UV Fusion: ಶಿವಗಂಗಾ ಬೆಟ್ಟದ ಮೇಲೇರಿ


Team Udayavani, Nov 24, 2023, 8:00 AM IST

6-uv-fusion

ದೇಶ ಸುತ್ತಿ ನೋಡು, ಕೋಶ ಓದಿ ನೋಡು. ಈ ಗಾದೆ ಮಾತು ಹೇಳುವಂತೆ ಜೀವನದಲ್ಲಿ ಅನುಭವ ಮುಖ್ಯ. ಒಂದೊಂದು ಅನುಭವ ಒಂದೊಂದು ಪಾಠವನ್ನು ಕಲಿಸುತ್ತದೆ. ದೇಶವನ್ನು ಸುತ್ತಿ ನೋಡಿದಷ್ಟು ಜಾಸ್ತಿ ಅನುಭವವಾಗುತ್ತದೆ. ಸಂಸ್ಕೃತಿ, ಭಾಷೆ, ಅಭಿರುಚಿ ಬಗ್ಗೆ ಮತ್ತಷ್ಟು ತಿಳಿಯುತ್ತದೆ.

ನನಗೆ ತಿಳಿದಾಗಿನಿಂದ ಅಂದರೆ ಪಿಯುಸಿ ಕಲಿಯುತ್ತಿದ್ದ ಸಮಯದಿಂದ ನನಗೊಂದು ಮಹಾದಾಸೆ ಇತ್ತು. ಅದೇನೆಂದರೆ ಸಿದ್ಧಗಂಗಾ ಸಮೀಪದ ಶಿವಗಂಗೆ ಬೆಟ್ಟವನ್ನು ಏರಿ ಬರಬೇಕು ಅಂತ. ಎಷ್ಟೋ ಸಾರಿ ಶಿವಗಂಗೆ ಬೆಟ್ಟಕ್ಕೆ ಹೊಗುವುದಕ್ಕೆ ತಯಾರಿ ಮಾಡಿಕೊಂಡರೂ ಕೊನೆಯಲ್ಲಿ ವೈಯಕ್ತಿಕ ಕಾರಣಗಳಿಂದ ಪ್ರವಾಸ ರದ್ದಾಗುತ್ತಿತ್ತು.

ಕೊನೆಗೂ ನಾನು ನನ್ನ ಸ್ನೇಹಿತ ಶಿಕ್ಷಕವರ್ಗ, ಏನಾದರೂ ಆಗಲಿ ಈ ಅಕ್ಟೋಬರ್‌ ನಾಲ್ಕನೇ ಶನಿವಾರ ಶಿವಗಂಗೆಗೆ ಪ್ರವಾಸ ಹೋಗಲೇಬೇಕು ಎಂದುಕೊಂಡು, ಎರಡು ದಿನದ ಮಟ್ಟಿಗೆ ತುಮಕೂರಿನಲ್ಲಿ ನಡೆಯಲಿರುವ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ, ಮೊದಲನೇ ದಿನ ಆಟವಾಡಿ, ಸುತ್ತಮುತ್ತಲಿನ ಪ್ರವಾಸಿ ತಾಣಗಳ ನಕಾಶೆ ತಯಾರು ಮಾಡಿ, ಅದರಲ್ಲಿ ಶಿವಗಂಗೆ ಬೆಟ್ಟಕ್ಕೆ ಮುಕ್ಕಾಲು ದಿನ ಮೀಸಲಿಟ್ಟು ಪ್ರವಾಸಕ್ಕೆ ಹೊರಟೆವು.

