ಇಂದು ಚಾಂದ್ರಮಾನ ಯುಗಾದಿ: ಉತ್ಸವದ ಹರ್ಷದೊಂದಿಗೆ ಜೀವನದ ಎಚ್ಚರವಿರಲಿ


Team Udayavani, Apr 9, 2024, 12:34 AM IST

1-aaaa

ಚೈತ್ರ ಶುಕ್ಲ ಪ್ರತಿಪದೆಯಂದು ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುತ್ತದೆ. ಭಾರತೀಯ ಹೊಸ ವರ್ಷ, ಹೊಸ ಸಂವತ್ಸರದ ಮೊದಲ ದಿನವಾದ ಯುಗಾದಿಯ ಹಿನ್ನೆಲೆಯನ್ನು ಅರಿತು ಆಚರಿಸಿದರೆ ಸನಾತನ ಸಂಸ್ಕೃತಿಯ ಮಹತ್ವ, ಶ್ರೇಷ್ಠತೆಯ ಅರಿವು ನಮಗಾಗುತ್ತದೆ. ಈ ಶುಭದಿನವನ್ನು ಸಂಪ್ರದಾಯಬದ್ಧವಾಗಿ ಆಚರಿಸುವ ಮೂಲಕ ಕ್ರೋಧಿ ಸಂವತ್ಸರವನ್ನು ಸಡಗರ, ಸಂಭ್ರಮದಿಂದ ಬರಮಾಡಿಕೊಳ್ಳೋಣ.

“ಯುಗ’ವೆಂಬುದೂ “ಆದಿ’ಯೆಂಬುದೂ ಸೇರಿ “ಯುಗಾದಿ’. ಯುಗದ ಆದಿ. ಹೊಸ ಯುಗ ಪ್ರಾರಂಭಗೊಂಡ ದಿನ. “ಯುಗಾದ್ಯಾ” ಎಂದೂ ಪ್ರಯೋಗವಿದೆ. ಯುಗವೆಂದರೆ ದೀರ್ಘ‌ವಾದ ಕಾಲಮಾನ. ನಮ್ಮ ಪರಂಪರೆ ನಂಬುವಂತೆ ಚತುರ್ಯುಗಗಳು. ಅವುಗಳ ಕಾಲಮಾನಗಳೆಲ್ಲ ಒಟ್ಟು ಸೇರಿ ಎಷ್ಟು ಕಾಲವಾಗುತ್ತದೆಯೋ ಅದಕ್ಕೆ ಮತ್ತೆ ಪುನರಾವರ್ತನೆಯಿದೆ. ಹೀಗೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಮತ್ತೆ ಜಗತ್ತಿನ ಸೃಷ್ಟಿಯೆಲ್ಲವೂ ನೀರಿನಲ್ಲಿ ಮುಳುಗಿ ಹೋಗಿ ನಾಶ ಹೊಂದುವ ಪ್ರಳಯದ ಕಲ್ಪನೆಯಿದೆ. ಮತ್ತೆ ಹೊಸ ಸೃಷ್ಟಿ ಮೂಡಿ ಬರಲಿದೆ.

