ಮಾತು ನೊರೆತೆರೆಯಾಟ ! ಬಿಡದೆ ಹಿಡಿಯಬಹುದೆ ನಿನ್ನ !


Team Udayavani, May 21, 2017, 4:47 PM IST

sapatha.jpg

ಮಾತಿಗೊಂದು ಅರ್ಥ ಬೇಕೋ ಬೇಡವೋ ಅದನ್ನು ನಿರ್ಧರಿಸುವುದು ಅದನ್ನು ಆಡುವವರೂ ಕೇಳುವವರೂ ಬರೆಯುವವರೂ ಅಲ್ಲವೇನೋ ಅನಿಸುತ್ತಿದೆ. ಸ್ವಯಂ ಮಾತಿಗಾದರೂ ತಾನು ಹೇಗೆ ಇರುವೆ ಎಂಬುದರ ಅರಿವಾದರೂ ಇದೆಯೋ ಇಲ್ಲವೊ ತಿಳಿಯುತ್ತಿಲ್ಲ! ಮಾತಿನ ಅಥವಾ ಭಾಷೆಯ ಸ್ವರೂಪವಾದರೂ ಹೇಗಿರಬಹುದು? ವ್ಯಾಕರಣ ಶಾಸ್ತ್ರಗಳೇನೋ ಸವಿಸ್ತಾರವಾಗಿ, ತರ್ಕಬದ್ಧವಾಗಿ ಭಾಷೆಯ ಸಂರಚನೆಯನ್ನು ವಿವರಿಸಬಲ್ಲುದಾದರೂ ಆ ತರ್ಕ ಗಿರ್ಕಗಳೆಲ್ಲ ಅನ್ವಯವಾಗುವುದು ಎಚ್ಚರದ ಸ್ಥಿತಿಯಲ್ಲಿ ನಾವಾಡುವ ಮಾತಿಗೆ ಮಾತ್ರ. 

ನಮ್ಮ ಮಾತನ್ನು ಕೇಳುತ್ತಿರುವವರೋ ಓದುತ್ತಿರುವವರೋ ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದೋ ತಪ್ಪು ತಿಳಿಯದಿರಲಿ ಎಂದೋ ಪ್ರಯತ್ನಪೂರ್ವಕವಾಗಿ ಅಥವಾ ರೂಢಿಬದ್ಧವಾಗಿ,  ಜಾಣತನದಲ್ಲಿ, ಎಚ್ಚರದಲ್ಲಿ ನುಡಿಸುವ ಮಾತು ಅದು. ಕೇಳುವವರಿಲ್ಲದಾಗ ಮನಸ್ಸಿನಲ್ಲಿ ಮೂಡುವ ಹರಿವ ಹೊನಲಿನಂತಾ ಮಾತಿಗೆ ಹೀಗೆ ಜಾಡಿನ ಹಂಗು ಇರಬಲ್ಲದೆ? ಅಥವಾ ಎಚ್ಚರವೇ ಇಲ್ಲದ ನಿದ್ದೆಯಲ್ಲಿ ನಾವು ನಡೆಸುವ ಮಾತುಕತೆಯಾದ  ಕನಸಿನ ಸಂರಚನೆಗೆ ಯಾವ ತರ್ಕ, ಯಾವ ವ್ಯಾಕರಣ? ಎಲ್ಲೋ ಹುಟ್ಟಿ ಎಲ್ಲೋ ಹರಿದು ಇದ್ದಕ್ಕಿದ್ದಂತೆ ವೇಷ ಬದಲಿಸಿ, ಕಾಲ-ದೇಶಗಳ ಹಂಗಿಲ್ಲದೆ ಸಾಗಿಬಿಡುವಾಗಲೂ ಎಚ್ಚರದಲ್ಲಿ ಮತ್ತೆ ನೆನೆವಾಗ ಕೊಟ್ಟ ಹಾಗೆಯೇ ಕೊಟ್ಟ ಅರ್ಥವನ್ನು ಪಡೆದುಕೊಳ್ಳುವ ಕನಸೆಂಬ ಮನೋವ್ಯಾಪಾರವೇ  ಮನುಷ್ಯರ ನಿಜವಾದ ಮಾತಿನ ಸ್ವರೂಪ ಇರಬಹುದೇ? 