ಶಿವಗಂಗೆಯನ್ನು ಬೆಂಗಳೂರಿನ ಹೆಬ್ಟಾಗಿಲು ಎಂದೇ ಗುರುತಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗಡಿಭಾಗದಲ್ಲಿ ಈ ಶಿಖರವಿದೆ. ಬೆಂಗಳೂರಿನಿಂದ 58 ಕಿ.ಮೀ. ದೂರವಿರುವ ಸ್ಥಳ ಇದಾಗಿದೆ. ಇದನ್ನು ತಲುಪಲು ಬೆಂಗಳೂರು ತುಮಕೂರು ಮಾರ್ಗವಾಗಿ ನೆಲಮಂಗಲದ ಮೂಲಕ ಹಾದು ತುಮಕೂರಿನಿಂದ ಕೇವಲ ಇಪ್ಪತ್ತೈದು ಕಿಲೋಮೀಟರ್‌ ದೂರ ಇರುವ ದಾಬ್ಟಾಸ್‌ಪೇಟೆಯಿಂದ ಮಾಗಡಿ ರಸ್ತೆ ಮಾರ್ಗವಾಗಿ ಐದು ಕಿಲೋಮೀಟರ್‌ ಟಮ್‌ ಟಂ/ಬಸ್‌/ಖಾಸಗಿ ವಾಹನದಲ್ಲಿ ಹೋದರೆ ಶಿವಗಂಗೆ ಸಿಗುತ್ತದೆ.

ಶಿವಗಂಗಾ ಬೆಟ್ಟದ ವಿಶೇಷತೆ

ಸಮುದ್ರಮಟ್ಟದಿಂದ 1,380 ಮೀಟರ್‌ ಅಂದರೆ 4,528 ಅಡಿ ಎತ್ತರವಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ, ತುಮಕೂರಿನಿಂದ ಪೂರ್ವದಿಕ್ಕಿಗೆ ಇದೆ. ಶಿವಗಂಗೆ ಬೆಟ್ಟ ದೂರದಿಂದ ನೋಡಲು ಶಂಖಾಕೃತಿಯ ಬೆಟ್ಟವಾಗಿದ್ದು, ಪೂರ್ವ ದಿಕ್ಕಿನಿಂದ ನೋಡಿದರೆ “ವೃಷಭಾಕೃತಿ’, ಪಶ್ಚಿಮದಿಂದ “ಗಣೇಶ’ ಉತ್ತರದಿಂದ “ಲಿಂಗಾಕೃತಿ’ ದಕ್ಷಿಣದಿಂದ “ಸರ್ಪದ ಆಕಾರ’ ದಲ್ಲಿ ಕಾಣುತ್ತದೆ. ಇದು ಸುಮಾರು 1,500 ವರ್ಷಗಳಷ್ಟು ಪುರಾತನವಾದುದು. “ಶಿವಲಿಂಗ’ದ ಆಕಾರದಲ್ಲಿದ್ದು ಅದರ ಸಮೀಪದಲ್ಲೇ “ಗಂಗೆ ಎಂಬ ಚಿಲುಮೆ’ ಇದೆ. ಇವೆರಡರ ಸಂಗಮದಿಂದ “ಶಿವಗಂಗೆ’ ಆಗಿದೆ ಎಂಬ ಪ್ರತೀತಿ ಇದೆ.

ಪೌರಾಣಿಕ ಹಿನ್ನೆಲೆ

ಶಿವಗಂಗಾ ಊರಿಗೆ ಶಿವಗಂಗೆ ಎಂಬ ಹೆಸರು ಬರಲು ಒಂದು ಐತಿಹ್ಯದ ಪ್ರಕಾರ ಒಂದು ಹಿನ್ನೆಲೆ ಇದೆ. ಆಗಿನ ಕಾಲದಲ್ಲಿಯೇ ಅಣು ಮತ್ತು ಪರಮಾಣುವಿನ ಬಗ್ಗೆ ನಮಗೆ ತಿಳಿಸಿಕೊಟ್ಟಿದ್ದ ಕಣಾದ ಎಂಬ ಋಷಿಯು ಒಂಟಿ ಕಾಲಿನಲ್ಲಿ ನಿಂತು ನೀರಿಗಾಗಿ ಈ ಜಾಗದಲ್ಲಿ ತಪಸ್ಸು ಮಾಡಿದ್ದರಂತೆ. ಅವರ ತಪ್ಪಸ್ಸಿಗೆ ಒಲಿದ ಪರಶಿವ ತನ್ನ ಜಡೆಯಿಂದ ನೀರನ್ನು ಈ ಜಾಗದಲ್ಲಿ ಹರಿಸಿದ್ದ ಕಾರಣ ಈ ಕ್ಷೇತ್ರವನ್ನು ಕಣಾದ ಮುನಿಗಳು ಶಿವನಗಂಗೆ ಎಂದು ಕರೆದರಂತೆ. ಮುಂದೆ ಜನರ ಆಡು ಮಾತಿನಲ್ಲಿ ಅದು ಅಪಭ್ರಂಷವಾಗಿ ಶಿವಗಂಗೆ ಆಯಿತು ಎಂದು ಕ್ಷೇತ್ರ ಪುರಾಣ ಹೇಳುತ್ತದೆ.