ಈ ಇಡೀ ವಿಶ್ವದ ಹುಟ್ಟು-ಸಾವು ಮತ್ತು ಆ ಮಧ್ಯದ ಕಾಲಮಾನ ಗಣನೆಗೆ ನಿಮಿಷವೋ ಅದಕ್ಕಿಂತ ಕಿರಿದಾದ ತ್ರುಟಿಯೋ-ಅದರಿಂದ ತೊಡಗಿ ಯುಗಗಳು ಮತ್ತು ಕಲ್ಪಗಳನ್ನೂ ಮೀರಿ ಮುಂದುವರಿಯುತ್ತದೆ. ಹೇಗೆ ಎಣಿಕೆಯ ಸಂಖ್ಯೆಗಳು ಒಂದರಿಂದ ತೊಡಗಿ ಕೋಟಿಯನ್ನೂ ಮೀರಿ ಖರ್ವ- ಮಹಾಖರ್ವಗಳ್ಳೋ ಪರಾರ್ಧಗಳ್ಳೋ ಆಗಿ ಮುಂದುವರಿಯುವುವೋ ಹಾಗೆಯೇ ಕಾಲದ ಗಣನೆ ಅನಂತದೆಡೆಗೆ ಹರಿಯುತ್ತಿರುತ್ತದೆ. “ಯುಗ’ವೆಂಬ ಕಾಲಮಾನವನ್ನು ನಾವು ಅಲ್ಲಿಲ್ಲಿ ಬಳಸುತ್ತೇವಾದರೂ ಅದು ನಿಜವಾಗಿ ನಮ್ಮ ಕಲ್ಪನೆಗೆ ನಿಲುಕುವ ವಿಷಯವಲ್ಲ. ಈ ಯುಗಗಳ ಲೆಕ್ಕಾಚಾರದಲ್ಲಿ ಅವುಗಳ ಮೊದಲ ದಿನವೇ ಯುಗಾದಿ ಅಥವಾ ಯುಗಾದ್ಯಾ.
ನಮ್ಮ ಪುರಾಣಗಳಲ್ಲಿ ಯಾವ ಯುಗವು ಯಾವ ದಿನದಿಂದ ಆರಂಭಗೊಂಡಿತೆಂಬ ವಿವರಗಳು ಉಲ್ಲೇಖೀಸಲ್ಪಟ್ಟಿವೆ. ಇವುಗಳನ್ನೆಲ್ಲ ದಾಖಲಿಸಿದವರು ಯಾರು?- ಎಲ್ಲವೂ ಕಲ್ಪನೆಯೇ ಅಲ್ಲವೇ?- ಎಂದು ಪ್ರಶ್ನಿಸಿದರೆ, ಈ ರೀತಿಯಲ್ಲಿ ಸತಾರ್ಕಿಕವಾಗಿ ಕಲ್ಪಿಸಿಕೊಳ್ಳುವುದು ಕೂಡ ದೊಡ್ಡದೇ ಅಲ್ಲವೇ? ಎಂದು ಪ್ರತಿಪ್ರಶ್ನೆಯನ್ನಿಡಬಹುದು.

ಈ ಅನಂತವಾದ, ನಿಜವಾಗಿಯೂ ಅಳತೆಗೆ ದೊರಕದ ಕಾಲವನ್ನು ನಮ್ಮ ಚೌಕಟ್ಟಿನೊಳಗೆ ತರುವ ಕೆಲಸವನ್ನು ಪ್ರಾಕೃತಿಕವಾದ ಕೆಲವು ಘಟನೆಗಳ ಪುನರಾವರ್ತನೆಯನ್ನು ಆಧರಿಸಿ ಲೆಕ್ಕ ಮಾಡಲು ನಮ್ಮ ಹಿರಿಯರು ತೊಡಗಿದರು. ಆಗ ಅನುಭವಕ್ಕೆ ದೊರಕಿದ ಮತ್ತು ಘಟನೆಗಳ ಪುನರಾವರ್ತನೆಯಿಂದ ಗುರುತಿಸಬಹುದಾದ ಕಾಲಮಾನವಾಗಿ ದೊರಕಿದುದೇ “ವರ್ಷ’ವೆಂಬುದು. ಈ ವರ್ಷವೆಂಬುದು ಮಳೆಗಾಲ-ಚಳಿಗಾಲ-ಬೇಸಗೆ ಕಾಲಗಳ ನಿಯಮಿತ ಪುನರಾವರ್ತನೆ ಮತ್ತು ಈ ಕಾಲಗಳಿಗನುಗುಣವಾಗಿ ಲೋಕದ ಸಸ್ಯಸಂಪತ್ತು ಹೂ ಬಿಡುವ, ಹಣ್ಣು ಬಿಡುವ ಕಾಲಗಳ ಪುನರಾವರ್ತನೆಯನ್ನೂ ಉಂಟು ಮಾಡುತ್ತದೆ. ಈ ವರ್ಷವೆಂಬ ಕಾಲಮಾನದೊಳಗೆ ಸೂರ್ಯ-ಚಂದ್ರರ ಉದಯಾಸ್ತ ಮಾನಗಳಿಗನುಗುಣವಾಗಿ ದಿನಗಳ ಪುನರಾವರ್ತನೆ, ಮಾಸಗಳ ಪುನರಾವರ್ತನೆ ಇದೆ. ಸೂರ್ಯನ ಚಲನೆಯನ್ನುಸರಿಸಿ ಗುರುತಿಸಬಹುದಾದ ಕಾಲದ ಪುನರಾವರ್ತನೆ ಒಂದು ರೀತಿ. ಅದು ಸೌರಮಾನ ಕಾಲಗಣನೆ. ಚಂದ್ರನ ಚಲನೆಯನ್ನು ಅನುಸರಿಸಿ ಗುರುತಿಸಬಹುದಾದ ಕಾಲದ ಪುನರಾವರ್ತನೆ ಚಾಂದ್ರಮಾನ ಕಾಲಗಣನೆ. ಭಾರತೀಯರು ಕಾಲಗಣನೆಗೆ ಮುಖ್ಯವಾಗಿ ಸೂರ್ಯ-ಚಂದ್ರರ ಚಲನೆಯನ್ನೇ ಆಧರಿಸಿದ್ದರಿಂದ ಎರಡೂ ಕಾಲಗಣನೆಗಳು ಪರಂಪರೆಯಿಂದ ರೂಢಿಯಲ್ಲಿವೆ. ಇವೆರಡೂ ಶಾಸ್ತ್ರೀಯವೇ.

