ತರ ತರ ತರಕಾರಿ ಕತೆ


Team Udayavani, Apr 20, 2018, 6:15 AM IST

Shopping_woman_hero.jpg

ತರಕಾರಿಗಳೇ, ನೀವೆಲ್ಲ ಒಬ್ಬೊಬ್ಬರಾಗಿ ನನ್ನ ತಟ್ಟೆಯಿಂದ ಹೊರಗೆ ಬನ್ನಿ- ಇದು ನಾನು ಸಣ್ಣವಳಿದ್ದಾಗ ಪ್ರತಿನಿತ್ಯ ಊಟದ ಮೊದಲು ಹೇಳುತ್ತಿದ್ದ ಮಾತುಗಳಂತೆ! ಎಲ್ಲ ತರಕಾರಿ ಹೋಳುಗಳನ್ನು ತಟ್ಟೆಯಿಂದ ಹೊರಗಿಟ್ಟ ಮೇಲೆಯೇ ನಾನು ಊಟ ಮಾಡಲು ಶುರು ಮಾಡುತ್ತಿದ್ದುದಂತೆ. ಅಮ್ಮ ಇದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ, ನನ್ನ ಮಕ್ಕಳಿಗೆ ನಾನು ತರಕಾರಿಗಳ ಮಹತ್ವವನ್ನು ಹೇಳುವಾಗ, ತರಕಾರಿ ಪಲ್ಯವನ್ನು ತಿನ್ನಲು ಅವರನ್ನು ಪುಸಲಾಯಿಸುವಾಗ ಅಮ್ಮ ಹಳೆಯದನ್ನು ನೆನಪಿಸಿಕೊಂಡು ತುಟಿಯಂಚಿನಲ್ಲೇ ನಗುತ್ತಿರುತ್ತಾರೆ.

ಈ ತರಕಾರಿ ಎಂದರೆ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಅಲರ್ಜಿಯೇ. ಆದರೆ, ಇದರ ಅಪಾರ ಮಹಿಮೆಯನ್ನರಿತ ತಾಯಂದಿರು ತಮ್ಮ ಮಕ್ಕಳಿಗೆ ತರಕಾರಿಗಳನ್ನು ತಿನ್ನಿಸಲು ಇಲ್ಲದ ಹರಸಾಹಸ ನಡೆಸಿಯೇ ಇರುತ್ತಾರೆ. “ತರಕಾರಿ ತಿನ್ನೋದೇ ಇಲ್ಲ ಡಾಕ್ಟ್ರೇ’ ಇದು ಮಕ್ಕಳ ತಜ್ಞರಲ್ಲಿ ಬಹುತೇಕ ಎಲ್ಲ ತಾಯಂದಿರ ದೂರು. ಡಾಕು ಜೋರು ಮಾಡಿ ಹೇಳಿದ್ರಾದರೂ ಈ ಮಕ್ಕಳು ತರಕಾರಿ ತಿನ್ನುತ್ತಾವೆಯೇನೋ ಎಂಬ ಆಸೆ ತಾಯಂದಿರಿಗೆ !

ನನಗಿನ್ನೂ ನೆನಪಿದೆ, ಆಗ ವರ್ಷದ ಮಗನಿಗೆ ಊಟ ಮಾಡಿಸುವುದೇ ದಿನದ ಮುಖ್ಯ ಕಾರ್ಯಕ್ರಮ. ಬೆಳಿಗ್ಗೆಯೇ ಅಂದು, ಮಗರಾಯನಿಗೆ ಮಧ್ಯಾಹ್ನದ ಊಟಕ್ಕೆ ಯಾವ ತರಕಾರಿ ಎಂದು ನಿರ್ಧರಿಸಿಯಾಗಿರುತ್ತಿತ್ತು. ಒಂದೊಂದು ದಿನ ಒಂದೊಂದು ತರಕಾರಿ ! ಆಲೂಗಡ್ಡೆ, ಕ್ಯಾರೇಟ್‌,  ಪಾಲಕ್‌ ಸೊಪ್ಪು… ಹೀಗೆ ದಿನವೂ ಒಂದು ತರಕಾರಿಯನ್ನು ಸ್ವಲ್ಪವೇ ತೆಗೆದುಕೊಂಡು, ಸ್ವಲ್ಪ ಬೇಳೆ, ಒಂದು ಚಿಟಕಿ ಅರಸಿನ, ಒಂದು ಬೆಳ್ಳುಳ್ಳಿ ಎಸಳು ಹಾಗೂ ಒಂದೆರಡು ಜೀರಿಗೆಯೊಂದಿಗೆ ಕುಕ್ಕರ್‌ನಲ್ಲಿ ಬೇಯಿಸಿ, ಬಿಸಿ ಅನ್ನ , ತುಪ್ಪ , ಉಪ್ಪಿನೊಂದಿಗೆ ಚೆನ್ನಾಗಿ ಮಸೆದು ಮಗರಾಯನಿಗೆ ತಿನ್ನಿಸಿದರೆ ಅಂದಿನ ದಿನ ಸಾರ್ಥಕವಾದಂತೆಯೇ ! ಮಗ ನರ್ಸರಿ ಮೆಟ್ಟಿಲು ಹತ್ತುವವರೆಗೂ ಈ ಬಗೆಯ ವಿಶೇಷ ಭೋಜನ ಕೊಟ್ಟಿದ್ದೇ ಕೊಟ್ಟಿದ್ದು ! 