ಐತಿಹಾಸಿಕ ಹಿನ್ನೆಲೆ

ಇನ್ನು ಐತಿಹಾಸಿಕವಾಗಿ ನೋಡಿದಲ್ಲಿ ಈ ಸ್ಥಳವು ಹೊಯ್ಸಳ ರಾಜನಾದ ವಿಷ್ಣುವರ್ಧನನ ಆಡಳಿತದಲ್ಲಿದ್ದು, ಆತನ ಧರ್ಮಪತ್ನಿ ರಾಣಿ ಶಾಂತಲೆಗೆ ಸಂತಾನ ಭಾಗ್ಯವಿಲ್ಲದಿದ್ದ ಕಾರಣ ಖನ್ನತೆಯಿಂದ ಇದೇ ಬೆಟ್ಟದ ತುದಿಯಿಂದ ಹಾರಿ ತನ್ನ ದೇಹ ತ್ಯಾಗ ಮಾಡಿದ ಕಾರಣ ಈ ಬೆಟ್ಟದ ತುದಿ ಕುಂಬಿಯಲ್ಲಿ ಈಗಲೂ ಶಾಂತಲಾ ಡ್ರಾಪ್‌ ಸ್ಥಳವನ್ನು ನೋಡಬಹುದಾಗಿದೆ. ಮುಂದೆ 16ನೇ ಶತಮಾನದಲ್ಲಿ ಈ ಗುಡ್ಡವು ಶಿವಪ್ಪ ನಾಯಕರ ಕೋಟೆಯಾಗಿ ಅನಂತರ ಈ ಕೋಟೆಯನ್ನು ಬೆಂಗಳೂರಿನ ಸಂಸ್ಥಾಪಕ, ಮಾಗಡಿ ಕೆಂಪೇಗೌಡ ಕೋಟೆಯನ್ನು ಜೀರ್ಣೋದ್ಧಾರಗೊಳಿಸಿ ಇಲ್ಲಿಯೇ ತಮ್ಮ ಸಂಪತ್ತನ್ನು ರಕ್ಷಿಸಿ ಇಟ್ಟಿದ್ದರು ಎನ್ನುತ್ತದೆ ಇತಿಹಾಸ.

ಶಿವಗಂಗೆಗೆ ಹೋಗುತ್ತಿದ್ದಂತೆಯೇ ನಮ್ಮ ಕಣ್ಣಿಗೆ ಸದಾ ತುಂಬಿರುವ ಕಲ್ಯಾಣಿ ಕಣ್ಣಿಗೆ ಬೀಳುತ್ತದೆ. ಅದರ ಆಸುಪಾಸಿನಲ್ಲಿಯೇ ನಮ್ಮ ಟಂ ಟಂ ವಾಹನ ನಿಲ್ಲಿಸಿ, ಕಲ್ಯಾಣಿಯಲ್ಲಿ ಕೈಕಾಲು ತೊಳೆದುಕೊಂಡು, ದೇವಸ್ಥಾನ ರಸ್ತೆಯಲ್ಲಿರುವ ಸಣ್ಣ ಸಣ್ಣ ಗೂಡಂಗಡಿಗಳಲ್ಲಿ ಹೂವು ಹಣ್ಣುಗಳನ್ನು ತೆಗೆದುಕೊಂಡು ಸುಮಾರು ನೂರು ಮೆಟ್ಟಿಲುಗಳನ್ನು ಹತ್ತುತ್ತಾ ಹೋದಲ್ಲಿ ಎಡಗಡೆ ಗಣೇಶನ ದೇವಸ್ಥಾನ ಕಣ್ಣಿಗೆ ಕಾಣಿಸಿದರೆ, ಅಲ್ಲಿಂದ ಮುಂದೆ ನಮಗೆ ಹೊನ್ನಾದೇವಿ ಮತ್ತು ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಸಿಗುತ್ತದೆ.