ಅಮೆರಿಕದ ಮೂಲನಿವಾಸಿಗಳು ಕೆಟ್ಟ ಕನಸುಗಳನ್ನು ಹಿಡಿದಿಟ್ಟುಕೊಂಡು ಒಳ್ಳೆಯ ಕನಸುಗಳಷ್ಟೇ ಒಳಗೆ ಬರಲೆಂದು ಮಲಗುವ ಜಾಗದಲ್ಲಿ ಡ್ರೀಮ್‌ ಕ್ಯಾಚರ್‌ಗಳನ್ನು ಹೆಣೆದು, ಬಣ್ಣದ ಮಣಿಗಳನ್ನೂ ಹಕ್ಕಿಯ ಪುಕ್ಕಗಳನ್ನೂ ಸೇರಿಸಿ ಅಲಂಕರಿಸಿ ತೂಗು ಹಾಕುತ್ತಿದ್ದರು. 

ಎಚ್ಚರದಲ್ಲಿ ಮಾತ್ರ ಮಾತಿಗೂ ಹೀಗೊಂದು ಬಲೆ ಹೆಣೆದು ಬೇಕಾದಲ್ಲಿ ಬೇಕಾದಷ್ಟೇ ತೂರಿಕೊಳ್ಳುವುದನ್ನು ಹೇಗೊ ಕಲಿಸುತ್ತೇವೆ! ನಿಜವಾಗಿಯೂ ಆಡಬೇಕಾದಾಗ ಸರಿಯಾದ ಮಾತೇ ಸಿಗದೆ ಕಳವಳಿಸುತ್ತೇವೆ. ಮಾತಿನ ಭಾರದಲ್ಲಿ ಮೌನ ನಲುಗುವುದನ್ನೂ ಮೌನದ ನೀರವದಲ್ಲಿ ಮಾತು ದಿಕ್ಕು ತಪ್ಪುವುದನ್ನೂ ತಡೆಯುವುದು ಹೇಗೆಂದು ತಿಳಿಯದೆ ತಳಮಳಿಸುತ್ತೇವೆ. ಇನ್ನೇನು ಸಿಕ್ಕೇಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ ತಪ್ಪಿಸಿಕೊಂಡು ದೂರ ಓಡಿಬಿಡುವ ಮಾತನ್ನು ಒಲಿಸಿ, ಓಲೈಸಿಕೊಳ್ಳುವ ಬಗೆ ಎಲ್ಲಿದೆ?
ಹಿಡಿ ಹಿಡಿ ಹಿಡಿಯೆಂದು ಪುರಂದರ ವಿಠಲನು
ದುಡು ದುಡು ದುಡನೇ ಓಡುವಾ…
ನಡಿ ನಡಿ ನಡಿ ಎಂದು ಮೆಲ್ಲನೆ ಪಿಡಿಯಲು
ಬಿಡಿ ಬಿಡಿ ಬಿಡಿ ದಮ್ಮಯ್ನಾ ಎಂದೆನುವಾ…!

ಅಯ್ಯೋ, ದಮ್ಮಯ್ಯ ಗುಡ್ಡೆ ಹಾಕುವ ಈ ಕೃಷ್ಣನನ್ನು ನಾವ್ಯಾಕೆ ಹಿಡಿದು ಒರಳಿಗೆ ಕಟ್ಟಬೇಕು? ಅವನ ಪಾಡಿಗೆ ಅವನು ಒಲಿದಂತೆ ನಲಿದಂತೆ ಆಡಿ ಹಾಡಿಕೊಂಡಿರಲು ಬಿಡದೆ, ಮಾತು ಎಂಬ ಈ ಮುದ್ದು ಕಂದನನ್ನು ನಾವ್ಯಾಕೆ ಹಿಡಿಯಹೋಗಬೇಕು? ತಾನೇ ತಾನಾಗಿ ತನಗೆ ಬೇಕೆಂದೇ ಮತ್ತೆ ಹಿಂದೆ ಮುಂದೆ ಸುಳಿದು “ಹಿಡಿ ಹಿಡಿ ಹಿಡಿ’ ಎಂದು ತಾನಾಗೇ ಕರೆಯುವವರೆಗೆ ನಾವ್ಯಾಕೆ ಸುಮ್ಮನೆ ಕಾಯಬಾರದು?