ದೊಡ್ಡವರಾದ ಮೇಲೂ ಸ್ವಲ್ಪ ಜನರಿಗೆ ಕೆಲ ತರಕಾರಿಗಳೆಂದರೆ ಅಷ್ಟಕ್ಕಷ್ಟೆ. ಹಾಗಾಗಿಯೇ ಕೆಲವರ ಅಡುಗೆ ಮನೆಯಲ್ಲಿ ಒಂದಿಷ್ಟು ತರಕಾರಿಗಳಿಗೆ ಮಾತ್ರವೇ ಪ್ರವೇಶ. ಇನ್ನು ಕೆಲವರ ಮನೆಯ ಕತೆ ಬೇರೆ ಬಿಡಿ. ಇಷ್ಟವೋ ಕಷ್ಟವೋ, ರುಚಿಯೋ ಇಲ್ಲವೋ ಒಟ್ಟಿನಲ್ಲಿ ಮನೆಯಲ್ಲಿ ಎಲ್ಲ ಬಗೆಯ ತರಕಾರಿಗಳ ಬಳಕೆಯಾಗಲೇಬೇಕು, ಅದರ ಪೌಷ್ಟಿಕಾಂಶಗಳ ಸದುಪಯೋಗ ಎಲ್ಲರಿಗೂ ಆಗಬೇಕು ಎಂಬ ಹೈಕಮಾಂಡ್‌ ಆರ್ಡರ್‌ ಆಗಿರುತ್ತೆ. ಯಾರೂ ಏನೂ ಮಾತಾಡುವಂತಿರುವುದಿಲ್ಲ !

ಒಮ್ಮೆ, ಊಟದ ಸಮಯಕ್ಕೆ ಮನೆಗೆ ಬಂದ ನಾದಿನಿಗೆ ಊಟ ಬಡಿಸಿದ್ದೆ. ನಾನು ತಯಾರಿಸಿದ ಬೀಟ್‌ರೂಟ್‌ ಪಲ್ಯದ ರುಚಿ ಅವಳಿಗೆ ಬಹಳ ಹಿಡಿಸಿತ್ತು. ಸರಿ, ಊಟವಾದ ನಂತರ ಅದರ ರೆಸಿಪಿ ಬಗ್ಗೆ ಡಿಸ್‌ಕಶನ್‌ ಶುರು ಆಯ್ತು. ಅರೆರೆ ! ರೆಸಿಪಿ ಇಬ್ಬರದ್ದೂ ಒಂದೇ. ಆದ್ರೆ ರುಚಿ ಯಾಕೆ ಬೇರೆ? ನಂತರ ಅವಳೇ ವಿಶ್ಲೇಷಿಸಿ ಹೇಳಿದ್ದಳು, “”ನಾನು ಬೀಟ್‌ರೂಟ್‌ ಅನ್ನು ತುಂಬಾ ಚಿಕ್ಕದಾಗಿ ತುಂಡರಿಸಿದ್ದೇ ಆ ರುಚಿಗೆ ಕಾರಣ” ಎಂದು. ಹೀಗೆ ತರಕಾರಿ ಹೆಚ್ಚೋದ್ರ ಮೇಲೆ, ಬೇಯಿಸುವ ರೀತಿಯ ಮೇಲೂ ಪದಾರ್ಥಗಳ ರುಚಿ ಅವಲಂಬಿತವಾಗಿರುತ್ತೆ. ಆದರೆ, ಇದೆಲ್ಲ ಅಡುಗೆಯ ಅನುಭವದಲ್ಲಿಯೇ ಗೊತ್ತಾಗುವಂಥದ್ದು !

