![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Oct 12, 2018, 6:00 AM IST
“ಬರಲಿದೆ ಒಳ್ಳೆಯ ಧೂಮ…’
– ಇದು “ಜೀವನ ಯಜ್ಞ’ ಚಿತ್ರದ ಅಡಿಬರಹ. ಇಲ್ಲಿ ಧೂಮ ಅಂದರೆ, ಕಂಪು ಎಂದರ್ಥ. ಕಂಪು ಅಂದರೆ ಮನಸ್ಸಿಗೆ ಹಿತವೆನಿಸುವ ಚಿತ್ರವೆಂದರ್ಥ. ಅಂಥದ್ದೊಂದು ಚಿತ್ರ ಕಟ್ಟಿಕೊಟ್ಟ ಖುಷಿ ನಿರ್ದೇಶಕ ಶಿವು ಸರಳೇಬೆಟ್ಟು ಅವರದು. ಇದು ಮಂಗಳೂರು ಮಂದಿ ಸೇರಿ ಮಾಡಿರುವ ಅಪ್ಪಟ ಶುದ್ಧ ಕನ್ನಡ ಚಿತ್ರ. ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಚಿತ್ರ ಪೂರ್ಣಗೊಂಡಿದ್ದು, ನವೆಂಬರ್ 2 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ಮಾಹಿತಿ ಕೊಡಲೆಂದೇ ತಂಡದೊಂದಿಗೆ ಬಂದಿದ್ದರು ನಿರ್ದೇಶಕ ಶಿವು ಸರಳೇಬೆಟ್ಟು. ಅಂದು ಮಾತಿಗಿಳಿದ ಅವರು “ಜೀವನ ಯಜ್ಞ’ ಕುರಿತು ಹೇಳುತ್ತಾ ಹೋದರು. “ಇಲ್ಲಿ ಪ್ರತಿಯೊಬ್ಬರ ಲೈಫಲ್ಲೂ ನಡೆಯುವ ಕಥೆಯನ್ನೇ ಇಟ್ಟುಕೊಂಡು ಚಿತ್ರ ಮಾಡಲಾಗಿದೆ’ ನಾಲ್ವರು ಅನಾಥ ಮಕ್ಕಳ ಸುತ್ತ ನಡೆಯುವ ಕಥೆ. ತಮ್ಮ ಬಾಲ್ಯದಲ್ಲಿ ಎಲ್ಲವನ್ನೂ ಕಳೆದುಕೊಂಡು ಅನಾಥಾಶ್ರಮದಲ್ಲಿರುವ ನಾಲ್ವರು ಮಕ್ಕಳನ್ನು ಉಳ್ಳವರು ಕರೆದುಕೊಂಡು ಹೋಗಿ ಅವರನ್ನು ಸಾಕಿ ಸಲಹುತ್ತಾರೆ. ಅವರ ಹಸಿವು ನೀಗಿಸುತ್ತಾರೆ. ಕಾಣದ ಪ್ರೀತಿ ತುಂಬುತ್ತಾರೆ. ಹಾಗೆ, ಆ ಅನಾಥರ ಬದುಕಿನ ಚಿತ್ರಣ ಚಿತ್ರದುದ್ದಕ್ಕೂ ಸಾಗುತ್ತದೆ. ಇಲ್ಲಿ ಮುಖ್ಯವಾಗಿ ನಾಲ್ಕು ಅಂಶಗಳು ಸಿನಿಮಾವನ್ನು ಆವರಿಸಿಕೊಂಡಿವೆ. ಅದೇನೆಂಬುದನ್ನು ಚಿತ್ರದಲ್ಲೇ ನೋಡಬೇಕು. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನ. ಆಧ್ಯಾತ್ಮ, ಮನರಂಜನೆ ಜೊತೆಗೆ ಎಮೋಷನಲ್ ಕೂಡ ಚಿತ್ರದಲ್ಲಿದೆ. ಚಿತ್ರವನ್ನು 30 ದಿನಗಳ ಕಾಲ ಮಂಗಳೂರಲ್ಲಿ ಚಿತ್ರೀಕರಿಸಲಾಗಿದ್ದು, ಒಂದೇ ಏರಿಯಾದಲ್ಲಿ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ಒಂದೇ ಮಾತಲ್ಲಿ ಹೇಳುವುದಾದರೆ, ಪಾಲೇìಜಿಯಿಂದ ಗೂಗಲ್ಜಿವರೆಗೆ ಹೇಳಲಾಗಿದೆ. ಪಂಚಭೂತಗಳಿಂದ ಹಿಡಿದು ಹಿಂದಿನ ಕಾಲದ ಮೌಲ್ಯ, ಆದರ್ಶ, ಬದಲಾಗುತ್ತಿರುವ ಪ್ರವೃತ್ತಿ ಸೇರಿದಂತೆ ಅನೇಕ ವಿಚಾರಗಳು ಚಿತ್ರದ ಪ್ರಮುಖ ಅಂಶಗಳು’ ಎಂದು ವಿವರ ಕೊಟ್ಟರು ನಿರ್ದೇಶಕರು.
ನಿರ್ಮಾಪಕ ಕಿರಣ್ ರೈ ಅವರಿಗೆ ಒಳ್ಳೆಯ ಚಿತ್ರ ನಿರ್ಮಿಸಿರುವ ಖುಷಿ ಇದೆಯಂತೆ. “ಈಗಾಗಲೇ ಟ್ರೇಲರ್, ಟೀಸರ್ಗೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಸಿನಿಮಾ ಮಾಡಿದ್ದೇವೆ. ಇಲ್ಲಿ ಎಲ್ಲರಿಗೂ ಇದು ಮೊದಲ ಅನುಭವ. ಹಿರಿಯ ನಟರಾದ ರಮೇಶ್ ಭಟ್ ಅವರೊಬ್ಬರೇ ಅನುಭವಿಗಳು. ಅವರ ಸಲಹೆ, ಸೂಚನೆಗಳಿಂದ ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿದೆ’ ಎಂದರು ಕಿರಣ್ ರೈ.