ನಮಗೆಲ್ಲರಿಗೂ ತಿಳಿದಿರುವಂತೆ ಬೆಣ್ಣೆ ಕಾಯಿಸಿ ತುಪ್ಪವನ್ನು ಮಾಡುತ್ತಾರೆ. ಆದರೆ ಪುನಃ ತುಪ್ಪದಿಂದ ಬೆಣ್ಣೆಯನ್ನು ಮಾಡಲಾಗದು. ಇದು ವೈಜ್ಞಾನಿಕವಾಗಿಯೂ ಅಸಾಧ್ಯ. ಆದರೆ ಈ ಗಂಗಾಧರೇಶ್ವರ ಉದ್ಭವ ಶಿವಲಿಂಗದಲ್ಲಿ ಇಡೀ ಪ್ರಪಂಚಾದ್ಯಂತ ಕಾಣದ ಅದ್ಭುತವಾದ ಸಂಗತಿಯನ್ನು ನೋಡಬಹುದಾಗಿದೆ. ದೇವಸ್ಥಾನದ ಅರ್ಚಕರು ಆ ಶಿವನ ಲಿಂಗದ ನೆತ್ತಿಯ ಮೇಲೇ ತುಪ್ಪವನ್ನು ಸುರಿದು ನಿಧಾನವಾಗಿ ಸವರುತ್ತಾ ಹೋದಂತೆಲ್ಲಾ ಹಿಮ್ಮುಖ ಪ್ರಕ್ರಿಯೆ ನಡೆದು ತುಪ್ಪ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ. ಅನಂತರ ಅದೇ ಬೆಣ್ಣೆಯನ್ನು ಪ್ರಸಾದ ರೂಪದಲ್ಲಿ ಬಂದ ಭಕ್ತಾದಿಗಳಿಗೆ ನೀಡಲಾಗುತ್ತದೆ. ತುಪ್ಪದಿಂದ ಬೆಣ್ಣೆಯಾಗುವ ಇದರಲ್ಲಿ ಔಷಧೀಯ ಗುಣವಿದ್ದು ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದಾಗಿದೆ ಎಂಬುದು ಅಲ್ಲಿಯ ಅರ್ಚಕರ ಮಾತು.

ಇದೇ ದೇವಾಲಯದ ಹಿಂದೆ ಒಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಅಲ್ಲಿದ್ದಂತಹ ಒಂದು ದೊಡ್ಡದಾದ ಸುರಂಗಮಾರ್ಗ. ಅದು ಶ್ರೀರಂಗಪಟ್ಟಣಕ್ಕೆ ಹೋಗುತ್ತದೆ ಎಂದು ಮಾಹಿತಿ ನೀಡಿದಾಗ ನಮಗೆಲ್ಲಾ ಕುತೂಹಲ, ಅದನ್ನು ನೋಡಿ ಖುಷಿ ಪಟ್ಟೆವು. ನಾವು ಹೋಗಲು ಪ್ರಯತ್ನಿಸಿದರು ಆದರೆ ಅಲ್ಲಿ ಯಾರಿಗೂ ಪ್ರವೇಶವಿಲ್ಲವೆಂದು ಅಲ್ಲಿರುವ ಸಿಬಂದಿ ತಡೆದರು. ಆ ದೇವಾಲಯದ ಎದುರು ನಂದಿ ವಿಗ್ರಹವಿದೆ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾಸ್ತಂಭದಿಂದ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ ಹಜಾರ, ಕಲ್ಯಾಣಮಂಟಪ ಸಪ್ತಮಾತೃಕೆ, ನವಗ್ರಹ ವಿಗ್ರಹಗಳ ಅಮೋಘ ಕೆತ್ತನೆ ನಮ್ಮೆಲ್ಲರ ಮನಸೂರೆಗೊಂಡಿತು.