ಚೈತ್ರ, ವೈಶಾಖವೇ ಮೊದಲಾದ ಮಾಸಗಳ ಗಣನೆ ಚಾಂದ್ರಮಾನ ರೀತಿಯದು. ಮೇಷ, ವೃಷಭವೇ ಮೊದಲಾದ ಮಾಸಗಳ ಗಣನೆ ಸೌರಮಾನ ರೀತಿಯದು. ಭಾರತೀಯರು ಎರಡೂ ಪದ್ಧತಿಗಳನ್ನು ಅವಲಂಬಿಸಿ, ಎರಡನ್ನೂ ಸಂಯೋ ಜನೆಗೊಳಿಸಿಕೊಂಡು ವರ್ಷಗಳನ್ನು (ಸಂವತ್ಸರಗಳನ್ನು) ಗಣಿಸಿದರು. ಭೂಮಿಗೆ ಬೆಳಕನ್ನೀವ ಎರಡು ಆಕಾಶಗೋಲಗಳ ಚಲನೆಯನ್ನೇ ಆಧರಿಸಿ ಈ ಎರಡೂ ಕಾಲಗಣನೆ ಪದ್ಧತಿ ರೂಢಿಯಲ್ಲಿದೆ.

ವರ್ಷವನ್ನು ಗಣಿಸುವಾಗ ಯಾವ ದಿನದಿಂದ ಗಣಿಸುವ ಪರಂಪರೆ ಬಂದಿದೆಯೋ ಆ ದಿನವನ್ನು ಸಂಭ್ರಮದಿಂದ ಆಚರಿಸಬೇಡವೇ? ಆ ಇಡಿಯ ವರ್ಷವನ್ನೂ ವರ್ಷಪೂರ್ತಿ ನಡೆಯಬಹುದಾದ ಘಟನೆಗಳನ್ನು ಸ್ವಾಗತಿಸಬೇಡವೇ?, ಆ ಸ್ವಾಗತಿಸುವ ದಿನವನ್ನು ಹೆಸರಿಸಿ ಸಂಭ್ರಮಿಸಬೇಡವೇ? ಆ ದಿನದ ಹೆಸರೇ ಯುಗಾದಿ, ಆ ಸಂಭ್ರಮಾಚರಣೆಯ ದಿನವೇ ಯುಗಾದಿ. ಸಾವಿರಾರು ವರ್ಷಗಳ ದೀರ್ಘ‌ವಾದ ಕಾಲಮಾನದ ಯುಗವೆಂಬುದು ಒಬ್ಬ ಮನುಷ್ಯನ ಜೀವನ ಕಾಲದಲ್ಲಿ ಅನುಭವಕ್ಕೆ ಬರಲು ಸಾಧ್ಯವಿಲ್ಲ. ಕಾಲದ ಆವರ್ತನೆಗಳ, ಘಟನೆಗಳ ಆವರ್ತನೆಯುಳ್ಳ “ವರ್ಷ’ವು ಚೆನ್ನಾಗಿ ಅನುಭಾವಕ್ಕೆ ಬರುವಂತಹದಾದುದರಿಂದ ವರ್ಷವನ್ನೇ “ಯುಗ’ದ ಪ್ರತಿನಿಧಿಯಾಗಿ ಭಾವಿಸಿಕೊಂಡು ವರ್ಷದ ಆರಂಭವನ್ನೇ ಹೊಸ ಯುಗದ ಆರಂಭವೆಂದು ಕಲ್ಪಿಸಿಕೊಳ್ಳಲಾಯಿತು. ಆದುದರಿಂದ ವರ್ಷದ ಮೊದಲ ದಿನವನ್ನೇ ಯುಗಾದಿಯೆನ್ನಲಾಯಿತು.