ಕಲ್ಪನಾ ವಿಲಾಸವೊಂದು ಭೃಂಗದ ಬೆನ್ನೇರಿ ಒಂದೇ ಒಂದು ಸಾಲಾಗಿ ಬಂದಾಗ ಬೇಂದ್ರೆ ಹಾಗೇ ಸುಮ್ಮನೆ ಕಾದರಂತೆ ಎರಡನೇ ಸಾಲಿಗಾಗಿ! ಎಲ್ಲೋ ಮಿಂಚಿ, ಎÇÉೋ ಹೊಂಚಿ, ಮರೆಯಲ್ಲೇ ಕೂತು ಸತಾಯಿಸಿ, ಕಾಯಿಸಿ ಕಡೆಗೊಮ್ಮೆ ಎರಡನೆ ಸಾಲು ತಾನಾಗೇ ಬಂದಿತಂತೆ ಮಸೆದ ಗಾಳಿ ಪಕ್ಕ ಪಡೆದ ಸಹಜ ಪ್ರಾಸವಾಗಿ! ಆಹಾ! ಮಾತು ಹಾಗೆ ಬಂದರೆ ಎಷ್ಟು ಚೆಂದ. ಆಗ ಮಾತ್ರ ಮೂಡಬಲ್ಲದು ಆ ಮೂರನೆಯ ಸಾಲಿನಲ್ಲಿ ಮಿಂಚಿ ಮಾಯವಾಗುವ ಒಂದು ಮಂದಹಾಸ ಮತ್ತು ಇಂಥ ಮಾತು ಮಾತಿನ ಮಥನದಲ್ಲೇ ಮೂಡಿ ಬರಲೂಬಹುದು ಮಾತಿಗೂ ಮೀರಿದ ನಾದದ ನವನೀತ! 

ಬಂದರೆ ಬಂದೀತು, ಇಲ್ಲದಿದ್ದರೆ ಇಲ್ಲ ಎಂಬ ನಿರಾಳದಲ್ಲಿ ಮಾತಿಗಾಗಿ ಕಾಯುವುದು ಬೇರೆ ಮಾತು. ಆದರೆ ಆಡಿ ಹಾಡಿ ನಲಿದಾಡಿಕೊಂಡಿದ್ದ ಮಾತೊಂದು ಹೇಳ ಹೆಸರಿಲ್ಲದೆ, ಆಡುವವರೇ ಇಲ್ಲದೆ ಮಾಯುವಾಗುವ ಹೊತ್ತಿನಲ್ಲಿ ಆ ಮಾತನ್ನು ಉಳಿಸಿಕೊಳ್ಳಲು  ಹಂಬಲಿಸುವುದು ಇನ್ನೊಂದು ಬೇರೆಯದೇ ಪಾಡು. ಇದು ಬಿಟ್ಟಿದ್ದನ್ನು, ಬಿಡಬೇಕಾಗಿ ಬಂದಿದ್ದನ್ನೂ ಹಾಗೆ ಬಿಟ್ಟ ಕಾರಣಕ್ಕೇ ಮತ್ತೆ ಹಿಡಿಯಲು ಹಂಬಲಿಸುವ, ಕಳೆದಿದ್ದನ್ನು ಹೇಗಾದರೂ ಹುಡುಕಿ ಮತ್ತೆ ತನ್ನದಾಗಿಸಿಕೊಳ್ಳುವ, ಹಾಗೆ ತನ್ನದಾಗಿಸಿಕೊಂಡಾಗಲಷ್ಟೇ ತಾನು ಪೂರ್ಣವಾಗಲು ಸಾಧ್ಯ ಎಂದು ನಂಬುವ ಸಂಕಟ. 