ಆ ಸುರಂಗ ಮಾರ್ಗದಲ್ಲಿಯೇ ಮುಂದುವರಿದರೆ ಸೀದಾ ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ತಲುಪುತ್ತದೆ ಎನ್ನುತ್ತಾರೆ ಸ್ಥಳೀಯರು. ಈ ಸುರಂಗದಲ್ಲಿ ಮುಂದುವರೆದರೆ ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆಯೂ ಸಹ ಇದೆ. ಬಹಳ ಕತ್ತಲು ಮತ್ತು ಉಸಿರಾಡಲು ಸೂಕ್ತವಾದ ಗಾಳಿಯ ವ್ಯವಸ್ಥೆ ಇಲ್ಲದ ಕಾರಣ ಮತ್ತು ಹಾವು, ಬಾವಲಿ ಇರಬಹುದಾದ ಸಾಧ್ಯತೆಗಳಿಂದಾಗಿ ಈ ಸುರಂಗದ ಒಳಗೆ ಪ್ರವೇಶ ನಿಶಿದ್ಧವಾಗಿದೆ. ಒಳಕಲ್ಲು ತೀರ್ಥ ಅಥವಾ ಒರಳುಕಲ್ಲು ತೀರ್ಥ ಎನ್ನುವ ಮತ್ತೂಂದು ಕುತೂಹಲಕಾರಿ ಸ್ಥಳ.

ಗವಿಗಂಗಾಧರೇಶ್ವರ ಸ್ವಾಮಿಯ ಆವರಣದಲ್ಲೇ ಇರುವ ಹೊನ್ನಾದೇವಿಯ ದರ್ಶನ ಪಡೆದೆವು. ಮುಂದೆ ಸ್ವಲ್ಪ ದೂರದ ಶಿವಗಂಗೆ ಬೆಟ್ಟದ ತಪ್ಪಲಲ್ಲಿಯೇ ಅರ್ಕಾವತಿ ನದಿಯ ಉಪನದಿಯಾದ ಕುಮುದ್ವತಿ ನದಿಯ ಉಗಮಸ್ಥಾನವಿದೆ. ಶಿವಗಂಗೆಯಲ್ಲಿ ಹುಟ್ಟಿ ನೆಲಮಂಗಲ, ರಾಮನಗರ ಜೆಲ್ಲೆ ಮತ್ತು ಮಾಗಡಿ ತಾಲ್ಲೂಕಿನ ಭಾಗಗಳಲ್ಲಿ ಸುಮಾರು 460 ಕಿ.ಮೀ. ಹರಿದು ಅನಂತರ ತಿಪ್ಪಗೊಂಡನ ಹಳ್ಳಿ ಜಲಾಶಯದಲ್ಲಿ ಅರ್ಕಾವತಿ ನದಿಯೊಂದಿಗೆ ಸೇರಿಕೊಳ್ಳುತ್ತದೆ. ಒಂದು ಕಾಲದಲ್ಲಿ ಈ ನದಿಯು ಜಲಾನಯನ ಪ್ರದೇಶವು ಸುತ್ತಮುತ್ತಲಿನ ಹಳ್ಳಿಗಳ ವ್ಯವಸಾಯ ಮತ್ತು ಕುಡಿಯುವ ನೀರಿನ ಮೂಲವಾಗಿದ್ದು ಇಂದು ಸರಿಯಾದ ಮಳೆಯಾಗದೇ ಬತ್ತುತ್ತಿದೆಯಲ್ಲದೇ ಕೈಗಾರಿಕಾ ತ್ಯಾಜ್ಯಗಳಿಂದಾಗಿ ಕಲುಷಿತಗೊಂಡಿರುವುದು ಬೇಸರ ಸಂಗತಿಯಾಗಿದೆ.

