Empowerment: ಬಾಳು ಬೆಳಗಿದ ಬಾಳೆ!


Team Udayavani, Mar 10, 2024, 2:45 PM IST

Empowerment: ಬಾಳು ಬೆಳಗಿದ ಬಾಳೆ!

ಪಶ್ಚಿಮದಲ್ಲಿ ಸೂರ್ಯ ಜಾರುವ ಹೊತ್ತು. ಹಂಪಿ ಸಮೀಪದ ಆನೆಗೊಂದಿಯ ಒಂದಿಷ್ಟು ಮಹಿಳಾ ಕೃಷಿ ಕಾರ್ಮಿಕರು ರಸ್ತೆ ಬದಿಯ ಬಾಳೆ ಗದ್ದೆಯಿಂದ ಆಚೆ ಬರುವಾಗ್ಗೆ ಬಾಳೆಯ ಒಣಗಿದ ತೊಗಟೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ, ಗಂಟು ಕಟ್ಟಿ, ತಲೆ ಮೇಲೆ, ಕೊಂಕಳಲ್ಲಿಟ್ಟುಕೊಂಡು ಮನೆ ಕಡೆ ಮುಖ ಮಾಡಿದರು. ಅದು ಅಕ್ಷರಶಃ ಕಸ. ಕೊಳೆತರೆ ಗೊಬ್ಬರವಷ್ಟೆ. ಆದರೆ ಅದನ್ನು ಒಪ್ಪ ಮಾಡಿಟ್ಟುಕೊಂಡು, ಹಿಗ್ಗಿನಿಂದ ಊರೆಡೆ ಮರಳುತ್ತಿದ್ದುದನ್ನು ಕಂಡು ಅಚ್ಚರಿಗೊಂಡೆ. ಕುತೂಹಲಕ್ಕೆ-“ಈ ಕಸ ಒಯ್ದು ಏನ್‌ ಮಾಡ್ತೀರಾ?’ ಅಂದೆ. “ನಿಮಗಿದು ಕಸ. ಆದ್ರೆ ನಮ್ಗಿದು ಅನ್ನ! ಈ ವ್ಯರ್ಥ ಬಾಳೆ ನಾರು ಮತ್ತು ತೊಗಟೆಯಿಂದ ನಮ್ಮೂರಿನ ಮುನ್ನೂರಕ್ಕೂ ಹೆಚ್ಚು ನಾರಿಯರ ಬದುಕಿಕೊಂದು ನೈಜ “ಅರ್ಥ’ ಸಿಕ್ಕಿದೆ…’ ಅನ್ನುತ್ತಾ ಆ ಹೆಂಗಸರೆಲ್ಲ ಮತ್ತೆ ಹೊರಟು ನಿಂತರು. ಅವರೊಂದಿಗೆ ನಾನೂ ಮಾತುಕತೆ ನಡೆಸುತ್ತಾ ಹೋಗಿ ಕೊನೆಗೆ ತಲುಪಿದ್ದು ಈ ಮಹಿಳೆಯರ ಸ್ವಾವಲಂಬಿ, ಸ್ವಾಭಿಮಾನಿ ಬದುಕಿಗೆ ದಾರಿಯಾಗಿ­ರುವ ಬನಾನಾ ಫೈಬರ್‌ ವರ್ಕ್‌ ಶಾಪ್‌ಗೆ!