ಒಳಿತೆನುವುದನ್ನು ಬಿಡದೆ ಹಿಡಿ,
ಅದು ಒಂದು ಹಿಡಿ ಮಣ್ಣಾದರೂ ಸರಿ
ಬಿಡದೆ ಹಿಡಿ ನೀನು ಮನಸಾರೆ ನಂಬಿದ್ದನ್ನ,
ಅದು ಸುಮ್ಮನೆ ತನ್ನಷ್ಟಕ್ಕೇ ನಿಂತಿರುವ 
ಮರವಷ್ಟೇ ಆದರೂ ಸರಿ.
ಮಾಡಲೇ ಬೇಕಾದ್ದನ್ನು ಮಾಡಿಯೇ ತೀರು
ಇಲ್ಲಿಂದ ಅದು ಎಷ್ಟು ದೂರವಿದ್ದರೂ ಸರಿ.
ಎಷ್ಟೇ ಕಷ್ಟವಾದರೂ ಸರಿ,
ಸಾಯುವ ಕಡೆ ಗಳಿಗೆಯವರೆಗೂ
ಕೈ ಬಿಡಬೇಡ ಈ ಬದುಕನ್ನ.
ನಿನ್ನಿಂದ ನಾನೆಷ್ಟೇ ದೂರ ಹೋದರೂನೂ
ಬಿಡಬೇಡ ಎಂದೂ
ನನ್ನ ಕೈಯನ್ನ.

ಪಾಬ್ಲೋ ಇಂಡಿಯನ್ನರಾಡುತ್ತಿದ್ದ ಯಾವುದೋ ಭಾಷೆಯಲ್ಲಿರುವ  ಈ ಮಾತಂತೂ ಮಾತೇ ಮತ್ತೆ ತನ್ನನ್ನಾಡುವಂತೆ ಆ ಭಾಷಿಕರಲ್ಲಿ ಮೊರೆಯಿಡುವಂತೆ ಕೇಳುತ್ತಿದೆ. ಆದರೆ ಈ ಮೊರೆ ಆ ಭಾಷಿಕರದ್ದೇ ಹೊರತು ಭಾಷೆಯದ್ದಲ್ಲ. ಸೃಷ್ಟಿ, ವಿಕಾಸ, ನಾಶಗಳ ನೆನಪಿನ ನೋವಿನ ಹಂಗು ಮಾತಿಗೆಲ್ಲಿದೆ?

ಒಂದೊಮ್ಮೆ ಹತ್ತಾರು ಬೇರೆ ಬೇರೆ ಭಾಷೆಗಳನ್ನು ಆಡುತ್ತಿದ್ದ ಅಮೆರಿಕನ್‌ ಇಂಡಿಯನ್‌ ಮೂಲನಿವಾಸಿಗಳಲ್ಲೊಂದಾದ ಪಾಬ್ಲೋ ಸಮುದಾಯದ ಯಾವುದೋ ಒಂದು ಭಾಷೆಯಲ್ಲಿ ಮೂಡಿಬಂದ ಮಾತು ಇದು. ಬಹುತೇಕ ಅಮೆರಿಕನ್‌ ಮೂಲನಿವಾಸಿಗಳ ಭಾಷೆಗಾದ ಗತಿಯೇ ಪಾಬ್ಲೋ ಸಮುದಾಯಗಳು ಆಡುತ್ತಿದ್ದ ಒಂದಷ್ಟು ಭಾಷೆಗಳಿಗೂ ಒದಗಿಬಂದಿದೆ. ಹಿಂದೆ ಪಾಬ್ಲೋ ಸಮುದಾಯ ಪ್ರವರ್ಧಮಾನದಲ್ಲಿದ್ದಾಗ ತನ್ನದೇ ಸಮುದಾಯದ ಇನ್ನೊಂದು ಗುಂಪು ಆಡುತ್ತಿದ್ದ ಇನ್ನೊಂದೇ ಭಾಷೆಯನ್ನು ಅರಿಯಲು ಒದ್ದಾಡುತ್ತಿದ್ದ  ಈ ಸಮುದಾಯ ಈಗ ತನ್ನ ಎಷ್ಟೋ ಭಾಷೆಗಳನ್ನು ಕಳೆದುಕೊಂಡು ಇಡಿಯಾಗಿ ಇಂಗ್ಲಿಶ್‌ ಭಾಷೆಯನ್ನೇ  ಆಡುತ್ತಿದೆ. ಒಂದಾನೊಂದು ಕಾಲದಲ್ಲಿ ತನ್ನ ಮೂಲ ಭಾಷಿಕರು ಆಡಿದ್ದ ಮಾತನ್ನು, ಪ್ರಾರ್ಥನೆಯನ್ನು, ಹರಕೆ, ಹಾರೈಕೆ, ಹಾಡು, ಕಥೆಗಳನ್ನು ಇಂಗ್ಲೀಷಿನ ಮೂಲಕವೇ ಕಂಡುಕೊಳ್ಳುತ್ತಾ ಅಳಿದುಳಿದ ಬಿಡಿ ಮಾತುಗಳನ್ನು ಕಲೆ ಹಾಕಿ ತನ್ನ ಮೂಲ ಭಾಷೆಗಳಲ್ಲಿ ಕೆಲವನ್ನಾದರೂ ಮತ್ತೆ ಅದು ಇದ್ದ ಹಾಗೇ ಕಾಣಲು, ಕಲಿಯಲು, ಆಡಲು ಸಾಧ್ಯವಾ ನೋಡುತ್ತಿದೆ. ಕಾಲದ ಅನಿವಾರ್ಯಗಳಲ್ಲಿ, ಪರಕೀಯತೆಯ ದಾಳಿಯಲ್ಲಿ ಕಾಣೆಯಾಗಿ ಹೋದ ಮೂಲ ನಿವಾಸಿ ಅಮೆರಿಕನ್ನರಾಡುತ್ತಿದ್ದ ನೂರಾರು ಸಾವಿರಾರು ಮಾತುಗಳೆಲ್ಲಾ
ಹೀಗೇ ತಮ್ಮನ್ನು ತಾವು ಮತ್ತೆ ಕಟ್ಟಿಕೊಳ್ಳುವ ಹಂಬಲದಲ್ಲಿವೆ. ಅಂದು ಅವರಾಡುತ್ತಿದ್ದ ಎಷ್ಟೊಂದು ಮಾತುಗಳು, ಎಷ್ಟೊಂದು ಭಾವಗಳು, ಎಷ್ಟೊಂದು ನೋಟಗಳು ಅಂದಿನ ಅದದೇ ಹೆಸರಿನಲ್ಲಿ ಅಥವಾ ಅಲ್ಪ ಸ್ವಲ್ಪ ವೇಷ ಬದಲಿಸಿಕೊಂಡು ನದಿ, ಗುಡ್ಡ, ಬೆಟ್ಟ, ಬಯಲು, ಪ್ರಾಣಿ, ಪಕ್ಷಿ, ಊರುಕೇರಿಗಳ ಹೆಸರುಗಳಾಗಿ ಈ ದೊಡ್ಡ ದೇಶದ ತುಂಬೆಲ್ಲಾ ಹಾಗೇ ಉಳಿದುಕೊಂಡಿವೆ!