ಶಿವಗಂಗೆ ಬೆಟ್ಟದ ನಿಜವಾದ ಚಾರಣ ಪ್ರಾರಂಭ

ಅನಂತರ ಅಲ್ಲಿಂದ ಬೆಟ್ಟ ಹತ್ತುವ ಕಾರ್ಯ ಶುರುವಾಗುತ್ತದೆ. ಹತ್ತುವ ಮಾರ್ಗ ಬಹಳ ಕಡಿದಾಗಿದ್ದು, ಎದೆಗೆ ನೇರವಾಗಿ ಬಂಡೆ ಕಲ್ಲುಗಳ ಮೇಲೆ ಹತ್ತಲು ಸಾಗುತ್ತಿರುವಾಗ ಏನೋ ಒಂಥರಾ ರೋಮಾಂಚನ..! ಅಷ್ಟೇ ಭಯ..!

ಮರಳಿ ಕೆಳಗೆ ನೋಡಿದಾಗ ಕಣಿವೆಯ ಕಂದಕಕ್ಕೆ ಬಿದ್ದ ಹಾಗೆ ಆಗುತ್ತದೆ. ಮುಂದೆ ಮಾರ್ಗದ ಮಧ್ಯದಲ್ಲಿಯೇ ಒಂದು ಕಲ್ಲು ಬಂಡೆ ಗೋಪುರದ ಮೇಲೆ ಅನಾವರಣವಾಗಿರುವ ಬಸವನ ವಿಗ್ರಹವಿದ್ದು ಅಲ್ಲಿಯ ಮೆಟ್ಟಿಲುಗಳು ಕಡಿದಾಗಿರುವ ಕಾರಣ ಬಹಳ ಜಾಗೃತೆಯಿಂದ ಹತ್ತಬೇಕು.

ಅನಂತರ ಆ ಬಂಡೆ ಇಳಿದು ಶಿವಗಂಗೆ ಬೆಟ್ಟದ ತುದಿಯ ಮೇಲೆ ಇರುವ ವೀರಭದ್ರ ಸ್ವಾಮಿ ದೇವಸ್ಥಾನ ಕಡೆಗೆ ಹೊರಟೆವು. ದೇವರ ಮುಂದೆ ದೊಡ್ಡದಾಗ ಘಂಟೆ ನೋಡಿ ಮೂಕವಿಸ್ಮಿತರಾಗಿ ಅದನ್ನು ಬಾರಿಸಿದೆವು. ಮುಂದೆ ಸುಸೈಡ್‌ ಡ್ರಾಪ್‌ ಕಡೆ ಪಯಣ ಬೆಳಸಿದೆವು. ಒಟ್ಟಾರೆಯಾಗಿ ಶಿವಗಂಗೆ ಹತ್ತಲು ಚಾರಣ ಮಾಡಲು ಸುಮಾರು ಎರಡೂವರೆ ತಾಸು ಸಮಯ ತೆಗೆದುಕೊಂಡೆವು.

ಒಟ್ಟಾರೆಯಾಗಿ ಪ್ರವಾಸವು ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಮಾರ್ಗ. ಆಯಾ ಸ್ಥಳಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಇಂತಹ ಯಾತ್ರೆಗಳು ನಮ್ಮಲ್ಲಿ ಜ್ಞಾನದ ದೀವಿಗೆಯನ್ನು ಉದ್ದೀಪನಗೊಳಿಸುವ ಶಕ್ತಿಯನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಆರೋಗ್ಯದಲ್ಲೂ ಚೇತರಿಕೆ ತಂದುಕೊಟ್ಟು, ಒತ್ತಡ ಕಡಿಮೆ ಮಾಡುವ ಸುಂದರ ಚಟುವಟಿಕೆಯೂ ಹೌದೆನ್ನಬಹುದು.

-ಬಸವರಾಜ ಎಂ. ಯರಗುಪ್ಪಿ

ಗದಗ

ಟಾಪ್ ನ್ಯೂಸ್

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.