ಶ್ಯಾಮಾ ಪವಾರ್‌ರ ಕನಸು

ಆನೆಗೊಂದಿಯಲ್ಲಿ ಹೀಗೊಂದು ಗುಡಿ ಕೈಗಾರಿಕೆ ಉದ್ಯಮ ಆರಂಭವಾಗಲು ಮೂಲ ಕಾರಣ ಪೂನಾ ಮೂಲದ ಶ್ಯಾಮಾ ಪವಾರ್‌. ಅವರು ಹಂಪಿಗೆ ಆಗಾಗ್ಗೆ ಟೂರ್‌ ಬರುತ್ತಿದ್ದರು. ಇಲ್ಲಿನ ರೈತಾಪಿ, ಶ್ರಮಿಕ ಮಹಿಳೆಯರ ಕಷ್ಟದ ಬದುಕು ಕಂಡು ಮರುಗಿದರು. ಇವರೆನ್ನೆಲ್ಲ ಆರ್ಥಿಕವಾಗಿ ಸಶಕ್ತಗೊಳಿಸಲು ಸಂಕಲ್ಪ ತೊಟ್ಟರು. ಆನೆಗೊಂದಿ ಭಾಗದ ರೈತಾಪಿ ಮಹಿಳೆಯರಿಗೆ ವರ್ಷವಿಡೀ ಉದ್ಯೋಗ ಒದಗಿಸುವ ಉದ್ದೇಶದಿಂದ “ಕಿಷ್ಕಿಂದಾ ಟ್ರಸ್ಟ್‌’ ಹುಟ್ಟು ಹಾಕಿದರು. ಹೇಗಿದ್ದರೂ ಹಂಪಿ ಭಾಗ ಬಾಳೆಗೆ ಹೆಸರುವಾಸಿ. ಸ್ಥಳೀಯ ಸಂಪನ್ಮೂಲವಾಗಿ, ಹೇರಳವಾಗಿ ಸಿಗುವ ಬಾಳೆಯ ನಾರು ಮತ್ತು ತೊಗಟೆಯನ್ನೇ ಬಳಸಿ ಅಲಂಕಾರಿಕ, ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಕರಕುಶಲತೆಯನ್ನು ಮಹಿಳೆಯರಿಗೆ ಕಲಿಸಲು ಮುಂದಾದರು. ಅದರಂತೆ 1997 ರಲ್ಲಿ ಭಾಗಶಃ ಶೂನ್ಯ ಬಂಡವಾಳ, ಗಟ್ಟಿ ಸಂಕಲ್ಪ, ಇಚ್ಛಾಶಕ್ತಿಯೊಂದಿಗೆ ಕೇವಲ 8-10 ಮಹಿಳೆಯರನ್ನು ಜೊತೆಗಿಟ್ಟುಕೊಂಡು ಬನಾನಾ ಫೈಬರ್‌ ಶಾಪ್‌ ಆರಂಭಿಸಿದರು.

ಅದೃಷ್ಟ ಕೈ ಹಿಡಿಯಿತು…

ಈ ಉತ್ಪನ್ನಗಳಿಗೆ ಬಾಳೆಯ ನಾರು ಮತ್ತು ತೊಗಟೆಯೇ ಕಚ್ಚಾವಸ್ತು. ಈ ವಸ್ತುಗಳನ್ನು ಸಂಗ್ರಹಿಸಲೆಂದೇ ಕಾರ್ಮಿಕರನ್ನು ನೇಮಿಸುವ ಬದಲು ಬಾಳೆ ತೋಟದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರೇ ಆ ವಸ್ತುಗಳನ್ನು ಸಂಗ್ರಹಿಸಿ ತಂದರೆ ಹೇಗೆ? ಎಂಬ ಯೋಚನೆ ಶ್ಯಾಮಾ ಪವಾರ್‌ಗೆ ಬಂತು. ಕೂಲಿಯೊಂದಿಗೆ ಹೆಚ್ಚುವರಿ ಆದಾಯ ಸಿಗುವುದರಿಂದ ಈ ಕೆಲಸ ಮಾಡಲು ಕೃಷಿಕ ಮಹಿಳೆಯರೂ ಒಪ್ಪಿದರು. ಬಾಳೆ ದಿಂಡಿನ ಮೇಲ್ಮೆçನ ಒಣಗಿದ ತೊಗಟೆಯನ್ನು ಗಿಡಕ್ಕೆ ಹಾನಿಯಾಗದಂತೆ ಸಂಗ್ರಹಿಸುವ ಕಾರಣಕ್ಕೆ ತೋಟದವರೂ ತಥಾಸ್ತು ಅಂದರು. ಪರಿಣಾಮ, ಈಗ ನಿತ್ಯವೂ 120-130 ಮಹಿಳಾ ಕೃಷಿ ಕಾರ್ಮಿಕರು ಬಾಳೆ ನಾರು ಮತ್ತು ತೊಗಟೆಯನ್ನು ತೋಟಗಳಿಂದ ಸಂಗ್ರಹಿಸುತ್ತಾರೆ! ಈ ಕೆಲಸದಿಂದಲೇ ದಿನಕ್ಕೆ ಕನಿಷ್ಠ 80-100 ರೂ ಗಳನ್ನ ಹೆಚ್ಚುವರಿ ಆಗಿ ದುಡಿಯುತ್ತಾರೆ.