ಚಾಂದ್ರಮಾನ ಯುಗಾದಿಯಿಂದ ಹೊಸ ಸಂವತ್ಸರ ಆರಂಭ. ಹೊಸ “ಯುಗ’ದಲ್ಲಿ ಅಥವಾ “ವರ್ಷ’ದಲ್ಲಿ ಎಂದರೆ ಸಂವತ್ಸರದಲ್ಲಿ ನಾವು ಅನುಭವಿಸಲಿರುವ ಸುಖ ಸಂತೋಷಗಳು, ಇದಿರಿಸಲಿರುವ ಆಪತ್ತು ವಿಘ್ನಗಳು, ದಾರಿ ತಪ್ಪಿಸುವ ಆತಂಕಗಳು-ಇವೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಪ್ರತಿಜ್ಞೆಯನ್ನು ನಾವು ವರ್ಷದ ಪ್ರಾರಂಭದಲ್ಲೇ ಕೈಗೊಳ್ಳಬೇಡವೇ? ಹಾಗೆ ನಮ್ಮ ಮನಸ್ಸನ್ನು ನಾವೇ ಗಟ್ಟಿಗೊಳಿಸುವುದರ ಸಂಕೇತವಾಗಿ ಪೂಜೆ-ಪಂಚಾಂಗ ಶ್ರವಣ, ಸಂವತ್ಸರ ಫ‌ಲ ನಿರೂಪಣ ಇತ್ಯಾದಿಗಳ ಅನಂತರ “ಬೇವು-ಬೆಲ್ಲ’ ಮೆಲ್ಲುವ ಕಾರ್ಯಕ್ರಮವಿದೆ. ಬೇವು ಕಹಿ, ಬೆಲ್ಲ ಸಿಹಿ. ಜೀವನದಲ್ಲಿ ಕಷ್ಟಗಳು ಬರುವುದು ಬೇಡವೆನ್ನಲಾಗದು. ಕಷ್ಟದ ಅನಂತರ ಸುಖ ಬರಲಿ. ಬೇವಿನ ಅನಂತರ ಬೆಲ್ಲ ಬರಲಿ. ನಮ್ಮ ಭಾಷಾ ರೂಢಿಯನ್ನು ಗಮನಿಸೋಣ-ನಮ್ಮ ಚಿಂತನಾಪರಂಪರೆಗೆ ಹೇಗೆ ಅನುಗುಣವಾಗಿದೆ! ಎಲ್ಲಿಯೂ “ಬೆಲ್ಲ-ಬೇವು’ ಎಂಬ ಪ್ರಯೋಗವಿಲ್ಲ. “ಬೇವು-ಬೆಲ್ಲ’ ಎಂಬ ಪ್ರಯೋಗವೇ ಇದೆ. ಕಷ್ಟಗಳ ಅನಂತರ ಬಂದ ಸುಖಕ್ಕೆ ಹೆಚ್ಚಿನ ಬೆಲೆ. ಅದೇ ನಮಗಿರಲಿ. ಅದೇ ನಮ್ಮ ಪರಿಸರಕ್ಕಿರಲಿ, ನಮ್ಮ ನಾಡಿಗಿರಲಿ ಎಂಬ ಹಾರೈಕೆಯೇ ಬೇವು-ಬೆಲ್ಲ ತಿನ್ನುವುದರ ಅರ್ಥ.