ಅಡುಗೆಯ ಅನುಭವ ಎಂದೊಡನೆಯೇ ನೆನಪಾಗುತ್ತೆ. ನಾನು ಮದುವೆಯಾದ ಹೊಸತರಲ್ಲಿ ಅತ್ತೆಯವರಿಗೆ ನೆರವಾಗಲು ಹೋದ ಸಂದರ್ಭವದು, ಅತ್ತೆ ಹೇಳಿದರೆಂದು ಅವಸರ ಅವಸರವಾಗಿ ಬೀನ್ಸ್‌ ಕಟ್‌ ಮಾಡಿ ಬೇಯಿಸಲು ಸ್ಟವ್‌ ಮೇಲೆ ಇಟ್ಟಿದ್ದೆ. ಒಳಬಂದ ಅತ್ತೆಯವರು, “”ಬೀನ್ಸ್‌ ತೊಳೆದಿದ್ಯಾ?” ಎಂದಾಗಲೇ ಅನನುಭವಿ ತಲೆಗೆ ತಪ್ಪಿನ ಅರಿವಾದದ್ದು. ಹೆಚ್ಚಿದ ಬೀನ್ಸ್‌ ಅನ್ನು ಪಾತ್ರೆಯ ತುಂಬಾ ನೀರು ಹಾಕಿ ಬೇಯಿಸಲು ಇಟ್ಟಿದ್ದಕ್ಕೂ ಅತ್ತೆ ಕಮೆಂಟ್‌ ಮಾಡಿದ್ದರು, “”ಇಷ್ಟೊಂದು ನೀರು ಹಾಕಿ ಬೇಯಿಸಿದ್ರೆ ಅದರಲ್ಲಿರೋ ಸತ್ವವೆಲ್ಲಾ ಹೋಗಿ ಬಿಡುತ್ತಮ್ಮ”ಅಬ್ಟಾ ! ಅತ್ತೆಯವರ ವೈಜ್ಞಾನಿಕ ಜ್ಞಾನಕ್ಕೆ ತಲೆದೂಗಿದ್ದೆ ! 

ಅಮ್ಮನೂ ಯಾರಿಗೇನು ಕಡಿಮೆಯಿಲ್ಲ, ಅಡುಗೆ ತಯಾರಿಯಲ್ಲಿ ಎಂದೂ ತರಕಾರಿಗಳ ಸಿಪ್ಪೆ ತೆಗೆಯಲು ಬಿಡುತ್ತಲೇ ಇರಲಿಲ್ಲ. “”ಸಿಪ್ಪೆಯಲ್ಲೂ ಪೋಷಕಾಂಶಗಳಿರುತ್ತವೆ ಕಣೆ. ತರಕಾರಿಗಳನ್ನು ಚೆನ್ನಾಗಿ ತೊಳೆದು ಹೆಚ್ಚಿ ಹಾಕು ಸಾಕು’ ಎಂದು ಸೂಕ್ಷ್ಮವಾಗಿ ಗದರುತ್ತಿದ್ದರು. ಕ್ಷಣಮಾತ್ರದಲ್ಲಿ ಕೆಲ ತರಕಾರಿಗಳ ಸಿಪ್ಪೆ ಬಳಸಿ ರುಚಿಕರ ಚಟ್ನಿಯೊಂದನ್ನು ತಯಾರಿಸುವ ಅಮ್ಮನ ಕೈಚಳಕವೂ ನನ್ನನ್ನು ಬೆರಗಾಗಿಸುತ್ತಿತ್ತು.

