 2 ಗಂಟೆಯ ನಿಯಮಿತ ಕ್ರೂಸಿಂಗ್ ಸೇವೆಯನ್ನು ನೀಡಲಾಗುತ್ತದೆ.
ಊಟ ತಿಂಡಿ ಏನೇನು ಸಿಗುತ್ತದೆ
ಬೋಟ್ಹೌಸಲ್ಲಿ ಊಟ ನೀವಿದ್ದಲ್ಲಿಗೇ ಬರುತ್ತದೆ. ಬಾಯಿ ಚಪ್ಪರಿಸುವಂಥ ತಿನುಸುಗಳು. ಉಡುಪಿ ಶೈಲಿಯ ಚಪಾತಿ ಕೂರ್ಮ, ಚಿಕನ್ಗ್ರೇವಿ, ವೆಜ್ ಪಲ್ಯ,ಗ್ರೀನ್ ಸಲಾಡ್, ಹಪ್ಪಳ, ಉಪ್ಪಿನಕಾಯಿ, ಮೊಸರು, ಕೊಚ್ಚಿಗೆ ಅಥವಾ ಬೆಳ್ತಿಗೆ ಅನ್ನ, ಐಸ್ಕ್ರೀಮ್, ಸಂಜೆ ವೇಳೆ ಟೀ ಮತ್ತು ಉಡುಪಿ ಸೀಮೆಯ ಸ್ಥಳೀಯ ತಿನಸುಗಳು. ದೋಣಿ ಒಳಗೆ ಪ್ರವೇಶಿಸಿದಾಗಲೇ ವೆಲ್ಕಂ ಜ್ಯೂಸ್, ವೆಜ್ ಐಟಂ ನೀಡಲಾಗುತ್ತದೆ. ಅಲ್ಲದೆ ತುಳುನಾಡಿನ ಖಾದ್ಯ ಪದಾರ್ಥಗಳಾದ ಕೋರಿ ರೋಟ್ಟಿ, ಚಿಕನ್ ಸುಕ್ಕ, ಮೀನಿನ ಖಾದ್ಯ ಸೇರಿದಂತೆ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ಮಾಡಿಕೊಡಲಾಗುತ್ತದೆ. ಅದಕ್ಕೆ ಹೆಚ್ಚುವರಿ ದರವನ್ನು ನೀಡಬೇಕು. ಬೋಟ್ನಲ್ಲಿಯೇ ರಾತ್ರಿಯನ್ನು ಕಳೆಯ ಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಬೋಟ್ ಹೌಸ್ ಸ್ವರ್ಣಾ ನದಿಯಲ್ಲಿ 8 ರಿಂದ 10 ಕಿ.ಮೀ ದೂರ ಸುತ್ತಾಡುತ್ತದೆ.
ಹೀಗಿದೆ ಬೋಟ್ ಹೌಸ್
ಬೋಟ್ ಹೌಸ್ನ ಒಟ್ಟು ಉದ್ದ 73 ಅಡಿ, ಅಗಲ 15 ಅಡಿ. ಕಬ್ಬಿಣದ ದೋಣಿಯ ಮೇಲೆ ಸಂಪೂರ್ಣ ಮರದಿಂದ ಮನೆಯನ್ನು ಕಲಾತ್ಮಕವಾಗಿ ರಚಿಸಲಾಗಿದೆ. 40 ಅಶ್ವಶಕ್ತಿಯ ಎಂಜಿನ್ ಅಳವಡಿಸಲಾಗಿದೆ. ದೋಣಿ ಮನೆಯಲ್ಲಿನ ಪಯಣ ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ, ಸ್ಥಳೀಯರಿಗೂ ಇದೆ. ನಿಜವಾಗಿಯೂ ಇದೊಂದು ಅದ್ಭುತ ಮತ್ತು ಮರೆಯಲಾಗದ ಅನುಭವ. ತೇಲುವ ಮನೆಯಲ್ಲಿ ಒಂದು ಇಡೀ ದಿನ ಕಳೆಯುವುದು ಒಂದು ಅವಿಸ್ಮರಣೀಯ ಅನುಭವ ಎನ್ನುತ್ತಾರೆ ಪ್ರವಾಸಿಗರು.
ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಪಂಚಾಯತ್ನ ಅನುಮತಿ ಪಡೆದು ಬೋಟ್ ಹೌಸ್ ಯಾತ್ರೆ ನಡೆಸಲಾಗುತ್ತದೆ. ಒಂದೇ ವಿಶೇಷವೆಂದರೆ, ಬೋಟ್ ಹೌಸ್ ಯಾತ್ರೆ ಈವರೆಗೆ ಕೇರಳದಲ್ಲಿ ಮಾತ್ರ ಇತ್ತು. ಉಡುಪಿಯಲ್ಲಿ ಆರಂಭವಾಗಿರುವ ಬೋಟ್ ಹೌಸ್ ಯಾತ್ರೆ ಎಲ್ಲ ರೀತಿಯಿಂದಲೂ ಅತ್ಯುತ್ತಮವಾಗಿದೆ. ಮುಖ್ಯವಾಗಿ ಉಡುಪಿಯಲ್ಲಿ ಕೇರಳಕ್ಕಿಂತ ಹೆಚ್ಚಿನ ಹಸಿರಿನ ಪರಿಸರ, ಸುಂದರ ನದಿಯನ್ನು ಹೊಂದಿದೆ. ಅಲ್ಲಿಲ್ಲಿ ಕುದ್ರುಗಳಿದ್ದು ನೋಡಲು ಇನ್ನಷ್ಟು ಅಕರ್ಷಣೀಯವಾಗಿದೆ. ಸಣ್ಣ ಪುಟ್ಟ ಪಾರ್ಟಿ ಮಾಡುವವರಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಹೋಗಲು ದಾರಿ ಯಾವುದು?
ಉಡುಪಿಯಿಂದ ಸುಮಾರು 15 ಕಿ. ಮೀ. ದೂರದಲ್ಲಿರುವ ಈ ಬೋಟ್ಹೌಸ್ ಇದ್ದಲ್ಲಿಗೆ ಹೋಗುವುದಾದರೆ ಉಡುಪಿ ಬಸ್ಸುನಿಲ್ದಾಣದಿಂದ ಕಲ್ಯಾಣಪುರ-ಕೆಮ್ಮಣ್ಣು-ಹೂಡೆ ಮಾರ್ಗವಾಗಿ ಪಡುತೋನ್ಸೆಯಲ್ಲಿ ತಲುಪಬಹುದು. ಇಲ್ಲವಾದಲ್ಲಿ ಉಡುಪಿಯಿಂದ ಮಲ್ಪೆ-ವಡಭಾಂಡೇಶ್ವರ-ತೊಟ್ಟಂ -ಹೂಡೆ ಮಾರ್ಗವಾಗಿಯೂ ಬರಬಹುದು. ಕುಂದಾಪುರ ಕಡೆಯಿಂದ ಬರುವವರು ಹಂಗಾರಕಟ್ಟೆಯಿಂದ ಹೊಳೆದಾಟಿ ಪಡುತೋನ್ಸೆಗೆ ಬರಬಹುದು. ವಾಹನದೊಂದಿಗೆ ಹೊಳೆದಾಟಲು ಇಲ್ಲಿ ಬಾರ್ಜ್ನ ವ್ಯವಸ್ಥೆಯೂ ಇದೆ.
ಮಾಹಿತಿಗೆ -:9900480877
ನಟರಾಜ್ ಮಲ್ಪೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.