ಎಲ್ಲರೂ ಮಾಸ್ಟರ್‌ ಆರ್ಟಿಸ್ಟ್‌ಗಳೇ!:

ಇಲ್ಲಿ 25-30 ಮಹಿಳೆಯರು ಮಾಸ್ಟರ್‌ ಆರ್ಟಿಸ್ಟ್‌­ ಗಳಿದ್ದಾರೆ. ಬಾಳೆಯ ನಾರು, ತೊಗಟೆಯನ್ನು ನೀರಲ್ಲಿ ನೆನೆಸಿ ಒಣಗಿಸುವ, ರೂಫ್, ಲೈನಿಂಗ್‌, ಡೆಕೋರೇಷನ್‌ ಸೇರಿದಂತೆ ವಿವಿಧ ಹಂತದ ಪ್ರಕ್ರಿಯೆಗಳಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ಇವರೆಲ್ಲ ಹಿಂದೊಮ್ಮೆ ಕೃಷಿ ಕಾರ್ಮಿಕರು ಇಲ್ಲವೆ ಮನೆವಾರ್ತೆಗೆ ಸೀಮಿತವಾಗಿದ್ದವರು! ಇಂಥವರೀಗ ತರೇಹವಾರಿ ಡಿಸೈನ್‌ನ ಉತ್ಪನ್ನಗಳನ್ನು ಏಕಾಂಗಿಯಾಗಿ ತಯಾರಿಸುವಷ್ಟು ನಿಪುಣರು. ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಇಲ್ಲಿರುವ ಸೀನಿಯರ್‌ಗಳೇ ತರಬೇತಿ ಕೊಡುವುದು ವಿಶೇಷ. ನವನವೀನ ಡಿಸೈನ್‌ ರೂಪಿಸುವುದರ ಬಗ್ಗೆ ಆಗಾಗ್ಗೆ ನುರಿತವರಿಂದ ತರಬೇತಿ ಶಿಬಿರ ನಡೆಸಿ ಕಾರ್ಮಿಕರು ಸದಾ ಅಪ್ಡೆàಟ್‌ ಆಗಿರುವಂತೆ ನೋಡಿಕೊಳ್ಳುವುದು ಇಲ್ಲಿನ ಮತ್ತೂಂದು ಹೆಗ್ಗಳಿಕೆ. ಅತ್ಯುತ್ತಮ ಗುಣಮಟ್ಟ ಆನೆಗೊಂದಿಯಲ್ಲಿ ತಯಾರಾಗುವ ಪ್ರತಿ ಉತ್ಪನ್ನಗಳ ವೈಶಿಷ್ಟ್ಯ. ಇಲ್ಲಿನ ಉತ್ಪನ್ನಗಳಿಗೆ ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ವೇದಿಕೆ, ಬೇಡಿಕೆ, ಮನ್ನಣೆ ಸಿಗುತ್ತಿದೆ.