ಇದೇನು ತರಕಾರಿ ಬಗ್ಗೆ ಶುರು ಹಚ್ಚಿದ್ದಾರೆ ಎಂದು ಮೂಗು ಮುರಿಯಬೇಡಿ. ಈ ತರಕಾರಿ ಅನೇಕರ ಬದುಕಿಗೂ ಆಧಾರವಾಗಿದೆ. ದಿನವೂ ಮನೆಯ ಬಳಿ ಸೊಪ್ಪು – ತರಕಾರಿ ಹೊತ್ತು ತಂದು ಮಾರುವ ಹೆಂಗಸು ತನ್ನ ಜೀವನಕ್ಕಾಗಿ ನಂಬಿರುವುದು ತರಕಾರಿಯನ್ನೇ. ನಸುಕಿನಲ್ಲಿಯೇ ಮಾರ್ಕೆಟ್‌ಗೆ ಹೋಗಿ, ಬುಟ್ಟಿಯ ತುಂಬಾ ವಿಧ ವಿಧ ತರಕಾರಿಯನ್ನು ತುಂಬಿಸಿಕೊಂಡು, ಅದನ್ನು ತಲೆಯ ಮೇಲೆ ಹೊತ್ತು ಸೂರ್ಯ ನೆತ್ತಿಯ ಮೇಲೆ ಬರುವವ‌ರೆಗೆ “ಸೊಪ್ಪು-ತರಕಾರಿ’ ಎಂದು ಕೂಗುತ್ತ¤ ನಾಲ್ಕಾರು ಬೀದಿಯಲ್ಲಿ ತಿರುಗಾಡಿ ವ್ಯಾಪಾರ ಮಾಡಿದರೇನೇ  ಆಕೆಯ ಅಂದಿನ ದುಡಿಮೆ! ಆ ದುಡಿಮೆಯಲ್ಲಿಯೇ ಆಕೆಯ ಸಂಸಾರ ನೌಕೆ ಸಾಗಬೇಕು. ಗಿರಾಕಿಗಳನ್ನು ಆಕರ್ಷಿಸಲು ಆಕೆ ಬಹಳಷ್ಟು ಕಸರತ್ತು ಮಾಡುತ್ತಾಳೆ. ಒಮ್ಮೆ ಆಕೆ, “”ಅಮ್ಮ, ಮಲ್ಲಿಗೆ ಹೂವು ನೋಡಿ” ಎಂದು ಕೂಗಿದ್ದನ್ನು ಕಂಡು ನಾನು, “”ಹೂವು ತಂದಿದ್ದೀರಾ?” ಎಂದಿದ್ದೆ. ಆಕೆ ನಗುತ್ತ, “”ಮಲ್ಲಿಗೆಯಂಥ‌ ಬೀನ್ಸ್‌ ನೋಡಿ ಅಮ್ಮ…” ಎಂದಿದ್ದಳು. “”ಈ ಹಾಗಲಕಾಯಿ ಅಂತೂ ನಿಮಗೆಂತಲೇ ತಂದಿದ್ದೇನೆ. ಆ ಬೀದೀಲಿ ಯಾರೋ ಕೇಳಿದ್ರೂ ಕೊಡಲಿಲ್ಲ ಅಮ್ಮಾ” ಎನ್ನುತ್ತಾ ನಿಮ್ಮ ಉತ್ತರಕ್ಕೂ ಕಾಯದೇ ಅದನ್ನು ನಿಮ್ಮ ಚೀಲಕ್ಕೆ ಹಾಕಿಯೇ ಬಿಡುತ್ತಾಳೆ. “”ಈ ಗೆಡ್ಡೆಕೋಸು ತಗೋಳ್ರಮ್ಮಾ, ಸಕ್ಕರೆ ಕಾಯಿಲೆಗೆ ಬಾಳ ಒಳ್ಳೇದಂತೆ…” ಎನ್ನುತ್ತಾ ಆ ಕ್ಷಣಕ್ಕೆ ಡಾಕ್ಟರ್‌ ಆಗಿ ಬಿಡುತ್ತಾಳೆ ! 

