![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Nov 6, 2023, 5:00 PM IST
ಭೂಮಿಯ ಮೇಲೆ ಯಾವ ಜೀವಿಯಾದರೂ ಹೆತ್ತವರ ಋಣ ತೀರಿಸಲು ಸಾಧ್ಯವೇ ಇಲ್ಲ. ತಾಯಿಗೆ ಹೇಗೆ ಸಮಾನರಿಲ್ಲವೇ
ಹಾಗೇ ಹುಟ್ಟಿದಾಗಿನಿಂದ ಸಾಯುವವರೆಗೂ ನಮಗೆ ನೆಲೆ ಕೊಟ್ಟ ಈ ಕನ್ನಡಾಂಬೆ ಬೇರೆ ಹೋಲಿಕೆಯಿಲ್ಲ. ಜೀವ, ಜೀವನ ಎರಡನ್ನು ಸಲಹುತ್ತಿರುವ ಭುವನೇಶ್ವರಿಗೆ ಕೋಟಿ, ಕೋಟಿ ಕೃತಜ್ಞತೆ ಹೇಳಿದರೂ ಸಾಲದು. ನಮಗೆ ದೊರೆತ ಇಷ್ಟು ಒಳ್ಳೆಯ ನೆಲ, ಜಲ, ನಿಸರ್ಗ ಎಲ್ಲವೂ ಅವಳಿಂದ. ದೇಶ ವಿದೇಶದಲ್ಲೂ ಕನ್ನಡದ ಕೀರ್ತಿ ಅಜರಾಮರವಾಗಿರಲು ಕಾರಣ ಕನ್ನಡಾಂಬೆಯ ಕಂದಮ್ಮಗಳು.
ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರ ಕಣ ಕಣದಲ್ಲೂ ಇರುವುದು ಕನ್ನಡ. ಯಾರು ಎಷ್ಟೇ ಜ್ಞಾನವಂತರಾಗಿ ಹತ್ತಾರು ಭಾಷೆ ಕಲಿತರೂ ಮಾತೃ ಭಾಷೆ ಮರೆಯಲು ಸಾಧ್ಯವೆ. ಅದರಲ್ಲೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ನಮ್ಮ ಕನ್ನಡಕ್ಕೆ ಕೊನೆ ಎಂದು ಇಲ್ಲ. ಪರ ಭಾಷೆಗಳ ವ್ಯಾಮೋಹ ಎಷ್ಟೇ ಪ್ರಭಾವ ಬೀರಿದರೂ, ಕರುನಾಡ ಕಲಿಗಳು ಕನ್ನಡ ಭಾಷೆ, ನೆಲ, ಜಲಕ್ಕಾಗಿ ನಿರಂತರವಾಗಿ ಹೋರಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಕಲಿಕೆ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಪಾಶ್ಚಾತ್ಯ ಭಾಷಾ ವ್ಯಾಮೋಹ ಇದಕ್ಕೆ ಕಾರಣ. ನಮ್ಮ ಐಶಾರಾಮಿ ಜೀವನಕ್ಕಾಗಿ ನಾವು ಆಂಗ್ಲ ಮಾಧ್ಯಮದಲ್ಲಿ ಕಲಿತು, ವಿದೇಶಗಳನ್ನು ಸುತ್ತಬಹುದು. ಆದರೆ, ನಮ್ಮ ಅಂತ್ಯದ ದಿನಗಳಲ್ಲಿ ಆಸರೆಯಾಗುವುದು ಈ ನಮ್ಮ ಕನ್ನಡಾಂಬೆಯೇ ಎಂಬುದನ್ನು ಮರೆಯುವಂತಿಲ್ಲ. ಸುರಕ್ಷಿತ ಜೀವನ ನಡೆಸಲು ಕರ್ನಾಟಕದಲ್ಲಿ ಬೇಕಾದ ಎಲ್ಲವೂ ಇದೆ. ಅದಕ್ಕಾಗಿ ನಾವು ಪ್ರಪಂಚದ ಯಾವ ಮೂಲೆಗೆ ಹೋದರೂ ಕನ್ನಡವನ್ನು ಹೆಮ್ಮೆಯಿಂದ ಮಾತನಾಡಿದರೆ ಭೂತಾಯಿ ಭುವನೇಶ್ವರಿಗೆ ಗೌರವ ನೀಡಿದಂತೆ. ಅದು ನಮ್ಮ ಕರ್ತವ್ಯವೂ ಹೌದು. ಆಗ ಕನ್ನಡ ರಾಜ್ಯೋತ್ಸವದಂದು ಕೇಳಿಬರುವ ಕನ್ನಡ ಉಳಿಸಿ-ಬೆಳೆಸಿ-ಬಳಸಿ ಎಂಬ ಘೋಷ ವಾಕ್ಯದ ಅಗತ್ಯವೇ ಇರುವುದಿಲ್ಲ.
-ಪೂಜಾ ಹಂದ್ರಾಳ
ಉಜಿರೆ
You seem to have an Ad Blocker on.
To continue reading, please turn it off or whitelist Udayavani.