ವರ್ಷವಿಡೀ ಕೆಲಸ! :

“ನನ್ನ ಗಂಡನ ಆರೋಗ್ಯ ಸರಿ ಇಲ್ಲ. ಸಂಸಾರದ ಜವಾಬ್ದಾರಿ ಸಂಪೂರ್ಣ ನನ್ನ ಮೇಲೆ. ಬೇರೆಡೆ ಕೆಲಸ ಸಿಕ್ಕರೂ ಅದು ಪೂರ್ಣಾವಧಿಯದಲ್ಲ. ಹೀಗಾಗಿ ಬದುಕು ಸಂಕಷ್ಟದಲ್ಲಿತ್ತು. ಪರ್ಮನೆಂಟ್‌ ಉದ್ಯೋಗದ ಹುಡುಕಾಟದಲ್ಲಿದ್ದೆ. ಇಲ್ಲಿ ಬಂದು ಸೇರಿದೆ. ಈಗ ಬದುಕು ಸುಧಾರಿಸಿದೆ’ ಎನ್ನುವಾಗ್ಗೆ ತಾಜುನ್‌ರವರ ಮೊಗದಲ್ಲಿ ಸಂತೃಪ್ತಭಾವ ಇತ್ತು. ತಾಜುನ್‌ರಂತೆ ಅಪ್ಸರಾ, ಪುಷ್ಪ, ಲಕ್ಷಿ¾.. ಹೀಗೆ ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಲ್ಲೂ ಹೆಚ್ಚುಕಮ್ಮಿ ಇಂಥ ಕತೆ-ವ್ಯಥೆಗಳಿವೆ. ಅವರೆಲ್ಲ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ದಿನಕ್ಕೆ 250-300 ರೂ ಗಳಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನಿ, ಸ್ವಾವಲಂಬಿ, ಸ್ವತಂತ್ರವಾಗಿ ಬದುಕುತ್ತಿದ್ದಾರೆ ಎನ್ನುತ್ತಾರೆ ಟ್ರಸ್ಟ್‌ನ ವ್ಯವಸ್ಥಾಪಕಿ ನಂದಿನಿ.

ಯಂತ್ರಗಳ ಬಳಕೆ ಇಲ್ಲ…

ಬಾಳೆ ನಾರು ಮತ್ತು ತೊಗಟೆ ಬಳಸಿ ತಯಾರಿಸುವ ಉತ್ಪನ್ನಗಳಿಗೆ ತಮಿಳು­ನಾಡು ಮತ್ತು ಕೇರಳ ಹೆಸರುವಾಸಿ. ಆದರೆ ಅಲ್ಲಿಗಿಂತ ಗ್ರಾಹಕರು ಹೆಚ್ಚು ಆಕರ್ಷಿತರಾಗೋದು ಆನೆಗೊಂದಿಯಲ್ಲಿ ತಯಾರಾ­ಗುವ ಉತ್ಪನ್ನಗಳಿಗೆ! ಕಾರಣ ಇಷ್ಟೆ- ಈ ಉತ್ಪನ್ನಗಳ ಬಳಕೆಯಲ್ಲಿ ಯಂತ್ರ­ಗಳನ್ನು ಬಳಸು­ವುದಿಲ್ಲ. ಸಂಪೂರ್ಣ­ವಾಗಿ ಮಾನವ ಶ್ರಮದಿಂದ ತಯಾರಾಗುತ್ತವೆ. ಸೀಜನ್‌ನಲ್ಲಿ ಪ್ರವಾಸಿಗರು ಈ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರೆ, ಅನ್‌ ಸೀಜನ್‌ನಲ್ಲಿ ಆನ್‌ ಲೈನ್‌ ಮೂಲಕ ಕೊಳ್ಳುತ್ತಾರೆ. ಒಂದು ಉತ್ಪನ್ನದ ಕನಿಷ್ಠ ಬೆಲೆ 200 ರೂ., ಗರಿಷ್ಠ ಬೆಲೆ 3 ಲಕ್ಷಕ್ಕೂ ಮಿಕ್ಕು ಇದೆ! ವಿಶೇಷವೇನೆಂದರೆ ಇದುವರೆಗೂ ಸರಕಾರ, ಸರಕಾರೇತರ ಸಂಸ್ಥೆಗಳ ನಯಾಪೈಸೆ ಧನಸಹಾಯ­ವಿಲ್ಲದೇ ಸ್ವಂತ ಪರಿಶ್ರಮದಿಂದ ಈ ವರ್ಕ್‌ ಶಾಪ್‌ ಎದ್ದು ನಿಂತಿದೆ! ಆನೆಗೊಂದಿ ಸೀಮೆಯ 300ಕ್ಕೂ ಹೆಚ್ಚು ಕುಟುಂಬಗಳಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ನೀಡಿದ ಹೆಗ್ಗಳಿಗೆ, ಅಗ್ಗಳಿಕೆ ಇದರದ್ದು. ಇಷ್ಟು ವರ್ಷಗಳ ಸುದೀರ್ಘ‌ ಪಯಣದಲ್ಲಿ ಅನೇಕ ಏಳು-ಬೀಳು, ಕಷ್ಟ-ನಷ್ಟಗಳನ್ನು ಕಂಡರೂ ಅದನ್ನೆಲ್ಲ ಮೆಟ್ಟಿ ಈಗ ಸುಸ್ಥಿರತೆ ಸಾಧಿಸಿದೆ. ಪ್ರತಿ ತಿಂಗಳೂ 2 ಲಕ್ಷ ರೂ.ಗೂ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುತ್ತಿದೆ.

ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ…

ಇತ್ತೀಚೆಗಷ್ಟೆ ಆನೆಗೊಂದಿ “ಕ್ರಾಫ್ಟ್ ವಿಲೇಜ್‌’ ಎಂಬ ಗರಿಮೆಗೆ ಪಾತ್ರವಾಗಿದೆ. ಇದರಲ್ಲಿ ಈ ವರ್ಕ್‌ ಶಾಪ್‌ನದ್ದು ನಿರ್ಣಾಯಕ ಪಾತ್ರ. ವರ್ಕ್‌ ಶಾಪ್‌, ಬರುವ ಲಾಭಾಂಶವನ್ನು ತನ್ನ ಕೆಲಸಗಾರರ ಮನೋರಂಜನೆ, ಆರೋಗ್ಯ, ಮಕ್ಕಳ ಶಿಕ್ಷಣ ಸೇರಿದಂತೆ ಮೂಲಭೂತ ಅವಶ್ಯಕತೆ, ಸೌಲಭ್ಯಗಳ ಪೂರೈಕೆಗೆ ವಿನಿಯೋಗಿಸುತ್ತದೆ. ಇದೆಲ್ಲ ಹರಿದರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತದೆ. ಕಸದಿಂದ ರಸ ತಯಾರಿಸಬಹುದು ಎಂಬುದನ್ನು ನಿರೂಪಿಸಿದ್ದು ಮಾತ್ರವಲ್ಲ; ಈ ಉದ್ಯಮದ ಮೂಲಕವೇ ತಮ್ಮ ಬದುಕಿಗೆ ಒಂದು ದಾರಿಯನ್ನೂ ಹುಡುಕಿಕೊಂಡ, ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗುತ್ತಾ ಇರುವ ಕಿಷ್ಕಿಂದಾ ಟ್ರಸ್ಟ್ ನ ನಾರಿಯರ ಕೆಲಸಕ್ಕೆ ಜೈ ಅನ್ನೋಣ. ಅವರ ಕೆಲಸ ನಾಲ್ಕು ಮಂದಿಗೆ ಸ್ಪೂರ್ತಿ ಕೊಡಲಿ ಎಂದು ಹಾರೈಸೋಣ.