ಇನ್ನು ಮನೆಯ ಬಳಿ, ಕೈಗಾಡಿಯಲ್ಲಿ ಬಗೆ ಬಗೆಯ ತರಕಾರಿಗಳನ್ನು ಮಾರಲು ಬರುವ ಪುರುಷ ವ್ಯಾಪಾರಿಗಳೇನೂ ಕಡಿಮೆಯಿಲ್ಲ. ಗಿರಾಕಿಗಳನ್ನು ಆಕರ್ಷಿಸುವ ಅವರ ಕೌಶಲವನ್ನು ನೀವು ನೋಡಬೇಕು. ಮನೆ ಮುಂದೆ ಬರುತ್ತಲೂ ಆತ ಕೂಗುತ್ತಾನೆ, “”ಅಮ್ಮ… ಬನ್ನಿ ಬನ್ನಿ.. ವಾಂಗಿಬಾತ್‌… ಕ್ಯಾರೇಟ್‌ ಹಲ್ವ… ಮಜ್ಜಿಗೆ ಹುಳಿ… ಅವರೇಕಾಯಿ ಉಪ್ಪಿಟ್ಟು… ಎಲ್ಲ ಇದೆ ಇವತ್ತು” ನಾವು ಆ ಆಹಾರ ಪದಾರ್ಥಗಳ ಹೆಸರು ಕೇಳಿಯೇ ಬಾಯಲ್ಲಿ ನೀರು ಸುರಿಸುತ್ತಾ ಮನೆಯಿಂದ ಓಡೋಡಿ ಹೊರಗೆ ಬರಬೇಕು, ಹಾಗಿರುತ್ತದೆ ಅವನ ಧಾಟಿ. ನಾವೇನಾದರೂ ಬೆಂಡೆಕಾಯಿ, ಬೀನ್ಸ್‌ ಮೊದಲಾದ ತರಕಾರಿಯನ್ನು ಕೈಯಲ್ಲಿ ಹಿಡಿದು, “”ಇದೇನ್ರಿ? ಇದು ಬಲಿತಿರೋ ಹಾಗಿದೆ” ಅಂದ್ರೆ ಅಮ್ಮ, “”ನೀವು ಇವತ್ತು ತಗೊಂಡು ಸಾಂಬಾರ್‌ ಮಾಡಿ, ಚೆನ್ನಾಗಿಲ್ಲದಿದ್ರೆ ನಾಳೆ ಹಣ ವಾಪಾಸ್‌” ಎನ್ನುವ ಆತನ ವಿಶ್ವಾಸದ ಮಾತುಗಳಿಗೆ ಮರುಳಾಗಿಯೇ ನಾವು ತರಕಾರಿಗಳನ್ನು ಖರೀದಿಸಬೇಕು.
 
ಒಮ್ಮೊಮ್ಮೆ ಈ ಬಿರು ಬೇಸಿಗೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿ ಬಿಡುತ್ತದೆ. ಆಗ ತರಕಾರಿ ವ್ಯಾಪಾರವನ್ನು ಬಲು ಜಾಣ್ಮೆಯಿಂದ ಮಾಡಬೇಕು. ಈ ದುಬಾರಿ ಕಾಲದಲ್ಲಿ ಕೆಲವರಂತೂ ಅಂಗಡಿಗೆ ಬಂದು, ತರಕಾರಿ ಬೆಲೆಯನ್ನು ಕೇಳುತ್ತಾರೆ. ಬೆಲೆಯನ್ನು ಕೇಳುತ್ತಲೇ, “”ಇದೇನ್ರಿ? ಈ ಪಾಟಿ ರೇಟ್‌ ಹೇಳ್ತೀರಾ?” ಎನ್ನುತ್ತಾರೆ. “”ಈ ರೇಟಿಗೆ ಕಾಲು ಕೆಜಿ ಚಿಕನ್‌ ಬರುತ್ತಲಿ” ಎನ್ನುವ ಪಾಯಿಂಟ್‌ ಬೇರೆ ಸೇರಿಸುತ್ತಾರೆ. “”ಆದರೆ, ನೀವೇ ಹೇಳಿÅà. ಈ ತರಕಾರಿಗೆ ಯಾವುದು ಸಾಟೀರಿ? ವಿಟಮಿನ್‌- ಖನಿಜ- ನೀರು- ನಾರು ಎಲ್ಲದರ ಆಗರ ಅಲ್ವೇನ್ರಿ ಈ ತರಕಾರಿ”ಹೌದು, ನಾರು ಎಂದೊಡನೆ ನೆನಪಾಯ್ತು, ನಿಮಗೆ ಗೊತ್ತೇನು? ಮಾಂಸಾಹಾರವೇ ಪ್ರಧಾನವಾಗಿರೋ ದೇಶಗಳಲ್ಲಿ ಹೆಚ್ಚಾಗಿ ಸಂಭವಿಸುವ ಕರುಳಿನ ಕ್ಯಾನ್ಸರ್‌ ನಮ್ಮ ದೇಶದಲ್ಲಿ ಕಡಿಮೆ ! ಅದಕ್ಕೆ ಕಾರಣಾನೂ ಈ ತರಕಾರಿ; ತರಕಾರೀಲಿ ಇರೋ ನಾರಿನಾಂಶಕ್ಕೆ ಕ್ಯಾನ್ಸರ್‌ ತಡೆಗಟ್ಟುವ ವಿಶೇಷ ಗುಣವೂ ಇದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದಲ್ವಾ ? 