ಮಾತು ಅಥವಾ ಮೌನವೊಂದು ಹುಟ್ಟುವುದು ಹೇಗೆಂದು ಪೂರ್ಣವಾಗಿ ಅರಿಯಲಾರದ ಮನುಷ್ಯ ಮಾತ್ರರಾದ ನಮಗೂ ನಿಮಗೂ ಅದು ಇಲ್ಲದಾಗುವುದನ್ನು ಮಾತ್ರ ಸಹಿಸದೆ ಸಂಕಟವಾಗುವುದಕ್ಕೆ ಕಾರಣವನ್ನು ವಿವರಿಸಲಾಗದ್ದಕ್ಕೆ ಎಷ್ಟೆಲ್ಲಾ
ಮಾತನಾಡಬೇಕಿದೆ! ಅಥವಾ ಮೌನವನ್ನೇ ಮೊರೆಹೊಕ್ಕು ಈಗ ಸಧ್ಯಕ್ಕೆ ಸುಮ್ಮನೆ ಕುಳಿತು ಡ್ರೀಮ್‌ ಕ್ಯಾಚರ್‌ನಂಥ ಯಾವುದಾದರೂ ಬಣ್ಣದ ಬಲೆ ಹೆಣೆದು, ಕಾಲವೆಂಬ ಹರಿವ ನೀರಿನಲ್ಲಿ ಅದನ್ನು ಬಿಟ್ಟು, ಕಳೆದುಕೊಂಡ ಮಾತನ್ನೆಲ್ಲಾ
ಮತ್ತೆ ಹಿಡಿಯುವ ಕನಸು ನೇಯಬೇಕಿದೆ.

ಮೀರಾ ಪಿ. ಆರ್‌., ನ್ಯೂಜೆರ್ಸಿ

ಟಾಪ್ ನ್ಯೂಸ್

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.