ಮತ್ತೂಬ್ಬ ನಿರ್ಮಾಪಕ ರಂಜನ್ ಶೆಟ್ಟಿ ಅವರಿಗೆ ಕಥೆ ಇಷ್ಟವಾಗಿದ್ದರಿಂದ ಗೆಳೆಯ ಕಿರಣ್ ರೈ ಜೊತೆ ಸೇರಿ ಚಿತ್ರ ಮಾಡಲು ಸಾಧ್ಯವಾಗಿದೆಯಂತೆ. ಇಲ್ಲಿ ಎಲ್ಲಾ ಧರ್ಮಗಳ ಸಾರವನ್ನು ಸಾರುವ ಕೆಲಸ ಮಾಡಲಾಗಿದೆ. ಚಿತ್ರದಲ್ಲಿ ಆಪ್ತತೆ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಜೀವನದ ಮೌಲ್ಯಗಳ ಬಗ್ಗೆ ಹೇಳಲಾಗಿದೆ. ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಕೊಡುತ್ತಿರುವ ಖುಷಿ ಇದೆ. ನಿಮ್ಮೆಲ್ಲರ ಸಹಕಾರ ಇರಲಿ’ ಎಂಬ ಮನವಿ ಇಟ್ಟರು ರಂಜನ್ ಶೆಟ್ಟಿ.
ರಮೇಶ್ ಭಟ್ ಅವರಿಗೆ ಹೊಸಬರ ತಂಡ ಅಂತ ಅನಿಸಲೇ ಇಲ್ಲವಂತೆ. ಎಲ್ಲರೂ ತುಂಬಾ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ನಿರ್ದೇಶಕರು ಬುದ್ಧಿವಂತರು. ಏನು ಹೇಳಬೇಕು, ಎಷ್ಟು ಹೇಳಬೇಕೆಂಬ ಬಗ್ಗೆ ಸ್ಪಷ್ಟತೆ ಇದೆ. ಅವರ ಮನದಲ್ಲಿರುವ ಯೋಚನೆಗಳು ಸಿನಿಮಾ ರೂಪ ಪಡೆದಿವೆ. ಬದುಕು ಭ್ರಮೆಯಿಂದ ಸಾಗುತ್ತದೆ ಎಂಬುದನ್ನು ಎಷ್ಟು ಸೂಕ್ಷ್ಮವಾಗಿ ಹೇಳಿದ್ದಾರೋ, ಅಷ್ಟೇ ಸೂಕ್ಷ್ಮವಾಗಿ ಬದುಕಿನ ಮೌಲ್ಯ ಕುರಿತು ವಿವರಿಸಿದ್ದಾರೆ. ಇನ್ನೊಂದು ವಿಷಯ ಹೇಳಲೇಬೇಕು. ಮಂಗಳೂರು ಸಮೀಪದ ಗ್ರಾಮದಲ್ಲಿರುವ ಸುಮಾರು 800 ವರ್ಷದ ಹಳೆಯ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ನನ್ನ ಭಾಗದ ಚಿತ್ರಣವನ್ನು ಅಲ್ಲಿ ಮಾಡಿದ್ದು ವಿಶೇಷ ಅನುಭವ ಕಟ್ಟಿಕೊಟ್ಟಿದೆ. ಇಲ್ಲಿರುವ ಸಾಹಿತ್ಯ ಮತ್ತು ಸಂಗೀತ ಮನತಟ್ಟುತ್ತದೆ’ ಎಂದರು.
ನಾಯಕ ಮನೋಜ್ ಪುತ್ತೂರ್ ಅವರಿಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ರಿಚ್ ಇರುವ ಹುಡುಗ ತನ್ನ ತಾಯಿ ಬಗ್ಗೆ ಕೇರ್ ತೆಗೆದುಕೊಳ್ಳದೆ ಲೈಫ್ ನಡೆಸುವ ಪಾತ್ರವನ್ನು ನಿರ್ವಹಿಸಿದ್ದಾರಂತೆ. ನಿರ್ಮಾಪಕರು ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಚಿತ್ರ ಮಾಡಿದ್ದಾರೆ. ಇದು ನನ್ನ ಪಾಲಿಗೆ ವಿಭಿನ್ನ ಚಿತ್ರ’ ಎಂಬುದು ಮನೋಜ್ ಮಾತು.
ನಾಯಕಿ ಆದ್ಯಾ ಆರಾಧನಾ ಅವರಿಗೆ ಇಲ್ಲೊಂದು ಹೊಸ ಇಮೇಜ್ ಸಿಗುವ ನಂಬಿಕೆ ಇದೆಯಂತೆ. ಜಯಶ್ರೀ, ಶೈನ್ಶೆಟ್ಟಿ, ಅನ್ವಿತಾ ಸಾಗರ್ ಸೇರಿದಂತೆ ತುಳು ಸಿನಿಮಾರಂಗದ ಅನೇಕರು ಇಲ್ಲಿ ನಟಿಸಿದ್ದಾರೆ. ಸುರೇಂದ್ರ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಆಶೆ ಮೈಕೆಲ್ ಅವರ ಸಂಗೀತವಿದೆ.
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.