ಈ ತರಕಾರಿ ಯಾರನ್ನೂ ಕೈಬಿಡೋದಿಲ್ಲರಿ. ಕಿಡ್ನಿ ರೋಗಿಗಳಿಂದ ಹಿಡಿದು ಬಿ. ಪಿ. ಕಾಯಿಲೆಯವರಿಗೂ, ಸಕ್ಕರೆ ಕಾಯಿಲೆಯವರಿಂದ ಹಿಡಿದು ಕ್ಯಾನ್ಸರ್‌ ಕಾಯಿಲೆಯವರಿಗೂ ಈ ತರಕಾರಿ ಪಥ್ಯ ಮಾತ್ರ ಇರೋದಿಲ್ಲ ; ಒಂದೆರಡನ್ನು ಹೊರತುಪಡಿಸಿ ಸಾಮಾನ್ಯವಾಗಿ ಯಾವ ತರಕಾರಿನಾದ್ರೂ ತಿನ್ರಿ ಅಂತಾನೇ ಎಲ್ಲ ಸ್ಪೆಷಲಿಸ್ಟ್‌ಗಳು ಹೇಳ್ಳೋದು. ನೀವು ಬೇಕಾದ್ರೆ, ಯಾವುದೇ ಚರ್ಮ ತಜ್ಞರ ಬಳಿ ಹೋಗಿ, ಅವರು ತಮ್ಮ ಔಷಧೋಪಚಾರದ ನಂತರ ಹಸಿ ತರಕಾರಿಗಳನ್ನು ಹೆಚ್ಚು ತಿನ್ನಿ, ಅದರಲ್ಲಿಯೂ ಹಸಿ ಕ್ಯಾರೇಟ್‌ ತಿನ್ನಿ ಅನ್ನೋ ಸಲಹೆ ಕೊಟ್ಟೇ ಕೊಡ್ತಾರೆ. ಯಾಕಂದ್ರೆ ಈ ತರಕಾರಿ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮದ ಹಾಗೂ ಕೂದಲಿನ ಸೌಂದರ್ಯಕ್ಕೂ ಸೈ ! 

ತರಕಾರಿ ಕಸದಿಂದ ರಸ ಮಾಡುವ ನನ್ನ ಚಿಕ್ಕಮ್ಮನ ಬಗ್ಗೆ ಹೇಳದಿದ್ದರೆ ನನ್ನ ತರಕಾರಿ ಪುರಾಣ ಅಪೂರ್ಣ ಅನ್ಸುತ್ತೆ. ಅಡುಗೆಯ ಬಳಿಕ ಉಳಿದ ತರಕಾರಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆ, ಹಸಿ ಶುಂಠಿ ಸಿಪ್ಪೆ ಎಲ್ಲವನ್ನೂ ಚಿಕ್ಕಮ್ಮ ಒಂದು ವಿಶೇಷ ಮಣ್ಣಿನ ಮಡಕೆಯಲ್ಲಿ ಹಾಕುತ್ತಾಳೆ ; ಅದಕ್ಕೆ ಸ್ವಲ್ಪ ಮಣ್ಣಿನ ಮಿಶ್ರಣವನ್ನು ಬೆರೆಸಿ ಸಾವಯವ ಗೊಬ್ಬರವನ್ನೂ ತಯಾರಿಸುತ್ತಾಳೆ ! ಆ ಗೊಬ್ಬರ ಉಂಡ ಅವಳ ಮನೆಯ ಹೂದೋಟದ ಹೂವುಗಳನ್ನು ನೋಡುವುದೇ ಒಂದು ಸಂಭ್ರಮ!

ಹಾಗಾದ್ರೆ, ಬನ್ನಿ, ಇಷ್ಟೆಲ್ಲಾ ಒಳ್ಳೇ ಗುಣಗಳು ಇರೋ ತರಕಾರಿ ಸದುಪಯೋಗ ಮಾಡಿಕೊಳ್ಳೋಣ.

– ಡಾ. ವಿನಯಾ ಶ್ರೀನಿವಾಸ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.