ಪ್ರತೀವರ್ಷ ಬರುವ ಯುಗಾದಿ ನಮ್ಮನ್ನು ನಾವು ಹೊಸಬರನ್ನಾಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೋದಕಾಲ ಹಿಂದೆ ಬರುವುದಿಲ್ಲ. ಹೊಸ ಕಾಲ ಬರುತ್ತಲೇ ಇರುತ್ತದೆ. ಹೊಸಕಾಲದಲ್ಲಿ ಬರುವ ಹತ್ತು ಹಲವು ಎಡರುತೊಡರುಗಳನ್ನು ದಾಟಿ ಯಶಸ್ಸನ್ನು ಪಡೆಯೋಣ. ನಾವು ತಿಂದ ತುಣುಕು-ತುಣುಕು ಬೇವು ಕೂಡ ಕಷ್ಟ ಸಹಿಸುವಂತೆ ನಮ್ಮನ್ನು ಗಟ್ಟಿಗೊಳಿಸಲು ಕಾರಣವಾಗಲಿ. ವರ್ಷಪೂರ್ತಿ ಉತ್ಸಾಹ ಬತ್ತದಿರಲಿ. ಬರುವ ಯುಗಾದಿಯಲ್ಲೂ ನಮ್ಮದು ಇದೇ ಆಶಯ. ಮನುಷ್ಯರು ಉತ್ಸವಪ್ರಿಯರಂತೆ. ಉತ್ಸವದ ಹರ್ಷದೊಂದಿಗೆ ಜೀವನಮಾರ್ಗದ ಎಚ್ಚರ ಎಂದೂ ಇರಲಿ-ಎಂಬುದಕ್ಕಾಗಿಯೇ ಬೇವು. ಹೀಗೆ ಬೇವನ್ನು ಸಂಕೇತವಾಗಿರಿಸಿ ನಮ್ಮ ಹಿರಿಯರು ಜೀವನಮಾರ್ಗವನ್ನು ಬೋಧಿಸಿದರು.

ದೀರ್ಘ‌ವಾದ ಯುಗದ ತುಣುಕೇ ವರ್ಷ. ಆದುದರಿಂದ ವರ್ಷದ ಆರಂಭದ ದಿನವೇ ಯುಗಾದಿ. “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬುದು ಕವಿವಾಣಿ. ಹೊಸತನ್ನು ನಿರೀಕ್ಷಿಸುವ, ಹೊಸ ಸಾಹಸಕ್ಕೆ, ಸಾಹಸಸರಣಿಗೆ ಸಿದ್ಧವಾಗುವ, ಕೆಡುಕನ್ನು ಮೆಟ್ಟಿ-ಮೀರಿ ಒಳಿತನ್ನು ಸಾಧಿಸುವ- ಆ ಮೂಲಕ ಸರ್ವ ಸಮಾಜದ, ಪ್ರತೀ ವ್ಯಕ್ತಿಯ- ಆ ಮೂಲಕ ದೇಶದ, ಸಮಗ್ರ ರಾಷ್ಟ್ರದ ಒಳಿತಿನೆಡೆಗೆ ಸಾಗುವ ಶುಭದಿನವೇ ಯುಗಾದಿ. ಈ ಯುಗಾದಿ ಎಲ್ಲರಿಗೂ ಒಳಿತನ್ನು ತರಲಿ; ಸತ್ಪ್ರೇರಣೆಯನ್ನು ನೀಡಲಿ. ಸಾಧನೆಗಳನ್ನು ಮಾಡಿದ ಹಿರಿಯರನ್ನು ಸ್ಮರಿಸೋಣ; ನಮ್ಮ ಸಾಧನೆಯ ಮಾರ್ಗದಲ್ಲಿ ಅಡಿಯಿಡೋಣ.

ಡಾ| ಪಾದೇಕಲ್ಲು ವಿಷ್ಣು ಭಟ್ಟ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

ETTINAHOLE1

Ettinahole Project: ಬತ್ತಿದ ಕನಸುಗಳಿಗೆ ಎತ್ತಿನಹೊಳೆ ಜೀವಜಲ ಧಾರೆ!

10-uv-fusion

Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.