ಯಾರು ಈ ಶ್ಯಾಮಾ ಪವಾರ್‌? :

ಮೂಲತಃ ಪೂನಾದವರಾದ ಶ್ಯಾಮಾ ಪವಾರ್‌, ಕಲಾವಿದೆ ಹಾಗೂ ವಿನ್ಯಾಸಗಾರ್ತಿ. ಪ್ರವಾಸ ಮಾಡುವುದು ಇವರ ಹವ್ಯಾಸ. ಹೀಗೆ ಪ್ರವಾಸ ಮಾಡುತ್ತಾ ಹಂಪಿಗೆ ಬಂದಿದ್ದು 1991ರಲ್ಲಿ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತರು. ಇಲ್ಲೇ ಖಾಯಂ ಆಗಿ ನೆಲೆಸಲು ನಿರ್ಧರಿಸಿ 1994ರಲ್ಲಿ ಆನೆಗೊಂದಿಯನ್ನು ಆಯ್ಕೆ ಮಾಡಿಕೊಂಡು, ಈ ಭಾಗದ ರೈತಾಪಿ- ಕಾರ್ಮಿಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಲು ಪಣ ತೊಟ್ಟರು. ಅದಕ್ಕಾಗಿ “ಕಿಷ್ಕಿಂದ ಟ್ರಸ್ಟ್‌’ ಹುಟ್ಟು ಹಾಕಿ, ಅದರಡಿಯಲ್ಲಿ ಇಲ್ಲಿಯ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಅನವರತ ದುಡಿಯುತ್ತಿದ್ದಾರೆ.

ಇದೊಂದು ಆರ್ಟ್‌ ಗ್ಯಾಲರಿ! ;

ಆನೆಗೊಂದಿಯಲ್ಲಿರುವ ಬನಾನಾ ಫೈಬರ್‌ ಶಾಪ್‌ನಲ್ಲಿ ನಾನಾ ನಮೂನೆಯ ಟೋಪಿ, ಬುಟ್ಟಿ, ಬ್ಯಾಗ್‌, ಕೈಚೀಲ, ಟೇಬಲ್‌ ಮ್ಯಾಟ್‌, ಚಾಪೆ, ಧಾನ್ಯಗಳನ್ನು ಸಂಗ್ರಹಿಸಿ ಇಡುವ ಬುಟ್ಟಿ, ದೀಪಾಲಂಕಾರದ ಬುಟ್ಟಿ ಸೇರಿದಂತೆ ವೈವಿಧ್ಯಮಯ ವಿನ್ಯಾಸ, ಗಾತ್ರ, ಬಣ್ಣದ ಅಲಂಕಾರಿಕ, ಮನೆ ಬಳಕೆಗೆ ಬೇಕಾಗುವ ಅಸಂಖ್ಯಾತ ವಸ್ತುಗಳಿವೆ. ನೋಡಿದ ತಕ್ಷಣಕ್ಕೆ ಈ ಶಾಪ್‌ ಒಂದು ಆರ್ಟ್‌ ಗ್ಯಾಲರಿ, ಮ್ಯೂಸಿಯಂನಂತೆ ಕಾಣುತ್ತದೆ!

-ಸ್ವರೂಪಾನಂದ ಕೊಟ್ಟೂರು

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

D. R. Bendre: ಹೀಗಿದ್ದರು ಬೇಂದ್ರೆ…

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

Mahakumbh Mela: ದೇವ ಬೊಂಬೆ ಪೂಜೆ ಆಟ: ಭಕ್ತಿ ಸೋಜಿಗ! 

11

Shopping Time: ಶಾಪಿಂಗ್‌ ಎಂಬ ಸಿಹಿಯಾದ ಶಾಪ!

10

Badami Banashankari Festival: ಬನಶಂಕರಿ ಜಾತ್ರ್ಯಾಗ ನಾಟಕಗಳ ಸುಗ್ಗಿ ಜಾತ್ರೆ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.